ಎಸ್ತೇರಳು 5 - ಕನ್ನಡ ಸತ್ಯವೇದವು J.V. (BSI)ಎಸ್ತೇರಳು ಅರಸನ ದಯೆಗೆ ಪಾತ್ರಳಾಗಿ ಅವನನ್ನೂ ಹಾಮಾನನನ್ನೂ ಔತಣಕ್ಕೆ ಕರಿಸಿದ್ದು 1 ಮೂರನೆಯ ದಿನದಲ್ಲಿ ಎಸ್ತೇರಳು ರಾಜವಸ್ತ್ರ ಭೂಷಿತಳಾಗಿ ಅರಮನೆಯ ಒಳಗಣ ಪ್ರಾಕಾರವನ್ನು ಪ್ರವೇಶಿಸಿ ರಾಜ ಮಂದಿರದ ಎದುರಿನಲ್ಲಿ ನಿಂತಳು. ಅರಸನು ಆ ಮಂದಿರದಲ್ಲಿ ರಾಜಸಿಂಹಾಸನದ ಮೇಲೆ ಬಾಗಲಿಗೆದುರಾಗಿ ಕೂತುಕೊಂಡಿದ್ದನು. 2 ಅವನು ಪ್ರಾಕಾರದಲ್ಲಿ ನಿಂತಿರುವ ಎಸ್ತೇರ್ ರಾಣಿಯನ್ನು ಕಂಡ ಕೂಡಲೆ ಆಕೆಯ ಮೇಲೆ ದಯವಿಟ್ಟು ತನ್ನ ಕೈಯಲ್ಲಿದ್ದ ಸುವರ್ಣದಂಡವನ್ನು ಆಕೆಯ ಕಡೆಗೆ ಚಾಚಿದನು. ಎಸ್ತೇರಳು ಸಮೀಪಕ್ಕೆ ಹೋಗಿ ದಂಡದ ತುದಿಯನ್ನು ಮುಟ್ಟಲು 3 ಅರಸನು ಆಕೆಗೆ ಎಸ್ತೇರ್ ರಾಣಿಯೇ, ನಿನಗೇನು ಬೇಕು? ನಿನ್ನ ವಿಜ್ಞಾಪನೆ ಯಾವದು? ನನ್ನ ಅರ್ಧ ರಾಜ್ಯವನ್ನು ಕೇಳಿದರೂ ನಿನಗೆ ಕೊಡುತ್ತೇನೆ ಅಂದನು. 4 ಅದಕ್ಕೆ ಎಸ್ತೇರಳು - ಅರಸನ ಚಿತ್ತಕ್ಕೆ ಬಂದರೆ ನಾನು ಈಹೊತ್ತು ತಮಗೋಸ್ಕರ ಸಿದ್ಧಮಾಡಿಸಿರುವ ಔತಣಕ್ಕೆ ಹಾಮಾನನೊಡನೆ ಬರೋಣವಾಗಲಿ ಎಂದು ಅರಿಕೆಮಾಡಿದಳು. 5 ಕೂಡಲೆ ಅರಸನು - ಎಸ್ತೇರಳ ವಿಜ್ಞಾಪನೆಯನ್ನು ನೆರವೇರಿಸುವದಕ್ಕೆ ಹಾಮಾನನನ್ನು ತ್ವರೆಪಡಿಸಿರಿ ಎಂದು ಅಪ್ಪಣೆಮಾಡಿದನು; ಮತ್ತು ಎಸ್ತೇರಳು ಮಾಡಿಸಿದ್ದ ಔತಣಕ್ಕೆ ಹಾಮಾನನ ಜೊತೆಯಲ್ಲಿ ಹೋದನು. 6 ದ್ರಾಕ್ಷಾರಸಪಾನ ಮಾಡುವಾಗ ಅರಸನು ತಿರಿಗಿ ಎಸ್ತೇರಳಿಗೆ - ನಿನ್ನ ವಿಜ್ಞಾಪನೆ ಯಾವದು, ಹೇಳು; ಅದನ್ನು ನೆರವೇರಿಸುವೆನು. ನೀನು ನನ್ನ ಅರ್ಧರಾಜ್ಯವನ್ನು ಕೇಳಿಕೊಂಡರೂ ಸರಿಯೇ, ಅದನ್ನು ನಿನಗೆ ಕೊಡುವೆನು ಅನ್ನಲು ಎಸ್ತೇರಳು - 7 ಅರಸರು ನನ್ನ ಮೇಲೆ ಕಟಾಕ್ಷವಿಟ್ಟು ನಾನು ಕೇಳುವದನ್ನು ಕೊಡುವದಕ್ಕೂ ನನ್ನ ವಿಜ್ಞಾಪನೆಯನ್ನು ನೆರವೇರಿಸುವದಕ್ಕೂ ಮನಸ್ಸುಳ್ಳವರಾಗಿದ್ದರೆ 8 ನಾನು ತಮಗೋಸ್ಕರ ಸಿದ್ಧಮಾಡಿಸುವ ಔತಣಕ್ಕೆ ನಾಳೆಯೂ ಹಾಮಾನನ ಜೊತೆಯಲ್ಲಿ ಬರೋಣವಾಗಲಿ; ಆಗ ಅರಸರು ಹೇಳಿದಂತೆ ಮಾಡುವೆನು. ಇದೇ ನನ್ನ ಮನವಿ ಎಂದು ಉತ್ತರಕೊಟ್ಟಳು. ಹಾಮಾನನು ಮೊರ್ದೆಕೈಯನ್ನು ಗಲ್ಲಿಗೆ ಹಾಕಬೇಕೆಂದು ನಿರ್ಣಯಿಸಿಕೊಂಡದ್ದು 9 ಆ ದಿನ ಹಾಮಾನನು ಆನಂದಲಹರಿಯಲ್ಲಿ ಮನೆಗೆ ಹೋಗುತ್ತಿರುವಾಗ ಮೊರ್ದೆಕೈಯು ತನಗೆ ಭಯಪಡದೆ ತನ್ನ ಮುಂದೆ ಏಳದೆ ಅರಮನೆಯ ಹೆಬ್ಬಾಗಲಿನಲ್ಲಿ ಕೂತಿರುವದನ್ನು ಕಂಡು ಅವನ ಮೇಲೆ ಕೋಪಭರಿತನಾದನು. 10 ಆದರೂ ತನ್ನನ್ನು ಬಿಗಿಹಿಡಿದುಕೊಂಡು ಮನೆಗೆ ಹೋಗಿ ತನ್ನ ಆಪ್ತರನ್ನೂ ಪತ್ನಿಯಾದ ಜೆರೆಷಳನ್ನೂ ಕರಿಸಿ 11 ಅವರ ಮುಂದೆ ತನ್ನ ಘನೈಶ್ವರ್ಯಗಳನ್ನೂ ಪುತ್ರಲಾಭಾತಿಶಯವನ್ನೂ ಅರಸನು ತನ್ನನ್ನು ಸನ್ಮಾನಿಸಿ ಎಲ್ಲಾ ಸರದಾರರಲ್ಲಿಯೂ ರಾಜ ಸೇವಕರಲ್ಲಿಯೂ ತನಗೆ ಶ್ರೇಷ್ಠಸ್ಥಾನವನ್ನು ಅನುಗ್ರಹಿಸಿದ್ದನ್ನೂ ವರ್ಣಿಸಿದ ಮೇಲೆ - 12 ಅಹಹ! ಎಸ್ತೇರ್ ರಾಣಿಯು ತಾನು ಸಿದ್ಧಮಾಡಿಸಿದ ಔತಣಕ್ಕೆ ಅರಸನ ಜೊತೆಯಲ್ಲಿ ನನ್ನನ್ನು ಹೊರತಾಗಿ ಇನ್ನಾರನ್ನೂ ಕರಿಸಲಿಲ್ಲ. ನಾಳೆಯೂ ಅರಸನ ಜೊತೆಯಲ್ಲಿ ಬರಬೇಕೆಂದು ನನಗೆ ಹೇಳಿದ್ದಾಳೆ. 13 ಆದರೂ ಮೊರ್ದೆಕೈ ಎಂಬ ಯೆಹೂದ್ಯನು ಅರಮನೆಯ ಬಾಗಲಿನಲ್ಲಿ ನನ್ನ ಕಣ್ಣು ಮುಂದೆ ಕೂತಿರುವವರೆಗೂ ಇದೆಲ್ಲದರಿಂದಲೂ ನನಗೆ ತೃಪ್ತಿಯಾಗುವದಿಲ್ಲ ಅಂದನು. 14 ಅದಕ್ಕೆ ಅವನು ಪತ್ನಿಯಾದ ಜೆರೆಷಳೂ ಅವನ ಎಲ್ಲಾ ಆಪ್ತರೂ - ಐವತ್ತು ಮೊಳ ಎತ್ತರವಾದ ಒಂದು ಗಲ್ಲುಮರವನ್ನು ಸಿದ್ಧಮಾಡಿಸಿ ನಾಳೆ ಅರಸನ ಅಪ್ಪಣೆಯನ್ನು ಪಡಕೊಂಡು ಮೊರ್ದೆಕೈಯನ್ನು ಅದಕ್ಕೆ ನೇತುಹಾಕಿಸಬೇಕು; ಆಮೇಲೆ ನೀನು ಸಂತೋಷದಿಂದ ಅರಸನ ಜೊತೆಯಲ್ಲಿ ಔತಣಕ್ಕೆ ಹೋಗಬಹುದು ಎಂದು ಹೇಳಿದರು. ಹಾಮಾನನು ಈ ಮಾತಿಗೆ ಮೆಚ್ಚಿ ಗಲ್ಲುಮರವನ್ನು ಸಿದ್ಧಮಾಡಿಸಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India