Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೂರ್ವಕಾಲ ವೃತ್ತಾಂತ 33 - ಕನ್ನಡ ಸತ್ಯವೇದವು J.V. (BSI)


ಅರಸನಾದ ಮನಸ್ಸೆಯು

1 ಮನಸ್ಸೆಯು ಅರಸನಾದಾಗ ಹನ್ನೆರಡು ವರುಷದವನಾಗಿದ್ದನು; ಅವನು ಯೆರೂಸಲೇವಿುನಲ್ಲಿ ಐವತ್ತೈದು ವರುಷ ಆಳಿದನು.

2 ಯೆಹೋವನು ಇಸ್ರಾಯೇಲ್ಯರ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳ ಅಸಹ್ಯಕಾರ್ಯಗಳನ್ನು ಅವನು ಅನುಸರಿಸಿ ಆತನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.

3 ತನ್ನ ತಂದೆಯಾದ ಹಿಜ್ಕೀಯನು ತೆಗೆದುಹಾಕಿದ ಪೂಜಾಸ್ಥಳಗಳನ್ನು ತಿರಿಗಿ ಸ್ಥಾಪಿಸಿ ಬಾಳ್‍ದೇವತೆಗಳಿಗೋಸ್ಕರ ಯಜ್ಞವೇದಿಗಳನ್ನು ಕಟ್ಟಿಸಿ ಅಶೇರವಿಗ್ರಹ ಸ್ತಂಭಗಳನ್ನು ನಿಲ್ಲಿಸಿ ನಕ್ಷತ್ರಮಂಡಲಕ್ಕೆ ಕೈಮುಗಿದು ಆರಾಧಿಸಿದನು.

4 ಯೆಹೋವನು ಯೆರೂಸಲೇವಿುನಲ್ಲಿ ತನ್ನ ಹೆಸರನ್ನು ಸದಾಕಾಲ ಸ್ಥಾಪಿಸುವದಕ್ಕಾಗಿ ಆರಿಸಿಕೊಂಡ

5 ಆಲಯದ ಎರಡು ಪ್ರಾಕಾರಗಳಲ್ಲಿಯೂ ಸರ್ವನಕ್ಷತ್ರಮಂಡಲಕ್ಕೋಸ್ಕರ ಯಜ್ಞವೇದಿಗಳನ್ನು ಕಟ್ಟಿಸಿದನು.

6 ಇದಲ್ಲದೆ ಅವನು ತನ್ನ ಮಕ್ಕಳನ್ನು ಬೆನ್‍ಹಿನ್ನೋಮ್ ತಗ್ಗಿನಲ್ಲಿ ಆಹುತಿಕೊಟ್ಟನು. ಕಣಿಹೇಳಿಸುವದು, ಶಕುನ ನೋಡಿಸುವದು, ಯಂತ್ರಮಂತ್ರಗಳನ್ನು ಮಾಡಿಸುವದು, ಸತ್ತವರಲ್ಲಿ ವಿಚಾರಿಸುವವರ ಮತ್ತು ಬೇತಾಳಿಕರ ಬಳಿಕೆಮಾಡುವದು ಇವೇ ಮೊದಲಾದ ದುಷ್ಕೃತ್ಯಗಳಿಂದ ಯೆಹೋವನಿಗೆ ಕೋಪವನ್ನೆಬ್ಬಿಸಿದನು.

7 ತಾನು ಮಾಡಿಸಿದ ವಿಗ್ರಹಸ್ತಂಭವನ್ನು ದೇವಾಲಯದಲ್ಲಿಡಿಸಿದನು; ಯೆಹೋವನು ಆ ಆಲಯದ ವಿಷಯದಲ್ಲಿ ದಾವೀದನಿಗೂ ಅವನ ಮಗನಾದ ಸೊಲೊಮೋನನಿಗೂ - ಇಸ್ರಾಯೇಲ್ಯರು ಮೋಶೆಯ ಮುಖಾಂತರ ತಮಗೆ ಕೊಡಲ್ಪಟ್ಟ ನನ್ನ ಎಲ್ಲಾ ಧರ್ಮಶಾಸ್ತ್ರವಿಧಿ ನ್ಯಾಯಗಳನ್ನು ಅನುಸರಿಸಿ ನಡೆಯುವದಾದರೆ ನನ್ನ ನಾಮಮಹತ್ತು ಈ ದೇವಾಲಯದಲ್ಲಿಯೂ ಇಸ್ರಾಯೇಲ್ಯರ ಎಲ್ಲಾ ಊರುಗಳೊಳಗೆ ನನಗೆ ಇಷ್ಟವಾಗಿರುವ ಯೆರೂಸಲೇವಿುನಲ್ಲಿಯೂ ಸದಾಕಾಲವಿರುವದು;

8 ಇಸ್ರಾಯೇಲ್ಯರು ಇನ್ನು ಮುಂದೆ ದೇಶಭ್ರಷ್ಟರಾಗಿರದೆ ತಮ್ಮ ಪಿತೃಗಳಿಗೆ ನೇವಿುಸಲ್ಪಟ್ಟ ದೇಶದಲ್ಲಿಯೇ ವಾಸವಾಗಿರುವಂತೆ ಮಾಡುವೆನು ಎಂದು ಹೇಳಿದ್ದನು.

9 ಆದರೆ ಯೆಹೂದ್ಯರೂ ಯೆರೂಸಲೇವಿುನವರೂ ಮನಸ್ಸೆಯಿಂದ ಪ್ರೇರಿತರಾಗಿ ಇಸ್ರಾಯೇಲ್ಯರ ಮುಂದೆಯೇ ಯೆಹೋವನಿಂದ ನಾಶಹೊಂದಿದ ಅನ್ಯಜನಾಂಗಗಳಿಗಿಂತಲೂ ದುಷ್ಟರಾದರು.

10 ಯೆಹೋವನು ಮನಸ್ಸೆಯನ್ನೂ ಅವನ ಪ್ರಜೆಗಳನ್ನೂ ಎಚ್ಚರಿಸಿದರೂ ಅವರು ಲಕ್ಷಿಸಲಿಲ್ಲ.

11 ಆದದರಿಂದ ಆತನು ಅಶ್ಶೂರದ ಅರಸನ ಸೈನ್ಯಾಧಿಪತಿಗಳನ್ನು ಅವರ ಮೇಲೆ ಬರಮಾಡಿದನು. ಅವರು ಮನಸ್ಸೆಯನ್ನು ಹಿಡಿದು ಅವನಿಗೆ ಕೊಂಡಿಗಳನ್ನು ಸಿಕ್ಕಿಸಿ ಬೇಡಿಹಾಕಿ ಬಾಬೆಲಿಗೆ ಒಯ್ದರು.

12 ಆದರೆ ಆ ಕಷ್ಟದಲ್ಲಿ ಮನಸ್ಸೆಯು ತನ್ನ ದೇವರಾದ ಯೆಹೋವನ ಪ್ರಸನ್ನತೆಯನ್ನು ಬೇಡಿಕೊಂಡನು. ಅವನು ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಆತನನ್ನು ಪ್ರಾರ್ಥಿಸಲು

13 ಆತನು ಲಾಲಿಸಿ ಅವನಿಗೆ ಸದುತ್ತರವನ್ನು ದಯಪಾಲಿಸಿ ಅವನನ್ನು ತಿರಿಗಿ ಯೆರೂಸಲೇವಿುಗೆ ಬರಮಾಡಿ ಅರಸುತನವನ್ನು ಕೊಟ್ಟನು. ಆಗ ಯೆಹೋವನೇ ದೇವರೆಂಬದು ಮನಸ್ಸೆಗೆ ಮಂದಟ್ಟಾಯಿತು.

14 ಇದಾದ ಮೇಲೆ ಅವನು ಗೀಹೋನ್ ಬುಗ್ಗೆಯ ಪಡುವಣ ಕಡೆಯಿಂದ ಮೀನು ಬಾಗಲಿನ ಮಾರ್ಗದವರೆಗಿರುವ ತಗ್ಗಿನಲ್ಲಿ ಓಫೆಲ್ ಗುಡ್ಡದ ಸುತ್ತಲೂ ದಾವೀದ ನಗರದ ಹೊರಗಣ ಬಲು ಎತ್ತರವಾದ ಗೋಡೆಯನ್ನು ಕಟ್ಟಿಸಿ ಯೆಹೂದದೇಶದ ಕೋಟೆ ಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳಲ್ಲಿ ಸೇನಾಪತಿಗಳನ್ನಿರಿಸಿದನು.

15 ಅನ್ಯದೇವತಾಪ್ರತಿಮೆಗಳನ್ನೂ ತಾನು ಮಾಡಿಸಿದ್ದ ಸ್ತಂಭವನ್ನೂ ಯೆಹೋವನ ಆಲಯದಿಂದ ತೆಗಿಸಿ ಯೆಹೋವಮಂದಿರವಿರುವ ಗುಡ್ಡದಲ್ಲಿಯೂ ಯೆರೂಸಲೇವಿುನಲ್ಲಿಯೂ ಕಟ್ಟಿಸಿದ್ದ ಎಲ್ಲಾ ಯಜ್ಞವೇದಿಗಳನ್ನು ಕೆಡವಿ ಪಟ್ಟಣದ ಹೊರಗೆ ಹಾಕಿಸಿದನು.

16 ಯೆಹೋವನ ಯಜ್ಞವೇದಿಯನ್ನು ತಿರಿಗಿ ಕಟ್ಟಿಸಿ ಅದರ ಮೇಲೆ ಸಮಾಧಾನಯಜ್ಞಗಳನ್ನೂ ಕೃತಜ್ಞತಾಯಜ್ಞಗಳನ್ನೂ ಅರ್ಪಿಸಿ ಇಸ್ರಾಯೇಲ್‍ದೇವರಾದ ಯೆಹೋವನನ್ನೇ ಸೇವಿಸಬೇಕೆಂದು ಯೆಹೂದ್ಯರಿಗೆ ಆಜ್ಞಾಪಿಸಿದನು.

17 ಅವರು ಈ ಪ್ರಕಾರ ದೇವರಾದ ಯೆಹೋವನೊಬ್ಬನಿಗೇ ಯಜ್ಞವನ್ನು ಅರ್ಪಿಸುವವರಾದರೂ ಆ ಯಜ್ಞಗಳನ್ನು ಇನ್ನೂ ಪೂಜಾಸ್ಥಳಗಳಲ್ಲಿಯೇ ಸಮರ್ಪಿಸುತ್ತಿದ್ದರು.

18 ಮನಸ್ಸೆಯ ಉಳಿದ ಚರಿತ್ರೆಯೂ ಅವನು ತನ್ನ ದೇವರಿಗೆ ಮಾಡಿದ ಪ್ರಾರ್ಥನೆಯೂ ದರ್ಶಿಗಳು ಇಸ್ರಾಯೇಲ್‍ದೇವರಾದ ಯೆಹೋವನ ಹೆಸರಿನಲ್ಲಿ ಅವನಿಗೆ ಹೇಳಿದ ಮಾತುಗಳೂ ಇಸ್ರಾಯೇಲ್‍ರಾಜರ ವೃತ್ತಾಂತದಲ್ಲಿ ಬರೆದಿರುತ್ತವೆ.

19 ಅವನ ದೇವಪ್ರಾರ್ಥನೆಯೂ ಅವನಿಗೆ ದೊರಕಿದ ಸದುತ್ತರವೂ ಅವನು ತನ್ನನ್ನು ತಗ್ಗಿಸಿಕೊಳ್ಳುವದಕ್ಕಿಂತ ಮುಂಚೆ ಮಾಡಿದ ಅಪರಾಧದ್ರೋಹಗಳೂ ಅವನು ಅಲ್ಲಲ್ಲಿ ಪೂಜಾಸ್ಥಳಗಳನ್ನು ಏರ್ಪಡಿಸಿ ಅಶೇರಸ್ತಂಭ ವಿಗ್ರಹ ಇವುಗಳನ್ನು ನಿಲ್ಲಿಸಿದ್ದೂ ದರ್ಶಿಗಳ ಚರಿತ್ರೆಯಲ್ಲಿ ಬರೆದಿರುತ್ತವೆ.

20 ಮನಸ್ಸೆಯು ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ಅರಮನೆಯ ನಿವೇಶನದಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಆಮೋನನು ಅರಸನಾದನು.


ಅರಸನಾದ ಆಮೋನನು

21 ಆಮೋನನು ಅರಸನಾದಾಗ ಇಪ್ಪತ್ತೆರಡು ವರುಷದವನಾಗಿದ್ದನು; ಅವನು ಯೆರೂಸಲೇವಿುನಲ್ಲಿ ಎರಡು ವರುಷ ಆಳಿದನು.

22 ಅವನು ತನ್ನ ತಂದೆಯಾದ ಮನಸ್ಸೆಯ ಹಾಗೆಯೇ ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದನು. ತನ್ನ ತಂದೆಯಾದ ಮನಸ್ಸೆಯು ಮಾಡಿಸಿದ್ದ ಎಲ್ಲಾ ವಿಗ್ರಹಗಳಿಗೆ ಯಜ್ಞವನ್ನರ್ಪಿಸಿ ಅವುಗಳನ್ನು ಪೂಜಿಸಿದನು.

23 ಆಮೋನನ ತಂದೆಯಾದ ಮನಸ್ಸೆಯು ಯೆಹೋವನ ಮುಂದೆ ತನ್ನನ್ನು ತಗ್ಗಿಸಿಕೊಂಡಿದ್ದನಷ್ಟೆ. ಆಮೋನನಾದರೋ ತನ್ನನ್ನು ತಗ್ಗಿಸಿಕೊಳ್ಳದೆ ಮಹಾಪರಾಧಿಯಾದನು.

24 ಅವನ ಸೇವಕರು ಅವನಿಗೆ ವಿರೋಧವಾಗಿ ಒಳಸಂಚುಮಾಡಿ ಅವನನ್ನು ಅರಮನೆಯಲ್ಲಿಯೇ ಕೊಂದರು.

25 ಆದರೆ ದೇಶದ ಜನರು ಅರಸನಾದ ಆಮೋನನಿಗೆ ವಿರೋಧವಾಗಿ ಒಳಸಂಚುಮಾಡಿದವರನ್ನೆಲ್ಲಾ ಕೊಂದುಹಾಕಿ ಆಮೋನನಿಗೆ ಬದಲಾಗಿ ಅವನ ಮಗನಾದ ಯೋಷೀಯನನ್ನು ಅರಸನನ್ನಾಗಿ ಮಾಡಿದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು