ಅಪೊಸ್ತಲರ ಕೃತ್ಯಗಳು 7 - ಕನ್ನಡ ಸತ್ಯವೇದವು J.V. (BSI)1 ಆಗ ಮಹಾಯಾಜಕನು - ಈ ಮಾತುಗಳು ಹೌದೋ ಎಂದು ಕೇಳಿದ್ದಕ್ಕೆ ಅವನು - ಸಹೋದರರೇ, ತಂದೆಗಳೇ, ಕೇಳಿರಿ - 2 ನಮ್ಮ ಮೂಲಪುರುಷನಾದ ಅಬ್ರಹಾಮನು ಖಾರಾನಿನಲ್ಲಿ ವಾಸಮಾಡಿದ್ದಕ್ಕಿಂತ ಮುಂಚೆ ಮೆಸೊಪೊತಾಮ್ಯದಲ್ಲಿದ್ದಾಗ ಪ್ರಭಾವ ಸ್ವರೂಪನಾದ ದೇವರು 3 ಅವನಿಗೆ ಕಾಣಿಸಿಕೊಂಡು - ನಿನ್ನ ಸ್ವದೇಶವನ್ನೂ ನಿನ್ನ ಬಂಧುಬಳಗವನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟುಹೋಗು ಎಂದು ಹೇಳಿದನು. 4 ಆಗ ಅವನು ಕಸ್ದೀಯರ ದೇಶದಿಂದ ಹೊರಟುಹೋಗಿ ಖಾರಾನಿನಲ್ಲಿ ವಾಸವಾಗಿದ್ದನು. ಅವನ ತಂದೆ ಸತ್ತಮೇಲೆ ದೇವರು ಅವನನ್ನು ಅಲ್ಲಿಂದ ನೀವು ಈಗ ವಾಸವಾಗಿರುವ ಈ ದೇಶಕ್ಕೆ ಬರಮಾಡಿದನು. 5 ಇದರಲ್ಲಿ ಅವನಿಗೆ ಕಾಲಿಡುವಷ್ಟು ಭೂವಿುಯನ್ನು ಸ್ವಾಸ್ತ್ಯವಾಗಿ ಕೊಡದೆ ಅವನಿಗೆ ಮಕ್ಕಳು ಇನ್ನೂ ಇಲ್ಲದಿರುವಾಗ - ಈ ದೇಶವನ್ನು ನಿನಗೂ ನಿನ್ನ ಹಿಂದೆ ಬರುವ ನಿನ್ನ ಸಂತತಿಗೂ ಸ್ವಾಸ್ತ್ಯವಾಗಿ ಕೊಡುವೆನು ಎಂದು ಅವನಿಗೆ ವಾಗ್ದಾನ ಮಾಡಿದನು. 6 ಇದಲ್ಲದೆ ದೇವರು ಹೇಳಿದ್ದೇನಂದರೆ - ನಿನ್ನ ಸಂತಾನದವರು ಅನ್ಯದೇಶದಲ್ಲಿ ಪ್ರವಾಸಿಗಳಾಗಿರುವರು. ಆ ಅನ್ಯದೇಶದವರು ಅವರನ್ನು ದಾಸರನ್ನಾಗಿ ಮಾಡಿಕೊಂಡು ನಾನೂರು ವರುಷಗಳ ತನಕ ಕ್ರೂರವಾಗಿ ನಡಿಸುವರು. 7 ಮತ್ತು ನಿನ್ನ ಸಂತಾನದವರು ದಾಸರಾಗಿ ಸೇವಿಸುವ ಅನ್ಯಜನರಿಗೆ ನಾನೇ ನ್ಯಾಯತೀರಿಸುವೆನು. ಆಮೇಲೆ ಅವರು ಹೊರಟುಬಂದು ಈ ಸ್ಥಳದಲ್ಲಿ ನನ್ನನ್ನು ಆರಾಧಿಸುವರು ಎಂಬದೇ. 