ಆದಿಕಾಂಡ 15 - ಕನ್ನಡ ಸತ್ಯವೇದವು J.V. (BSI)ದೇವರು ಅಬ್ರಾಮನಿಗೆ ಸಂತತಿಯನ್ನೂ ಆ ಸಂತತಿಗೆ ಕಾನಾನ್ದೇಶವನ್ನೂ ವಾಗ್ದಾನಮಾಡಿದ್ದು 1 ಈ ಸಂಗತಿಗಳು ನಡೆದ ಮೇಲೆ ಅಬ್ರಾಮನಿಗೆ ದರ್ಶನದಲ್ಲಿ ಯೆಹೋವನ ವಾಕ್ಯವುಂಟಾಯಿತು; ಏನಂದರೆ- ಅಬ್ರಾಮನೇ, ಭಯಪಡಬೇಡ, ನಾನು ನಿನಗೆ ಗುರಾಣಿಯಾಗಿದ್ದೇನೆ; ನಿನಗೋಸ್ಕರ ಅತ್ಯಧಿಕ ಬಹುಮಾನವು ಇಟ್ಟದೆ ಎಂಬುದೇ. 2 ಅದಕ್ಕೆ ಅಬ್ರಾಮನು - ಕರ್ತನಾದ ಯೆಹೋವನೇ, ನನಗೆ ಏನು ಕೊಟ್ಟರೇನು? ನಾನು ಸಂತಾನವಿಲ್ಲದವನಾಗಿ ಹೋಗುವೆನಾದದರಿಂದ ನನ್ನ ಆಸ್ತಿಯೆಲ್ಲಾ ದಮಸ್ಕದ ಎಲೀಯೆಜರನ ಪಾಲಾಗುವದಲ್ಲಾ ಅಂದನು. 3 ತಿರಿಗಿ ಅಬ್ರಾಮನು - ನೀನು ನನಗೆ ಸಂತಾನ ಕೊಡಲಿಲ್ಲವಾದ್ದರಿಂದ ನನ್ನ ಮನೆಯಲ್ಲಿ ಹುಟ್ಟಿದವನೇ ನನಗೆ ಬಾಧ್ಯಸ್ಥನಾಗಬೇಕಾಯಿತು ಎಂದು ಹೇಳಲು ಯೆಹೋವನು ಅವನ ಸಂಗಡ ಮಾತಾಡಿ - 4 ಇವನು ನಿನಗೆ ಬಾಧ್ಯಸ್ಥನಾಗುವದಿಲ್ಲ; ನಿನ್ನ ಹೊಟ್ಟೆಯಲ್ಲೇ ಹುಟ್ಟುವವನು ನಿನಗೆ ಬಾಧ್ಯಸ್ಥನಾಗುವನು ಎಂದು ಹೇಳಿ 5 ಅವನನ್ನು ಹೊರಗೆ ಕರತಂದು - ಆಕಾಶದ ಕಡೆಗೆ ನೋಡು, ನಕ್ಷತ್ರಗಳನ್ನು ಲೆಕ್ಕಿಸುವದು ನಿನ್ನಿಂದಾದರೆ ಲೆಕ್ಕಿಸು; ನಿನ್ನ ಸಂತಾನವು ಅಷ್ಟಾಗುವದು ಅಂದನು. 6 ಅಬ್ರಾಮನು ಯೆಹೋವನನ್ನು ನಂಬಿದನು; ಯೆಹೋವನು ಅವನ ನಂಬಿಕೆಯನ್ನು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಿದನು. 7 ಆಮೇಲೆ ಆತನು ಅವನಿಗೆ - ಈ ದೇಶದ ಬಾಧ್ಯತೆಯನ್ನು ನಿನಗೆ ಕೊಡುವದಕ್ಕೋಸ್ಕರ ನಿನ್ನನ್ನು ಊರ್ ಎಂಬ ಕಲ್ದೀಯರ ಪಟ್ಟಣದಿಂದ ಬರಮಾಡಿದ ಯೆಹೋವನೇ ನಾನು ಎಂದು ಹೇಳಲು ಅವನು - 8 ಕರ್ತನಾದ ಯೆಹೋವನೇ, ನಾನು ಇದನ್ನು ಬಾಧ್ಯವಾಗಿ ಹೊಂದುವೆನೆಂದು ತಿಳುಕೊಳ್ಳುವದು ಹೇಗೆ ಎಂದು ಕೇಳಿದನು. 9 ಅದಕ್ಕೆ ಆತನು - ನೀನು ಮೂರು ಮೂರು ವರುಷಗಳ ಮಣಕ, ಆಡು, ಟಗರು ಇವುಗಳನ್ನೂ ಬೆಳವಕ್ಕಿಯನ್ನೂ ಪಾರಿವಾಳದ ಮರಿಯನ್ನೂ ತೆಗೆದುಕೊಂಡು ಬಾ ಅಂದನು. 