ಎಜ್ರ 6 - ಕನ್ನಡ ಸತ್ಯವೇದವು J.V. (BSI)ಯೆಹೂದ್ಯರು ರಾಜಾಜ್ಞೆಯನ್ನು ಪಡಕೊಂಡು ದೇವಾಲಯವನ್ನು ತೀರಿಸಿ ಪ್ರತಿಷ್ಠಿಸಿದ್ದು 1 ಅರಸನಾದ ದಾರ್ಯಾವೆಷನ ಆಜ್ಞಾನುಸಾರವಾಗಿ ಗ್ರಂಥಸಂಗ್ರಹವಾಗಿದ್ದ ಬಾಬೆಲಿನ ಭಂಡಾರದಲ್ಲಿ 2 ಹುಡುಕಿ ನೋಡಿದಾಗ ಮೇದ್ಯ ಸಂಸ್ಥಾನದಲ್ಲಿರುವ ಅಹ್ಮೆತಾ ರಾಜಧಾನಿಯಲ್ಲಿ ಒಂದು ಸುರುಳಿ ಸಿಕ್ಕಿತು. ಅದರಲ್ಲಿ - 3 ಅರಸನಾದ ಕೋರೆಷನ ಮೊದಲನೆಯ ವರುಷದಲ್ಲಿ ಅರಸನಾದ ಕೋರೆಷನು ಯೆರೂಸಲೇವಿುನ ದೇವಾಲಯದ ವಿಷಯ ಕೊಟ್ಟ ಅಪ್ಪಣೆ - ಬಲವಾದ ಅಸ್ತಿವಾರವನ್ನು ಹಾಕಿ ಯಜ್ಞಸಮರ್ಪಣೆಗಾಗಿ ಆಲಯವನ್ನು ತಿರಿಗಿ ಕಟ್ಟಬೇಕು. ಅದರ ಎತ್ತರ ಅರುವತ್ತು ಮೊಳವೂ ಅಗಲ ಅರುವತ್ತು ಮೊಳವೂ ಇರಬೇಕು. 4 ದೊಡ್ಡ ಕಲ್ಲುಗಳ ಮೂರು ವರಸೆಗಳಾದ ಮೇಲೆ ಹೊಸ ಮರದ ಒಂದು ವರಸೆಯನ್ನು ಹಾಕಿ ಕಟ್ಟಬೇಕು. ವೆಚ್ಚವೆಲ್ಲಾ ರಾಜಭಂಡಾರದಿಂದ ಕೊಡಲ್ಪಡುವದು. 5 ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇವಿುನ ದೇವಾಲಯದಿಂದ ಬಾಬೆಲಿಗೆ ತೆಗೆದುಕೊಂಡು ಬಂದ ಬೆಳ್ಳಿ ಬಂಗಾರದ ದೇವಸ್ಥಾನಪಾತ್ರೆಗಳನ್ನು ತಿರಿಗಿ ಕೊಡಬೇಕು. ಅವುಗಳನ್ನೆಲ್ಲಾ ಮೊದಲಿದ್ದ ಸ್ಥಳಕ್ಕೆ ಅಂದರೆ ಯೆರೂಸಲೇವಿುನ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಡಬೇಕು ಎಂಬದಾಗಿ ಬರೆದಿತ್ತು. 6 [ಆಗ ದಾರ್ಯಾವೆಷನು ಬರೆದು ಕಳುಹಿಸಿದ್ದೇನಂದರೆ -] ಹೊಳೆಯಾಚೆಯ ಪ್ರದೇಶಗಳ ಅಧಿಪತಿಯಾದ ತತ್ತೆನೈ, ಶೆತರ್ಬೋಜೆನೈ, ಹೊಳೆಯಾಚೆಯಲ್ಲಿ ಇವರ ಜೊತೆಗಾರರಾದ ಅಪರ್ಸತ್ಕಾಯರು ಇವರಿಗೆ - ನೀವು ಅವರ ಗೊಡವೆಗೆ ಹೋಗಬೇಡಿರಿ. 7 ಆ ದೇವಾಲಯವನ್ನು ಕಟ್ಟುವ ಕೆಲಸಕ್ಕೆ ಅಡ್ಡಿ ಮಾಡಬೇಡಿರಿ; ಯೆಹೂದ ದೇಶಾಧಿಪತಿಯು, ಯೆಹೂದ್ಯರ ಹಿರಿಯರು ಇವರೇ ಅದನ್ನು ಅದರ ಸ್ಥಳದಲ್ಲಿ ಕಟ್ಟಲಿ. 8 ಆ ದೇವಾಲಯವನ್ನು ಕಟ್ಟುವದಕ್ಕಾಗಿ ನೀವು ಯೆಹೂದ್ಯರ ಹಿರಿಯರಿಗೆ ರಾಜರ ಸೊತ್ತಿನಿಂದ ಅಂದರೆ ಹೊಳೆಯಾಚೆಯ ಪ್ರಾಂತಗಳ ಕಪ್ಪದಿಂದ ತಡಮಾಡದೆ ಎಲ್ಲಾ ವೆಚ್ಚವನ್ನು ಕೊಡಬೇಕೆಂಬದಾಗಿಯೂ 9 ಪರಲೋಕ ದೇವರ ಸರ್ವಾಂಗಹೋಮಗಳಿಗೋಸ್ಕರ ಬೇಕಾದ ಹೋರಿ ಟಗರು ಕುರಿಮರಿಗಳನ್ನೂ ಗೋದಿ ಉಪ್ಪೂ ದ್ರಾಕ್ಷಾರಸ ಎಣ್ಣೆ ಇವುಗಳನ್ನೂ ಯೆರೂಸಲೇವಿುನ ಯಾಜಕರು ಹೇಳುವ ಪ್ರಕಾರ ಪ್ರತಿದಿನವೂ ತಪ್ಪದೆ ಒದಗಿಸಿ ಕೊಡಬೇಕೆಂಬದಾಗಿಯೂ ಆಜ್ಞಾಪಿಸುತ್ತೇನೆ. 10 ಅವರಾದರೋ ಪರಲೋಕದೇವರಿಗೆ ಸುಗಂಧಹೋಮಗಳನ್ನು ಸಮರ್ಪಿಸಿ ರಾಜನ ಮತ್ತು ರಾಜಪುತ್ರರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಮಾಡಲಿ. 11 ಈ ನನ್ನ ಆಜ್ಞೆಯನ್ನು ಯಾವನಾದರೂ ಬದಲಾಯಿಸುವದಾದರೆ ಅವನ ಮನೆಯಿಂದಲೇ ಒಂದು ತೊಲೆಯನ್ನು ತೆಗೆದು ಅದನ್ನು ಶೂಲವನ್ನಾಗಿ ಮಾಡಿ ಅದಕ್ಕೆ ಅವನನ್ನು ಎತ್ತಬೇಕೆಂದೂ ಆ ಮನೆಯನ್ನು ತಿಪ್ಪೆಯನ್ನಾಗಿ ಮಾಡಿಬಿಡಬೇಕೆಂದೂ ತೀರ್ಮಾನಿಸುತ್ತೇನೆ. 12 ಮತ್ತು ತನ್ನ ಹೆಸರನ್ನು ಸ್ಥಾಪಿಸುವದಕ್ಕೋಸ್ಕರ ಆ ಸ್ಥಳವನ್ನು ಆರಿಸಿಕೊಂಡ ದೇವರು ಈ ಆಜ್ಞೆಯನ್ನು ಬದಲಿಸುವದಕ್ಕೂ ಯೆರೂಸಲೇವಿುನ ದೇವಾಲಯವನ್ನು ನಾಶಮಾಡುವದಕ್ಕೂ ಕೈಯೆತ್ತುವ ಪ್ರತಿಯೊಬ್ಬ ರಾಜನನ್ನೂ ಪ್ರತಿಯೊಂದು ಜನಾಂಗವನ್ನೂ ಕೆಡವಿಹಾಕಲಿ. ದಾರ್ಯಾವೆಷನಾದ ನಾನು ಆಜ್ಞೆಯನ್ನು ಕೊಟ್ಟಿದ್ದೇನೆ, ಅದನ್ನು ಆಲಸ್ಯವಿಲ್ಲದೆ ಕೈಕೊಳ್ಳಬೇಕು ಎಂಬದೇ. 13 ಅರಸನಾದ ದಾರ್ಯಾವೆಷನು ಆಜ್ಞೆಯನ್ನು ಕೊಟ್ಟದರಿಂದ ಹೊಳೆಯ ಈಚೆಯ ಅಧಿಪತಿಯಾದ ತತ್ತೆನೈಯೂ ಶೆತರ್ಬೋಜೆನೈಯೂ ಅವರ ಜೊತೆಗಾರರೂ ಜಾಗರೂಕರಾಗಿ ಅದನ್ನು ಅನುಸರಿಸಿದರು. 14 ಯೆಹೂದ್ಯರ ಹಿರಿಯರು ಪ್ರವಾದಿಯಾದ ಹಗ್ಗೈ, ಇದ್ದೋವಿನ ಮಗನಾದ ಜೆಕರೀಯ ಇವರ ಪ್ರಬೋಧನೆಯಿಂದ ಪ್ರೇರಿತರಾಗಿ ಕಟ್ಟುವ ಕೆಲಸವನ್ನು ಸಾಗಿಸುತ್ತಾ ಬಂದು ಇಸ್ರಾಯೇಲ್ ದೇವರ ಆಜ್ಞಾನುಸಾರವಾಗಿಯೂ ಪಾರಸಿಯ ರಾಜರಾದ ಕೋರೆಷ್, ದಾರ್ಯಾವೆಷ್, ಅರ್ತಷಸ್ತ ಇವರ ಅಪ್ಪಣೆಯ ಆಧಾರದಿಂದಲೂ ಕಟ್ಟಡವನ್ನು ಮುಗಿಸಿದರು. 15 ಅರಸನಾದ ದಾರ್ಯಾವೆಷನ ಆಳಿಕೆಯ ಆರನೆಯ ವರುಷದ ಫಾಲ್ಗುಣ ಮಾಸದ ಮೂರನೆಯ ದಿನದಲ್ಲಿ ಆಲಯವನ್ನು ಪೂರೈಸಿದರು. 16 ಯಾಜಕರೂ ಲೇವಿಯರೂ ಸೆರೆಯಿಂದ ತಿರಿಗಿ ಬಂದ ಬೇರೆ ಇಸ್ರಾಯೇಲ್ಯರೂ ಸಂತೋಷದಿಂದ ಆ ದೇವಾಲಯದ ಪ್ರತಿಷ್ಠೆಯನ್ನು ಆಚರಿಸಿದರು. 17 ಅವರು ಆ ದೇವಾಲಯದ ಪ್ರತಿಷ್ಠೆಗೋಸ್ಕರ ನೂರು ಹೋರಿ, ಇನ್ನೂರು ಟಗರು, ನಾನೂರು ಕುರಿಮರಿ ಇವುಗಳನ್ನೂ ಇಸ್ರಾಯೇಲ್ಯರ ದೋಷಪರಿಹಾರಾರ್ಥವಾಗಿ ಅವರ ಕುಲಗಳ ಸಂಖ್ಯಾನುಸಾರ ಹನ್ನೆರಡು ಹೋತಗಳನ್ನೂ ಸಮರ್ಪಿಸಿದರು. 18 ಆಮೇಲೆ ಯಾಜಕರ ಮತ್ತು ಲೇವಿಯರ ಆಯಾ ವರ್ಗಗಳನ್ನು ಮೋಶೆಯ ಧರ್ಮಶಾಸ್ತ್ರನಿಯಮದ ಪ್ರಕಾರ ಯೆರೂಸಲೇವಿುನ ದೇವರ ಸೇವೆಗೆ ನೇವಿುಸಿದರು. 19 ಸೆರೆಯಿಂದ ಬಂದವರು ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಪಸ್ಕವನ್ನು ಆಚರಿಸಿದರು. 20 ಯಾಜಕರೂ ಲೇವಿಯರೂ ತಮ್ಮನ್ನು ಶುದ್ಧಪಡಿಸಿಕೊಂಡರು. ಎಲ್ಲರೂ ಶುದ್ಧವಾದನಂತರ [ಲೇವಿಯರು] ಸೆರೆಯಿಂದ ಬಂದವರಿಗೋಸ್ಕರವೂ ತಮ್ಮ ಬಂಧುಗಳಾದ ಯಾಜಕರಿಗೋಸ್ಕರವೂ ತಮಗೋಸ್ಕರವೂ ಪಸ್ಕದ ಕುರಿಮರಿಗಳನ್ನು ವಧಿಸಿದರು. 21 ಸೆರೆಯಿಂದ ಬಂದ ಇಸ್ರಾಯೇಲ್ಯರೂ ಇಸ್ರಾಯೇಲ್ ದೇವರಾದ ಯೆಹೋವನನ್ನು ಹುಡುಕುವದಕ್ಕಾಗಿ ದೇಶನಿವಾಸಿಗಳ ಅಶುದ್ಧತ್ವವನ್ನು ತೊರೆದುಬಿಟ್ಟು ಇವರೊಡನೆ ಕೂಡಿಕೊಂಡವರೆಲ್ಲರೂ ಪಸ್ಕ ಭೋಜನಮಾಡಿದರು. 22 ಇದಲ್ಲದೆ ಇಸ್ರಾಯೇಲ್ದೇವರ ಆಲಯವನ್ನು ಕಟ್ಟುವದರಲ್ಲಿ ಅಶ್ಶೂರದ ಅರಸನು ತಮಗೆ ಸಹಾಯ ಮಾಡುವಂತೆ ಯೆಹೋವನು ಅವನ ಮನಸ್ಸನ್ನು ತಿರುಗಿಸಿ ತಮಗೆ ಸಂತೋಷವನ್ನು ಉಂಟುಮಾಡಿದ್ದಾನೆ ಎಂದು ಹರ್ಷಿಸುತ್ತಾ ಏಳು ದಿವಸಗಳವರೆಗೂ ಹುಳಿಯಿಲ್ಲದ ರೊಟ್ಟಿಗಳ ಜಾತ್ರೆಯನ್ನು ಆಚರಿಸಿದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India