ಕೀರ್ತನೆಗಳು 62 - ಕನ್ನಡ ಸತ್ಯವೇದವು J.V. (BSI)ದೇವರ ಆಶ್ರಯದಲ್ಲಿರುವವರ ಮನಶ್ಶಾಂತಿ ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ತೆಗೆದದ್ದು; ಯೆದುತೂನನ ರೀತಿಯಲ್ಲಿ ಹಾಡತಕ್ಕದ್ದು; ದಾವೀದನ ಕೀರ್ತನೆ ( ಕೀರ್ತ. 39 , 77 ) 1 ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವದು. ನನ್ನ ರಕ್ಷಣೆಯು ಆತನಿಂದಲೇ. 2 ಆತನೇ ನನಗೆ ಶರಣನೂ ರಕ್ಷಕನೂ ದುರ್ಗವೂ; ನಾನು ಕದಲಿದರೂ ಬೀಳೆನು. 3 ನೀವೆಲ್ಲರೂ ಒಬ್ಬ ಪುರುಷನ ಮೇಲೆ ಬಿದ್ದು ಅವನು ಬಾಗಿದ ಗೋಡೆಯೋ ಕುಸಿದ ಪ್ರಾಕಾರವೋ ಎಂಬಂತೆ ಅವನನ್ನು ಹೊಡೆದು ಕೆಡವಬೇಕೆಂದಿರುವದು ಇನ್ನೆಷ್ಟರವರೆಗೆ? 4 ಅವನನ್ನು ಉನ್ನತಸ್ಥಾನದಿಂದ ದೊಬ್ಬುವದೇ ಅವರ ಆಲೋಚನೆ. ಸುಳ್ಳಾಡುವದು ಅವರಿಗೆ ಅತಿಸಂತೋಷ; ಬಾಯಿಂದ ಹರಸಿ ಮನಸ್ಸಿನಿಂದ ಶಪಿಸುತ್ತಾರೆ. ಸೆಲಾ. 5 ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು. ನನ್ನ ನಿರೀಕ್ಷೆಯು ನೆರವೇರುವದು ಆತನಿಂದಲೇ. 6 ಆತನೇ ನನಗೆ ಶರಣನೂ ರಕ್ಷಕನೂ ದುರ್ಗವೂ; ನಾನು ಕದಲುವದಿಲ್ಲ. 7 ನನ್ನ ರಕ್ಷಣೆಗೂ ಮಾನಕ್ಕೂ ದೇವರೇ ಆಧಾರ; ನನಗೆ ಬಲವಾದ ದುರ್ಗವೂ ಆಶ್ರಯವೂ ದೇವರಲ್ಲಿಯೇ. 8 ಜನರೇ, ಯಾವಾಗಲೂ ಆತನನ್ನೇ ನಂಬಿ ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ; ದೇವರು ನಮ್ಮ ಆಶ್ರಯವು. ಸೆಲಾ. 9 ನರರು ಬರೀ ಉಸಿರೇ; ನರಾಧಿಪತಿಗಳು ಬರೀ ಮಾಯವೇ. ಅವರೆಲ್ಲರನ್ನು ತ್ರಾಸಿನಲ್ಲಿ ತೂಗಿ ನೋಡಿದರೆ ಉಸಿರಿಗಿಂತಲೂ ಲಘು. 10 ಅನ್ಯಾಯದಿಂದ ಸಂಪಾದಿಸಿದ್ದನ್ನು ನೆಚ್ಚಬೇಡಿರಿ; ಸುಲಿಗೆಯಿಂದ ಗಳಿಸಿ ಸೊಕ್ಕಿರಬೇಡಿರಿ; ಹೆಚ್ಚಿದ ಆಸ್ತಿಯಲ್ಲಿ ಮನಸ್ಸಿಡಬೇಡಿರಿ. 11 ಸರ್ವಾಧಿಕಾರವು ದೇವರದೇ ಎಂದು ದೇವರು ಒಮ್ಮೆ ಅಲ್ಲ, ಎರಡಾವರ್ತಿ ಹೇಳಿದ್ದನ್ನು ಕೇಳಿದ್ದೇನೆ. 12 ಕರ್ತನೇ, ನೀನು ಪ್ರೀತಿಸ್ವರೂಪನಾಗಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವಂಥವನಲ್ಲವೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India