Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಸಮುಯೇಲ 2 - ಕನ್ನಡ ಸತ್ಯವೇದವು J.V. (BSI)


ದಾವೀದನಿಗೆ ಹೆಬ್ರೋನಿನಲ್ಲಿ ರಾಜ್ಯಾಭಿಷೇಕವಾದದ್ದು

1 ಅನಂತರ ದಾವೀದನು ಯೆಹೋವನನ್ನು - ನಾನು ಯೆಹೂದದೇಶದ ಯಾವದಾದರೊಂದು ಪಟ್ಟಣಕ್ಕೆ ಹೋಗಬಹುದೋ ಎಂದು ಕೇಳಲು ಆತನು - ಹೋಗಬಹುದು ಅಂದನು. ಅವನು ತಿರಿಗಿ - ಯಾವ ಊರಿಗೆ ಹೋಗಲಿ ಎಂದು ಕೇಳಿದ್ದಕ್ಕೆ - ಹೆಬ್ರೋನಿಗೆ ಹೋಗು ಎಂಬ ಉತ್ತರ ಸಿಕ್ಕಿತು.

2 ಆಗ ದಾವೀದನು ತನ್ನ ಇಬ್ಬರು ಹೆಂಡತಿಯರಾದ ಇಜ್ರೇಲಿನ ಅಹೀನೋವಮಳನ್ನೂ ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳನ್ನೂ ಕರಕೊಂಡು ಅಲ್ಲಿಗೆ ಹೋದನು.

3 ದಾವೀದನ ಜನರೂ ತಮ್ಮತಮ್ಮ ಕುಟುಂಬಗಳನ್ನು ಕರಕೊಂಡು ಅವನ ಜೊತೆಯಲ್ಲಿ ಹೋಗಿ ಹೆಬ್ರೋನಿಗೆ ಸೇರಿದ ಊರುಗಳಲ್ಲಿ ವಾಸಿಸಿದರು.

4 ತರುವಾಯ ಯೆಹೂದ್ಯರು ಅಲ್ಲಿಗೆ ಬಂದು ದಾವೀದನನ್ನು ಅಭಿಷೇಕಿಸಿ ತಮ್ಮ ಕುಲಕ್ಕೆ ಅರಸನನ್ನಾಗಿ ಮಾಡಿಕೊಂಡರು. ಸೌಲನ ಶವವನ್ನು ಸಮಾಧಿಮಾಡಿದವರು ಯಾಬೇಷ್ ಗಿಲ್ಯಾದಿನವರೇ ಎಂಬ ಸಂಗತಿಯು ದಾವೀದನಿಗೆ ಗೊತ್ತಾಯಿತು.

5 ಆಗ ಅವನು ಅವರ ಬಳಿಗೆ ದೂತರನ್ನು ಕಳುಹಿಸಿ - ನೀವು ಕರುಣೆಯಿಂದ ನಿಮ್ಮ ಒಡೆಯನಾದ ಸೌಲನ ಶವವನ್ನು ಸಮಾಧಿಮಾಡಿದ್ದಕ್ಕಾಗಿ ನಿಮಗೆ ಯೆಹೋವನ ಅಶೀರ್ವಾದವುಂಟಾಗಲಿ.

6 ಆತನ ಕೃಪಾಸತ್ಯತೆಗಳು ನಿಮ್ಮೊಂದಿಗಿರಲಿ; ಈ ಕಾರ್ಯಕ್ಕಾಗಿ ನಾನೂ ನಿಮಗೆ ಉಪಕಾರಮಾಡುವೆನು.

7 ಯೆಹೂದ್ಯರು ನನ್ನನ್ನು ಅಭಿಷೇಕಿಸಿ ತಮ್ಮ ಅರಸನನ್ನಾಗಿ ಮಾಡಿಕೊಂಡಿರುವದರಿಂದ ಸೌಲನು ಸತ್ತು ಹೋದರೂ ಶೂರರಾಗಿರ್ರಿ, ನಿಮ್ಮ ಕೈಗಳು ಜೋಲು ಬೀಳದಿರಲಿ ಎಂದು ಹೇಳಿಸಿದನು.


