2 ಪೂರ್ವಕಾಲ ವೃತ್ತಾಂತ 13 - ಕನ್ನಡ ಸತ್ಯವೇದವು J.V. (BSI)ಅರಸನಾದ ಅಬೀಯನು 1 ಅರಸನಾದ ಯಾರೊಬ್ಬಾಮನ ಆಳಿಕೆಯ ಹದಿನೆಂಟನೆಯ ವರುಷದಲ್ಲಿ ಅಬೀಯನು ಯೆಹೂದದ ಅರಸನಾಗಿ 2 ಯೆರೂಸಲೇವಿುನಲ್ಲಿ ಮೂರು ವರುಷ ಆಳಿದನು; ಗಿಬೆಯದ ಊರೀಯೇಲನ ಮಗಳಾದ ಮೀಕಾಯ ಎಂಬಾಕೆಯು ಇವನ ತಾಯಿ. ಇವನಿಗೂ ಯಾರೊಬ್ಬಾಮನಿಗೂ ಯುದ್ಧನಡೆಯಿತು. 3 ಅಬೀಯನು ನಾಲ್ಕು ಲಕ್ಷ ಮಂದಿ ರಣವೀರರನ್ನು ಆರಿಸಿಕೊಂಡು ಬಂದು ಯುದ್ಧ ಪ್ರಾರಂಭಿಸಿದನು; ಯಾರೊಬ್ಬಾಮನೂ ಎಂಟು ಲಕ್ಷ ಶ್ರೇಷ್ಠರಾದ ಭಟರೊಡನೆ ಅವನಿಗೆ ವಿರೋಧವಾಗಿ ಬಂದು ವ್ಯೂಹಕಟ್ಟಿದನು. 4 ಆಗ ಅಬೀಯನು ಎಫ್ರಾಯೀಮ್ ಪರ್ವತಪ್ರದೇಶದಲ್ಲಿರುವ ಚೆಮಾರೈಮೆಂಬ ಬೆಟ್ಟದಲ್ಲಿ ನಿಂತು - ಯಾರೊಬ್ಬಾಮನೇ, ಎಲ್ಲಾ ಇಸ್ರಾಯೇಲ್ಯರೇ, ನನ್ನ ಮಾತನ್ನು ಕೇಳಿರಿ. 5 ಯೆಹೋವನು ಉಪ್ಪಿನ ಒಡಂಬಡಿಕೆಯಿಂದ ದಾವೀದನಿಗೂ ಅವನ ಸಂತಾನದವರಿಗೂ ಇಸ್ರಾಯೇಲ್ಯರ ಮೇಲೆ ಶಾಶ್ವತವಾದ ಅರಸುತನವನ್ನು ಕೊಟ್ಟಿದ್ದಾನೆಂದು ನಿಮಗೆ ಗೊತ್ತಿಲ್ಲವೋ? 6 ಹೀಗಿದ್ದರೂ ದಾವೀದನ ಮಗನಾದ ಸೊಲೊಮೋನನ ಸೇವೆಯಲ್ಲಿದ್ದ ನೆಬಾಟನ ಮಗನಾದ ಯಾರೊಬ್ಬಾಮನು ಎದ್ದು ತನ್ನ ದಣಿಗೆ ವಿರೋಧವಾಗಿ ತಿರುಗಿ ಬೀಳುವಲ್ಲಿ 7 ಕಾಕಪೋಕರೂ ದುಷ್ಟರೂ ಆಗಿರುವ ಜನರು ಅವನನ್ನು ಕೂಡಿಕೊಂಡು ಆ ಸಮಯದಲ್ಲಿ ಎಳೇ ಪ್ರಾಯದವನೂ ಮೃದುಸ್ವಭಾವವುಳ್ಳವನೂ ತಮ್ಮೆದುರಿನಲ್ಲಿ ನಿಲ್ಲಲಾರದವನೂ ಆದ ಸೊಲೊಮೋನನ ಮಗ ರೆಹಬ್ಬಾಮನಿಗೆ ಮಾರ್ಮಲೆತು ಬಲಗೊಂಡರು. 8 ಈಗ ನೀವು ದೊಡ್ಡ ಗುಂಪಾಗಿರುವದರಿಂದಲೂ ಯಾರೊಬ್ಬಾಮನು ನಿಮಗೆ ದೇವರುಗಳೆಂದು ಮಾಡಿಕೊಟ್ಟ ಬಂಗಾರದ ಬಸವ ಮೂರ್ತಿಗಳು ನಿಮ್ಮಲ್ಲಿರುವದರಿಂದಲೂ ದಾವೀದನ ಸಂತಾನದವರ ಕೈಯಲ್ಲಿರುವ ಯೆಹೋವನ ರಾಜ್ಯಕ್ಕೆ ವಿರೋಧವಾಗಿ ನಿಂತು ಗೆಲ್ಲಬಹುದೆಂದು ನೆನಸುತ್ತೀರೋ? 9 ನೀವು ಯೆಹೋವನ ಯಾಜಕರಾದ ಆರೋನನ ಸಂತಾನದವರನ್ನೂ ಲೇವಿಯರನ್ನೂ ಓಡಿಸಿಬಿಟ್ಟು ಅನ್ಯದೇಶಗಳವರಂತೆ ನಿಮಗೋಸ್ಕರ ಪೂಜಾರಿಗಳನ್ನು ಮಾಡಿಕೊಂಡಿರಲ್ಲಾ; ತಾನು ಪೂಜಾರಿಯಾಗಿ ಪ್ರತಿಷ್ಠಿತನಾಗಬೇಕೆಂದು ಒಂದು ಎಳೇ ಹೋರಿಯನ್ನೂ ಏಳು ಟಗರುಗಳನ್ನೂ ತೆಗೆದುಕೊಂಡು ಬಂದ ಪ್ರತಿಯೊಬ್ಬನೂ ದೇವರಲ್ಲದವುಗಳಿಗೆ ಪೂಜಾರಿಯಾದನಷ್ಟೆ. 10 ನಮಗಾದರೋ ಯೆಹೋವನು ದೇವರಾಗಿರುತ್ತಾನೆ; ನಾವು ಆತನನ್ನು ಬಿಡಲಿಲ್ಲ. ಯೆಹೋವನ ಆರಾಧನೆ ನಡಿಸುವ ಆರೋನನ ಸಂತಾನದವರಾದ ಯಾಜಕರೂ ತಮಗೆ ನೇಮಕವಾದ ಕೆಲಸದಲ್ಲಿ ನಿರತರಾದ ಲೇವಿಯರೂ ನಮಗಿರುತ್ತಾರೆ. 11 ಆ ಯಾಜಕರು ಪ್ರತಿದಿನ ಪ್ರಾತಃಸ್ಸಾಯಂಕಾಲಗಳಲ್ಲಿ ಯೆಹೋವನಿಗೋಸ್ಕರ ಸರ್ವಾಂಗಹೋಮಗಳನ್ನು ಸಮರ್ಪಿಸುತ್ತಾ ಸುಗಂಧ ದ್ರವ್ಯಧೂಪವನ್ನು ಹಾಕುತ್ತಾ ಚೊಕ್ಕ [ಬಂಗಾರದ] ಮೇಜಿನ ಮೇಲೆ ನೈವೇದ್ಯವಾದ ರೊಟ್ಟಿಗಳನ್ನಿಡುತ್ತಾ ಪ್ರತಿ ಸಾಯಂಕಾಲದಲ್ಲಿ ಬಂಗಾರದ ದೀಪಸ್ತಂಭದ ದೀಪಗಳನ್ನು ಹಚ್ಚುತ್ತಾ ಇರುತ್ತಾರೆ. ಹೀಗೆ ನಾವು ನಮ್ಮ ದೇವರಾದ ಯೆಹೋವನ ಕಟ್ಟಳೆಗಳನ್ನು ಕೈಕೊಳ್ಳುತ್ತೇವೆ; ನೀವಾದರೋ ಆತನನ್ನು ಬಿಟ್ಟವರು. 12 ಇಗೋ, ದೇವರು ನಾಯಕನಾಗಿ ನಮ್ಮೊಂದಿಗಿರುತ್ತಾನೆ; ನಿಮಗೆ ವಿರೋಧವಾಗಿ ಆರ್ಭಟದಿಂದ ಊದತಕ್ಕ ತುತೂರಿಗಳನ್ನು ಹಿಡಿದಿರುವ ಯಾಜಕರೂ ನಮ್ಮೊಂದಿಗಿರುತ್ತಾರೆ. ಇಸ್ರಾಯೇಲ್ಯರೇ, ನಿಮ್ಮ ಪಿತೃಗಳ ದೇವರಾದ ಯೆಹೋವನೊಡನೆ ಯುದ್ಧ ಮಾಡಬೇಡಿರಿ, ನೀವು ಸಫಲರಾಗಲಿಕ್ಕಿಲ್ಲ ಎಂದು ಕೂಗಿ ಹೇಳಿದನು. 13 ಯಾರೊಬ್ಬಾಮನು ಯೆಹೂದ್ಯರ ಹಿಂದೆ ಹೊಂಚುಹಾಕುವದಕ್ಕೋಸ್ಕರ ತನ್ನ ಸೈನ್ಯದ ಒಂದು ಗುಂಪನ್ನು ಕಳುಹಿಸಿದನು. ಹೀಗೆ ಸೈನ್ಯವು ಯೆಹೂದ್ಯರ ಎದುರಿನಲ್ಲಿಯೂ ಹೊಂಚುಹಾಕುವವರು ಅವರ ಹಿಂದೆಯೂ ಇದ್ದರು. 14 ಯೆಹೂದ್ಯರು ತಿರುಗಿಕೊಂಡು ತಮ್ಮ ಮುಂದೆಯೂ ಹಿಂದೆಯೂ ಯುದ್ಧಪ್ರಾರಂಭವಾಗಿರುವದನ್ನು ಕಂಡು ಯೆಹೋವನಿಗೆ ಮೊರೆಯಿಟ್ಟರು, ಯಾಜಕರು ತುತೂರಿಗಳನ್ನು ಊದಿದರು. 15 ಅನಂತರ ಜನರು ಆರ್ಭಟಿಸಿದರು. ಅವರು ಆರ್ಭಟಿಸಿದ ಕೂಡಲೆ ದೇವರು ಯಾರೊಬ್ಬಾಮನನ್ನೂ ಎಲ್ಲಾ ಇಸ್ರಾಯೇಲ್ಯರನ್ನೂ ಅಬೀಯನಿಂದಲೂ ಯೆಹೂದ್ಯರಿಂದಲೂ ಅಪಜಯಪಡಿಸಿದ್ದರಿಂದ 16 ಇಸ್ರಾಯೇಲ್ಯರು ಯೆಹೂದ್ಯರ ಎದುರಿನಿಂದ ಓಡಿಹೋದರು. ದೇವರು ಅವರನ್ನು ಇವರ ಕೈಗೆ ಒಪ್ಪಿಸಿದನು. 17 ಅಬೀಯನೂ ಅವನ ಜನರೂ ಅವರಲ್ಲಿ ಅನೇಕಾನೇಕರನ್ನು ಸಂಹರಿಸಿಬಿಟ್ಟರು. ಇಸ್ರಾಯೇಲ್ ಭಟರಲ್ಲಿ ಹತರಾಗಿ ಬಿದ್ದವರು ಐದು ಲಕ್ಷ ಮಂದಿ. 18 ಹೀಗೆ ಇಸ್ರಾಯೇಲ್ಯರು ಆ ಕಾಲದಲ್ಲಿ ತಗ್ಗಿಸಲ್ಪಟ್ಟರು; ಯೆಹೂದ್ಯರು ತಮ್ಮ ಪಿತೃಗಳ ದೇವರಾದ ಯೆಹೋವನಲ್ಲಿ ಭರವಸವಿಟ್ಟದರಿಂದ ಬಲಗೊಂಡರು. 19 ಅಬೀಯನು ಯಾರೊಬ್ಬಾಮನನ್ನು ಹಿಂದಟ್ಟಿ ಅವನಿಂದ ಬೇತೇಲ್, ಯೆಷಾನಾ, ಎಫ್ರೋನ್ ಎಂಬ ಪಟ್ಟಣಗಳನ್ನೂ ಅವುಗಳಿಗೆ ಸೇರಿದ ಗ್ರಾಮಗಳನ್ನೂ ಕಿತ್ತುಕೊಂಡನು. 20 ಯಾರೊಬ್ಬಾಮನು ಅಬೀಯನ ಜೀವಮಾನದಲ್ಲಿ ತಿರಿಗಿ ಬಲಗೊಳ್ಳಲೇ ಇಲ್ಲ. ಯೆಹೋವನು ಅವನನ್ನು ಹೊಡೆದದರಿಂದ ಅವನು ಸತ್ತನು. 21 ಅಬೀಯನು ಬಲಗೊಂಡನು; ಅವನು ಹದಿನಾಲ್ಕು ಮಂದಿ ಹೆಂಡತಿಯರನ್ನು ಮಾಡಿಕೊಂಡು ಇಪ್ಪತ್ತೆರಡು ಮಂದಿ ಗಂಡುಮಕ್ಕಳನ್ನೂ ಹದಿನಾರು ಮಂದಿ ಹೆಣ್ಣುಮಕ್ಕಳನ್ನೂ ಪಡೆದನು. 22 ಅಬೀಯನ ಉಳಿದ ಚರಿತ್ರೆಯೂ ಅವನ ನಡೆನುಡಿಗಳೂ ಪ್ರವಾದಿಯಾದ ಇದ್ದೋವಿನ ವ್ಯಾಖ್ಯಾನದಲ್ಲಿ ಬರೆದಿರುತ್ತವೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India