ಅರಣ್ಯಕಾಂಡ 15 - ಕನ್ನಡ ಸತ್ಯವೇದವು J.V. (BSI)ನಾನಾ ನಿಯಮಗಳು ( 15 ) ಆಯಾ ಯಜ್ಞಪಶುಗಳೊಡನೆ ಸಮರ್ಪಿಸಬೇಕಾದ ನೈವೇದ್ಯದ್ರವ್ಯಗಳ ವಿವರಣೆ 1 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - 2 ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಬೇಕು - ನಾನು ನಿಮ್ಮ ನಿವಾಸಕ್ಕಾಗಿ ಕೊಡುವ ದೇಶಕ್ಕೆ ನೀವು ಸೇರಿದ ನಂತರ 3 ಯೆಹೋವನಿಗೆ ಸುವಾಸನೆಯನ್ನುಂಟುಮಾಡುವದಕ್ಕಾಗಿ ದನಗಳಲ್ಲಾಗಲಿ ಆಡುಕುರಿಗಳಲ್ಲಾಗಲಿ ಒಂದು ಪಶುವನ್ನು ಹೋಮಮಾಡುವವನು ಸರ್ವಾಂಗ ಹೋಮಮಾಡಿದರೂ ಸರಿಯೇ, ಹರಕೆ ಸಲ್ಲಿಸುವದಕ್ಕೋ ಕೃತಜ್ಞತೆಯನ್ನು ತೋರಿಸುವದಕ್ಕೋ ಹಬ್ಬವನ್ನು ಆಚರಿಸುವದಕ್ಕೋ ಸಮಾಧಾನಯಜ್ಞ ಮಾಡಿದರೂ ಸರಿಯೇ, 4 ಅದರೊಂದಿಗೆ ಧಾನ್ಯನೈವೇದ್ಯಕ್ಕಾಗಿ ಒಂದುವರೆ ಸೇರು ಎಣ್ಣೆ ಬೆರಸಿದ ಮೂರು ಸೇರು ಗೋದಿಯ ಹಿಟ್ಟನ್ನೂ ಪಾನದ್ರವ್ಯಕ್ಕಾಗಿ 5 ಒಂದುವರೆ ಸೇರು ದ್ರಾಕ್ಷಾರಸವನ್ನೂ ತರಬೇಕು. ನೀವು ಸರ್ವಾಂಗಹೋಮವಾಗಿ ಇಲ್ಲವೆ ಸಮಾಧಾನಯಜ್ಞವಾಗಿ ಸಮರ್ಪಿಸುವ ಒಂದೊಂದು ಕುರಿಯೊಂದಿಗೆ ಇದನ್ನೂ ಸಮರ್ಪಿಸಬೇಕು. 6 ಟಗರಿನೊಂದಿಗೆ ಯೆಹೋವನಿಗೆ ಸುವಾಸನೆಯನ್ನುಂಟುಮಾಡುವದಕ್ಕೆ ಧಾನ್ಯನೈವೇದ್ಯಕ್ಕಾಗಿ ಎರಡು ಸೇರು ಎಣ್ಣೆ ಬೆರಸಿದ ಆರು ಸೇರು ಗೋದಿಯ ಹಿಟ್ಟನ್ನೂ 7 ಪಾನದ್ರವ್ಯವಾಗಿ ಎರಡು ಸೇರು ದ್ರಾಕ್ಷಾರಸವನ್ನೂ ತಂದು ಸಮರ್ಪಿಸಬೇಕು. 8 ಸರ್ವಾಂಗಹೋಮ, ಹರಕೆ ಸಲ್ಲಿಸುವ ಯಜ್ಞ, ಬೇರೆ ವಿಧವಾದ ಸಮಾಧಾನಯಜ್ಞ ಇವುಗಳಿಗಾಗಿ 9 ನೀವು ತರುವಂಥದು ಹೋರಿಯಾಗುವ ಪಕ್ಷಕ್ಕೆ ಅದರೊಂದಿಗೆ ಧಾನ್ಯನೈವೇದ್ಯಕ್ಕಾಗಿ ಮೂರು ಸೇರು ಎಣ್ಣೆ ಬೆರಸಿದ ಒಂಭತ್ತು ಸೇರು ಗೋದಿಯ ಹಿಟ್ಟನ್ನೂ 10 ಪಾನದ್ರವ್ಯಕ್ಕಾಗಿ ಮೂರು ಸೇರು ದ್ರಾಕ್ಷಾರಸವನ್ನೂ ತಂದು ಸಮರ್ಪಿಸಬೇಕು. ಇದು ಯೆಹೋವನಿಗೆ ಸುಗಂಧಹೋಮವಾಗುವದು. 11 ಕುರಿ, ಆಡು, ಟಗರು, ಹೋರಿ ಇವುಗಳಲ್ಲಿ ಪ್ರತಿಯೊಂದು ಪಶುವಿನ ಸಂಗಡ ಈ ಮೇರೆಗೆ ನೀವು ನೈವೇದ್ಯ ಮಾಡಬೇಕು. 