2 ಪೂರ್ವಕಾಲ ವೃತ್ತಾಂತ 16 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲ್ರಾಜನಾದ ಬಾಷನಿಂದುಂಟಾದ ಕಾಟವೂ ಆಸನ ಅಂತ್ಯವೂ 1 ಆಸನ ಆಳಿಕೆಯ ಮೂವತ್ತಾರನೆಯ ವರುಷದಲ್ಲಿ ಇಸ್ರಾಯೇಲ್ರಾಜನಾದ ಬಾಷನು ಯೆಹೂದ್ಯರಿಗೆ ವಿರೋಧವಾಗಿ ಬಂದು ಯಾರೂ ಯೆಹೂದ್ಯರ ಅರಸನಾದ ಆಸನ ಬಳಿಗೆ ಹೋಗಿ ಬರುವದಕ್ಕಾಗದಂತೆ ರಾಮಕೋಟೆಯನ್ನು ಕಟ್ಟಿಸಿದನು. 2 ಆಗ ಆಸನು ಯೆಹೋವನ ಆಲಯದ ಮತ್ತು ಅರಮನೆಯ ಭಂಡಾರಗಳಿಂದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ದಮಸ್ಕದಲ್ಲಿದ್ದ ಅರಾಮ್ಯರ ಅರಸನಾದ ಬೆನ್ಹದದನಿಗೆ ಕಳುಹಿಸಿ ಅವನಿಗೆ - 3 ನನಗೂ ನಿನಗೂ ನನ್ನ ತಂದೆಗೂ ನಿನ್ನ ತಂದೆಗೂ ಒಡಂಬಡಿಕೆಯಿರುತ್ತದಲ್ಲಾ; ಇಗೋ, ನಿನಗೆ ಬೆಳ್ಳಿಬಂಗಾರವನ್ನು ಕಳುಹಿಸಿದ್ದೇನೆ; ಇಸ್ರಾಯೇಲ್ಯರ ಅರಸನಾದ ಬಾಷನು ನನ್ನನ್ನು ಬಿಟ್ಟುಹೋಗುವಂತೆ ಅವನ ಸಂಗಡ ನೀನು ಮಾಡಿಕೊಂಡಿರುವ ಒಡಂಬಡಿಕೆಯನ್ನು ಮುರಿದುಬಿಡು ಎಂದು ಹೇಳಿಕಳುಹಿಸಿದನು. 4 ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ ತನ್ನ ಸೈನ್ಯಾಧಿಪತಿಗಳನ್ನು ಇಸ್ರಾಯೇಲ್ಯರ ಪಟ್ಟಣಗಳಿಗೆ ವಿರೋಧವಾಗಿ ಕಳುಹಿಸಿದನು; ಅವರು ಇಯ್ಯೋನ್, ದಾನ್, ಆಬೇಲ್ಮಯಿಮ್ ಇವುಗಳನ್ನೂ ನಫ್ತಾಲ್ಯರ ಪಟ್ಟಣಗಳ ಎಲ್ಲಾ ಉಗ್ರಾಣಗಳನ್ನೂ ಹಾಳು ಮಾಡಿದರು. 5 ಬಾಷನು ಈ ಸುದ್ದಿಯನ್ನು ಕೇಳಿದಾಗ ರಾಮಕೋಟೆ ಕಟ್ಟಿಸುವ ಕೆಲಸವನ್ನು ನಿಲ್ಲಿಸಿಬಿಟ್ಟನು. 6 ಅನಂತರ ಅರಸನಾದ ಆಸನು ಎಲ್ಲಾ ಯೆಹೂದ್ಯರನ್ನು ಕರಿಸಿ ಬಾಷನು ರಾಮಕೋಟೆಗಾಗಿ ತರಿಸಿದ್ದ ಕಲ್ಲುಮರಗಳನ್ನು ಇವರ ಮುಖಾಂತರವಾಗಿ ತೆಗೆದುಕೊಂಡುಹೋಗಿ ಗೆಬ, ವಿುಚ್ಪ ಎಂಬ ಪಟ್ಟಣಗಳನ್ನು ಭದ್ರಪಡಿಸಿದನು. 7 ಆ ಕಾಲದಲ್ಲಿ ದರ್ಶಿಯಾದ ಹನಾನಿಯು ಯೆಹೂದ್ಯರ ಅರಸನಾದ ಆಸನ ಬಳಿಗೆ ಬಂದು ಅವನಿಗೆ - ನೀನು ನಿನ್ನ ದೇವರಾದ ಯೆಹೋವನ ಮೇಲೆ ಆತುಕೊಳ್ಳದೆ ಅರಾಮ್ಯರ ಅರಸನ ಮೇಲೆ ಆತುಕೊಂಡದರಿಂದ ಅರಾಮ್ರಾಜನ ಸೈನ್ಯವು ನಿನ್ನ ಕೈಗೆ ಬೀಳದಂತೆ ತಪ್ಪಿಸಿಕೊಂಡಿತು. 8 ಕೂಷ್ಯಲೂಬ್ಯರ ಸೈನ್ಯವು ಅಪರಿವಿುತ ರಥಾಶ್ವಬಲಗಳುಳ್ಳ ಮಹಾಸೈನ್ಯವಲ್ಲವೋ! ನೀನು ಯೆಹೋವನ ಮೇಲೆ ಆತುಕೊಂಡದರಿಂದ ಆತನು ಅದನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟನು. 9 ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ. ನೀನು ಈ ಕಾರ್ಯದಲ್ಲಿ ಬುದ್ಧಿಹೀನನಾಗಿ ನಡೆದುಕೊಂಡಿದ್ದೀ; ಇಂದಿನಿಂದ ನಿನಗೆ ಯುದ್ಧಗಳು ಇದ್ದೇ ಇರುವವು ಎಂದು ಹೇಳಿದನು. 10 ಆಸನು ಈ ಮಾತುಗಳ ದೆಸೆಯಿಂದ ಬೇಸರಗೊಂಡು ದರ್ಶಿಯ ಮೇಲೆ ಕೋಪಗೊಂಡು ಅವನನ್ನು ಸೆರೆಮನೆಯಲ್ಲಿಡಿಸಿ ಕೋಳಹಾಕಿಸಿದನು. ಇದಲ್ಲದೆ ಜನರಲ್ಲಿ ಕೆಲವರನ್ನು ಪೀಡಿಸಿದನು. 11 ಆಸನ ಪೂರ್ವೋತ್ತರಚರಿತ್ರೆಯು ಯೆಹೂದ ಮತ್ತು ಇಸ್ರಾಯೇಲ್ ರಾಜರ ಗ್ರಂಥದಲ್ಲಿ ಬರೆದಿರುತ್ತದೆ. 12 ಅವನ ಆಳಿಕೆಯ ಮೂವತ್ತೊಂಭತ್ತನೆಯ ವರುಷದಲ್ಲಿ ಅವನ ಕಾಲುಗಳಿಗೆ ಬಹುಕಠಿಣವಾದ ರೋಗವುಂಟಾಯಿತು. ಈ ರೋಗದಲ್ಲಿಯೂ ಅವನು ಯೆಹೋವನ ಸಹಾಯವನ್ನು ಕೋರದೆ ವೈದ್ಯರ ಸಹಾಯವನ್ನೇ ಕೋರಿದನು. 13 ಅವನು ತನ್ನ ಆಳಿಕೆಯ ನಾಲ್ವತ್ತೊಂದನೆಯ ವರುಷದಲ್ಲಿ ತೀರಿಕೊಂಡು 14 ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ಬುಕ್ಕಿಟ್ಟುಗಾರರ ಕಸಬಿನ ಮೇರೆಗೆ ವಿುಶ್ರಮಾಡಲ್ಪಟ್ಟ ತರತರದ ಸುಗಂಧದ್ರವ್ಯಗಳಿಂದ ತುಂಬಿರುವ ಹಾಸಿಗೆಯ ಮೇಲಿಟ್ಟು ಅವನು ತನಗೋಸ್ಕರ ದಾವೀದನಗರದಲ್ಲಿ ತೋಡಿಸಿದ್ದ ಸಮಾಧಿಯಲ್ಲಿ ಅದನ್ನು ಇಟ್ಟರು. ಅವನಿಗೋಸ್ಕರ ಬಹುಧೂಪವನ್ನು ಸುಟ್ಟರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India