2 ಸಮುಯೇಲ 10 - ಕನ್ನಡ ಸತ್ಯವೇದವು J.V. (BSI)ದಾವೀದನು ಅಮ್ಮೋನಿಯರ ಮತ್ತು ಅರಾಮ್ಯರ ಸಂಗಡ ಯುದ್ಧಮಾಡಿದ್ದು 1 ಇದಾದನಂತರ ಅಮ್ಮೋನಿಯರ ಅರಸನು ಸತ್ತನು. ಅವನಿಗೆ ಬದಲಾಗಿ ಅವನ ಮಗನಾದ ಹಾನೂನನು ಅರಸನಾದನು. 2 ದಾವೀದನು - ನಾಹಾಷನು ನನಗೆ ದಯೆತೋರಿಸಿದ್ದರಿಂದ ನಾನೂ ಅವನ ಮಗನಾದ ಹಾನೂನನಿಗೆ ದಯೆತೋರಿಸುವೆನು ಅಂದುಕೊಂಡು ಪಿತೃಶೋಕದಲ್ಲಿದ್ದ ಹಾನೂನನನ್ನು ಸಂತೈಸುವದಕ್ಕೋಸ್ಕರ ತನ್ನ ಸೇವಕರನ್ನು ಕಳುಹಿಸಿದನು. ದಾವೀದನ ಸೇವಕರು ಅಮ್ಮೋನಿಯರ ದೇಶಕ್ಕೆ ಬಂದಾಗ 3 ಅಲ್ಲಿನ ಪ್ರಭುಗಳು ತಮ್ಮ ಒಡೆಯನಾದ ಹಾನೂನನಿಗೆ - ದಾವೀದನು ನಿನ್ನ ಬಳಿಗೆ ಸಂತೈಸುವವರನ್ನು ಕಳುಹಿಸಿದ್ದರಿಂದ ಅವನು ನಿನ್ನ ತಂದೆಯನ್ನು ಸನ್ಮಾನಿಸುವವನಾಗಿದ್ದಾನೆಂದು ತಿಳಿಯುತ್ತೀಯೋ? ಪಟ್ಟಣವನ್ನು ಸಂಚರಿಸಿ ನೋಡಿ ಅದನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದು ತನ್ನ ಆಳುಗಳನ್ನು ಕಳುಹಿಸಿದ್ದಾನೆ ಎಂದು ಹೇಳಿದರು. 4 ಆದದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿಸಿ ಗಡ್ಡದ ಅರ್ಧಭಾಗವನ್ನು ಬೋಳಿಸಿ ಅವರ ನಿಲುವಂಗಿಗಳನ್ನು ಕುಂಡಿಯಿಂದ ಕೆಳಗಿನ ಭಾಗವನ್ನೆಲ್ಲಾ ಕತ್ತರಿಸಿ ಕಳುಹಿಸಿಬಿಟ್ಟನು. 5 ಅವರು ಈ ವರ್ತಮಾನವನ್ನು ದಾವೀದನಿಗೆ ಹೇಳಿ ಕಳುಹಿಸಿದಾಗ ಅವನು ಬಹಳವಾಗಿ ಅಪಮಾನಹೊಂದಿದ ಅವರಿಗೆ ಆಳುಗಳ ಮುಖಾಂತರವಾಗಿ - ನಿಮ್ಮ ಗಡ್ಡ ಬೆಳೆಯುವವರೆಗೆ ನೀವು ಯೆರಿಕೋವಿನಲ್ಲಿದ್ದು ಅನಂತರ ಬನ್ನಿರಿ ಎಂದು ಹೇಳಿಸಿದನು. 6 ತಾವು ದಾವೀದನಿಗೆ ಅಸಹ್ಯರಾದೆವೆಂದು ಅಮ್ಮೋನಿಯರು ತಿಳಿದು ಹಣಕೊಟ್ಟು ಬೇತ್ರೆಹೋಬ್, ಚೋಬಾ ಎಂಬ ಪಟ್ಟಣಗಳಿಂದ ಅರಾಮ್ಯರ ಇಪ್ಪತ್ತು ಸಾವಿರ ಮಂದಿ ಕಾಲಾಳುಗಳನ್ನೂ ಮಾಕದ ರಾಜನಿಂದ ಸಾವಿರ ಮಂದಿ ಸೈನಿಕರನ್ನೂ ಟೋಬ್ ದೇಶದಿಂದ ಹನ್ನೆರಡು ಸಾವಿರ ಮಂದಿ ದಂಡಾಳುಗಳನ್ನೂ ತರಿಸಿದರು. 7 ಈ ಸುದ್ದಿಯು ದಾವೀದನಿಗೆ ಮುಟ್ಟಿದಾಗ ಅವನು ಯೋವಾಬನನ್ನೂ ಎಲ್ಲಾ ಶೂರಸೈನಿಕರನ್ನೂ ಕಳುಹಿಸಿದನು. 8 ಕೂಡಲೆ ಅಮ್ಮೋನಿಯರು ಹೊರಗೆ ಬಂದು ಊರುಬಾಗಲಿನ ಬಳಿಯಲ್ಲಿ ವ್ಯೂಹಕಟ್ಟಿದರು. ಚೋಬಾ, ರೆಹೋಬ್ ಎಂಬ ಸ್ಥಳಗಳ ಅರಾಮ್ಯರೂ ಟೋಬ್ ಮಾಕಾ ದೇಶಗಳವರೂ ಪ್ರತ್ಯೇಕವಾಗಿ ಮೈದಾನದಲ್ಲಿ ಇಳುಕೊಂಡಿದ್ದರು. 9 ಯೋವಾಬನು ತನ್ನ ಮುಂದೆಯೂ ಹಿಂದೆಯೂ ಯುದ್ಧ ಪ್ರಾರಂಭವಾದದ್ದನ್ನು ಕಂಡು ಇಸ್ರಾಯೇಲ್ಯರಲ್ಲಿ ಶ್ರೇಷ್ಠರಾದ ಸೈನಿಕರನ್ನು ಆರಿಸಿಕೊಂಡು ಅವರನ್ನು ಅರಾಮ್ಯರಿಗೆ ವಿರೋಧವಾಗಿ ನಿಲ್ಲಿಸಿದನು. 10 ಉಳಿದ ಜನರನ್ನು ತನ್ನ ತಮ್ಮನಾದ ಅಬೀಷೈಯ ವಶಕ್ಕೆ ಕೊಟ್ಟು ಅವನಿಗೆ - 11 ಅರಾಮ್ಯರು ನನ್ನನ್ನು ಸೋಲಿಸುವಂತೆ ಕಂಡರೆ ನೀನು ನನ್ನ ಸಹಾಯಕ್ಕೆ ಬಾ; ಅಮ್ಮೋನಿಯರು ನಿನ್ನನ್ನು ಸೋಲಿಸುವಂತೆ ಕಂಡರೆ ನಾನು ನಿನ್ನ ಸಹಾಯಕ್ಕೆ ಬರುವೆನು; 12 ಧೈರ್ಯದಿಂದಿರು, ನಮ್ಮ ಜನರಿಗೋಸ್ಕರವೂ ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ನಮ್ಮ ಪೌರುಷವನ್ನು ತೋರಿಸೋಣ; ಯೆಹೋವನು ತನಗೆ ಸರಿಕಾಣುವಂಥದನ್ನು ಮಾಡಲಿ ಎಂದು ಹೇಳಿ ಅವನನ್ನು ಅಮ್ಮೋನಿಯರಿಗೆ ವಿರೋಧವಾಗಿ ಕಳುಹಿಸಿದನು. 13 ಯೋವಾಬನೂ ಅವನ ಜನರೂ ಅರಾಮ್ಯರಿಗೆ ವಿರೋಧವಾಗಿ ಯುದ್ಧ ಪ್ರಾರಂಭಿಸಿದಾಗ ಅರಾಮ್ಯರು ಓಡಿಹೋದರು. 14 ಇವರು ಓಡಿಹೋಗುವದನ್ನು ಅಮ್ಮೋನಿಯರು ಕಂಡು ಅವರೂ ಅಬೀಷೈಯ ಎದುರಿನಿಂದ ಓಡಿಹೋಗಿ ಪಟ್ಟಣವನ್ನು ಹೊಕ್ಕರು. ಯೋವಾಬನು ಅಮ್ಮೋನಿಯರೊಡನೆ ಯುದ್ಧಮಾಡುವದನ್ನು ಬಿಟ್ಟು ಯೆರೂಸಲೇವಿುಗೆ ಹೋದನು. 15 ಅರಾಮ್ಯರಿಗೆ ತಮ್ಮ ಸೈನ್ಯವು ಇಸ್ರಾಯೇಲ್ಯರಿಂದ ಅಪಜಯಹೊಂದಿತೆಂದು ಗೊತ್ತಾದಾಗ ಅವರೆಲ್ಲರೂ ಕೂಡಿಬಂದರು. 16 ಹದದೆಜೆರನು ಯೂಫ್ರೇಟೀಸ್ ನದಿಯ ಆಚೆಯಲ್ಲಿದ್ದ ಅರಾಮ್ಯರನ್ನು ಕರೇಕಳುಹಿಸಿದನು; ಅವರು ಹೇಲಾವಿುಗೆ ಬಂದರು. ಹದದೆಜೆರನ ಸೇನಾಪತಿಯಾದ ಶೋಬಕನು ಅವರ ನಾಯಕನಾದನು. 17 ಈ ಸುದ್ದಿಯು ದಾವೀದನಿಗೆ ಮುಟ್ಟಿದಾಗ ಅವನು ಇಸ್ರಾಯೇಲ್ಯರೆಲ್ಲರನ್ನೂ ಕೂಡಿಸಿಕೊಂಡು ಯೊರ್ದನ್ಹೊಳೆದಾಟಿ ಹೇಲಾವಿುಗೆ ಬಂದನು. ಅರಾಮ್ಯರು ವ್ಯೂಹಕಟ್ಟಿ ದಾವೀದನೊಡನೆ ಯುದ್ಧಕ್ಕೆ ನಿಂತಾಗ 18 ಇಸ್ರಾಯೇಲ್ಯರ ಮುಂದೆ ಸೋತು ಓಡಿಹೋದರು; ದಾವೀದನು ಅರಾಮ್ಯರ ಏಳುನೂರು ರಥಗಳನ್ನು ಹಾಳುಮಾಡಿ ನಾಲ್ವತ್ತು ಸಾವಿರ ಮಂದಿ ರಾಹುತರನ್ನು ಹತಿಸಿಬಿಟ್ಟನು; ಸೇನಾಪತಿಯಾದ ಶೋಬಕನು ಗಾಯಹೊಂದಿ ಅಲ್ಲೇ ಸತ್ತನು. 19 ಹದದೆಜೆರನಿಗೆ ದಾಸರಾಗಿದ್ದ ಅರಸರೆಲ್ಲರೂ ಇಸ್ರಾಯೇಲ್ಯರ ಮುಂದೆ ತಮ್ಮ ಕೈಸಾಗದೆಂದು ತಿಳಿದು ಅವರೊಡನೆ ಒಪ್ಪಂದಮಾಡಿಕೊಂಡು ಅವರ ದಾಸರಾದರು. ಅಂದಿನಿಂದ ಅರಾಮ್ಯರು ಅಮ್ಮೋನಿಯರಿಗೆ ಸಹಾಯ ಮಾಡುವದಕ್ಕೆ ಧೈರ್ಯಗೊಳ್ಳಲಿಲ್ಲ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India