ಆದಿಕಾಂಡ 50 - ಕನ್ನಡ ಸತ್ಯವೇದವು J.V. (BSI)1 ಆಗ ಯೋಸೇಫನು ತನ್ನ ತಂದೆಯ ಮುಖದ ಮೇಲೆ ಬಿದ್ದು ಕಣ್ಣೀರು ಸುರಿಸುತ್ತಾ ಅವನಿಗೆ ಮುದ್ದಿಟ್ಟನು. 2 ತರುವಾಯ ಅವನು ತನ್ನ ಸೇವಕರಾದ ವೈದ್ಯರಿಗೆ - ನನ್ನ ತಂದೆಯ ಶವವನ್ನು ಸುಗಂಧದ್ರವ್ಯಗಳಿಂದ ತುಂಬಿ ಸಿದ್ಧಪಡಿಸಿರಿ ಎಂದು ಅಪ್ಪಣೆಕೊಡಲು ಅವರು ಹಾಗೆಯೇ ಮಾಡಿದರು. 3 ನಾಲ್ವತ್ತು ದಿನಗಳು ಸುಗಂಧದ್ರವ್ಯಗಳನ್ನು ತುಂಬುವ ಪದ್ಧತಿಯಿರುವದರಿಂದ ಅಷ್ಟು ದಿವಸ ಸಿದ್ಧಪಡಿಸುತ್ತಾ ಇದ್ದರು. ಐಗುಪ್ತ್ಯರು ಅವನಿಗೋಸ್ಕರ ಎಪ್ಪತ್ತು ದಿನಗಳವರೆಗೂ ಗೋಳಾಡಿದರು. 4-5 ಗೋಳಾಡುವ ದಿನಗಳು ಮುಗಿದನಂತರ ಯೋಸೇಫನು ಫರೋಹನ ಮನೆಯವರ ಬಳಿಗೆ ಹೋಗಿ - ನನ್ನ ತಂದೆಯು ತಾನು ಕಾನಾನ್ದೇಶದಲ್ಲಿ ಸಿದ್ಧಮಾಡಿಕೊಂಡಿರುವ ಸ್ಥಳದಲ್ಲಿಯೇ ತನಗೆ ಸಮಾಧಿಮಾಡಬೇಕೆಂದು ಸಾಯುವದಕ್ಕಿಂತ ಮೊದಲು ನನ್ನಿಂದ ಪ್ರಮಾಣಮಾಡಿಸಿದನು. ಆದದರಿಂದ ನನ್ನ ಮೇಲೆ ಕಟಾಕ್ಷವಿದ್ದರೆ ನೀವು ಈ ಸಂಗತಿಯನ್ನು ಫರೋಹನಿಗೆ ತಿಳಿಸಿ ನಾನು ಹೋಗಿ ತಂದೆಗೆ ಸಮಾಧಿಮಾಡಿ ಬರುವದಕ್ಕೆ ಅಪ್ಪಣೆ ಕೊಡಿಸಬೇಕೆಂದು ಬೇಡಿಕೊಳ್ಳುತ್ತೇನೆ ಅಂದನು. 6 ಫರೋಹನು ಈ ಸಂಗತಿಯನ್ನು ಕೇಳಿ ಯೋಸೇಫನಿಗೆ - ನಿನ್ನ ತಂದೆ ಪ್ರಮಾಣಮಾಡಿಸಿದ ಮೇರೆಗೆ ನೀನು ಹೋಗಿ ಅವನಿಗೆ ಸಮಾಧಿಮಾಡಿಬರಬಹುದೆಂದು ಅಪ್ಪಣೆಕೊಟ್ಟನು. 