ಸೌಲನ ಉತ್ತರಾಧಿಕಾರಿಯಾದ ಈಷ್ಬೋಶೆತನು ದಾವೀದನೊಡನೆ ಯುದ್ಧಮಾಡಿದ್ದು

8 ಸೌಲನ ಸೇನಾಪತಿಯೂ ನೇರನ ಮಗನೂ ಆದ ಅಬ್ನೇರನು ಸೌಲನ ಮಗನಾದ ಈಷ್ಬೋಶೆತನನ್ನು ಹೊಳೆಯ ಆಚೆಯಲ್ಲಿರುವ ಮಹನಯಿವಿುಗೆ ಒಯ್ದು

9 ಅವನನ್ನು ಗಿಲ್ಯಾದ್, ಆಶೇರ್, ಇಜ್ರೇಲ್, ಎಫ್ರಾಯೀಮ್, ಬೆನ್ಯಾಮೀನ್ ಇವುಗಳ ಜನರ ಮೇಲೆಯೂ ಬೇರೆ ಎಲ್ಲಾ ಇಸ್ರಾಯೇಲ್ಯರ ಮೇಲೆಯೂ ಅರಸನನ್ನಾಗಿ ಮಾಡಿದನು.

10 (ಸೌಲನ ಮಗನಾದ ಈಷ್ಬೋಶೆತನು ನಾಲ್ವತ್ತು ವರುಷದವನಾದಾಗ ಇಸ್ರಾಯೇಲ್ಯರನ್ನು ಆಳತೊಡಗಿ ಎರಡು ವರುಷ ರಾಜ್ಯಭಾರಮಾಡಿದನು.) ಯೆಹೂದ್ಯರು ಮಾತ್ರ ದಾವೀದನನ್ನು ಹಿಂಬಾಲಿಸಿದರು.

11 ದಾವೀದನು ಹೆಬ್ರೋನಿನಲ್ಲಿ ಯೆಹೂದ್ಯರ ಅರಸನಾಗಿದ್ದದ್ದು ಏಳು ವರುಷವೂ ಆರು ತಿಂಗಳೂ.

12 ಒಂದು ದಿವಸ ನೇರನ ಮಗನಾದ ಅಬ್ನೇರನೂ ಸೌಲನ ಮಗನಾದ ಈಷ್ಬೋಶೆತನ ಸೇವಕರೂ ಮಹನಯಿವಿುನಿಂದ ಹೊರಟು ಗಿಬ್ಯೋನಿಗೆ ಬಂದರು.

13 ಚೆರೂಯಳ ಮಗನಾದ ಯೋವಾಬನೂ ದಾವೀದನ ಸೇವಕರೂ ಹೊರಟು ಗಿಬ್ಯೋನಿನ ಕೆರೆಯ ಹತ್ತಿರ ಸಂಧಿಸಿ ಇವರು ಕೆರೆಯ ಈಚೆಯಲ್ಲಿಯೂ ಅವರು ಆಚೆಯಲ್ಲಿಯೂ ಕೂತುಕೊಂಡರು.

14 ಆಗ ಅಬ್ನೇರನು ಯೋವಾಬನಿಗೆ - ಪ್ರಾಯಸ್ಥರು ಎದ್ದು ನಮ್ಮ ಮುಂದೆ ಆಡಲಿ ಎಂದು ಹೇಳಲು ಯೋವಾಬನು ಆಗಲಿ ಅಂದನು.

15 ಆಗ ಸೌಲನ ಮಗನಾದ ಈಷ್ಬೋಶೆತನ ಕಡೆಯವರಾದ ಹನ್ನೆರಡು ಮಂದಿ ಬೆನ್ಯಾಮೀನ್ಯರೂ ದಾವೀದನ ಸೇವಕರಲ್ಲಿ ಹನ್ನೆರಡು ಮಂದಿಯೂ ಸಮಸಂಖ್ಯೆಯಾಗಿ ಹೊರಟುಬಂದು

16 ಅವರಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಎದುರಾಳಿಯ ತಲೆ ಹಿಡಿದು ಕತ್ತಿಯಿಂದ ಪಕ್ಕೆಯಲ್ಲಿ ತಿವಿದದರಿಂದ ಎಲ್ಲರೂ ಸತ್ತು ಬಿದ್ದರು. ಆದದರಿಂದ ಗಿಬ್ಯೋನಿನಲ್ಲಿರುವ ಆ ಸ್ಥಳಕ್ಕೆ ಹದಗತ್ತಿ ಹೊಲವೆಂದು ಹೆಸರಾಯಿತು.

17 ಅನಂತರ ಆ ದಿವಸ ಘೋರಯುದ್ಧವಾಯಿತು. ಅಬ್ನೇರನೂ ಇಸ್ರಾಯೇಲ್ಯರೂ ದಾವೀದನ ಸೇವಕರಿಂದ ಸೋಲಿಸಲ್ಪಟ್ಟರು.

18 ಚೆರೂಯಳ ಮೂರು ಮಂದಿ ಮಕ್ಕಳಾದ ಯೋವಾಬ್, ಅಬೀಷೈ, ಅಸಾಹೇಲ್ ಎಂಬವರು ಅಲ್ಲಿಗೆ ಬಂದಿದ್ದರು. ಅಸಾಹೇಲನು ಅಡವಿಯ ಜಿಂಕೆಯಂತೆ ಚುರುಕು ಕಾಲಿನವನಾಗಿದ್ದನು.

19 ಇವನು ಎಡಕ್ಕಾದರೂ ಬಲಕ್ಕಾದರೂ ತಿರುಗದೆ ಅಬ್ನೇರನನ್ನು ಹಿಂದಟ್ಟಿದನು.

20 ಅಬ್ನೇರನು ಹಿಂದಿರುಗಿ ನೋಡಿ - ನೀನು ಅಸಾಹೇಲನೋ ಎಂದು ಕೇಳಿದ್ದಕ್ಕೆ ಅವನು ಹೌದೆಂದು ಉತ್ತರ ಕೊಟ್ಟನು.

21 ಆಗ ಅಬ್ನೇರನು ಅವನಿಗೆ - ನನ್ನನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಿಕೊಂಡು ಪ್ರಾಯಸ್ಥರಲ್ಲೊಬ್ಬನನ್ನು ಹಿಡಿದು ಸುಲುಕೋ ಎಂದು ಹೇಳಿದನು; ಆದರೆ ಅಸಾಹೇಲನು ಒಪ್ಪಲಿಲ್ಲ.

22 ಅಬ್ನೇರನು ತಿರಿಗಿ - ನನ್ನನ್ನು ಬಿಟ್ಟುಹೋಗು; ನಾನೇಕೆ ನಿನ್ನನ್ನು ನೆಲಕ್ಕುರುಳಿಸಬೇಕು? ಹಾಗೆ ಮಾಡಿದರೆ ನಿನ್ನ ಅಣ್ಣನಾದ ಯೋವಾಬನಿಗೆ ಹೇಗೆ ಮೋರೆತೋರಿಸಲಿ ಅಂದನು.

23 ಅಸಾಹೇಲನು ಬಿಟ್ಟುಹೋಗುವದಕ್ಕೆ ಒಪ್ಪದ್ದರಿಂದ ಅಬ್ನೇರನು ಬರ್ಜಿಯನ್ನು ಹಿಂಗಡೆಯಿಂದ ಅವನ ಹೊಟ್ಟೆಯೊಳಗೆ ತಿವಿದನು. ಬರ್ಜಿಯು ಅವನ ಬೆನ್ನಿನಿಂದ ಹಾಯ್ದು ಬಂದಿತು. ಅವನು ಕೂಡಲೆ ಅಲ್ಲೇ ಬಿದ್ದು ಸತ್ತನು. ಅಸಾಹೇಲನು ಸತ್ತುಬಿದ್ದ ಸ್ಥಳಕ್ಕೆ ಬಂದವರೆಲ್ಲರೂ ಅಲ್ಲೇ ನಿಂತರು.

24 ಆದರೆ ಯೋವಾಬನೂ ಅಬೀಷೈಯೂ ಅಬ್ನೇರನನ್ನು ಹಿಂದಟ್ಟಿದರು. ಹೀಗೆ ಅವರು ಅಮ್ಮಾ ಎಂಬ ಗುಡ್ಡಕ್ಕೆ ಬರುವಷ್ಟರಲ್ಲಿ ಸೂರ್ಯಾಸ್ತಮಾನವಾಯಿತು. ಆ ಗುಡ್ಡವು ಗಿಬ್ಯೋನಿನ ಅರಣ್ಯ ಮಾರ್ಗದ ಬಳಿಯಲ್ಲಿರುವ ಗೀಯದ ಎದುರಿನಲ್ಲಿರುತ್ತದೆ.

25 ಬೆನ್ಯಾಮೀನ್ಯರು ಒಂದೇ ಗುಂಪಾಗಿ ಕೂಡಿಕೊಂಡು ಅಬ್ನೇರನ ಬಳಿಗೆ ಬಂದು ಗುಡ್ಡದ ಮೇಲೆ ನಿಂತರು.

26 ಆಗ ಅಬ್ನೇರನು ಯೋವಾಬನನ್ನು - ಕತ್ತಿಯು ಯಾವಾಗಲೂ ತಿನ್ನುತ್ತಲೇ ಇರಬೇಕೋ? ಹಗೆತನವೇ ಇದರ ಅಂತ್ಯಫಲವೆಂದು ನಿನಗೆ ಗೊತ್ತಾಗಲಿಲ್ಲವೋ? ಸಹೋದರರನ್ನು ಹಿಂದಟ್ಟುವದು ಸಾಕೆಂದು ನಿನ್ನ ಜನರಿಗೆ ಯಾವಾಗ ಆಜ್ಞಾಪಿಸುವಿ ಎಂದನು.

27 ಅದಕ್ಕೆ ಯೋವಾಬನು - ದೇವರ ಜೀವದಾಣೆ ಈಗ ನೀನು ಈ ಮಾತುಗಳನ್ನು ಹೇಳದಿದ್ದರೆ ಜನರು ನಾಳೆ ಬೆಳಗಾಗುವವರೆಗೆ ತಮ್ಮ ಬಂಧುಗಳನ್ನು ಹಿಂದಟ್ಟದೆ ಬಿಡುತ್ತಿದ್ದಿಲ್ಲ ಎಂದು ಉತ್ತರಕೊಟ್ಟು ಕೂಡಲೆ ತುತೂರಿಯನ್ನು ಊದಿಸಿದನು.

28 ಆಗ ಜನರು ಇಸ್ರಾಯೇಲ್ಯರನ್ನು ಹಿಂದಟ್ಟದೆ ಬಿಟ್ಟದರಿಂದ ಯುದ್ಧವು ನಿಂತುಹೋಯಿತು.

29 ಅಬ್ನೇರನೂ ಅವನ ಜನರೂ ಅರಾಬಾ ತಗ್ಗಿನಲ್ಲಿ ರಾತ್ರಿಯೆಲ್ಲಾ ಪ್ರಯಾಣಮಾಡಿ ಯೊರ್ದನ್ ಹೊಳೆದಾಟಿ ಬಿಥ್ರೋನ್ ಕಣಿವೆಯನ್ನು ಹಾಯ್ದು ಮಹನಯಿವಿುಗೆ ಸೇರಿದರು.

30 ಯೋವಾಬನು ಅಬ್ನೇರನನ್ನು ಹಿಂದಟ್ಟದೆ ಬಿಟ್ಟು ಹಿಂದಿರುಗಿ ಬಂದು ಜನರನ್ನು ಕೂಡಿಸಿ ಲೆಕ್ಕಿಸಿದಾಗ ಅವರಲ್ಲಿ ದಾವೀದನ ಹತ್ತೊಂಭತ್ತು ಮಂದಿ ಭಟರೂ ಅಸಾಹೇಲನೂ ಇರಲಿಲ್ಲ.

31 ಆದರೆ ದಾವೀದನ ಭಟರು ಅಬ್ನೇರನ ಜನರಾಗಿರುವ ಬೆನ್ಯಾಮೀನ್ಯರಲ್ಲಿ ಮುನ್ನೂರರುವತ್ತು ಮಂದಿಯನ್ನು ಕೊಂದಿದ್ದರು.

32 ಅವರು ಅಸಾಹೇಲನ ಶವವನ್ನು ತಂದು ಅದನ್ನು ಬೇತ್ಲೆಹೇವಿುನಲ್ಲಿರುವ ಅವನ ತಂದೆಯ ಶ್ಮಶಾನ ಭೂವಿುಯಲ್ಲಿ ಸಮಾಧಿಮಾಡಿದರು. ಅನಂತರ ಯೋವಾಬನೂ ಅವನ ಜನರೂ ರಾತ್ರಿಯೆಲ್ಲಾ ಪ್ರಯಾಣಮಾಡಿ ಹೆಬ್ರೋನಿಗೆ ಬಂದರು. ಆಗ ಸೂರ್ಯೋದಯವಾಯಿತು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು