ಎಸ್ತೇರಳು 8 - ಕನ್ನಡ ಸತ್ಯವೇದವು J.V. (BSI)1 ಆ ದಿನದಲ್ಲಿ ಅರಸನಾದ ಅಹಷ್ವೇರೋಷನು ಯೆಹೂದ್ಯರ ವೈರಿಯಾದ ಹಾಮಾನನ ಮನೆಯನ್ನು ಎಸ್ತೇರ್ರಾಣಿಗೆ ಕೊಟ್ಟನು. ಆಕೆಯು ಮೊರ್ದೆಕೈಗೂ ತನಗೂ ಇರುವ ಸಂಬಂಧವನ್ನು ತಿಳಿಸಿದ್ದರಿಂದ ಅರಸನು ಮೊರ್ದೆಕೈಯನ್ನು ಒಡ್ಡೋಲಗದಲ್ಲಿ ಸೇರಿಸಿ 2 ತಾನು ಹಾಮಾನನಿಂದ ತೆಗಿಸಿದ್ದ ತನ್ನ ಮುದ್ರೆಯುಂಗರವನ್ನು ಅವನಿಗೆ ಕೊಟ್ಟನು; ಎಸ್ತೇರಳು ಹಾಮಾನನ ಮನೆಯ ಆಡಳಿತವನ್ನು ಅವನಿಗೆ ಒಪ್ಪಿಸಿದಳು. ಯೆಹೂದ್ಯರನ್ನು ಸಂಹರಿಸಬೇಕೆಂಬ ರಾಜಶಾಸನವನ್ನು ಮೊರ್ದೆಕೈಯು ರದ್ದುಮಾಡಿಸಿದ್ದು 3 ಎಸ್ತೇರಳು ತಿರಿಗಿ ಅರಸನನ್ನು ಮಾತಾಡಿಸುವದಕ್ಕೆ ಹೋಗಿ ಅವನ ಪಾದಗಳಿಗೆ ಬಿದ್ದು ಅತ್ತು - ಅಗಾಗನ ವಂಶದವನಾದ ಹಾಮಾನನು ಯೆಹೂದ್ಯರ ಹಾನಿಗಾಗಿ ಕಲ್ಪಿಸಿದ ಅಪಾಯಗಳನ್ನು ನಿವಾರಿಸಬೇಕೆಂದು ವಿಜ್ಞಾಪಿಸಲು 4 ಅರಸನು ಸುವರ್ಣರಾಜದಂಡವನ್ನು ಆಕೆಯ ಕಡೆಗೆ ಚಾಚಿದ್ದರಿಂದ ಆಕೆಯು ಎದ್ದು ಅರಸನ ಮುಂದೆ ನಿಂತು ಅವನಿಗೆ - 5 ಅರಸನು ನನ್ನ ಮೇಲೆ ಕಟಾಕ್ಷವಿಟ್ಟು ನನ್ನನ್ನು ಮೆಚ್ಚಿ ನಾನು ಹೇಳುವ ಮಾತು ಉಚಿತವಾದದ್ದೆಂದೆಣಿಸಿ ಅದಕ್ಕೆ ಸಮ್ಮತಿಸುವದಾದರೆ ಅರಸನ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರನ್ನು ಸಂಹರಿಸುವದರ ವಿಷಯವಾಗಿ ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನು ಬರಿಸಿದ ಪತ್ರಗಳನ್ನು ರದ್ದುಮಾಡುವದಕ್ಕಾಗಿ ರಾಯಸವನ್ನು ಪ್ರಕಟಿಸಬೇಕು. 6 ನನ್ನ ಜನರಿಗೆ ಕೇಡು ಸಂಭವಿಸುವದನ್ನು ನೋಡಿ ನಾನು ಸಹಿಸುವದು ಹೇಗೆ? ನನ್ನ ಕುಲನಾಶನವನ್ನು ನೋಡುತ್ತಾ ಸುಮ್ಮನಿರುವದು ಹೇಗೆ ಎಂದು ಬಿನ್ನವಿಸಿದಳು. 7 ಆಗ ಅಹಷ್ವೇರೋಷ್ ರಾಜನು ರಾಣಿಯಾದ ಎಸ್ತೇರಳಿಗೂ ಯೆಹೂದ್ಯನಾದ ಮೊರ್ದೆಕೈಗೂ - ಹಾಮಾನನು ಯೆಹೂದ್ಯರಿಗೆ ವಿರೋಧವಾಗಿ ಕೈಯೆತ್ತಿದದರಿಂದ ಅವನನ್ನು ಗಲ್ಲಿಗೆ ಹಾಕಿಸಿ ಅವನ ಸೊತ್ತನ್ನು ಎಸ್ತೇರಳಿಗೆ ದಾನಮಾಡಿದ್ದೇನಲ್ಲಾ! 8 ಅರಸನ ಹೆಸರಿನಲ್ಲಿ ಬರೆಯಲ್ಪಟ್ಟ ರಾಜಮುದ್ರೆಯಿರುವ ಲೇಖನವನ್ನು ಯಾರೂ ರದ್ದುಮಾಡಕೂಡದಷ್ಟೆ. ಹೀಗಿರುವದರಿಂದ ಯೆಹೂದ್ಯರ ವಿಷಯವಾಗಿ ನಿಮಗೆ ಸರಿತೋರುವದನ್ನು ಅರಸನ ಹೆಸರಿನಲ್ಲಿ ನೀವು ಬರೆಯಿಸಿ ರಾಜ ಮುದ್ರೆಯನ್ನು ಹಾಕಿರಿ ಎಂದು ಹೇಳಿದನು. 9 ಆಗ ರಾಜಲೇಖಕರು ಕರೆಯಲ್ಪಟ್ಟರು. ಅವರು ಮೂರನೆಯ ತಿಂಗಳಾದ ಜೇಷ್ಠಮಾಸದ ಇಪ್ಪತ್ತ ಮೂರನೆಯ ದಿನದಲ್ಲಿ ಬಂದು ಮೊರ್ದೆಕೈಯ ಆಜ್ಞಾನುಸಾರ ಯೆಹೂದ್ಯರಿಗೂ ಹಿಂದುಸ್ಥಾನ ಮೊದಲುಗೊಂಡು ಕೂಷಿನವರೆಗೂ ಇರುವ ನೂರಿಪ್ಪತ್ತೇಳು ಸಂಸ್ಥಾನಗಳ ಉಪರಾಜರಿಗೂ ದೇಶಾಧಿಪತಿಗಳಿಗೂ ಅಧಿಕಾರಿಗಳಿಗೂ ಪತ್ರಗಳನ್ನು ಬರೆದರು. ಆ ಪತ್ರಗಳು ಆಯಾ ಸಂಸ್ಥಾನಗಳ ಬರಹಗಳಲ್ಲಿಯೂ ಆಯಾ ಜನಾಂಗಗಳ ಭಾಷೆಗಳಲ್ಲಿಯೂ ಇದ್ದವು. ಯೆಹೂದ್ಯರಿಗೆ ಬರೆದ ಪತ್ರಗಳು ಯೆಹೂದ್ಯ ಬರಹದಲ್ಲಿಯೂ ಭಾಷೆಯಲ್ಲಿಯೂ ಲಿಖಿತವಾದವು. 10 ಮೊರ್ದೆಕೈಯು ಅರಸನ ಹೆಸರಿನಲ್ಲಿ ಬರೆಯಲ್ಪಟ್ಟ ಅವುಗಳಿಗೆ ರಾಜಮುದ್ರೆಯನ್ನು ಹಾಕಿ ಅರಮನೆಯ ಅಶ್ವಾಲಯಗಳಲ್ಲಿ ಹುಟ್ಟಿ ಬೆಳೆದ ಸವಾರಿಕುದುರೆಗಳನ್ನು ಹತ್ತಿಕೊಂಡಿದ್ದ ಅಂಚೆಯವರ ಮುಖಾಂತರ ಕಳುಹಿಸಿದನು. 11 ಆ ಪತ್ರಗಳಿಂದ ಅರಸನು - ಅಹಷ್ವೇರೋಷ್ರಾಜನ ಎಲ್ಲಾ ಸಂಸ್ಥಾನಗಳ ಆಯಾ ಪಟ್ಟಣಗಳಲ್ಲಿರುವ ಯೆಹೂದ್ಯರು ಒಂದೇ ದಿನದಲ್ಲಿ ಅಂದರೆ ಹನ್ನೆರಡನೆಯ ತಿಂಗಳಾದ ಫಾಲ್ಗುನಮಾಸದ 12 ಹದಿಮೂರನೆಯ ದಿನದಲ್ಲಿ ಕೂಡಿಕೊಂಡು ತಮ್ಮ ಪ್ರಾಣರಕ್ಷಣೆಗಾಗಿ ಎದ್ದು ತಮಗೆ ವಿರೋಧವಾಗಿ ಆಯುಧಗಳೊಡನೆ ನೆರೆದು ಬರುವ ಎಲ್ಲಾ ಜನಾಂಗಗಳವರನ್ನೂ ಸಂಸ್ಥಾನಗಳವರನ್ನೂ ಅವರ ಹೆಂಡತಿಯರು ಮಕ್ಕಳು ಸಹಿತವಾಗಿ ಕೊಂದು ಸಂಹರಿಸಿ ನಿರ್ನಾಮಗೊಳಿಸಿ ಅವರ ಸೊತ್ತನ್ನು ಸೂರೆಮಾಡಬೇಕೆಂದೂ 13 ಈ ಪತ್ರದ ಒಂದೊಂದು ಪ್ರತಿಯನ್ನು ಪ್ರತಿಯೊಂದು ಸಂಸ್ಥಾನದಲ್ಲಿ ರಾಜವಿಧಿಯೆಂದು ಎಲ್ಲಾ ಜನರಲ್ಲಿ ಪ್ರಕಟಿಸಬೇಕೆಂದೂ ಆ ದಿನದಲ್ಲಿ ಯೆಹೂದ್ಯರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವದಕ್ಕೆ ಸಿದ್ಧರಾಗಿರಬೇಕೆಂದೂ ಅಪ್ಪಣೆಮಾಡಿದನು. 14 ಈ ರಾಜಾಜ್ಞೆಯು ಶೂಷನ್ ಕೋಟೆಯಲ್ಲಿ ಪ್ರಕಟವಾದಾಗಲೇ ಅರಮನೆಯ ಸವಾರಿ ಕುದುರೆಗಳನ್ನು ಹತ್ತಿಕೊಂಡಿದ್ದ ಅಂಚೆಯವರು ಅರಸನ ಅಪ್ಪಣೆಯಿಂದ ಪ್ರೇರಿತರಾಗಿ ಅತಿಶೀಘ್ರವಾಗಿ ಹೊರಟರು. 15 ಮೊರ್ದೆಕೈಯಾದರೋ ನೀಲ ಶುಭ್ರವರ್ಣಗಳುಳ್ಳ ರಾಜವಸ್ತ್ರಗಳನ್ನು ಧರಿಸಿ ಬಂಗಾರದ ದೊಡ್ಡ ಪಟ್ಟಿಯನ್ನು ಹಣೆಗೆ ಕಟ್ಟಿಕೊಂಡು ರಕ್ತವರ್ಣದ ನಾರಿನ ಶಾಲನ್ನು ಹೊದ್ದು ರಾಜಸನ್ನಿಧಿಯಿಂದ ಹೊರಟನು. ಶೂಷನ್ ಪಟ್ಟಣದಲ್ಲಿ ಸಂತೋಷದ ಆರ್ಭಟವು ಕೇಳಿಸಿತು. 16 ಅಲ್ಲಿನ ಯೆಹೂದ್ಯರು ಸಂತೋಷ ಹರ್ಷ ಪ್ರಭಾವ ತೇಜಸ್ಸುಗಳುಳ್ಳವರಾದರು. 17 ರಾಜನಿರ್ಣಯ ಶಾಸನಗಳು ಪ್ರಕಟಿಸಲ್ಪಟ್ಟ ಪ್ರತಿಯೊಂದು ಸಂಸ್ಥಾನದಲ್ಲಿಯೂ ಪಟ್ಟಣದಲ್ಲಿಯೂ ಇದ್ದ ಯೆಹೂದ್ಯರಿಗೆ ಶುಭದಿನವುಂಟಾಯಿತು; ಅವರು ಸಂತೋಷದಿಂದಲೂ ಉಲ್ಲಾಸದಿಂದಲೂ ಭಕ್ಷ್ಯಭೋಜನಮಾಡಿದರು. ದೇಶದ ಜನರಲ್ಲಿ ಅನೇಕರು ಯೆಹೂದ್ಯರಿಗೆ ಭಯಪಟ್ಟು ಅವರ ಮತಕ್ಕೆ ಸೇರಿದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India