ಕೀರ್ತನೆಗಳು 74 - ಕನ್ನಡ ಸತ್ಯವೇದವು J.V. (BSI)ದೇವಾಲಯವನ್ನು ಹಾಳುಮಾಡಿದ ಶತ್ರುಗಳನ್ನು ತಗ್ಗಿಸಿ ಸಹಾಯಮಾಡಬೇಕೆಂದು ಪ್ರಾರ್ಥಿಸುವದು ಆಸಾಫನ ಪದ್ಯ ( ಕೀರ್ತ. 79 ) 1 ದೇವರೇ, ನೀನು ನಮ್ಮನ್ನು ಸಂಪೂರ್ಣವಾಗಿ ತಳ್ಳಿಬಿಟ್ಟದ್ದೇಕೆ? ನೀನು ಪಾಲಿಸುವ ಹಿಂಡಿನ ಮೇಲೆ ನಿನ್ನ ಕೋಪಾಗ್ನಿಯು ಹೊಗೆ ಆಡುವದೇನು? 2 ನೀನು ಹಿಂದಿನ ಕಾಲದಲ್ಲಿ ಸ್ವಕುಲವಾಗಿರಬೇಕೆಂದು ಬಿಡಿಸಿ ಸಂಪಾದಿಸಿಕೊಂಡ ನಿನ್ನ ಮಂಡಲಿಯನ್ನು ಜ್ಞಾಪಿಸಿಕೋ; ನಿನ್ನ ವಾಸಸ್ಥಾನವಾಗಿದ್ದ ಚೀಯೋನ್ಗಿರಿಯನ್ನು ಮರೆಯಬೇಡ. 3 ಬಹುಕಾಲದಿಂದ ಹಾಳುಬಿದ್ದಿರುವ ಈ ಸ್ಥಾನದ ಕಡೆಗೆ ಬಿಜಯಮಾಡು. ನೋಡು, ವೈರಿಯು ಪವಿತ್ರಾಲಯದಲ್ಲಿ ಎಲ್ಲವನ್ನು ಕೆಡಿಸಿಬಿಟ್ಟಿದ್ದಾನೆ. 4 ನಿನ್ನ ದರ್ಶನಾಲಯಮಧ್ಯದಲ್ಲಿ ನಿನ್ನ ವಿರೋಧಿಗಳು ಆರ್ಭಟಿಸುತ್ತಾರೆ; ನಮ್ಮ ಆರಾಧನಾಚಿಹ್ನೆಗಳನ್ನು ತೆಗೆದು ತಮ್ಮ ಚಿಹ್ನೆಗಳನ್ನು ಇಟ್ಟಿದ್ದಾರೆ. 5 ಮರಗಳ ಗುಂಪಿನಲ್ಲಿ ಕೊಡಲಿಗಳನ್ನು ಮೇಲೆತ್ತುವ ಜನರೋ ಎಂಬಂತಿದ್ದಾರೆ. 6 ನೋಡು, ಅವರು ಈಗ ಕೈಕೊಡಲಿ ಸುತ್ತಿಗೆಗಳಿಂದ ದೇವಾಲಯದ ಕೆತ್ತನೆಯ ಕೆಲಸವನ್ನೆಲ್ಲಾ ಹೊಡೆದು ಹಾಕುತ್ತಿದ್ದಾರೆ. 7 ಅವರು ನಿನ್ನ ಪವಿತ್ರಾಲಯಕ್ಕೆ ಬೆಂಕಿಹಾಕಿ ನಿನ್ನ ನಾಮಕ್ಕೆ ಪ್ರತಿಷ್ಠಿತವಾದ ಮಂದಿರವನ್ನು ಹೊಲೆಮಾಡಿ ನೆಲಸಮಗೊಳಿಸಿದ್ದಾರೆ. 8 ನಾವು ಈ ಜನವನ್ನೆಲ್ಲಾ ಸಂಹರಿಸಿಬಿಡೋಣ ಅಂದುಕೊಂಡಿದ್ದಾರೆ; ದೇಶದಲ್ಲಿರುವ ಎಲ್ಲಾ ದೇವಸಭಾಮಂದಿರಗಳನ್ನು ಸುಟ್ಟುಬಿಟ್ಟಿದ್ದಾರೆ. 9 ನಮ್ಮ ಆರಾಧನಾಚಿಹ್ನೆಗಳು ಈಗ ಕಾಣುವದಿಲ್ಲ. ಮುಂಚೆ ಇದ್ದಂತೆ ನಮಗೆ ಪ್ರವಾದಿಗಳು ಯಾರೂ ಇಲ್ಲ; ಇದು ಎಷ್ಟರವರೆಗೆ ಇರುವದೆಂದು ಬಲ್ಲವರು ನಮ್ಮಲ್ಲಿ ಯಾರೂ ಇಲ್ಲ. 10 ದೇವರೇ, ವಿರೋಧಿಗಳು ಇನ್ನೆಲ್ಲಿಯತನಕ ನಿಂದಿಸುತ್ತಿರಬೇಕು? ವೈರಿಗಳು ನಿನ್ನ ನಾಮವನ್ನು ಸದಾಕಾಲವೂ ತಿರಸ್ಕರಿಸಬಹುದೋ? 