12 ನೀವು ಸಮರ್ಪಿಸುವ ಪಶುಗಳ ಲೆಕ್ಕದ ಪ್ರಕಾರವೇ ಒಂದೊಂದು ಪಶುವಿನ ಸಂಗಡ ಈ ಮೇರೆಗೆ ಮಾಡಬೇಕು. 13 ಸ್ವದೇಶದವರೆಲ್ಲರೂ ಯೆಹೋವನಿಗೆ ಸುಗಂಧಹೋಮವನ್ನು ಸಮರ್ಪಿಸುವಾಗ ಈ ರೀತಿಯಾಗಿ ಮಾಡಬೇಕು. 14 ನಿಮ್ಮ ಮಧ್ಯದಲ್ಲಿ ಇಲ್ಲವೆ ನಿಮ್ಮ ಸಂತತಿಯವರ ಮಧ್ಯದಲ್ಲಿ ಒಕ್ಕಲಿರುವ ಅನ್ಯದೇಶದವನಾಗಲಿ ಇಳುಕೊಂಡಿರುವ ಯಾವನೇ ಆಗಲಿ ಯೆಹೋವನಿಗೆ ಸುಗಂಧಹೋಮಮಾಡಬೇಕಾದರೆ ನಿಮ್ಮಂತೆಯೇ ಅವನೂ ಮಾಡಬೇಕು. 15 ಸರ್ವರಿಗೂ ಅಂದರೆ ನಿಮಗೂ ನಿಮ್ಮಲ್ಲಿರುವ ಅನ್ಯದೇಶದವರಿಗೂ ಒಂದೇ ವಿಧಿಯಿರಬೇಕು; ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮ. ಯೆಹೋವನ ಸನ್ನಿಧಿಯಲ್ಲಿ ನೀವು ಹೇಗೋ ಅನ್ಯದೇಶದವನೂ ಹಾಗೆಯೇ ಇರುವನು. 16 ನಿಮಗೂ ನಿಮ್ಮ ಬಳಿಯಲ್ಲಿ ಒಕ್ಕಲಿರುವ ಅನ್ಯದೇಶದವನಿಗೂ ಒಂದೇ ವಿಧವಾದ ಪ್ರಮಾಣವಿಧಿಗಳಿರಬೇಕು. ಕಣಕದಿಂದ ಮಾಡುವ ಮೊದಲನೆಯ ರೊಟ್ಟಿಯನ್ನು ಯಾಜಕರ ಭಾಗಕ್ಕೆ ಪ್ರತ್ಯೇಕಿಸಬೇಕೆಂಬ ವಿಧಿ 17 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - 18 ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಬೇಕು - ನಾನು ನಿಮ್ಮನ್ನು ಕರೆದುಕೊಂಡುಹೋಗುವ ದೇಶಕ್ಕೆ ನೀವು ಸೇರಿದನಂತರ 19 ನೀವು ಭೂವಿುಯಿಂದಾದ ಬೆಳೆಯನ್ನು ಅನುಭೋಗಿಸುವಾಗ ಸ್ವಲ್ಪವನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಬೇಕು. 20 ನೀವು ಕಣದಲ್ಲಿ ತುಳಿಸಿದ ದವಸದಲ್ಲಿ ಸ್ವಲ್ಪವನ್ನು ಯೆಹೋವನದೆಂದು ಪ್ರತ್ಯೇಕಿಸುವ ಪ್ರಕಾರವೇ ಕಣಕದಿಂದ ಮಾಡುವ ಮೊದಲನೆಯ ರೊಟ್ಟಿಯನ್ನೂ ಪ್ರತ್ಯೇಕಿಸಬೇಕು; 21 ನೀವೂ ನಿಮ್ಮ ಸಂತತಿಯವರೂ ಕಣಕದಿಂದ ಮಾಡುವ ಮೊದಲನೆಯ ರೊಟ್ಟಿಯನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಬೇಕು. ತಿಳಿಯದೆ ಮಾಡಿದ ತಪ್ಪಿಗಾಗಿ ದೋಷಪರಿಹಾರವನ್ನು ಮಾಡುವ ವಿಧಾನ; ಹಟದಿಂದ ಪಾಪಮಾಡಿದವನನ್ನು ಇಸ್ರಾಯೇಲ್ಯರಿಂದ ತೆಗೆಯಲೇಬೇಕೆಂಬ ವಿಧಿ 22-23 ಯೆಹೋವನು ಮೋಶೆಯ ಮೂಲಕ ಈ ಆಜ್ಞೆಗಳನ್ನು ಕೊಟ್ಟ ದಿನ ಮೊದಲುಗೊಂಡು ನಿಮ್ಮ ಎಲ್ಲಾ ತಲಾಂತರಗಳವರೆಗೂ ಯಾವಾಗಲಾದರೂ ಸಮೂಹದವರು ತಿಳಿಯದೆ ಇವುಗಳಲ್ಲಿ ಒಂದನ್ನು ಮೀರಿ ದೋಷಿಗಳಾದರೆ 24 ಅವರೆಲ್ಲರೂ ಒಟ್ಟಾಗಿ ಯೆಹೋವನಿಗೆ ಸುವಾಸನೆಯನ್ನುಂಟುಮಾಡುವದಕ್ಕೋಸ್ಕರ ಸರ್ವಾಂಗಹೋಮವಾಗಿ ಒಂದು ಹೋರಿಯನ್ನೂ ನೈವೇದ್ಯವಾಗಿ ಅದಕ್ಕೆ ನೇವಿುತವಾದ ಧಾನ್ಯದ್ರವ್ಯ ಪಾನದ್ರವ್ಯಗಳನ್ನೂ ದೋಷಪರಿಹಾರಕಯಜ್ಞವಾಗಿ ಒಂದು ಹೋತವನ್ನೂ ಸಮರ್ಪಿಸಬೇಕು. 25 ಯಾಜಕನು ಇಸ್ರಾಯೇಲ್ಯರ ಸರ್ವಸಮೂಹದವರಿಗೋಸ್ಕರ ದೋಷಪರಿಹಾರವನ್ನು ಮಾಡಿದಾಗ ಅವರಿಗೆ ಕ್ಷಮಾಪಣೆಯಾಗುವದು. ಅವರು ಆ ತಪ್ಪನ್ನು ತಿಳಿಯದೆ ಮಾಡಿದ್ದರಿಂದ ಮತ್ತು ಅವರು ಅದನ್ನು ಪರಿಹರಿಸುವದಕ್ಕಾಗಿ ಯೆಹೋವನ ಸನ್ನಿಧಿಯಲ್ಲಿ ಸರ್ವಾಂಗಹೋಮವನ್ನೂ ದೋಷಪರಿಹಾರಕಯಜ್ಞವನ್ನೂ ಮಾಡಿಸಿದ್ದರಿಂದ 26 ಇಸ್ರಾಯೇಲ್ಯರ ಸರ್ವಸಮೂಹದವರಿಗೂ ಅವರಲ್ಲಿ ಇಳುಕೊಂಡಿರುವ ಅನ್ಯದೇಶದವರಿಗೂ ಕ್ಷಮಾಪಣೆಯಾಗುವದು. ಜನರೆಲ್ಲರೂ ಆ ತಪ್ಪನ್ನು ತಿಳಿಯದೆ ಮಾಡಿದರಲ್ಲಾ. 27 ಯಾವನಾದರೂ ಒಬ್ಬನು ಮಾತ್ರ ತಿಳಿಯದೆ ತಪ್ಪು ಮಾಡಿದರೆ ಅವನು ದೋಷಪರಿಹಾರಕಯಜ್ಞಕ್ಕಾಗಿ ಒಂದು ವರುಷದ ಆಡನ್ನು ಸಮರ್ಪಿಸಬೇಕು. 28 ತಿಳಿಯದೆ ತಪ್ಪುಮಾಡಿದವನಿಗೋಸ್ಕರ ಯಾಜಕನು ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವದು. 29 ಈ ವಿಷಯದಲ್ಲಿ ಇಸ್ರಾಯೇಲ್ಯರಲ್ಲಿರುವ ಸ್ವದೇಶದವರಿಗೂ ಅನ್ಯದೇಶದವರಿಗೂ ಒಂದೇ ವಿಧಿಯಿರಬೇಕು. 30 ಆದರೆ ಸ್ವದೇಶದವನಾಗಲಿ ಅನ್ಯದೇಶದವನಾಗಲಿ ಯಾವನಾದರೂ ಮನಃಪೂರ್ವಕವಾಗಿ ಹಟದಿಂದ ಪಾಪವನ್ನು ಮಾಡಿದರೆ ಅವನು ಯೆಹೋವನನ್ನು ದೂಷಿಸಿದವನಾದ್ದರಿಂದ ಕುಲದಿಂದ ತೆಗೆದುಹಾಕಲ್ಪಡಬೇಕು. 31 ಆ ಮನುಷ್ಯನು ಯೆಹೋವನ ಮಾತನ್ನು ತಾತ್ಸಾರಮಾಡಿ ಆತನ ಆಜ್ಞೆಯನ್ನು ಮೀರಿದ್ದರಿಂದ ತೆಗೆದು ಹಾಕಲ್ಪಡಲೇಬೇಕು; ಅವನು ತನ್ನ ಪಾಪದ ಫಲವನ್ನು ಅನುಭವಿಸಲಿ. ಸಬ್ಬತ್ ದಿನದಲ್ಲಿ ಕೆಲಸಮಾಡಿದವನೊಬ್ಬನಿಗೆ ಮರಣಶಿಕ್ಷೆ ವಿಧಿಸಲ್ಪಟ್ಟದ್ದು 32 ಇಸ್ರಾಯೇಲ್ಯರು ಅರಣ್ಯದಲ್ಲಿ ಇದ್ದಾಗ ಒಬ್ಬನು ಸಬ್ಬತ್ದಿನದಲ್ಲಿ ಕಟ್ಟಿಗೆ ಕೂಡಿಸುವದನ್ನು ಕಂಡರು. 