Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅಪೊಸ್ತಲರ ಕೃತ್ಯಗಳು 26 - ಕನ್ನಡ ಸತ್ಯವೇದವು J.V. (BSI)

1 ಆಗ ಅಗ್ರಿಪ್ಪನು ಪೌಲನಿಗೆ - ನೀನು ನಿನ್ನ ಪಕ್ಷದಲ್ಲಿ ಮಾತಾಡಬಹುದು ಅನ್ನಲು ಪೌಲನು ಕೈಯೆತ್ತಿ ಪ್ರತಿವಾದ ಮಾಡಿದ್ದೇನಂದರೆ -

2 ಅಗ್ರಿಪ್ಪರಾಜನೇ, ಯೆಹೂದ್ಯರು ನನ್ನ ಮೇಲೆ ಆರೋಪಿಸುವ ಎಲ್ಲಾ ದೋಷಗಳ ವಿಷಯವಾಗಿ ನಿನ್ನ ಎದುರಿನಲ್ಲಿ ನಾನು ಈಹೊತ್ತು ಪ್ರತಿವಾದ ಮಾಡಬೇಕಾಗಿರುವದರಿಂದ ನನ್ನನ್ನು ಧನ್ಯನೆಂದು ಎಣಿಸಿಕೊಳ್ಳುತ್ತೇನೆ.

3 ಯಾಕಂದರೆ ಯೆಹೂದ್ಯರಲ್ಲಿರುವ ಎಲ್ಲಾ ಆಚಾರಗಳನ್ನೂ ವಿವಾದಗಳನ್ನೂ ನೀನು ಚೆನ್ನಾಗಿ ಬಲ್ಲವನಾಗಿರುತ್ತೀ. ನನ್ನ ಮಾತುಗಳನ್ನು ಸಹನದಿಂದ ಕೇಳಬೇಕೆಂದು ಬೇಡಿಕೊಳ್ಳುತ್ತೇನೆ.

4 ನಾನು ಮೊದಲಿಂದಲೂ ಯೆರೂಸಲೇವಿುನಲ್ಲಿ ನನ್ನ ದೇಶದ ಜನರೊಳಗಿದ್ದುಕೊಂಡು ಬಾಲ್ಯದಿಂದ ಬದುಕಿದ ಬಗೆಯು ಎಲ್ಲಾ ಯೆಹೂದ್ಯರಿಗೆ ತಿಳಿದೇ ಅದೆ;

5 ನಮ್ಮ ಧರ್ಮದಲ್ಲಿ ಬಹು ಖಂಡಿತವಾದ ಮತವನ್ನನುಸರಿಸಿ ಫರಿಸಾಯನಾಗಿ ನಡಕೊಂಡೆನೆಂದು ಪ್ರಾರಂಭದಿಂದಲೂ ಅವರು ಬಲ್ಲರು; ಸಾಕ್ಷಿಹೇಳುವದಕ್ಕೆ ಅವರಿಗೆ ಮನಸ್ಸಿದ್ದರೆ ಹೇಳಬಹುದು.

6 ಈಗಲೂ ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನವು ನೆರವೇರುವದೆಂಬ ನಿರೀಕ್ಷೆಯನ್ನು ಕುರಿತೇ ವಿಚಾರಿಸಲ್ಪಡುವವನಾಗಿ ಇಲ್ಲಿ ನಿಂತಿದ್ದೇನೆ.

7 ನಮ್ಮ ಹನ್ನೆರಡು ಕುಲದವರು ಹಗಲಿರುಳು ಆಸಕ್ತಿಯಿಂದ ದೇವರನ್ನು ಸೇವಿಸುತ್ತಾ ಆ ವಾಗ್ದಾನದ ಫಲವನ್ನು ಹೊಂದುವದಕ್ಕೆ ನಿರೀಕ್ಷಿಸುತ್ತಾ ಇದ್ದಾರೆ. ರಾಜಾ, ಆ ನಿರೀಕ್ಷೆಯ ವಿಷಯದಲ್ಲಿಯೇ ಯೆಹೂದ್ಯರು ನನ್ನ ಮೇಲೆ ದೋಷಾರೋಪಣೆಮಾಡುತ್ತಾರೆ.

8 ದೇವರು ಸತ್ತವರನ್ನು ಎಬ್ಬಿಸಿದ್ದು ನಂಬತಕ್ಕದ್ದಲ್ಲವೆಂದು ನೀವು ಯಾಕೆ ತೀರ್ಮಾನಿಸುತ್ತೀರಿ?