8 ಇದಲ್ಲದೆ ದೇವರು ಅವನ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು ಅದಕ್ಕೆ ಗುರುತಾಗಿ ಸುನ್ನತಿಯನ್ನು ನೇವಿುಸಿದನು. ಅದಕ್ಕನುಸಾರವಾಗಿ ಅಬ್ರಹಾಮನು ಇಸಾಕನನ್ನು ಪಡೆದು ಎಂಟನೆಯ ದಿವಸದಲ್ಲಿ ಅವನಿಗೆ ಸುನ್ನತಿಮಾಡಿದನು. ಮುಂದೆ ಇಸಾಕನು ಯಾಕೋಬನನ್ನು ಪಡೆದನು, ಯಾಕೋಬನು ಹನ್ನೆರಡು ಮಂದಿ ಮೂಲಪಿತೃಗಳನ್ನು ಪಡೆದನು. 9 ಮೂಲಪಿತೃಗಳು ಹೊಟ್ಟೇಕಿಚ್ಚಿನಿಂದ ಯೋಸೇಫನನ್ನು ಐಗುಪ್ತದೇಶಕ್ಕೆ ಮಾರಿಬಿಟ್ಟರು. 10 ಅಲ್ಲಿ ದೇವರು ಅವನ ಸಂಗಡ ಇದ್ದು ಅವನಿಗೆ ಬಂದ ಎಲ್ಲಾ ಸಂಕಟಗಳಿಂದ ಅವನನ್ನು ಬಿಡಿಸಿ ಐಗುಪ್ತದೇಶದ ಅರಸನಾದ ಫರೋಹನ ಸಮ್ಮುಖದಲ್ಲಿ ದಯಾಪಾತ್ರನೂ ಜ್ಞಾನವುಳ್ಳವನೂ ಆಗಿರುವಂತೆ ಅನುಗ್ರಹಿಸಿದನು. ಫರೋಹನು ಅವನನ್ನು ಐಗುಪ್ತದೇಶದ ಮೇಲೆಯೂ ತನ್ನ ಎಲ್ಲಾ ಮನೆಯ ಮೇಲೆಯೂ ಅಧಿಕಾರಿಯಾಗಿ ಇಟ್ಟನು. 11 ಆಗ ಐಗುಪ್ತ ಕಾನಾನ್ದೇಶಗಳಲ್ಲಿ ಎಲ್ಲೆಲ್ಲಿಯೂ ಬರ ಬಂದು ದೊಡ್ಡ ಸಂಕಟವಾಯಿತು; ನಮ್ಮ ಪಿತೃಗಳಿಗೆ ಕಾಳುಕಡ್ಡಿ ಸಿಕ್ಕಲಿಲ್ಲ. 12 ಆದರೆ ಐಗುಪ್ತದೇಶದಲ್ಲಿ ದವಸಧಾನ್ಯ ಉಂಟೆಂಬದನ್ನು ಯಾಕೋಬನು ಕೇಳಿ ನಮ್ಮ ಪಿತೃಗಳನ್ನು ಮೊದಲು ಒಂದು ಸಾರಿ ಅಲ್ಲಿಗೆ ಕಳುಹಿಸಿದನು. 13 ಅವರು ಎರಡನೆಯ ಸಾರಿ ಬಂದಾಗ ಯೋಸೇಫನು ಅಣ್ಣತಮ್ಮಂದಿರಿಗೆ ತನ್ನ ಗುರುತು ಸಿಕ್ಕುವಂತೆ ಮಾಡಿದನು. ಮತ್ತು ಯೋಸೇಫನ ವಂಶವು ಫರೋಹನಿಗೆ ತಿಳಿಯ ಬಂತು. 14 ಆಮೇಲೆ ಯೋಸೇಫನು ತನ್ನ ತಂದೆಯಾದ ಯಾಕೋಬನನ್ನೂ ತನ್ನ ಎಲ್ಲಾ ಬಂಧುಬಳಗವನ್ನೂ ಒಟ್ಟಿಗೆ ಎಪ್ಪತ್ತೈದು ಮಂದಿಯನ್ನು ಕರೆಯಿಸಿಕೊಳ್ಳಲಾಗಿ ಯಾಕೋಬನು ಐಗುಪ್ತದೇಶಕ್ಕೆ ಇಳಿದುಹೋದನು. 15 ಅಲ್ಲಿ ಅವನೂ ನಮ್ಮ ಪಿತೃಗಳೂ ತೀರಿಹೋದರು. 16 ಅವರನ್ನು ಶೇಕೆವಿುಗೆ ತೆಗೆದುಕೊಂಡು ಹೋಗಿ ಅಲ್ಲಿ ಹಮೋರನ ಮಕ್ಕಳಿಂದ ಅಬ್ರಹಾಮನು ಬೆಳ್ಳಿಕೊಟ್ಟು ಕೊಂಡುಕೊಂಡಿದ್ದ ಸಮಾಧಿಯೊಳಗೆ ಇಟ್ಟರು. 