ಕೀರ್ತನೆಗಳು 105 - ಕನ್ನಡ ಸತ್ಯವೇದವು J.V. (BSI)ಯೆಹೋವನು ಇಸ್ರಾಯೇಲ್ಯರಲ್ಲಿ ತನ್ನ ವಾಗ್ದಾನವನ್ನು ನೆರವೇರಿಸಿದ್ದಕ್ಕಾಗಿ ಸ್ತೋತ್ರ ( ಕೀರ್ತ. 78 , 106 ) 1 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನ ನಾಮದ ಮಹತ್ವವನ್ನು ವರ್ಣಿಸಿರಿ; ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಪಡಿಸಿರಿ. 2 ಆತನನ್ನು ಕೀರ್ತಿಸಿರಿ, ಭಜಿಸಿರಿ; ಆತನ ಅದ್ಭುತಕೃತ್ಯಗಳನ್ನೆಲ್ಲಾ ಧ್ಯಾನಿಸಿರಿ. 3 ಆತನ ಪರಿಶುದ್ಧನಾಮದಲ್ಲಿ ಹಿಗ್ಗಿರಿ; ಯೆಹೋವನ ದರ್ಶನವನ್ನು ಕೋರುವವರ ಹೃದಯವು ಹರ್ಷಿಸಲಿ. 4 ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿರಿ; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ. 5 ಆತನ ಸೇವಕನಾದ ಅಬ್ರಹಾಮನ ಸಂತತಿಯವರೇ, ಆತನು ಆರಿಸಿಕೊಂಡ ಯಾಕೋಬನ ವಂಶದವರೇ, 6 ಆತನು ಮಾಡಿದ ಅದ್ಭುತಕೃತ್ಯ, ಆತನ ಮಹತ್ಕಾರ್ಯ, ಆತನ ಬಾಯಿಂದ ಹೊರಟ ನ್ಯಾಯನಿರ್ಣಯ ಇವುಗಳನ್ನು ನೆನಪುಮಾಡಿಕೊಳ್ಳಿರಿ. 7 ಯೆಹೋವನೆಂಬಾತನೇ ನಮ್ಮ ದೇವರು; ಆತನ ನ್ಯಾಯವಿಧಿಗಳು ಭೂಲೋಕದಲ್ಲೆಲ್ಲಾ ಇವೆ. 8 ಆತನು ತನ್ನ ವಾಗ್ದಾನವನ್ನು ಸಾವಿರ ತಲೆಗಳವರೆಗೂ ತನ್ನ ಒಡಂಬಡಿಕೆಯನ್ನು ನಿತ್ಯವೂ ನೆನಪಿನಲ್ಲಿಟ್ಟುಕೊಳ್ಳುತ್ತಾನೆ. 9 ಆತನು ಆ ಒಡಂಬಡಿಕೆಯನ್ನು ಅಬ್ರಹಾಮನ ಸಂಗಡ ಮಾಡಿಕೊಂಡನು; ಇಸಾಕನಿಗೆ ಆಣೆಯಿಟ್ಟನು. 10 ಅದು ರಾಜಶಾಸನದಂತಿರುವದೆಂದು ಯಾಕೋಬನಿಗೂ ಶಾಶ್ವತವಾದ ಒಡಂಬಡಿಕೆಯಾಗಿರುವದೆಂದು ಇಸ್ರಾಯೇಲನಿಗೂ ಮಾತುಕೊಟ್ಟನು. 11 ಅವರು ಇನ್ನೂ ಬಹು ಸ್ವಲ್ಪ ಜನರೂ ಕಾನಾನ್ದೇಶದಲ್ಲಿ ಪ್ರವಾಸಿಗಳೂ ಆಗಿರುವಾಗಲೇ 12 ಆತನು - ನಿಮಗೆ ಈ ದೇಶವನ್ನು ಕೊಡುವೆನು; ಅದು ನಿಮ್ಮ ಸಂತತಿಯವರಿಗೆ ಸ್ವಾಸ್ತ್ಯವಾಗಿರುವದು ಎಂದು ಹೇಳಿದನು. 13 ಅವರು ದೇಶದಿಂದ ದೇಶಕ್ಕೂ ರಾಜ್ಯದಿಂದ ರಾಜ್ಯಕ್ಕೂ ಹೋಗುತ್ತಿರುವಲ್ಲಿ 14 ಅವರಿಗೆ ಯಾರಿಂದಲೂ ಅನ್ಯಾಯವಾಗಗೊಡಿಸಲಿಲ್ಲ. ಆತನು ಅವರ ವಿಷಯದಲ್ಲಿ ಅರಸರನ್ನೂ ಗದರಿಸಿ - 15 ನಾನು ಅಭಿಷೇಕಿಸಿದವರನ್ನು ಮುಟ್ಟಬಾರದು, ನನ್ನ ಪ್ರವಾದಿಗಳಿಗೆ ಯಾವ ಕೇಡನ್ನೂ ಮಾಡಬಾರದು ಎಂದು ಹೇಳಿದನು. 16 ಅನಂತರ ಆತನು ದೇಶದಲ್ಲಿ ಕ್ಷಾಮವನ್ನು ಬರಮಾಡಿ ಆಹಾರವೆಂಬ ಊರುಗೋಲನ್ನು ಮುರಿದುಬಿಟ್ಟನು. 17 ಆತನು ಅವರ ಮುಂದಾಗಿ ಒಬ್ಬನನ್ನು ಕಳುಹಿಸಿದನು; ದಾಸತ್ವಕ್ಕೆ ಮಾರಲ್ಪಟ್ಟ ಯೋಸೇಫನೇ ಅವನು. 18 ಅವನ ಕಾಲುಗಳು ಕೋಳದಲ್ಲಿ ನೊಂದವು; ಕಬ್ಬಿಣದ ಬೇಡಿಗಳಿಂದ ಅವನು ಬಂಧಿತನಾದನು. 19 ಅವನು ತನ್ನ ಮಾತು ನೆರವೇರುವ ತನಕ ಯೆಹೋವನ ವಾಕ್ಯದಿಂದ ಶೋಧಿತನಾದನು. 20 ಅರಸನು ಅಪ್ಪಣೆಮಾಡಿ ಅವನನ್ನು ತಪ್ಪಿಸಿದನು; ಜನಪತಿಯು ಅವನನ್ನು ಬಿಡಿಸಿದನು. 21 ಅವನನ್ನು ತನ್ನ ಮನೆಗೆ ಯಜಮಾನನನ್ನಾಗಿಯೂ ತನ್ನ ಆಸ್ತಿಗೆಲ್ಲಾ ಅಧಿಕಾರಿಯನ್ನಾಗಿಯೂ ಮಾಡಿದನು. 22 ತನ್ನ ಪ್ರಧಾನರನ್ನು ಇಷ್ಟಾನುಸಾರವಾಗಿ ಬಂಧಿಸುವದಕ್ಕೂ ತನ್ನ ಮಂತ್ರಿಗಳಿಗೆ ಬುದ್ಧಿಕಲಿಸುವದಕ್ಕೂ ಅವನಿಗೆ ಅಧಿಕಾರಕೊಟ್ಟನು. 23 ಆಗ ಇಸ್ರಾಯೇಲನು ಐಗುಪ್ತಕ್ಕೆ ಬಂದನು; ಯಾಕೋಬನು ಹಾಮನ ದೇಶದಲ್ಲಿ ಪ್ರವಾಸಿಯಾದನು. 24 ದೇವರು ತನ್ನ ಜನರನ್ನು ಬಹಳವಾಗಿ ವೃದ್ಧಿಮಾಡಿ ಅವರು ಶತ್ರುಗಳಿಗಿಂತ ಬಲಿಷ್ಠರಾಗುವಂತೆ ಮಾಡಿದನು. 25 ಆತನು ಆ ದೇಶದವರ ಹೃದಯವನ್ನು ಮಾರ್ಪಡಿಸಿದ್ದರಿಂದ ಅವರು ಆತನ ಜನರನ್ನು ದ್ವೇಷಿಸಿ ಆತನ ಸೇವಕರನ್ನು ಕುಯುಕ್ತಿಯಿಂದ ನಡಿಸಿದರು. 26 ಆಗ ಆತನು ತನ್ನ ಸೇವಕನಾದ ಮೋಶೆಯನ್ನೂ ತಾನು ಆರಿಸಿಕೊಂಡ ಆರೋನನನ್ನೂ ಕಳುಹಿಸಿದನು. 27 ಅವರು ಹಾಮನ ದೇಶದವರ ಮಧ್ಯದಲ್ಲಿ ಆತನು ಆಜ್ಞಾಪಿಸಿದ ವಿವಿಧ ಮಹತ್ಕಾರ್ಯಗಳನ್ನೂ ಅದ್ಭುತಗಳನ್ನೂ ನಡಿಸಿದರು. 28 ಆತನು ಕತ್ತಲೆಯನ್ನು ಕಳುಹಿಸಲು ಕತ್ತಲೆಯಾಯಿತು. ಅವರು ಆತನ ಆಜ್ಞೆಗಳನ್ನು ತಿರಸ್ಕರಿಸಲಿಲ್ಲ. 29 ಆತನು ಐಗುಪ್ತ್ಯರ ನೀರನ್ನು ರಕ್ತಮಾಡಿ ಮೀನುಗಳನ್ನು ಸಾಯಿಸಿದನು. 30 ಅವರ ದೇಶದಲ್ಲೆಲ್ಲಾ ಕಪ್ಪೆಗಳು ತುಂಬಿಕೊಂಡವು; ಅರಮನೆಯಲ್ಲಿಯೂ ವ್ಯಾಪಿಸಿಕೊಂಡವು. 31 ಆತನು ಆಜ್ಞಾಪಿಸಲು ಅವರ ಎಲ್ಲಾ ಪ್ರಾಂತಗಳಲ್ಲಿ ವಿಷದ ಹುಳಗಳೂ ಹೇನುಗಳೂ ಉಂಟಾದವು. 32 ಆತನು ಅವರ ದೇಶದಲ್ಲಿ ಕಲ್ಮಳೆಯನ್ನೂ ಬೆಂಕಿಯುರಿಯನ್ನೂ ಬರಮಾಡಿ 33 ಅವರ ದ್ರಾಕ್ಷಾಲತೆಗಳನ್ನೂ ಅಂಜೂರದ ಗಿಡಗಳನ್ನೂ ಹೊಡೆದು ಅವರ ಪ್ರಾಂತಗಳಲ್ಲಿದ್ದ ಮರಗಳನ್ನು ಮುರಿದುಬಿಟ್ಟನು. 34 ಆತನು ಆಜ್ಞಾಪಿಸಲು ವಿುಡಿತೆಗಳೂ ಲೆಕ್ಕವಿಲ್ಲದಷ್ಟು ಜಿಟ್ಟೆಹುಳಗಳೂ ಬಂದು 35 ಅವರ ದೇಶದಲ್ಲಿದ್ದ ಎಲ್ಲಾ ಪೈರುಗಳನ್ನೂ ಭೂವಿುಯ ಬೆಳೆಗಳನ್ನೂ ತಿಂದುಬಿಟ್ಟವು. 36 ಆ ದೇಶದವರ ವೀರ್ಯಕ್ಕೆ ಪ್ರಥಮಫಲವಾಗಿದ್ದ ಚೊಚ್ಚಲ ಮಕ್ಕಳನ್ನು ಸಂಹರಿಸಿದನು. 37 ಇಸ್ರಾಯೇಲ್ಯರನ್ನು ಬೆಳ್ಳಿಬಂಗಾರಗಳ ಸಹಿತವಾಗಿ ಹೊರಗೆ ಬರಮಾಡಿದನು; ಅವರ ಕುಲಗಳಲ್ಲಿ ಒಬ್ಬನಾದರೂ ಎಡವುವವನಿರಲಿಲ್ಲ. 38 ಐಗುಪ್ತ್ಯರು ಅವರ ವಿಷಯದಲ್ಲಿ ಹೆದರಿಕೆಯುಳ್ಳವರಾದ್ದರಿಂದ ಅವರು ಹೊರಟು ಹೋದದಕ್ಕೆ ಸಂತೋಷಿಸಿದರು. 39 ಅವರಿಗೆ [ಹಗಲಲ್ಲಿ] ನೆರಳಿಗೋಸ್ಕರ ಮೋಡವನ್ನೂ ಇರುಳಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನೂ ಮೇಲೆ ಹರವಿದನು. 40 ಅವರು ಬೇಡಿಕೊಳ್ಳಲು ಲಾವಕ್ಕಿಗಳನ್ನು ಬರಮಾಡಿದನು; ದಿವ್ಯಾಹಾರದಿಂದ ಅವರನ್ನು ತೃಪ್ತಿಗೊಳಿಸಿದನು. 41 ಆತನು ಬಂಡೆಯನ್ನು ಸೀಳಲು ನೀರು ಚಿವ್ಮಿು ಬಂದು ಅರಣ್ಯದಲ್ಲಿ ನದಿಯಾಗಿ ಹರಿಯಿತು. 42 ಹೀಗೆ ಆತನು ತನ್ನ ಪರಿಶುದ್ಧವಚನವನ್ನೂ ತನ್ನ ಸೇವಕನಾದ ಅಬ್ರಹಾಮನನ್ನೂ ನೆನಪುಮಾಡಿಕೊಂಡು 43 ತನ್ನ ಪ್ರಜೆಯು ಉಲ್ಲಾಸದಿಂದಲೂ ತಾನು ಆರಿಸಿಕೊಂಡವರು ಉತ್ಸಾಹಧ್ವನಿಯಿಂದಲೂ ಹೊರಗೆ ಬರುವಂತೆ ಮಾಡಿದನು. 44 ಮತ್ತು ಆತನು ಅವರಿಗೆ ಪರಜನರ ದೇಶಗಳನ್ನು ಕೊಟ್ಟನು; ಅನ್ಯಜನಾಂಗಗಳ ಕಷ್ಟಾರ್ಜಿತವು ಅವರಿಗೆ ಕೈ ಸೇರಿತು. 45 ಅವರು ತನ್ನ ವಿಧಿಗಳನ್ನು ಕೈಕೊಂಡು ತನ್ನ ಧರ್ಮಶಾಸ್ತ್ರವನ್ನು ಅನುಸರಿಸಬೇಕೆಂಬದೇ ಆತನ ಉದ್ದೇಶ. ಯಾಹುವಿಗೆ ಸ್ತೋತ್ರ! |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India