7 ಯೋಸೇಫನು ತಂದೆಗೆ ಸಮಾಧಿಮಾಡುವದಕ್ಕೆ ಹೊರಟುಹೋದಾಗ ಅವನ ಜೊತೆಯಲ್ಲಿ ಫರೋಹನ ಪರಿವಾರದವರೆಲ್ಲರೂ ಅರಮನೆಯ ಮುಖಂಡರೆಲ್ಲರೂ 8 ಐಗುಪ್ತದೇಶದ ಮುಖ್ಯಸ್ಥರೆಲ್ಲರೂ ಯೋಸೇಫನ ಮನೆಯವರೆಲ್ಲರೂ ಅಣ್ಣತಮ್ಮಂದಿರೂ ತಂದೆಯ ಮನೆಯವರೆಲ್ಲರೂ ಹೋದರು. ಅವರು ತಮ್ಮ ಹೆಂಡತಿ ಮಕ್ಕಳನ್ನೂ ಕುರಿದನಗಳನ್ನೂ ಮಾತ್ರ ಗೋಷೆನ್ ಸೀಮೆಯಲ್ಲಿ ಬಿಟ್ಟು ಹೋದರು. 9 ಇದಲ್ಲದೆ ಅವನ ಸಂಗಡ ರಥಗಳೂ ಕುದುರೆಗಳೂ ಸಹ ಹೋದವು. ಹೊರಟುಹೋದವರು ಬಹು ಮಂದಿ. 10 ಅವರು ಯೊರ್ದನ್ ಹೊಳೆಯಿಂದಾಚೆ ಇರುವ ಆಟಾದ್ ಎಂಬ ಕಣಕ್ಕೆ ಬಂದು ಅಲ್ಲಿ ಅತ್ಯಧಿಕವಾಗಿ ಗೋಳಾಡಿದರು. ಯೋಸೇಫನು ತನ್ನ ತಂದೆಗೋಸ್ಕರ ಏಳು ದಿನಗಳ ತನಕ ಗೋಳಾಡಿಸಿದನು. 11 ಆ ದೇಶದ ಜನರಾಗಿದ್ದ ಕಾನಾನ್ಯರು ಆಟಾದ್ ಎಂಬ ಕಣದಲ್ಲಿ ನಡೆದ ಗೋಳಾಟವನ್ನು ನೋಡಿ - ಐಗುಪ್ತ್ಯರಿಗೆ ಬಂದಿರುವ ಈ ಶೋಕವು ಬಹುವಿಶೇಷವಾಗಿದೆ ಎಂದು ಹೇಳಿದ್ದರಿಂದ ಆ ಸ್ಥಳಕ್ಕೆ ಆಬೇಲ್ಮಿಚ್ರಯೀಮ್ ಎಂದು ಹೆಸರಾಯಿತು. ಇದು ಯೊರ್ದನ್ ಹೊಳೆಯಿಂದ ಆಚೆಯಿದೆ. 12 ಯಾಕೋಬನ ಮಕ್ಕಳು ತಂದೆಯ ಅಪ್ಪಣೆಯ ಮೇರೆಗೆ 13 ಅವನ ಶವವನ್ನು ಕಾನಾನ್ದೇಶಕ್ಕೆ ಹೊತ್ತುಕೊಂಡುಹೋಗಿ ಮಕ್ಪೇಲ ಎಂಬ ಬೈಲಿನಲ್ಲಿರುವ ಗವಿಯೊಳಗೆ ಸಮಾಧಿಮಾಡಿದರು. ಅಬ್ರಹಾಮನು ಹಿತ್ತಿಯನಾದ ಎಫ್ರೋನನಿಂದ ಮಮ್ರೆಗೆದುರಿನಲ್ಲಿರುವ ಆ ಗವಿಯನ್ನು ಸುತ್ತಲಿರುವ ಭೂವಿುಸಹಿತ ಸ್ವಕೀಯ ಶ್ಮಶಾನಭೂವಿುಯಾಗುವದಕ್ಕೆ ಕೊಂಡುಕೊಂಡಿದ್ದನು. 14 ತಂದೆಗೆ ಸಮಾಧಿಮಾಡಿದ ಮೇಲೆ ಯೋಸೇಫನೂ ಅವನ ಅಣ್ಣತಮ್ಮಂದಿರೂ ಅವನ ತಂದೆಯ ಉತ್ತರಕ್ರಿಯೆಗೋಸ್ಕರ ಜೊತೆಯಲ್ಲಿ ಹೋಗಿದ್ದವರೆಲ್ಲರೂ ಐಗುಪ್ತಕ್ಕೆ ಹಿಂದಿರುಗಿ ಬಂದರು. ಯೋಸೇಫನು ತನ್ನ ಅಣ್ಣಂದಿರನ್ನು ಕ್ಷವಿುಸಿದ್ದು 15 ಯೋಸೇಫನ ಅಣ್ಣತಮ್ಮಂದಿರು ತಂದೆ ಸತ್ತದ್ದನ್ನು ಕಂಡು - ಒಂದು ವೇಳೆ ಯೋಸೇಫನು ನಮ್ಮನ್ನು ದ್ವೇಷಿಸಿ ನಾವು ಅವನಿಗೆ ಮಾಡಿದ ಎಲ್ಲಾ ಕೇಡಿಗೆ ಪ್ರತಿಯಾಗಿ ಪೂರಾ ಶಿಕ್ಷೆಯನ್ನು ಕೊಟ್ಟಾನು ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡು ಯೋಸೇಫನಿಗೆ - 16 ನಿನ್ನ ತಂದೆಯು ಸಾಯುವದಕ್ಕಿಂತ ಮುಂಚೆ ನಮಗೆ ಅಪ್ಪಣೆಮಾಡಿದ್ದೇನಂದರೆ, ನೀವು ಯೋಸೇಫನಿಗೆ - 17 ನಿನ್ನ ಅಣ್ಣಂದಿರಾದ ನಾವು ನಿನಗೆ ಕೇಡು ಮಾಡಿದ್ದು ನಿಜವೇ; ಆದರೂ ನಮ್ಮ ಅಪರಾಧವನ್ನೂ ಪಾಪವನ್ನೂ ಕ್ಷವಿುಸು ಎಂಬದಾಗಿ ಹೇಳಿಕೊಳ್ಳಬೇಕು; ಹೀಗೆ ಅವನು ಅಪ್ಪಣೆಮಾಡಿದ್ದರಿಂದ ನೀನು ಈಗ ನಿನ್ನ ತಂದೆಯ ದೇವರಿಗೆ ಭಕ್ತರಾಗಿರುವ ನಾವು ಮಾಡಿದ ಅಪರಾಧವನ್ನು ಕ್ಷವಿುಸಬೇಕೆಂದು ಬೇಡಿಕೊಳ್ಳುತ್ತೇವೆಂದು ಹೇಳಿಕಳುಹಿಸಿದರು. ಯೋಸೇಫನು ಈ ಮಾತುಗಳನ್ನು ಕೇಳಿ ಕಣ್ಣೀರು ಸುರಿಸಿದನು. 18 ಇದಲ್ಲದೆ ಅಣ್ಣಂದಿರು ತಾವೇ ಬಂದು ಅವನ ಮುಂದೆ ಅಡ್ಡಬಿದ್ದು - ಇಗೋ, ನಾವು ನಿನಗೆ ಗುಲಾಮರು ಅಂದರು. 19 ಯೋಸೇಫನು ಅವರಿಗೆ - ಹೆದರಬೇಡಿರಿ; ನಾನೇನು ದೇವರ ಪ್ರತಿನಿಧಿಯೇ? ನೀವಂತೂ ನನಗೆ ಕೇಡಾಗಬೇಕೆಂದು ಎಣಿಸಿದ್ದಿರಿ; 20 ಆದರೆ ದೇವರು ಮೇಲಾಗಬೇಕೆಂದು ಸಂಕಲ್ಪಿಸಿದನು. ಈಗ ಅನುಭವಕ್ಕೆ ಬಂದ ಪ್ರಕಾರವೇ ಅನೇಕ ಪ್ರಾಣಿಗಳಿಗೆ ಸಂರಕ್ಷಣೆಯುಂಟಾಗುವಂತೆ ಮಾಡಿದನು. 21 ಆದದರಿಂದ ನೀವು ಸ್ವಲ್ಪವೂ ಭಯಪಡಬೇಡಿರಿ; ನಾನು ನಿಮ್ಮನ್ನೂ ನಿಮಗೆ ಸೇರಿದವರೆಲ್ಲರನ್ನೂ ಪೋಷಿಸುವೆನು ಎಂದು ಹೇಳಿ ಅವರನ್ನು ಸಂತೈಸಿ ಅವರ ಸಂಗಡ ಪ್ರೀತಿಯಿಂದ ಮಾತಾಡಿದನು. ಯೋಸೇಫನು ಮೃತಪಟ್ಟದ್ದು 22 ಹೀಗೆ ಯೋಸೇಫನೂ ಅವನ ತಂದೆಯ ಮನೆಯವರೂ ಐಗುಪ್ತದೇಶದಲ್ಲಿ ವಾಸಮಾಡಿದರು. ಯೋಸೇಫನು ನೂರಹತ್ತು ವರುಷ ಬದುಕಿದನು. 23 ಅವನು ಎಫ್ರಾಯೀಮನ ಮಕ್ಕಳ ಮೊಮ್ಮಕ್ಕಳನ್ನು ನೋಡಿದನು; ಮತ್ತು ಮನಸ್ಸೆಯ ಮಗನಾದ ಮಾಕೀರನಿಗೂ ಮಕ್ಕಳು ಹುಟ್ಟಿದಾಗ ಯೋಸೇಫನು ಅವರನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡನು. 24 ಯೋಸೇಫನು ತನ್ನ ಅಣ್ಣತಮ್ಮಂದಿರಿಗೆ - ನನಗೆ ಅವಸಾನಕಾಲ ಸಮೀಪಿಸಿತು. ಆದರೆ ದೇವರು ನಿಶ್ಚಯವಾಗಿ ನಿಮ್ಮನ್ನು ಪರಾಂಬರಿಸಿ ಈ ದೇಶದಿಂದ ತಾನು ಅಬ್ರಹಾಮ್ ಇಸಾಕ್ ಯಾಕೋಬರಿಗೆ ಕೊಡುತ್ತೇನೆಂದು ಪ್ರಮಾಣವಾಗಿ ಹೇಳಿದ ದೇಶಕ್ಕೆ ನೀವು ಹೋಗಿ ಸೇರುವಂತೆ ಮಾಡುವನೆಂದು ತಿಳಿದುಕೊಳ್ಳಿರಿ ಎಂದು ಹೇಳಿದನು. 25 ಇದಲ್ಲದೆ ಯೋಸೇಫನು ಇಸ್ರಾಯೇಲನ ಮಕ್ಕಳಿಗೆ - ದೇವರು ನಿಸ್ಸಂದೇಹವಾಗಿ ನಿಮ್ಮನ್ನು ಪರಾಂಬರಿಸುವನು; ಆಗ ನೀವು ನನ್ನ ಶವವನ್ನು ನಿಮ್ಮ ಸಂಗಡ ಹೊತ್ತುಕೊಂಡು ಹೋಗಬೇಕೆಂದು ಹೇಳಿ, ಹಾಗೆಯೇ ಮಾಡುತ್ತೇವೆಂಬದಾಗಿ ಅವರಿಂದ ಪ್ರಮಾಣ ಮಾಡಿಸಿದನು. 26 ಯೋಸೇಫನು ನೂರಹತ್ತು ವರುಷದವನಾಗಿ ಸತ್ತನು. ಅವನ ಶವಕ್ಕೆ ಸುಗಂಧದ್ರವ್ಯಗಳನ್ನು ತುಂಬಿ ಐಗುಪ್ತದೇಶದೊಳಗೆ ಅದನ್ನು ಪೆಟ್ಟಿಗೆಯಲ್ಲಿ ಇರಿಸಿದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India