17 ಆದರೆ ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದ ಕಾಲವು ಹತ್ತರಕ್ಕೆ ಬರುತ್ತಿರುವಾಗ ನಮ್ಮ ಜನರು ಐಗುಪ್ತದೇಶದಲ್ಲಿ ಹೆಚ್ಚಿ ಬಹಳವಾದರು. 18 ಕಡೆಗೆ ಯೋಸೇಫನನ್ನು ಅರಿಯದ ಬೇರೊಬ್ಬ ಅರಸನು ಆಳಿಕೆಗೆ ಬಂದನು. 19 ಈ ಅರಸನು ನಮ್ಮ ಜನರಲ್ಲಿ ಕುಯುಕ್ತಿ ಮಾಡಿ ಅವರ ಕೂಸುಗಳನ್ನು ಜೀವದಿಂದುಳಿಸಬಾರದೆಂದು ಹೊರಗೆ ಹಾಕಿಸಿ ನಮ್ಮ ಪಿತೃಗಳನ್ನು ಕ್ರೂರವಾಗಿ ನಡಿಸಿದನು. 20 ಆ ಸಮಯದಲ್ಲೇ ಮೋಶೆಯು ಹುಟ್ಟಿದನು. ಅವನು ದಿವ್ಯಸುಂದರನಾಗಿದ್ದನು; ಮತ್ತು ತಂದೆಯ ಮನೆಯಲ್ಲಿ ಮೂರು ತಿಂಗಳು ಸಾಕಲ್ಪಟ್ಟನು. 21 ಆಮೇಲೆ ಅವನನ್ನು ಹೊರಗೆ ಹಾಕಿದಾಗ ಫರೋಹನ ಮಗಳು ಅವನನ್ನು ಎತ್ತಿಕೊಂಡು ಹೋಗಿ ತನ್ನ ಮಗನಾಗಿ ಸಾಕಿದಳು. 22 ಮೋಶೆಯು ಐಗುಪ್ತದೇಶದವರ ಸರ್ವವಿದ್ಯೆಗಳಲ್ಲಿಯೂ ಉಪದೇಶಹೊಂದಿ ಮಾತುಗಳಲ್ಲಿಯೂ ಕಾರ್ಯಗಳಲ್ಲಿಯೂ ಸಮರ್ಥನಾದನು. 23 ಅವನಿಗೆ ನಾಲ್ವತ್ತು ವರುಷ ವಯಸ್ಸು ತುಂಬುತ್ತಾ ಇರಲು ಇಸ್ರಾಯೇಲ್ ವಂಶಸ್ಥರಾದ ತನ್ನ ಸಹೋದರರನ್ನು ಹೋಗಿನೋಡಬೇಕೆಂಬ ಆಶೆಯು ಅವನ ಹೃದಯದಲ್ಲಿ ಹುಟ್ಟಿತು. 24 ಅವರಲ್ಲಿ ಒಬ್ಬನಿಗೆ ಅನ್ಯಾಯವಾಗುವದನ್ನು ಅವನು ನೋಡಿ ಅವನಿಗೆ ಆಶ್ರಯಕೊಟ್ಟು ಪೀಡಿಸುವ ಐಗುಪ್ತ್ಯನನ್ನು ಹೊಡೆದುಹಾಕಿ ಮುಯ್ಯಿಗೆ ಮುಯ್ಯಿ ತೀರಿಸಿದನು. 25 ದೇವರು ತನ್ನ ಕೈಯಿಂದ ಬಿಡುಗಡೆಯನ್ನು ಉಂಟುಮಾಡುತ್ತಾನೆಂಬದು ತನ್ನ ಸಹೋದರರಿಗೆ ತಿಳಿದುಬರುವದೆಂದು ಭಾವಿಸಿದನು; ಆದರೆ ಅವರು ಹಾಗೆ ತಿಳುಕೊಳ್ಳಲಿಲ್ಲ. 26 ಮರುದಿನ ತಾವು ತಾವೇ ಹೊಡೆದಾಡಿಕೊಳ್ಳುತ್ತಿರುವಾಗ ಅವನು ಎದುರಾಗಿ ಬಂದು - ಜನರೇ, ನೀವು ಸಹೋದರರಲ್ಲವೇ? ನೀವೇಕೆ ಒಬ್ಬರಿಗೊಬ್ಬರು ಅನ್ಯಾಯಮಾಡುತ್ತೀರಿ ಎಂದು ಹೇಳಿ ಅವರನ್ನು ಸಮಾಧಾನಪಡಿಸಬೇಕೆಂದಿದ್ದನು. 