9 ನಜರೇತಿನ ಯೇಸುವಿನ ಹೆಸರಿಗೆ ವಿರುದ್ಧವಾಗಿ ಅನೇಕ ಕಾರ್ಯಗಳನ್ನು ನಡಿಸಬೇಕೆಂದು ನಾನೂ ಯೋಚಿಸಿಕೊಂಡಿದ್ದೆನು.

10 ಯೆರೂಸಲೇವಿುನಲ್ಲಿ ಹಾಗೆಯೇ ನಡಿಸಿದೆನು. ಮಹಾಯಾಜಕರಿಂದ ಅಧಿಕಾರವನ್ನು ಪಡೆದು ದೇವಜನರಲ್ಲಿ ಅನೇಕರನ್ನು ಸೆರೆಮನೆಗಳಲ್ಲಿ ಇಡಿಸಿ ಅವರಿಗೆ ಮರಣದ ತೀರ್ಪಾದಾಗ ನನ್ನ ಸಮ್ಮತಿಯನ್ನು ಸೂಚಿಸಿದೆನು.

11 ಎಲ್ಲಾ ಸಭಾಮಂದಿರಗಳಲ್ಲಿಯೂ ನಾನು ಅನೇಕಾವರ್ತಿ ಅವರನ್ನು ದಂಡಿಸಿ ಅವರಿಂದ ದೂಷಣೆಯ ಮಾತುಗಳನ್ನಾಡಿಸುವದಕ್ಕೆ ಪ್ರಯತ್ನಿಸಿದೆನು. ಇದಲ್ಲದೆ ಅವರ ಮೇಲೆ ಬಹು ಕೋಪಾವೇಶವುಳ್ಳವನಾಗಿ ಪರಪಟ್ಟಣಗಳ ತನಕ ಅವರನ್ನು ಹಿಂಸೆಪಡಿಸಿದೆನು.

12 ಈ ಉದ್ದೇಶದಿಂದ ನಾನು ಮಹಾಯಾಜಕರಿಂದ ಅಧಿಕಾರವನ್ನೂ ಉದ್ಯೋಗವನ್ನೂ ಹೊಂದಿ ದಮಸ್ಕಕ್ಕೆ ಹೋಗುತ್ತಾ ನಾನು ದಾರಿಯಲ್ಲಿದ್ದಾಗ

13 ರಾಜನೇ, ಮಧ್ಯಾಹ್ನದ ಹೊತ್ತಿನಲ್ಲಿ ಪರಲೋಕದಿಂದಾದ ಒಂದು ಬೆಳಕು ನನ್ನ ಸುತ್ತಲೂ ನನ್ನ ಜೊತೆಯಲ್ಲಿ ಪ್ರಯಾಣಮಾಡುತ್ತಿದ್ದವರ ಸುತ್ತಲೂ ಸೂರ್ಯನ ಹೊಳಪಿಗಿಂತ ಹೆಚ್ಚಾಗಿ ಹೊಳೆಯುವದನ್ನು ಕಂಡೆನು.

14 ನಾವೆಲ್ಲರು ನೆಲಕ್ಕೆ ಬೀಳಲು - ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆಪಡಿಸುತ್ತೀ? ಮುಳ್ಳುಗೋಲನ್ನು ಒದೆಯುವದು ನಿನಗೆ ಕಷ್ಟ ಎಂದು ಇಬ್ರಿಯ ಭಾಷೆಯಿಂದ ಹೇಳುವ ವಾಣಿಯನ್ನು ಕೇಳಿದೆನು.

15 ಆಗ ನಾನು - ಕರ್ತನೇ, ನೀನಾರು? ಅನ್ನಲು ಕರ್ತನು - ನೀನು ಹಿಂಸೆಪಡಿಸುವ ಯೇಸುವೇ ನಾನು. ನೀನು ಎದ್ದು ನಿಂತುಕೋ.

16 ನಿನ್ನನ್ನು ನನ್ನ ಸೇವಕನಾಗಿಯೂ ಸಾಕ್ಷಿಯಾಗಿಯೂ ನೇವಿುಸುವದಕ್ಕೋಸ್ಕರ ನಿನಗೆ ಕಾಣಿಸಿಕೊಂಡಿದ್ದೇನೆ. ನಾನು ಈಗಲೂ ಮುಂದೆ ನಿನಗೆ ಕೊಡಲಿಕ್ಕಿರುವ ದರ್ಶನಗಳಲ್ಲಿಯೂ ನಿನಗೆ ಕಾಣಿಸಿಕೊಂಡದ್ದನ್ನು ಕುರಿತು ನೀನು ಸಾಕ್ಷಿಯಾಗಿರಬೇಕು.

17 ನಾನು ನಿನ್ನನ್ನು ಇಸ್ರಾಯೇಲ್ ಜನರ ಕೈಯೊಳಗಿಂದಲೂ ಅನ್ಯಜನರ ಕೈಯೊಳಗಿಂದಲೂ ಬಿಡಿಸುವೆನು.

18 ಅವರು ಕತ್ತಲೆಯಿಂದ ಬೆಳಕಿಗೂ ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಕೊಂಡು ನನ್ನಲ್ಲಿ ನಂಬಿಕೆಯಿಡುವದರಿಂದ ಪಾಪಪರಿಹಾರವನ್ನೂ ಪವಿತ್ರರಾದವರಲ್ಲಿ ಹಕ್ಕನ್ನೂ ಹೊಂದುವಂತೆ ಅವರ ಕಣ್ಣುಗಳನ್ನು ತೆರೆಯಬೇಕೆಂದು ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ ಅಂದನು.

19 ಆದಕಾರಣ ಅಗ್ರಿಪ್ಪರಾಜನೇ, ಪರಲೋಕದಿಂದ ನನಗೆ ಉಂಟಾದ ಆ ದರ್ಶನಕ್ಕೆ ನಾನು ಅವಿಧೇಯನಾಗದೆ

20 ಮೊದಲು ದಮಸ್ಕದವರಿಗೆ, ಆಮೇಲೆ ಯೆರೂಸಲೇವಿುನಲ್ಲಿಯೂ ಯೂದಾಯದ ಎಲ್ಲಾ ಸೀಮೆಯಲ್ಲಿಯೂ ಇರುವವರಿಗೆ ಮತ್ತು ಅನ್ಯಜನರಿಗೆ ಸಹ - ನೀವು ದೇವರ ಕಡೆಗೆ ತಿರುಗಿಕೊಳ್ಳಬೇಕೆಂತಲೂ ಮಾನಸಾಂತರಕ್ಕೆ ಯೋಗ್ಯವಾದ ಕೃತ್ಯಗಳನ್ನು ಮಾಡಬೇಕೆಂತಲೂ ಸಾರಿದೆನು.

21 ಈ ಕಾರಣದಿಂದ ಯೆಹೂದ್ಯರು ದೇವಾಲಯದಲ್ಲಿ ನನ್ನನ್ನು ಹಿಡಿದು ಕೊಲ್ಲುವದಕ್ಕೆ ಪ್ರಯತ್ನಿಸಿದರು.

22 ಆದರೆ ನಾನು ದೇವರಿಂದ ಸಹಾಯವನ್ನು ಪಡೆದು ಈ ದಿನದವರೆಗೂ ಸುರಕ್ಷಿತವಾಗಿದ್ದು ಚಿಕ್ಕವರಿಗೂ ದೊಡ್ಡವರಿಗೂ ಸಾಕ್ಷಿಹೇಳುವವನಾಗಿದ್ದೇನೆ. ಪ್ರವಾದಿಗಳೂ ಮೋಶೆಯೂ ಮುಂದೆ ಆಗುವವೆಂದು ತಿಳಿಸಿದ ಸಂಗತಿಗಳನ್ನೇ ಹೊರತು ಇನ್ನೇನೂ ಹೇಳುವವನಲ್ಲ.

23 ಆ ಸಂಗತಿಗಳು ಏನಂದರೆ - ಕ್ರಿಸ್ತನು ಬಾಧೆಪಟ್ಟು ಸಾಯಬೇಕಾದವನು ಮತ್ತು ಆತನು ಸತ್ತವರೊಳಗಿಂದ ಮೊದಲನೆಯವನಾಗಿ ಎದ್ದು ಯೆಹೂದ್ಯರಿಗೂ ಅನ್ಯಜನರಿಗೂ ಬೆಳಕನ್ನು ಪ್ರಸಿದ್ಧಿಪಡಿಸುವವನಾಗಿರುವನು ಎಂಬದೇ.

24 ಹೀಗೆ ಪೌಲನು ಪ್ರತಿವಾದ ಮಾಡುತ್ತಿದ್ದಾಗ ಫೆಸ್ತನು ಮಹಾಶಬ್ದದಿಂದ - ಪೌಲನೇ, ನೀನು ಮರುಳಾಗಿದ್ದೀ; ನೀನು ಬಹಳವಾಗಿ ಮಾಡುವ ಶಾಸ್ತ್ರವಿಚಾರವು ನಿನ್ನನ್ನು ಮರುಳುಗೊಳಿಸುತ್ತದೆ ಎಂದು ಹೇಳಿದನು.

25 ಅದಕ್ಕೆ ಪೌಲನು - ಶ್ರೀಮನ್ ಮಹಾ ಫೆಸ್ತನೇ, ನಾನು ಮರುಳಾಗಿಲ್ಲ; ಸ್ವಸ್ಥಬುದ್ಧಿಯುಳ್ಳವನಾಗಿ ಸತ್ಯವಾದ ಮಾತುಗಳನ್ನಾಡುತ್ತೇನೆ.

26 ಅಗ್ರಿಪ್ಪರಾಜನು ಈ ಸಂಗತಿಗಳನ್ನು ತಿಳಿದವನು; ಅವನ ಮುಂದೆ ಧೈರ್ಯವಾಗಿ ಮಾತಾಡುತ್ತೇನೆ. ಇವುಗಳಲ್ಲಿ ಒಂದಾದರೂ ಅವನಿಗೆ ಮರೆಯಾದದ್ದಲ್ಲವೆಂದು ನಂಬಿದ್ದೇನೆ, ಯಾಕಂದರೆ ಇದು ಮೂಲೆಯಲ್ಲಿ ನಡೆದ ಕಾರ್ಯವಲ್ಲ.

27 ಅಗ್ರಿಪ್ಪರಾಜನೇ, ಪ್ರವಾದಿಗಳಲ್ಲಿ ನಿನಗೆ ನಂಬಿಕೆಯುಂಟೋ? ಉಂಟೆಂದು ಬಲ್ಲೆನು ಅಂದನು.

28 ಅದಕ್ಕೆ ಅಗ್ರಿಪ್ಪನು - ಅಲ್ಪಪ್ರಯತ್ನದಿಂದ ನನ್ನನ್ನು ಕ್ರೈಸ್ತನಾಗುವದಕ್ಕೆ ಒಡಂಬಡಿಸುತ್ತೀಯಾ? ಎಂದು ಹೇಳಲು

29 ಪೌಲನು - ಅಲ್ಪಪ್ರಯತ್ನದಿಂದಾಗಲಿ ಅಧಿಕಪ್ರಯತ್ನದಿಂದಾಗಲಿ ನೀನು ಮಾತ್ರವಲ್ಲದೆ ಈಹೊತ್ತು ನನ್ನ ಮಾತುಗಳನ್ನು ಕೇಳುವವರೆಲ್ಲರೂ ಈ ಬೇಡಿಗಳ ಹೊರತು ನನ್ನಂತೆ ಆಗಬೇಕೆಂದು ದೇವರನ್ನು ಪ್ರಾರ್ಥಿಸುತ್ತೇನೆ ಅಂದನು.

30 ಆಮೇಲೆ ರಾಜನೂ ದೇಶಾಧಿಪತಿಯೂ ಬೆರ್ನಿಕೆಯೂ ಅವರ ಸಂಗಡ ಕೂತಿದ್ದವರೂ ಎದ್ದು ಆಚೆಗೆ ಹೋಗಿ -

31 ಈ ಮನುಷ್ಯನು ಮರಣದಂಡನೆಗಾಗಲಿ ಬೇಡಿಗಾಗಲಿ ಆಧಾರವಾದದ್ದೇನೂ ಮಾಡುವವನಲ್ಲ ಎಂಬದಾಗಿ ತಮ್ಮತಮ್ಮೊಳಗೆ ಮಾತಾಡಿಕೊಳ್ಳುತ್ತಿದ್ದರು.

32 ಅಗ್ರಿಪ್ಪನು ಫೆಸ್ತನಿಗೆ - ಈ ಮನುಷ್ಯನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳದೆ ಹೋಗಿದ್ದರೆ ಇವನನ್ನು ಬಿಡಬಹುದಾಗಿತ್ತು ಎಂದು ಹೇಳಿದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು