2 ಪೂರ್ವಕಾಲ ವೃತ್ತಾಂತ 31 - ಕನ್ನಡ ಸತ್ಯವೇದವು J.V. (BSI)ಹಿಜ್ಕೀಯನು ಯಾಜಕರ ಮತ್ತು ಲೇವಿಯರ ವಿಷಯ ಮಾಡಿದ ವ್ಯವಸ್ಥೆ 1 ಇದಾದನಂತರ ನೆರೆದುಬಂದ ಇಸ್ರಾಯೇಲ್ಯರೆಲ್ಲರೂ ಯೆಹೂದ ದೇಶದ ಪಟ್ಟಣಗಳಿಗೆ ಹೋಗಿ ಕಲ್ಲು ಕಂಬಗಳನ್ನು ಒಡೆದು ಅಶೇರವಿಗ್ರಹಸ್ತಂಭಗಳನ್ನು ಕಡಿದುಹಾಕಿ ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಹಾಳುಮಾಡಿಬಿಟ್ಟರು. ಯೆಹೂದ ಬೆನ್ಯಾಮೀನ್ ಪ್ರಾಂತಗಳಲ್ಲಲ್ಲದೆ ಎಫ್ರಾಯೀಮ್ ಮನಸ್ಸೆ ಪ್ರಾಂತಗಳಲ್ಲಿಯೂ ಯಾವದೊಂದನ್ನೂ ಉಳಿಸಲಿಲ್ಲ. ಆಮೇಲೆ ಇಸ್ರಾಯೇಲ್ಯರೆಲ್ಲರೂ ತಮ್ಮ ತಮ್ಮ ಸ್ವಾಸ್ತ್ಯವಿರುವ ಪಟ್ಟಣಗಳಿಗೆ ಹೋದರು. 2 ಹಿಜ್ಕೀಯನು ಯಾಜಕರ ಮತ್ತು ಲೇವಿಯರ ಆಯಾ ವರ್ಗಗಳವರನ್ನು ಅವರವರಿಗೆ ನೇಮಕವಾದ ಸೇವೆಗೆ ಅಂದರೆ ಸರ್ವಾಂಗಹೋಮ ಸಮಾಧಾನಯಜ್ಞ ಇವುಗಳನ್ನು ಸಮರ್ಪಿಸುವದಕ್ಕೂ ಯೆಹೋವನ ಪಾಳೆಯದ ದ್ವಾರಗಳಲ್ಲಿ ಸೇರಿ ಯೆಹೋವನನ್ನು ಆರಾಧಿಸುತ್ತಾ ಕೀರ್ತಿಸುತ್ತಾ ಕೃತಜ್ಞತಾಸ್ತುತಿ ಮಾಡುತ್ತಾ ಇರುವದಕ್ಕೂ ನೇವಿುಸಿದನು. 3 ಇದಲ್ಲದೆ ಅವನು ಯೆಹೋವನ ಧರ್ಮಶಾಸ್ತ್ರವಿಧಿಗನುಸಾರವಾಗಿ ಪ್ರಾತಃಕಾಲ ಸಾಯಂಕಾಲ ಸಬ್ಬತ್ದಿನ ಅಮಾವಾಸ್ಯೆ ಜಾತ್ರೆ ಇವುಗಳಲ್ಲಿ ಸಮರ್ಪಣೆಯಾಗತಕ್ಕ ಸರ್ವಾಂಗಹೋಮಗಳಿಗೋಸ್ಕರ ಆಗಬೇಕಾದದ್ದೆಲ್ಲಾ ತನ್ನ ಆಸ್ತಿಯಿಂದ ಸಲ್ಲಿಸಬೇಕೆಂತಲೂ 4 ಯಾಜಕರು ಮತ್ತು ಲೇವಿಯರು ಯೆಹೋವ ಧರ್ಮದಲ್ಲಿ ಆಸಕ್ತರಾಗಿರುವದಕ್ಕಾಗಿ ಅವರಿಗೆ ಸಲ್ಲತಕ್ಕ ಜೀವನಾಂಶವನ್ನು ಯೆರೂಸಲೇವಿುನಲ್ಲಿ ವಾಸಿಸುವ ಜನರು ಕೊಡಬೇಕೆಂತಲೂ ಗೊತ್ತುಮಾಡಿದನು. 5 ಈ ರಾಜಾಜ್ಞೆಯು ಪ್ರಕಟವಾದ ಕೂಡಲೆ ಇಸ್ರಾಯೇಲ್ಯರು ಧಾನ್ಯ ದ್ರಾಕ್ಷಾರಸ ಎಣ್ಣೆ ಜೇನು ಮುಂತಾದ ಎಲ್ಲಾ ಹುಟ್ಟುವಳಿಯಲ್ಲಿಯೂ ಪ್ರಥಮಫಲವನ್ನು ರಾಶಿರಾಶಿಯಾಗಿ ತಂದುಕೊಟ್ಟರು; ಮತ್ತು ತಮ್ಮ ಎಲ್ಲಾ ಆದಾಯದ ದಶಮಾಂಶವನ್ನೂ ಉದಾರವಾಗಿ ಸಲ್ಲಿಸಿದರು. 6 ಯೆಹೂದದ ಪಟ್ಟಣಗಳಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ಯರೂ ಯೆಹೂದ್ಯರೂ ಕುರಿದನಗಳಲ್ಲಿ ದಶಮಾಂಶವನ್ನು ಕೊಟ್ಟದ್ದಲ್ಲದೆ ದೇವರಾದ ಯೆಹೋವನಿಗೆ ಸಮರ್ಪಣೆಯಾಗತಕ್ಕ ಪರಿಶುದ್ಧದ್ರವ್ಯಗಳಲ್ಲಿಯೂ ದಶಮಾಂಶವನ್ನು ತಂದು ರಾಶಿಮಾಡಿದರು. 7 ರಾಶಿಮಾಡುವದು ಮೂರನೆಯ ತಿಂಗಳಲ್ಲಿ ಪ್ರಾರಂಭವಾಯಿತು, ಏಳನೆಯ ತಿಂಗಳಲ್ಲಿ ತೀರಿತು. 8 ಹಿಜ್ಕೀಯನೂ ಪ್ರಭುಗಳೂ ಬಂದು ಆ ರಾಶಿಗಳನ್ನು ನೋಡಿದಾಗ ಯೆಹೋವನನ್ನು ಕೊಂಡಾಡಿ ಆತನ ಪ್ರಜೆಗಳಾದ ಇಸ್ರಾಯೇಲ್ಯರನ್ನು ಹರಸಿದರು. 9 ಹಿಜ್ಕೀಯನು ಯಾಜಕರ ಮತ್ತು ಲೇವಿಯರ ಹತ್ತಿರ ಆ ರಾಶಿಗಳ ವಿಷಯದಲ್ಲಿ ವಿಚಾರಿಸಲು 10 ಚಾದೋಕ್ ಸಂತಾನದ ಮಹಾಯಾಜಕನಾದ ಅಜರ್ಯನು ಅವನಿಗೆ - ಜನರು ದೇವರಾದ ಯೆಹೋವನಿಗೋಸ್ಕರ ಪ್ರತ್ಯೇಕಿಸತಕ್ಕದ್ದನ್ನು ಆತನ ಆಲಯಕ್ಕೆ ತಂದಂದಿನಿಂದ ಯೆಹೋವನು ತನ್ನ ಪ್ರಜೆಗೆ ಸಮೃದ್ಧಿಯನ್ನನುಗ್ರಹಿಸಿದ್ದಾನೆ. ನಾವು ಉಂಡು ತೃಪ್ತರಾಗಿ ಇನ್ನೂ ಇಷ್ಟು ದೊಡ್ಡ ರಾಶಿಯನ್ನು ಉಳಿಸಿಕೊಂಡಿರುತ್ತೇವೆ ಅಂದನು. 11 ಆಗ ಹಿಜ್ಕೀಯನು ಯೆಹೋವನ ಆಲಯದಲ್ಲಿ ಕೊಠಡಿಗಳನ್ನು ಸಿದ್ಧಮಾಡಲಾಜ್ಞಾಪಿಸಿದನು. ಅವು ಸಿದ್ಧವಾದ ಮೇಲೆ 12 ಜನರು ಕಾಣಿಕೆಗಳನ್ನೂ ತಮ್ಮ ಆದಾಯದ ದಶಮಾಂಶವನ್ನೂ ದೇವರಿಗೋಸ್ಕರ ಪ್ರತ್ಯೇಕಿಸಿದ ಮುಡುಪನ್ನೂ ನಿರ್ವಂಚನೆಯಿಂದ ತಂದು ಅವುಗಳಲ್ಲಿ ಹಾಕುತ್ತಿದ್ದರು. ಈ ಎಲ್ಲಾ ಉಗ್ರಾಣಗಳ ಮೇಲ್ವಿಚಾರಣೆಯಲ್ಲಿ ಲೇವಿಯನಾದ ಕೋನನ್ಯನು ಮುಖ್ಯಸ್ಥನು; ಅವನ ತಮ್ಮನಾದ ಶಿಮ್ಮಿಯು ದ್ವಿತೀಯ ಸ್ಥಾನದವನು. 13 ಅರಸನಾದ ಹಿಜ್ಕೀಯನ ಮತ್ತು ಯೆಹೋವನ ಆಲಯದ ಅಧಿಪತಿಯಾದ ಅಜರ್ಯನ ನಿಯಮದಿಂದ ಯೆಹೀಯೇಲ್, ಅಜಜ್ಯ, ನಹತ್, ಅಸಾಹೇಲ್, ಯೆರೀಮೋತ್, ಯೋಜಾಬಾದ್, ಎಲೀಯೇಲ್, ಇಸ್ಮಕ್ಯ, ಮಹತ್, ಬೆನಾಯ ಇವರು ಕೋನನ್ಯನ ಮತ್ತು ಅವನ ತಮ್ಮನಾದ ಶಿಮ್ಮಿಯ ಕೈಕೆಳಗಿನ ಪಾರುಪತ್ಯಗಾರರು. 14 ಮೂಡಣದಿಕ್ಕಿನ ದ್ವಾರಪಾಲಕನಾಗಿದ್ದ ಇಮ್ನನ ಮಗನಾದ ಕೋರೆ ಎಂಬ ಲೇವಿಯನು ಜನರು ಸ್ವೇಚ್ಫೆಯಿಂದ ದೇವರಿಗೆ ಕಾಣಿಕೆಯಾಗಿ ಸಮರ್ಪಿಸುತ್ತಿದ್ದ ವಸ್ತುಗಳ ಮೇಲ್ವಿಚಾರಕನೂ ಯೆಹೋವನಿಗೋಸ್ಕರ ಪ್ರತ್ಯೇಕಿಸಲ್ಪಟ್ಟ ದ್ರವ್ಯ, ಮಹಾಪರಿಶುದ್ಧವಸ್ತು ಇವುಗಳನ್ನು ಹಂಚಿಕೊಡುವವನೂ ಆಗಿದ್ದನು. 15 ಇವನ ಕೈಕೆಳಗೆ ಏದೆನ್, ವಿುನ್ಯಾವಿುನ್, ಯೇಷೂವ, ಶೆಮಾಯ, ಅಮರ್ಯ, ಶೆಕನ್ಯ ಎಂಬವರಿದ್ದರು. ಇವರು ಯಾಜಕರ ಪಟ್ಟಣಗಳಲ್ಲಿದ್ದು ತಮ್ಮ ಬಂಧುಗಳಿಗೆ ದೊಡ್ಡವರು ಚಿಕ್ಕವರು ಎಂಬ ವ್ಯತ್ಯಾಸ ಮಾಡದೆ ವರ್ಗಗಳ ಪ್ರಕಾರ ಪಾಲುಕೊಡುತ್ತಿದ್ದರು. 16 (ಆಯಾ ಉದ್ಯೋಗವರ್ಗಗಳಿಗನುಸಾರವಾಗಿ ಅನುದಿನದ ಸೇವೆಗೋಸ್ಕರ ಯೆಹೋವನ ಆಲಯಕ್ಕೆ ಬರತಕ್ಕ ಗಂಡಸರಲ್ಲಿ ಮೂರು ವರುಷ ಮೊದಲುಗೊಂಡು ಹೆಚ್ಚು ವಯಸ್ಸುಳ್ಳವರ ಪಟ್ಟಿಯಲ್ಲಿ ಬರೆಯಲ್ಪಟ್ಟವರಿಗೆ ಮಾತ್ರ ಕೊಡುತ್ತಿರಲಿಲ್ಲ. 17 ಆ ಪಟ್ಟಿಯಲ್ಲಿ ಗೋತ್ರಗಳಿಗನುಸಾರವಾಗಿಯೂ ಆಯಾ ಉದ್ಯೋಗವರ್ಗಗಳಿಗನುಸಾರವಾಗಿಯೂ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚು ವಯಸ್ಸುಳ್ಳ ಯಾಜಕರು, 18 ಲೇವಿಯರು, ಅವರವರ ಹೆಂಡತಿಯರು, ಗಂಡು ಹೆಣ್ಣು ಮಕ್ಕಳು ಅಂತು ತಮ್ಮ ಉದ್ಯೋಗದ ನಿವಿುತ್ತ ತಮ್ಮನ್ನು ದೇವರಿಗೆ ಪ್ರತಿಷ್ಠಿಸಿಕೊಂಡ ಸಮೂಹದವರೂ ಅವರಿಗೆ ಸೇರಿದವರೆಲ್ಲರೂ ಲಿಖಿತರಾಗಿದ್ದರು.) 19 ಇದಲ್ಲದೆ ಆರೋನನ ಸಂತಾನದವರಾದ ಯಾಜಕರ ಆಯಾ ಪಟ್ಟಣಗಳಿಗೆ ಸೇರಿದ ಗೋಮಾಳಗಳಲ್ಲಿದ್ದವರಿಗೆ ಪಾಲುಕೊಡುತ್ತಿದ್ದರು. ಇವರು ಯಾಜಕ ಸಂತಾನದ ಎಲ್ಲಾ ಗಂಡಸರಿಗೂ ಪಟ್ಟಿಯಲ್ಲಿ ಲಿಖಿತರಾದ ಎಲ್ಲಾ ಲೇವಿಯರಿಗೂ ಸಿಕ್ಕತಕ್ಕ ಭಾಗಗಳನ್ನು ಹಂಚಿಕೊಡುವದಕ್ಕೆ ಹೆಸರು ಹೆಸರಾಗಿ ನೇವಿುಸಲ್ಪಟ್ಟ ಪುರುಷರಿದ್ದರು. 20 ಹಿಜ್ಕೀಯನು ಯೆಹೂದದಲ್ಲೆಲ್ಲಾ ಇದೇ ವ್ಯವಸ್ಥೆಯನ್ನು ಮಾಡಿದನು. ಅವನು ತನ್ನ ದೇವರಾದ ಯೆಹೋವನಿಗೆ ಒಳ್ಳೆಯವನೂ ನೀತಿವಂತನೂ ನಂಬಿಗಸ್ತನೂ ಆಗಿ ನಡೆದನು. 21 ಅವನು ತನ್ನ ದೇವರ ಒಲುಮೆಯನ್ನು ಪಡಕೊಳ್ಳುವದಕ್ಕೋಸ್ಕರ ದೇವಾಲಯದ ಸೇವಾಸಂಬಂಧದಲ್ಲಿಯೂ ಧರ್ಮಶಾಸ್ತ್ರವಿಧಿಗಳ ಸಂಬಂಧದಲ್ಲಿಯೂ ತಾನು ಪ್ರಾರಂಭಿಸಿದ ಎಲ್ಲಾ ಕಾರ್ಯಗಳನ್ನು ಯಥಾರ್ಥಚಿತ್ತದಿಂದ ಮಾಡಿ ಕೊನೆಗಾಣಿಸಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India