11 ಚಾಚಿದ ಬಲಗೈಯನ್ನು ಯಾಕೆ ಹಿಂದೆಗೆದಿದ್ದೀ? ಅದನ್ನು ಎದೆಯ ಮೇಲಿಂದ ತೆಗೆದು ಅವರನ್ನು ಸಂಹರಿಸಿಬಿಡು. 12 ದೇವರೇ, ನೀನು ಮೊದಲಿಂದಲೂ ನನ್ನ ಅರಸನೂ ಲೋಕಮಧ್ಯದಲ್ಲಿ ರಕ್ಷಣೆಗಳನ್ನು ನಡಿಸಿದಾತನೂ ಆಗಿದ್ದೀಯಲ್ಲವೇ? 13 ಸ್ವಶಕ್ತಿಯಿಂದ ಸಮುದ್ರವನ್ನು ಭೇದಿಸಿದವನು ನೀನು; ಜಲರಾಶಿಯ ಮೇಲೆ ತಿವಿುಂಗಿಲಗಳ ತಲೆಗಳನ್ನು ಜಜ್ಜಿಬಿಟ್ಟವನು ನೀನು. 14 ಲಿವ್ಯಾತಾನನ ಶಿರಃಖಂಡನಮಾಡಿ ಅಡವಿಯ ಮೃಗಸಮುದಾಯಕ್ಕೆ ತಿನ್ನಕೊಟ್ಟವನು ನೀನು. 15 ಬುಗ್ಗೆಹಳ್ಳಗಳನ್ನು ಉಕ್ಕಿಸಿದವನು ನೀನು; ಮಹಾನದಿಗಳನ್ನು ಒಣಗಿಸಿಬಿಟ್ಟವನು ನೀನು. 16 ಹಗಲಿರುಳುಗಳಿಗೆ ನಿಯಾಮಕನು ನೀನು; ಸೂರ್ಯಾದಿ ಜ್ಯೋತಿರ್ಮಂಡಲಗಳ ನಿರ್ಮಾಣಕನು ನೀನು. 17 ಭೂವಿುಯ ಎಲ್ಲಾ ಮೇರೆಗಳನ್ನು ಸ್ಥಾಪಿಸಿದವನು ನೀನು; ಶೀತೋಷ್ಣಕಾಲಗಳನ್ನು ನೇವಿುಸಿದವನು ನೀನು. 18 ಯೆಹೋವನೇ, ವೈರಿಗಳು ನಿನ್ನನ್ನು ನಿಂದಿಸಿ ದುರ್ಮತಿಗಳು ನಿನ್ನ ನಾಮವನ್ನು ತಿರಸ್ಕರಿಸಿದ್ದನ್ನು ಜ್ಞಾಪಿಸಿಕೋ. 19 ನಿನ್ನ ಬೆಳವದ ಜೀವವನ್ನು ಕಾಡುಮೃಗಕ್ಕೆ ಕೊಡಬೇಡ; ನಿನ್ನ ದೀನಮಂಡಲಿಯನ್ನು ಸದಾ ಮರೆತೇ ಬಿಡಬೇಡ. 20 ನಿನ್ನ ಒಡಂಬಡಿಕೆಯನ್ನು ಲಕ್ಷ್ಯಕ್ಕೆ ತಂದುಕೋ. ದೇಶದ ಅಂಧಕಾರಸ್ಥಾನಗಳಲ್ಲಿ ಬಲಾತ್ಕಾರವು ತುಂಬಿ ವಾಸಿಸುತ್ತದಲ್ಲಾ. 21 ಕುಗ್ಗಿದವರು ಆಶಾಭಂಗದಿಂದ ಹಿಂದಿರುಗದಿರಲಿ; ದುಃಖಿತರೂ ಬಡವರೂ ನಿನ್ನ ನಾಮವನ್ನು ಕೀರ್ತಿಸಲಿ. 22 ದೇವರೇ, ಎದ್ದು ನಿನ್ನ ನ್ಯಾಯವನ್ನು ನಡಿಸುವವನಾಗು; ದುರ್ಮತಿಯು ಯಾವಾಗಲೂ ನಿನ್ನನ್ನು ನಿಂದಿಸುತ್ತಿರುವದನ್ನು ಜ್ಞಾಪಿಸಿಕೋ. 23 ಮೇಲಣ ಲೋಕವನ್ನು ಎಡೆಬಿಡದೆ ಮುಟ್ಟುತ್ತಿರುವ ನಿನ್ನ ವೈರಿಗಳ ಗದ್ದಲವನ್ನೂ ನಿನ್ನ ವಿರೋಧಿಗಳ ದೊಂಬಿಯನ್ನೂ ಮರೆಯದಿರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India