2 ಪೂರ್ವಕಾಲ ವೃತ್ತಾಂತ 29 - ಕನ್ನಡ ಸತ್ಯವೇದವು J.V. (BSI)ಅರಸನಾದ ಹಿಜ್ಕೀಯನು ಯೆಹೋವಾರಾಧನೆಗಾಗಿ ದೇವಾಲಯವನ್ನು ಪುನಃ ಪ್ರತಿಷ್ಠಿಸಿದ್ದು 1 ಹಿಜ್ಕೀಯನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರುಷದವನಾಗಿದ್ದನು; ಅವನು ಯೆರೂಸಲೇವಿುನಲ್ಲಿ ಇಪ್ಪತ್ತೊಂಭತ್ತು ವರುಷ ಆಳಿದನು. ಜೆಕರ್ಯನ ಮಗಳಾದ ಅಬೀಯ ಎಂಬಾಕೆಯು ಅವನ ತಾಯಿ. 2 ಅವನು ಎಲ್ಲಾ ವಿಷಯಗಳಲ್ಲಿಯೂ ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನ ಚಿತ್ತಾನುಸಾರವಾಗಿ ನಡೆದನು. 3 ಅವನು ತನ್ನ ಆಳಿಕೆಯ ಮೊದಲನೆಯ ವರುಷದ ಮೊದಲನೆಯ ತಿಂಗಳಲ್ಲಿ ಯೆಹೋವನ ಆಲಯದ ಬಾಗಲುಗಳನ್ನು ತೆರೆಯಿಸಿ ಅವುಗಳನ್ನು ಭದ್ರಪಡಿಸಿದನು. 4 ಆಮೇಲೆ ಯಾಜಕರನ್ನೂ ಲೇವಿಯರನ್ನೂ [ದೇವಾಲಯದ] ಮೂಡಣದಿಕ್ಕಿನ ಬೈಲಿನಲ್ಲಿ ಕೂಡಿಸಿ ಅವರಿಗೆ - 5 ಲೇವಿಯರೇ, ನನ್ನ ಮಾತನ್ನು ಕೇಳಿರಿ; ಈಗ ನಿಮ್ಮನ್ನು ಶುದ್ಧಪಡಿಸಿಕೊಂಡು ನಿಮ್ಮ ಪಿತೃಗಳ ದೇವರಾದ ಯೆಹೋವನ ಪವಿತ್ರಾಲಯದಲ್ಲಿರುವ ಹೊಲಸನ್ನೆಲ್ಲಾ ಹೊರಗೆ ಹಾಕಿ ಆಲಯವನ್ನು ಶುದ್ಧೀಕರಿಸಿರಿ. 6 ನಮ್ಮ ಪಿತೃಗಳು ನಮ್ಮ ದೇವರಾದ ಯೆಹೋವನಿಗೆ ದ್ರೋಹ ಮಾಡಿ ಆತನ ಚಿತ್ತಕ್ಕೆ ವಿರುದ್ಧವಾಗಿ ನಡೆದು ಆತನನ್ನು ಬಿಟ್ಟರು. ಅವರು ಆತನ ನಿವಾಸ ಸ್ಥಳಕ್ಕೆ ಬೆನ್ನುಕೊಟ್ಟು ವಿಮುಖರಾದರು. 7 ಅದರ ಮಂಟಪದ ಬಾಗಲುಗಳನ್ನು ಮುಚ್ಚಿ ದೀಪಗಳನ್ನು ನಂದಿಸಿ ಇಸ್ರಾಯೇಲ್ದೇವರ ಪವಿತ್ರಸ್ಥಾನದಲ್ಲಿ ಧೂಪಹಾಕುವದನ್ನೂ ಸರ್ವಾಂಗಹೋಮ ಸಮರ್ಪಿಸುವದನ್ನೂ ನಿಲ್ಲಿಸಿಬಿಟ್ಟರು. 8 ಆದದರಿಂದ ಯೆಹೋವನು ಯೆಹೂದದೇಶದ ಮೇಲೆಯೂ ಯೆರೂಸಲೇವಿುನ ಮೇಲೆಯೂ ಕೋಪವುಳ್ಳವನಾಗಿ ಅವುಗಳನ್ನು ಭಯವಿಸ್ಮಯ ಪರಿಹಾಸಗಳಿಗೆ ಆಸ್ಪದಮಾಡಿದ್ದಾನೆ; ಇದಕ್ಕೆ ನೀವೇ ಸಾಕ್ಷಿಗಳು. 9 ಅದೇ ಕಾರಣದಿಂದ ನಮ್ಮ ಹಿರಿಯರು ಕತ್ತಿಯಿಂದ ಹತರಾದರು; ನಮ್ಮ ಗಂಡು ಹೆಣ್ಣು ಮಕ್ಕಳೂ ಹೆಂಡತಿಯರೂ ಸೆರೆಯವರಾಗಿ ಹೋಗಬೇಕಾಯಿತು. 10 ಈಗ ನಮ್ಮ ಮೇಲಿರುವ ಆತನ ಕೋಪಾಗ್ನಿಯು ತೊಲಗಿಹೋಗುವಂತೆ ಇಸ್ರಾಯೇಲ್ದೇವರಾದ ಯೆಹೋವನೊಡನೆ ಒಡಂಬಡಿಕೆ ಮಾಡಿಕೊಳ್ಳುವದಕ್ಕೆ ಮನಸ್ಸುಳ್ಳವನಾಗಿದ್ದೇನೆ. 11 ಹೀಗಿರಲಾಗಿ ನನ್ನ ಮಕ್ಕಳೇ, ಉದಾಸೀನರಾಗಿರಬೇಡಿರಿ; ಯೆಹೋವನು ತನ್ನನ್ನು ಆರಾಧಿಸುವದಕ್ಕೂ ಧೂಪಹಾಕುವದಕ್ಕೂ ನಿಮ್ಮನ್ನು ತನ್ನ ಸಾನ್ನಿಧ್ಯಸೇವಕರನ್ನಾಗಿ ಆರಿಸಿಕೊಂಡನಲ್ಲಾ ಎಂದು ಹೇಳಿದನು. 12 ಕೂಡಲೆ ಕೆಹಾತ್ಯರಲ್ಲಿ ಅಮಾಸೈಯ ಮಗನಾದ ಮಹತ್, ಅಜರ್ಯನ ಮಗನಾದ ಯೋವೇಲ್, ಮೆರಾರೀಯರಲ್ಲಿ ಅಬ್ದೀಯ ಮಗನಾದ ಕೀಷ್, ಯೆಹಲ್ಲೆಲೇಲನ ಮಗನಾದ ಅಜರ್ಯ, ಗೆರ್ಷೋನ್ಯರಲ್ಲಿ ಜಿಮ್ಮನ ಮಗನಾದ ಯೋವಾಹ, ಯೋವಾಹನ ಮಗನಾದ ಏದೆನ್, 13 ಎಲೀಚಾಫಾನ್ಯರಲ್ಲಿ ಶಿಮ್ರೀ, ಯೆಗೀಯೇಲ್, ಆಸಾಫ್ಯರಲ್ಲಿ ಜೆಕರ್ಯ, ಮತ್ತನ್ಯ, 14 ಹೇಮಾನ್ಯರಲ್ಲಿ ಯೆಹೀಯೇಲ್, ಶಿಮ್ಮೀ, ಯೆದೂತೂನ್ಯರಲ್ಲಿ ಶೆಮಾಯ, ಉಜ್ಜೀಯೇಲ್ ಎಂಬ ಲೇವಿಯರು ಎದ್ದು ತಮ್ಮ ಸಹೋದರರನ್ನು ಕೂಡಿಸಿದರು. 15 ಅವರು ಅರಸನ ಆಜ್ಞಾಧಾರಕರಾಗಿ ಯೆಹೋವನ ಧರ್ಮಶಾಸ್ತ್ರ ವಿಧಿಯ ಮೇರೆಗೆ ತಮ್ಮನ್ನು ಶುದ್ಧಪಡಿಸಿಕೊಂಡು ಯೆಹೋವನ ಆಲಯವನ್ನು ಶುದ್ಧೀಕರಿಸುವದಕ್ಕೆ ಬಂದರು. 16 ಯಾಜಕರು ಯೆಹೋವನ ಆಲಯವನ್ನು ಶುದ್ಧಮಾಡುವದಕ್ಕೋಸ್ಕರ ಒಳಗೆ ಹೋಗಿ ಪವಿತ್ರಸ್ಥಾನದಲ್ಲಿದ್ದ ಹೊಲಸನ್ನೆಲ್ಲಾ ತಂದು ಪ್ರಾಕಾರದಲ್ಲಿ ಹಾಕಿದರು. ಲೇವಿಯರು ಅದನ್ನು ಕೂಡಿಸಿ ಹೊರಗೆ ಒಯ್ದು ಕಿದ್ರೋನ್ ಹಳ್ಳದಲ್ಲಿ ಹಾಕಿದರು. 17 ಅವರು ಮೊದಲನೆಯ ತಿಂಗಳಿನ ಮೊದನೆಯ ದಿನದಲ್ಲಿ ಶುದ್ಧೀಕರಣವನ್ನು ಪ್ರಾರಂಭಿಸಿದರು. ಎಂಟನೆಯ ದಿನದಲ್ಲಿ ಯೆಹೋವನ ಆಲಯದ ಮಂಟಪಕ್ಕೆ ಕೈಹಾಕಿದರು. ಯೆಹೋವನ ಆಲಯವನ್ನು ಶುದ್ಧಪಡಿಸುವದರಲ್ಲಿ ಎಂಟು ದಿನಗಳು ಕಳೆದುಹೋದವು. ಮೊದಲನೆಯ ತಿಂಗಳಿನ ಹದಿನಾರನೆಯ ದಿನದಲ್ಲಿ ಕೆಲಸವೆಲ್ಲಾ ತೀರಿತು. 18 ಆಮೇಲೆ ಅವರು ಅರಮನೆಯೊಳಕ್ಕೆ ಹೋಗಿ ಅರಸನಾದ ಹಿಜ್ಕೀಯನಿಗೆ - ನಾವು ಯೆಹೋವನ ಸಮಸ್ತಾಲಯವನ್ನೂ ಯಜ್ಞವೇದಿಯನ್ನೂ ಅದರ ಉಪಕರಣಗಳನ್ನೂ ನೈವೇದ್ಯವಾದ ರೊಟ್ಟಿಗಳನ್ನಿಡತಕ್ಕ ಮೇಜನ್ನೂ ಅದರ ಸಾಮಾನುಗಳನ್ನೂ ಶುದ್ಧಮಾಡಿದೆವು. 19 ಅರಸನಾದ ಆಹಾಜನು ತನ್ನ ಆಳಿಕೆಯಲ್ಲಿ ದೇವದ್ರೋಹಿಯಾಗಿ ತಳ್ಳಿಬಿಟ್ಟ ಪಾತ್ರೆಗಳನ್ನು ತಿರಿಗಿ ತಂದಿಟ್ಟು ಪ್ರತಿಷ್ಠಿಸಿದ್ದೇವೆ; ಅವು ಈಗ ಯೆಹೋವನ ಯಜ್ಞವೇದಿಯ ಮುಂದಿರುತ್ತವೆ ಅಂದರು. 20 ಅರಸನಾದ ಹಿಜ್ಕೀಯನು [ಮರುದಿನ] ಬೆಳಗಿನ ಜಾವದಲ್ಲೆದ್ದು ಪಟ್ಟಣದ ಮುಖಂಡರನ್ನು ಕೂಡಿಸಿ ಅವರೊಡನೆ ಯೆಹೋವನ ಆಲಯಕ್ಕೆ ಹೋದನು. 21 ಅವರು ಸರಕಾರ ದೇವಾಲಯ ಯೆಹೂದಪ್ರಜೆ ಇವುಗಳಿಗೋಸ್ಕರ ದೋಷಪರಿಹಾರಕಯಜ್ಞಮಾಡುವದಕ್ಕಾಗಿ ಹೋರಿ ಟಗರು ಕುರಿಮರಿ ಹೋತ ಇವುಗಳಲ್ಲಿ ಏಳೇಳನ್ನು ತಂದರು. ಅರಸನು ಯಾಜಕರಾದ ಆರೋನನ ಸಂತಾನದವರಿಗೆ ಯೆಹೋವನ ಯಜ್ಞವೇದಿಯ ಮೇಲೆ ಸರ್ವಾಂಗಹೋಮಮಾಡಬೇಕೆಂದು ಆಜ್ಞಾಪಿಸಿದನು. 22 ಹೋರಿಗಳನ್ನು ವಧಿಸಿದ ಮೇಲೆ ಯಾಜಕರು ರಕ್ತವನ್ನು ಕೂಡಿಸಿ ಯಜ್ಞವೇದಿಗೆ ಎರಚಿದರು. ಅನಂತರ ಟಗರುಗಳನ್ನು ವಧಿಸಿ ಅವುಗಳ ರಕ್ತವನ್ನು ಯಜ್ಞವೇದಿಗೆ ಎರಚಿದರು. ಆಮೇಲೆ ಕುರಿಮರಿಗಳನ್ನು ವಧಿಸಿ ಅವುಗಳ ರಕ್ತವನ್ನೂ ಯಜ್ಞವೇದಿಗೆ ಎರಚಿದರು. 23 ಕಡೆಯಲ್ಲಿ ದೋಷಪರಿಹಾರಕಯಜ್ಞಕ್ಕಾಗಿ ತಂದ ಹೋತಗಳನ್ನು ಅರಸನ ಮುಂದೆಯೂ ಸಮೂಹದವರ ಮುಂದೆಯೂ ನಿಲ್ಲಿಸಿದರು. ಅವರು ಅವುಗಳ ಮೇಲೆ ತಮ್ಮ ಕೈಗಳನ್ನಿಟ್ಟನಂತರ 24 ಯಾಜಕರು ಅವುಗಳನ್ನು ವಧಿಸಿ ಅವುಗಳ ರಕ್ತವನ್ನು ಸಮಸ್ತ ಇಸ್ರಾಯೇಲ್ಯರ ದೋಷಪರಿಹಾರಕ್ಕಾಗಿ ಯಜ್ಞವೇದಿಯ ಮೇಲೆ ಸುರಿದರು. ಆ ಸರ್ವಾಂಗಹೋಮಗಳೂ ದೋಷಪರಿಹಾರಕ ಯಜ್ಞಗಳೂ ಎಲ್ಲಾ ಇಸ್ರಾಯೇಲ್ಯರಿಗೋಸ್ಕರ ಆಗಬೇಕೆಂದು ಅರಸನು ಆಜ್ಞಾಪಿಸಿದ್ದನು. 25 ಇದಲ್ಲದೆ ಅವನು ತಾಳ ಸ್ವರಮಂಡಲ ಕಿನ್ನರಿ ಇವುಗಳಿಂದ ಭಜಿಸುವದಕ್ಕೋಸ್ಕರ ಲೇವಿಯರನ್ನು ದಾವೀದ, ರಾಜದರ್ಶಿಯಾದ ಗಾದ್, ಪ್ರವಾದಿಯಾದ ನಾತಾನ್ ಇವರ ಆಜ್ಞಾನುಸಾರವಾಗಿ ಯೆಹೋವನ ಆಲಯದಲ್ಲಿ ಇರಿಸಿದನು. ಯೆಹೋವನು ತಾನೇ ಪ್ರವಾದಿಗಳ ಮುಖಾಂತರ ಹೀಗೆ ಆಜ್ಞಾಪಿಸಿದ್ದನು. 26 ಆ ಲೇವಿಯರು ದಾವೀದನ ವಾದ್ಯಗಳನ್ನೂ ಯಾಜಕರು ತುತೂರಿಗಳನ್ನೂ ಹಿಡಿದು ನಿಂತಿರಲು ಹಿಜ್ಕೀಯನು ಯಜ್ಞವೇದಿಯ ಮೇಲೆ ಸರ್ವಾಂಗಹೋಮವನ್ನು ಸಮರ್ಪಿಸುವದಕ್ಕೆ ಆಜ್ಞಾಪಿಸಿದನು. 27 ಸರ್ವಾಂಗಹೋಮಸಮರ್ಪಣೆಯು ಪ್ರಾರಂಭಿಸಿದೊಡನೆ ಇಸ್ರಾಯೇಲ್ರಾಜನಾದ ದಾವೀದನ ವಾದ್ಯಗಳಿಂದ ಯೆಹೋವನನ್ನು ಭಜಿಸುವದೂ ತುತೂರಿಯೂದುವದೂ ಆರಂಭವಾಯಿತು. 28 ಸರ್ವಾಂಗಹೋಮ ಸಮರ್ಪಣೆಯು ತೀರುವವರೆಗೆ ಸರ್ವಸಮೂಹದವರು ಸಾಷ್ಟಾಂಗನಮಸ್ಕಾರ ಮಾಡುತ್ತಲೂ ಗಾಯಕರು ಗಾನಮಾಡುತ್ತಲೂ ತುತೂರಿಯೂದುವವರು ತುತೂರಿಯೂದುತ್ತಲೂ ಇದ್ದರು. 29 ಸರ್ವಾಂಗಹೋಮಸಮರ್ಪಣೆಯು ತೀರಿದ ಮೇಲೆ ಅರಸನೂ ಅವನ ಜೊತೆಯಲ್ಲಿದ್ದವರೆಲ್ಲರೂ ಸಾಷ್ಟಾಂಗನಮಸ್ಕಾರಮಾಡಿದರು. 30 ಅರಸನಾದ ಹಿಜ್ಕೀಯನೂ ಪ್ರಭುಗಳೂ ದಾವೀದನ ಮತ್ತು ದರ್ಶಿಯಾದ ಆಸಾಫನ ಕೀರ್ತನೆಗಳಿಂದ ಯೆಹೋವನನ್ನು ಸ್ತುತಿಸಬೇಕೆಂದು ಲೇವಿಯರಿಗೆ ಆಜ್ಞಾಪಿಸಲು ಅವರು ಉತ್ಸಾಹದಿಂದ ಸ್ತುತಿಸುತ್ತಾ ಬೊಗ್ಗಿಕೊಂಡು ನಮಸ್ಕರಿಸಿದರು. 31 ಆಮೇಲೆ ಹಿಜ್ಕೀಯನು ಸಮೂಹದವರಿಗೆ - ನೀವು ಈಗ ಯೆಹೋವನಿಗೋಸ್ಕರ ನಿಮ್ಮನ್ನು ಪ್ರತಿಷ್ಠಿಸಿಕೊಂಡಿರಲ್ಲಾ; ಹತ್ತಿರ ಬಂದು ಯೆಹೋವನ ಆಲಯಕ್ಕೋಸ್ಕರ ಸಮಾಧಾನಯಜ್ಞಗಳನ್ನೂ ಕೃತಜ್ಞತಾ ಯಜ್ಞಗಳನ್ನೂ ಸಮರ್ಪಿಸಿರಿ ಅನ್ನಲು ಸಮೂಹದವರು ಸಮಾಧಾನಯಜ್ಞಗಳನ್ನೂ ಕೃತಜ್ಞತಾಯಜ್ಞಗಳನ್ನೂ ಸಮರ್ಪಿಸಿದ್ದಲ್ಲದೆ ಅನೇಕರು ಸ್ವೇಚ್ಫೆಯಿಂದ ಸರ್ವಾಂಗಹೋಮಗಳನ್ನೂ ಸಮರ್ಪಿಸಿದರು. 32 ಸಮೂಹದವರು ಸರ್ವಾಂಗಹೋಮಕ್ಕೋಸ್ಕರ ತಂದೊಪ್ಪಿಸಿದ ಹೋರಿಗಳು ಎಪ್ಪತ್ತು, ಟಗರುಗಳು ನೂರು, ಕುರಿಮರಿಗಳು ಇನ್ನೂರು. ಇವೆಲ್ಲಾ ಯೆಹೋವನಿಗೆ ಸರ್ವಾಂಗಹೋಮಸಮರ್ಪಣೆಗಾಗಿಯೇ. 33 ದೇವರಿಗೆ ಕಾಣಿಕೆಯಾಗಿ ತರಲ್ಪಟ್ಟ ಹೋರಿಗಳು ಆರು ನೂರು, ಕುರಿಗಳು ಮೂರು ಸಾವಿರ. 34 ಚರ್ಮವನ್ನು ಸುಲಿಯುವದು [ಶುದ್ಧಿಪಡಿಸಿಕೊಂಡ] ಕೆಲವು ಮಂದಿ ಯಾಜಕರಿಂದ ಆಗದೆ ಹೋಯಿತು. ಆದದರಿಂದ ವಿುಕ್ಕ ಯಾಜಕರು ತಮ್ಮನ್ನು ಶುದ್ಧಿಪಡಿಸಿಕೊಳ್ಳುವವರೆಗೂ ಆ ಕೆಲಸ ತೀರುವ ತನಕ ಅವರ ಬಂಧುಗಳಾದ ಲೇವಿಯರು ಅವರಿಗೆ ಸಹಾಯಮಾಡುತ್ತಿದ್ದರು. 35 ತಮ್ಮನ್ನು ಶುದ್ಧಪಡಿಸಿಕೊಳ್ಳುವದರಲ್ಲಿ ಯಾಜಕರಿಗಿಂತ ಲೇವಿಯರೇ ಹೆಚ್ಚು ಶ್ರದ್ಧೆಯುಳ್ಳವರಾಗಿದ್ದರು. ಇದಲ್ಲದೆ ಯಾಜಕರು ಸಮರ್ಪಿಸಬೇಕಾಗಿದ್ದ ಸರ್ವಾಂಗಹೋಮ, ಸಮಾಧಾನಯಜ್ಞಗಳ ಕೊಬ್ಬು, ಸರ್ವಾಂಗಹೋಮ ಸಂಬಂಧವಾದ ಪಾನದ್ರವ್ಯ ಇವು ಅಪಾರವಾಗಿದ್ದವು. 36 ಹೀಗೆ ಯೆಹೋವನ ಆಲಯದ ಸೇವಾಕ್ರಮವು ಪುನಃಸ್ಥಾಪಿತವಾಯಿತು. ಯಾರೂ ನೆನಸದೆ ಇರುವಲ್ಲಿ ದೇವರು ತಾನೇ ತನ್ನ ಪ್ರಜೆಗಳಿಗೋಸ್ಕರ ಈ ಕಾರ್ಯವನ್ನು ನೆರವೇರಿಸಿದ್ದರಿಂದ ಹಿಜ್ಕೀಯನೂ ಎಲ್ಲಾ ಜನರೂ ಸಂತೋಷಿಸಿದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India