10 ಅವನು ಇವುಗಳನ್ನೆಲ್ಲಾ ತೆಗೆದುಕೊಂಡು ಬಂದು ಪಶುಗಳನ್ನು ಕಡಿದು ಎರಡೆರಡು ಹೋಳುಮಾಡಿ ತುಂಡಿಗೆ ತುಂಡನ್ನು ಎದುರಾಗಿ ಇಟ್ಟನು; ಪಕ್ಷಿಗಳನ್ನು ಮಾತ್ರ ಕಡಿಯಲಿಲ್ಲ. 11 ಆ ಶವಗಳ ಮೇಲೆ ಹದ್ದುಗಳು ಎರಗಲು ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು. 12 ಹೊತ್ತು ಮುಣುಗುತ್ತಿರುವಾಗ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು; ಕಾರ್ಗತ್ತಲು ಅವನ ಮೇಲೆ ಕವಿಯಿತು; ಅವನು ಭಯಭ್ರಾಂತನಾದನು. 13 ಆಗ ಯೆಹೋವನು ಅವನಿಗೆ - ನೀನು ಚೆನ್ನಾಗಿ ತಿಳಿಯತಕ್ಕದ್ದೇನಂದರೆ - ನಿನ್ನ ಸಂತತಿಯವರು ಅನ್ಯದೇಶದಲ್ಲಿ ಕೆಲವು ಕಾಲವಾಸವಾಗಿದ್ದು ಆ ದೇಶದವರಿಗೆ ದಾಸರಾಗುವರು. ನಾನೂರು ವರುಷ ಆ ದೇಶದವರಿಂದ ಬಾಧೆಪಡುವರು. 14 ಅವರಿಂದ ಬಿಟ್ಟೀಕೆಲಸ ಮಾಡಿಸಿಕೊಂಡ ಜನಾಂಗವನ್ನು ನಾನು ಶಿಕ್ಷಿಸಿದ ನಂತರ ಅವರು ಬಹಳ ಆಸ್ತಿವಂತರಾಗಿ ಆ ದೇಶದಿಂದ ಬಿಡುಗಡೆಯಾಗಿ ಬರುವರು. 15 ನೀನಂತೂ ಸಮಾಧಾನದೊಡನೆ ಪಿತೃಗಳ ಬಳಿಗೆ ಸೇರುವಿ; ತುಂಬಾ ವೃದ್ಧನಾಗಿ ಉತ್ತರಕ್ರಿಯೆಯನ್ನು ಹೊಂದುವಿ. 16 ನಿನ್ನ ಸಂತತಿಯವರು ನಾಲ್ಕನೆಯ ತಲಾಂತರದಲ್ಲಿ ಇಲ್ಲಿಗೆ ತಿರಿಗಿಬರುವರು; ಅಮೋರಿಯರ ಅಪರಾಧವು ಇನ್ನೂ ಪೂರ್ಣಸ್ಥಿತಿಗೆ ಬರಲಿಲ್ಲ ಎಂದು ಹೇಳಿದನು. 17 ಹೊತ್ತು ಮುಣುಗಿ ಕಾರ್ಗತ್ತಲಾದಾಗ ಇಗೋ ಹೊಗೆಹಾಯುವ ಒಲೆಯೂ ಉರಿಯುವ ದೀವಟಿಗೆಯೂ ಕಾಣಿಸಿ ಆ ತುಂಡುಗಳ ನಡುವೆ ಹೋದವು. 18 ಆ ದಿನದಲ್ಲಿ ಯೆಹೋವನು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು - ಐಗುಪ್ತದೇಶದ ನದಿಯಿಂದ ಯೂಫ್ರೇಟೀಸ್ ಮಹಾನದಿಯವರೆಗೂ ಈ ದೇಶವನ್ನೆಲ್ಲಾ ನಿನ್ನ ಸಂತತಿಯವರಿಗೆ ಕೊಟ್ಟಿದ್ದೇನೆ ಅಂದನು; 19 ಅಂದರೆ ಕೇನಿಯರೂ ಕೆನಿಜೀಯರೂ ಕದ್ಮೋನಿಯರೂ 20 ಹಿತ್ತಿಯರೂ ಪೆರಿಜೀಯರೂ ರೆಫಾಯರೂ ಅಮೋರಿಯರೂ 21 ಕಾನಾನ್ಯರೂ ಗಿರ್ಗಾಷಿಯರೂ ಯೆಬೂಸಿಯರೂ ವಾಸವಾಗಿರುವ ದೇಶವನ್ನು ಕೊಡುವೆನೆಂದು ವಾಗ್ದಾನ ಮಾಡಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India