27 ಆದರೆ ತನ್ನ ಸ್ವಕುಲದವನಿಗೆ ಅನ್ಯಾಯಮಾಡುತ್ತಿದ್ದವನು - ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಇಟ್ಟವರು ಯಾರು? 28 ನಿನ್ನೆ ಆ ಐಗುಪ್ತ್ಯನನ್ನು ಕೊಂದಂತೆ ನನ್ನನ್ನೂ ಕೊಲ್ಲಬೇಕೆಂದಿದ್ದೀಯೋ ಎಂದು ಅವನನ್ನು ನೂಕಿಬಿಟ್ಟನು. 29 ಈ ಮಾತನ್ನು ಕೇಳಿ ಮೋಶೆಯು ಓಡಿಹೋಗಿ ವಿುದ್ಯಾನ್ ದೇಶದಲ್ಲಿ ಪ್ರವಾಸಿಯಾದನು. ಅಲ್ಲಿ ಇಬ್ಬರು ಗಂಡುಮಕ್ಕಳನ್ನು ಪಡೆದನು. 30 ನಾಲ್ವತ್ತು ವರುಷ ತುಂಬಿದ ಮೇಲೆ ದೇವದೂತನು ಸೀನಾಯಿಬೆಟ್ಟದ ಅಡವಿಯಲ್ಲಿ ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಅವನಿಗೆ ಕಾಣಿಸಿಕೊಂಡನು. 31 ಮೋಶೆಯು ಅದನ್ನು ಕಂಡು ಆ ನೋಟಕ್ಕೆ ಆಶ್ಚರ್ಯಪಟ್ಟು ಚೆನ್ನಾಗಿ ನೋಡಬೇಕೆಂದು ಹತ್ತಿರ ಬರಲು - 32 ನಾನು ನಿನ್ನ ಪಿತೃಗಳ ದೇವರು, ಅಬ್ರಹಾಮ ಇಸಾಕ ಯಾಕೋಬರ ದೇವರು ಎಂದು ಕರ್ತನ ಶಬ್ದವುಂಟಾಯಿತು. ಆಗ ಮೋಶೆಯು ನಡುಗುತ್ತಾ ಸ್ಥಿರವಾಗಿ ನೋಡುವದಕ್ಕೆ ಧೈರ್ಯವಿಲ್ಲದವನಾದನು. 33 ಮತ್ತು ಕರ್ತನು ಅವನಿಗೆ - ನಿನ್ನ ಕಾಲಿನ ಕೆರಗಳನ್ನು ತೆಗೆ; ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂವಿು. 34 ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ; ಅವರ ಮೊರೆಯನ್ನು ಕೇಳಿ ಅವರನ್ನು ಬಿಡಿಸುವದಕ್ಕೆ ಇಳಿದುಬಂದಿದ್ದೇನೆ; ಈಗ ನಿನ್ನನ್ನು ಐಗುಪ್ತದೇಶಕ್ಕೆ ಕಳುಹಿಸುತ್ತೇನೆ, ಬಾ, ಎಂದು ಹೇಳಿದನು. 35 ಅವರು ಯಾವ ಮೋಶೆಯನ್ನು - ನಿನ್ನನ್ನು ಅಧಿಕಾರಿಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಇಟ್ಟವರು ಯಾರೆಂದು ಹೇಳಿ ಬೇಡವೆಂದರೋ ಅವನನ್ನೇ ದೇವರು ಪೊದೆಯಲ್ಲಿ ಕಾಣಿಸಿಕೊಂಡ ದೂತನ ಕೈಯಿಂದ ಅಧಿಕಾರಿಯನ್ನಾಗಿಯೂ ಬಿಡುಗಡೆಮಾಡುವವನನ್ನಾಗಿಯೂ ನೇವಿುಸಿದನು. 