33 ಕಂಡವರು ಅವನನ್ನು ಮೋಶೆ ಆರೋನರ ಮತ್ತು ಸರ್ವಸಮೂಹದವರ ಬಳಿಗೆ ಹಿಡುಕೊಂಡು ಬಂದರು. 34 ಅಂಥವನಿಗೆ ವಿಧಿಸಬೇಕಾದ ಶಿಕ್ಷೆಯ ವಿಷಯದಲ್ಲಿ ಆ ವರೆಗೂ ವಿಧಿಯೇ ಇರಲಿಲ್ಲವಾದ ಕಾರಣ ಅವರು ಅವನನ್ನು ಕಾವಲಲ್ಲಿಟ್ಟರು. 35 ತರುವಾಯ ಯೆಹೋವನು - ಆ ಮನುಷ್ಯನಿಗೆ ಮರಣಶಿಕ್ಷೆಯಾಗಬೇಕು; ಸರ್ವಸಮೂಹದವರು ಪಾಳೆಯದ ಹೊರಗೆ ಅವನನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಗೆ ಆಜ್ಞಾಪಿಸಿದನು. 36 ಯೆಹೋವನು ಮೋಶೆಗೆ ಅಪ್ಪಣೆಕೊಟ್ಟಂತೆ ಸರ್ವಸಮೂಹದವರು ಆ ಮನುಷ್ಯನನ್ನು ಪಾಳೆಯದ ಹೊರಗೆ ಹಿಡುಕೊಂಡುಹೋಗಿ ಕಲ್ಲೆಸೆದು ಕೊಂದರು. ಇಸ್ರಾಯೇಲ್ಯರು ಬಟ್ಟೆಮೂಲೆಗಳಿಗೆ ಗೊಂಡೆ ಕಟ್ಟಿಕೊಳ್ಳಬೇಕೆಂಬದು 37 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - 38 ಇಸ್ರಾಯೇಲ್ಯರೂ ಅವರ ಸಂತತಿಯವರೂ ತಮ್ಮ ವಸ್ತ್ರಗಳ ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು. ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿದಾರದಿಂದ ಕೂಡಿರಬೇಕೆಂದು ಅವರಿಗೆ ಆಜ್ಞಾಪಿಸು. 39 ಆ ಗೊಂಡೆಗಳ ಉಪಯೋಗವೇನಂದರೆ - ನೀವು ಅವುಗಳನ್ನು ನೋಡುವಾಗ ಯೆಹೋವನ ಆಜ್ಞೆಗಳನ್ನೆಲ್ಲಾ ನೆನಪಿಗೆ ತಂದುಕೊಂಡು ನಡಿಸಬೇಕು, ಮತ್ತು ನೀವು ಪೂರ್ವದಲ್ಲಿ ನನಗೆ ದ್ರೋಹಿಗಳಾಗಿ ಮನಸ್ಸಿಗೂ ಕಣ್ಣಿಗೂ ತೋರಿದಂತೆ ದಾರಿತಪ್ಪಿ ನಡೆದ ಪ್ರಕಾರ ಇನ್ನು ನಡೆಯದೆ 40 ನನ್ನ ಆಜ್ಞೆಗಳನ್ನೇ ಲಕ್ಷಿಸಿ ಅನುಸರಿಸಿ ನಿಮ್ಮ ದೇವರಿಗೇ ಪ್ರತಿಷ್ಠಿತರಾಗಿರಬೇಕೆಂಬುದೇ. 41 ನಾನು ನಿಮ್ಮ ದೇವರಾಗುವದಕ್ಕೆ ನಿಮ್ಮನ್ನು ಐಗುಪ್ತದೇಶದೊಳಗಿಂದ ಬರಮಾಡಿದ ನಿಮ್ಮ ದೇವರಾದ ಯೆಹೋವನು. ನಾನು ನಿಮ್ಮ ದೇವರಾದ ಯೆಹೋವನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India