ಕೀರ್ತನೆಗಳು 52 - ಕನ್ನಡ ಸತ್ಯವೇದವು J.V. (BSI)ದುಷ್ಟಾಧಿಕಾರಿಯ ದುಸ್ವಭಾವವನ್ನು ಖಂಡಿಸುವದು ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ತೆಗೆದದ್ದು; ದಾವೀದನು ಅಹೀಮೆಲೆಕನ ಮನೆಗೆ ಬಂದ ವರ್ತಮಾನವನ್ನು ಎದೋಮ್ಯನಾದ ದೋಯೇಗನು ಸೌಲನಿಗೆ ತಿಳಿಸಿದಾಗ ದಾವೀದನು ರಚಿಸಿದ ಪದ್ಯ. ( 1 ಸಮು. 21 , 22 ) 1 ದುಷ್ಟಾಧಿಕಾರಿಯೇ, ನೀನು ಕೆಡುಕು ಮಾಡಿ ಹಿಗ್ಗುವದೇನು? ದೇವರ ಕೃಪೆಯು ಯಾವಾಗಲೂ ಇರುವದು. 2 ಮೋಸಗಾರನೇ, ನಿನ್ನ ನಾಲಿಗೆಯು ಹದವಾದ ಕ್ಷೌರಕತ್ತಿಯಂತೆ ಅಪಾಯಗಳನ್ನೇ ಕಲ್ಪಿಸುತ್ತದೆ. 3 ಉಪಕಾರಕ್ಕಿಂತಲೂ ಅಪಕಾರವೇ ನಿನಗೆ ಇಷ್ಟ; ನೀತಿಯನ್ನು ಬಿಟ್ಟು ಸುಳ್ಳನ್ನು ಸ್ಥಾಪಿಸುವದೇ ನಿನಗೆ ಸಂತೋಷ. ಸೆಲಾ. 4 ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ. 5 ದೇವರು ನಿನ್ನನ್ನು ಎಂದಿಗೂ ಏಳದಂತೆ ಕೆಡವಿ ಬಿಡುವನು; ನಿನ್ನನ್ನು ಹಿಡಿದು ನಿವಾಸದೊಳಗಿಂದ ಕಿತ್ತುಬೀಸಾಡುವನು; ಆತನು ನಿನ್ನನ್ನು ಜೀವಲೋಕದಿಂದ ಬೇರು ಸಹಿತವಾಗಿ ಕಿತ್ತುಹಾಕುವನು. ಸೆಲಾ. 6 ನೀತಿವಂತರು ಅದನ್ನು ನೋಡಿ ಭಯಪಡುವರು; ಅವರು ಪರಿಹಾಸ್ಯಮಾಡುತ್ತಾ - 7 ನೋಡಿರಿ, ದೇವರನ್ನು ಆಶ್ರಯಿಸಿಕೊಳ್ಳದೆ ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು ತನ್ನ ದುಷ್ಟತ್ವವೇ ತನಗೆ ಬಲವೆಂದು ನಂಬಿಕೊಂಡ ಮೂಢನು ಇವನೇ ಎಂದು ಹೇಳುವರು. 8 ಆದರೆ ನಾನು ದೇವಾಲಯದ ಸೊಗಸಾದ ಎಣ್ಣೇ ಮರದಂತಿರುವೆನು; ದೇವರ ಕೃಪೆಯನ್ನು ಯುಗಯುಗಾಂತರಗಳಲ್ಲಿಯೂ ನಂಬಿಕೊಂಡಿರುವೆನು. 9 [ದೇವರೇ] ನಿನ್ನ ಉಪಕಾರಕ್ಕಾಗಿ ಯಾವಾಗಲೂ ನಿನ್ನನ್ನು ಸ್ತುತಿಸುವೆನು; ನಿನ್ನ ನಾಮವು ಸರ್ವೋತ್ತಮವೆಂದು ನಿನ್ನ ಭಕ್ತರ ಮುಂದೆ ಅದನ್ನೇ ನಿರೀಕ್ಷಿಸಿಕೊಂಡಿರುವೆನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India