36 ಅವನೇ ಐಗುಪ್ತದೇಶದಲ್ಲಿಯೂ ಕೆಂಪು ಸಮುದ್ರದಲ್ಲಿಯೂ ನಾಲ್ವತ್ತು ವರುಷ ಅಡವಿಯಲ್ಲಿಯೂ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಾ ಅವರನ್ನು ನಡಿಸಿಕೊಂಡು ಬಂದವನು. 37 ಆ ಮೋಶೆಯೇ - ದೇವರು ನನ್ನನ್ನು ಏರ್ಪಡಿಸಿದಂತೆ ನಿಮ್ಮ ಸಹೋದರರಲ್ಲಿ ಮತ್ತೊಬ್ಬ ಪ್ರವಾದಿಯನ್ನು ನಿಮಗೆ ಏರ್ಪಡಿಸಿಕೊಡುವನು ಎಂದು ಇಸ್ರಾಯೇಲ್ ಜನರಿಗೆ ಹೇಳಿದವನು. 38 ಅವನೇ ಸೀನಾಯಿಬೆಟ್ಟದಲ್ಲಿ ತನ್ನೊಡನೆ ಮಾತಾಡಿದ ದೂತನಿಗೂ ನಮ್ಮ ಪಿತೃಗಳಿಗೂ ಅಡವಿಯಲ್ಲಿದ್ದ ಸಭೆಯೊಳಗೆ ಮಧ್ಯಸ್ಥನಾಗಿದ್ದು ಜೀವಕರವಾದ ದೇವೋಕ್ತಿಗಳನ್ನು ಹೊಂದಿ ನಮಗೆ ಕೊಟ್ಟವನು. 39 ಆದರೆ ನಮ್ಮ ಪಿತೃಗಳು ಅವನ ಮಾತುಗಳನ್ನು ಕೇಳುವದಕ್ಕೆ ಮನಸ್ಸಿಲ್ಲದವರಾಗಿ ಅವನನ್ನು ತಳ್ಳಿ ಬಿಟ್ಟು ತಿರಿಗಿ ಐಗುಪ್ತದೇಶದ ಕಡೆಗೆ ಮನಸ್ಸಿಟ್ಟರು. 40 ಅವರು ಆರೋನನಿಗೆ - ಐಗುಪ್ತದೇಶದಿಂದ ನಮ್ಮನ್ನು ಕರಕೊಂಡು ಬಂದ ಆ ಮೋಶೆಯು ಏನಾದನೋ ಗೊತ್ತಿಲ್ಲ, ನಮ್ಮ ಮುಂದುಗಡೆಯಲ್ಲಿ ಹೋಗುವದಕ್ಕೆ ದೇವರುಗಳನ್ನು ನಮಗೆ ಮಾಡಿಕೊಡು ಎಂದು ಹೇಳಿದರು. 41 ಆ ದಿನಗಳಲ್ಲಿ ಅವರು ಒಂದು ಬಸವನನ್ನು ಮಾಡಿ ಆ ವಿಗ್ರಹಕ್ಕೆ ಬಲಿಯನ್ನರ್ಪಿಸಿ ತಮ್ಮ ಕೈಗಳಿಂದ ಮಾಡಿದ ವಸ್ತುಗಳಲ್ಲಿ ಉಲ್ಲಾಸಪಟ್ಟರು. 42 ಆದರೆ ದೇವರು ಅವರಿಗೆ ವಿಮುಖನಾಗಿ ಆಕಾಶದ ನಕ್ಷತ್ರ ಗಣವನ್ನು ಪೂಜಿಸುವದಕ್ಕೆ ಅವರನ್ನು ಒಪ್ಪಿಸಿಬಿಟ್ಟನು. ಪ್ರವಾದಿಗಳ ಗ್ರಂಥದಲ್ಲಿ ಬರೆದಿರುವದೇನಂದರೆ - ಇಸ್ರಾಯೇಲ್ ವಂಶದವರೇ, ನೀವು ಅರಣ್ಯದಲ್ಲಿದ್ದ ನಾಲ್ವತ್ತು ವರುಷ ನನಗೆ ಯಜ್ಞಗಳನ್ನೂ ಬಲಿಗಳನ್ನೂ ಅರ್ಪಿಸುತ್ತಿದ್ದಿರೋ? ಇಲ್ಲವಲ್ಲಾ; 43 ಅದಕ್ಕೆ ಬದಲಾಗಿ ನೀವು ಪೂಜಿಸಬೇಕೆಂದು ಮಾಡಿಕೊಂಡ ಮೂರ್ತಿಗಳನ್ನು ಅಂದರೆ ಮೊಲೋಖನ ಗುಡಾರವನ್ನೂ ರೊಂಫಾ ದೇವತೆಯ ನಕ್ಷತ್ರರೂಪವನ್ನೂ ಹೊತ್ತುಕೊಂಡು ಹೋದಿರಿ. ಆದದರಿಂದ ನಾನು ನಿಮ್ಮನ್ನು ಬಾಬೆಲಿನ ಆಚೆಗೆ ಗಡೀಪಾರು ಮಾಡುವೆನು ಎಂಬದು. 44 ದೇವದರ್ಶನಗುಡಾರವು ಅಡವಿಯೊಳಗೆ ನಮ್ಮ ಪಿತೃಗಳ ಬಳಿಯಲ್ಲಿ ಇತ್ತು. ಮೋಶೆಯ ಸಂಗಡ ಮಾತಾಡಿದವನು - ನೀನು ನೋಡಿದ ಮಾದರಿಯ ಪ್ರಕಾರವೇ ಅದನ್ನು ಮಾಡಿಸಬೇಕೆಂದು ನೇವಿುಸಿದ್ದನು. 45 ನಮ್ಮ ಹಿರಿಯರು ಅದನ್ನು ತಮ್ಮ ತಂದೆಗಳಿಂದ ಹೊಂದಿದರು; ಅವರು ಯೆಹೋಶುವನ ಹಿಂದೆ ಬಂದು ದೇವರು ತಮ್ಮ ಮುಂದೆ ಹೊರಡಿಸಿದ ಅನ್ಯಜನಗಳ ದೇಶವನ್ನು ಸ್ವಾಧೀನಮಾಡಿಕೊಂಡಾಗ ಆ ಗುಡಾರವನ್ನು ಕೂಡ ತಂದರು. ಅದು ದಾವೀದನ ಕಾಲದವರೆಗೂ ಇಲ್ಲೇ ಇತ್ತು. 46 ದಾವೀದನು ದೇವರ ಸನ್ನಿಧಾನದಲ್ಲಿ ಕೃಪೆಹೊಂದಿ ಯಾಕೋಬನ ವಂಶದವರಿಗೋಸ್ಕರ ದೇವಾಲಯವನ್ನು ಕಟ್ಟಿಸುವದಕ್ಕೆ ಅಪ್ಪಣೆಯಾಗಬೇಕೆಂದು ಕೇಳಿಕೊಂಡನು. 47 ಆದರೆ ಆತನಿಗೋಸ್ಕರ ಮನೆಯನ್ನು ಕಟ್ಟಿಸಿದವನು ಸೊಲೊಮೋನನು. 48 ಆದರೂ ಪರಾತ್ಪರನು ಕೈಯಿಂದ ಕಟ್ಟಿದ ಮನೆಗಳಲ್ಲಿ ವಾಸಮಾಡುವವನಲ್ಲ. 49 ಆಕಾಶವು ನನಗೆ ಸಿಂಹಾಸನ, ಭೂವಿುಯು ನನ್ನ ಪಾದಗಳಿಗೆ ಪೀಠ. ನೀವು ನನಗೆ ಎಂಥ ಮನೆಯನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಯಾವದು? 50 ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತಲ್ಲಾ ಎಂಬದಾಗಿ ಕರ್ತನು ಹೇಳುತ್ತಾನೆ ಎಂದು ಪ್ರವಾದಿಯು ನುಡಿದಿದ್ದಾನೆ. 51 ಚಂಡಿಗಳೇ, ಮನಶ್ಶುದ್ಧಿಯೂ ಕರ್ಣಶುದ್ಧಿಯೂ ಇಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವೂ ಯಾವಾಗಲೂ ಪವಿತ್ರಾತ್ಮನನ್ನು ಎದುರಿಸುವವರಾಗಿದ್ದೀರಿ. 52 ಪ್ರವಾದಿಗಳಲ್ಲಿ ನಿಮ್ಮ ಪಿತೃಗಳು ಹಿಂಸೆಪಡಿಸದವರು ಯಾರಿದ್ದಾರೆ? ಅವರು ಆ ನೀತಿ ಸ್ವರೂಪನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು, ನೀವು ಈಗ ಆತನನ್ನು ಹಿಡುಕೊಟ್ಟು ಕೊಂದವರಾದಿರಿ. 53 ದೇವದೂತರ ಮೂಲಕ ನೇಮಕವಾದ ಧರ್ಮಶಾಸ್ತ್ರವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸುವದಿಲ್ಲ ಎಂದು ಹೇಳಿದನು. 54 ಈ ಮಾತುಗಳನ್ನು ಕೇಳಿ ಅವರು ರೌದ್ರಮನಸ್ಸುಳ್ಳವರಾಗಿ ಅವನ ಮೇಲೆ ಹಲ್ಲು ಕಡಿದರು. 55 ಆದರೆ ಅವನು ಪವಿತ್ರಾತ್ಮಭರಿತನಾಗಿ ಆಕಾಶದ ಕಡೆಗೆ ದೃಷ್ಟಿಸಿನೋಡಿ ದೇವರ ಪ್ರಭಾವವನ್ನೂ ದೇವರ ಬಲಗಡೆಯಲ್ಲಿ ನಿಂತಿದ್ದ ಯೇಸುವನ್ನೂ ಕಂಡು - 56 ಅಗೋ, ಆಕಾಶವು ತೆರೆದಿರುವದನ್ನೂ ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರುವದನ್ನೂ ನೋಡುತ್ತೇನೆ ಎಂದು ಹೇಳಿದನು. 57 ಆದರೆ ಅವರು ಮಹಾ ಶಬ್ದದಿಂದ ಕೂಗಿ ಕಿವಿಗಳನ್ನು ಮುಚ್ಚಿಕೊಂಡು ಒಟ್ಟಾಗಿ ಅವನ ಮೇಲೆ ಬಿದ್ದು 58 ಅವನನ್ನು ಊರ ಹೊರಕ್ಕೆ ನೂಕಿಕೊಂಡು ಹೋಗಿ ಕೊಲ್ಲುವದಕ್ಕೆ ಕಲ್ಲೆಸೆದರು. ಸಾಕ್ಷಿಯವರು ತಮ್ಮ ಬಟ್ಟೆಗಳನ್ನು ತೆಗೆದು ಸೌಲನೆಂಬ ಒಬ್ಬ ಯೌವನಸ್ಥನ ಕಾಲುಗಳ ಬಳಿಯಲ್ಲಿ ಇಟ್ಟರು. 59 ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು ಅವನು ಕರ್ತನ ಹೆಸರನ್ನು ಹೇಳಿ - 60 ಯೇಸುಸ್ವಾವಿುಯೇ, ನನ್ನಾತ್ಮವನ್ನು ಸೇರಿಸಿಕೋ ಎಂದು ಪ್ರಾರ್ಥಿಸಿ ಮೊಣಕಾಲೂರಿ - ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು ಮಹಾಶಬ್ದದಿಂದ ಕೂಗಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India