2 ಅರಸುಗಳು 8 - ಕನ್ನಡ ಸತ್ಯವೇದವು J.V. (BSI)ಶೂನೇಮ್ಯಳಾದ ಸ್ತ್ರೀಯು ಪರಾಧೀನವಾಗಿದ್ದ ಸ್ವಾಸ್ತ್ಯವನ್ನು ತಿರಿಗಿ ಪಡಕೊಂಡದ್ದು 1 ಎಲೀಷನು ತಾನು ಬದುಕಿಸಿದ ಹುಡುಗನ ತಾಯಿಗೆ - ಯೆಹೋವನು ಈ ದೇಶಕ್ಕೆ ಏಳು ವರುಷಗಳ ಬರವನ್ನು ಕಳುಹಿಸುವದಕ್ಕಿರುತ್ತಾನೆ. ಆದದರಿಂದ ನೀನು ನಿನ್ನ ಮನೆಯವರೊಡನೆ ಯಾವದಾದರೊಂದು ಪರದೇಶಕ್ಕೆ ಹೋಗಿ ಅಲ್ಲಿ ವಾಸಿಸು ಎಂದು ಹೇಳಿದನು. 2 ಆಕೆಯು ದೇವರ ಮನುಷ್ಯನ ಅಪ್ಪಣೆಯಂತೆ ತನ್ನ ಮನೆಯವರೊಡನೆ ಸ್ವದೇಶವನ್ನು ಬಿಟ್ಟು ಹೋಗಿ ಫಿಲಿಷ್ಟಿಯರ ದೇಶದಲ್ಲಿ ಏಳು ವರುಷ ವಾಸವಾಗಿದ್ದಳು. 3 ಏಳು ವರುಷಗಳಾದನಂತರ ಆಕೆಯು ಅಲ್ಲಿಂದ ಸ್ವದೇಶಕ್ಕೆ ಬಂದು ಪರಾಧೀನವಾಗಿದ್ದ ತನ್ನ ಹೊಲಮನೆಗಳಿಗಾಗಿ ಮೊರೆಯಿಡುವದಕ್ಕೋಸ್ಕರ ಅರಸನ ಬಳಿಗೆ ಹೋದಳು. 4 ಆ ಸಮಯದಲ್ಲಿ ಅರಸನು ದೇವರ ಮನುಷ್ಯನ ಸೇವಕನಾದ ಗೇಹಜಿಗೆ - ಎಲೀಷನು ಮಾಡಿದ ಎಲ್ಲಾ ಮಹತ್ಕಾರ್ಯಗಳನ್ನು ನನಗೆ ವಿವರಿಸು ಎಂದು ಆಜ್ಞಾಪಿಸಿದ್ದನು. 5 ಎಲೀಷನು ಸತ್ತ ಹುಡುಗನಿಗೆ ಜೀವದಾನಮಾಡಿದ ಸಂಗತಿಯನ್ನು ಗೇಹಜಿಯು ವಿವರಿಸುತ್ತಿರುವಾಗಲೇ ಜೀವದಾನಹೊಂದಿದ ಹುಡುಗನ ತಾಯಿಯು ತನ್ನ ಹೊಲಮನೆಗಳಿಗಾಗಿ ಮೊರೆಯಿಡುವದಕ್ಕೋಸ್ಕರ ಅರಸನ ಬಳಿಗೆ ಬಂದಳು. ಕೂಡಲೆ ಗೇಹಜಿಯು - ಅರಸನೇ, ನನ್ನ ಒಡೆಯನೇ, ಎಲೀಷನು ಬದುಕಿಸಿದ ಹುಡುಗನು ಇವನೇ; ಈಕೆಯು ಇವನ ತಾಯಿ ಎಂದು ಹೇಳಿದನು. 6 ಅರಸನು ಈ ಸಂಗತಿಯ ವಿಷಯವಾಗಿ ಆ ಸ್ತ್ರೀಯನ್ನು ವಿಚಾರಿಸಲು ಆಕೆಯು ಅದರಂತೆಯೇ ಹೇಳಿದಳು. ಆಗ ಅರಸನು ಒಬ್ಬ ಕಂಚುಕಿಯನ್ನು ಕರೆದು ಅವನಿಗೆ - ಹೋಗಿ ಈಕೆಯ ಹೊಲಮನೆಗಳನ್ನೂ ಈಕೆಯು ದೇಶವನ್ನು ಬಿಟ್ಟಂದಿನಿಂದ ಇಂದಿನವರೆಗೂ ಈಕೆಗೆ ಸಲ್ಲತಕ್ಕ ಹೊಲದ ಆದಾಯವನ್ನೂ ಕೊಡಿಸು ಎಂದು ಆಜ್ಞಾಪಿಸಿ ಅವನನ್ನು ಆಕೆಯ ಜೊತೆಯಲ್ಲಿ ಕಳುಹಿಸಿದನು. ಎಲೀಷನೂ ಹಜಾಯೇಲನೂ 7 ಒಂದಾನೊಂದು ಸಮಯದಲ್ಲಿ ಎಲೀಷನು ದಮಸ್ಕಕ್ಕೆ ಹೋದನು. ಆಗ ಅರಾಮ್ಯರ ಅರಸನಾದ ಬೆನ್ಹದದನು ಅಸ್ವಸ್ಥನಾಗಿದ್ದನು. ದೇವರ ಮನುಷ್ಯನು ಬಂದಿದ್ದಾನೆಂಬ ವರ್ತಮಾನವನ್ನು ಕೇಳಿ ಅವನು ಹಜಾಯೇಲನನ್ನು ಕರೆದು 8 ಅವನಿಗೆ - ನೀನು ಕಾಣಿಕೆಯನ್ನು ತೆಗೆದುಕೊಂಡು ದೇವರ ಮನುಷ್ಯನ ಬಳಿಗೆ ಹೋಗಿ ನನಗೆ ವಾಸಿಯಾಗುವದೋ ಇಲ್ಲವೋ ಎಂಬದನ್ನು ಅವನ ಮುಖಾಂತರವಾಗಿ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸು ಎಂದು ಆಜ್ಞಾಪಿಸಿದನು. 9 ಹಜಾಯೇಲನು ದಮಸ್ಕದ ಶ್ರೇಷ್ಠವಸ್ತುಗಳಲ್ಲಿ ನಾಲ್ವತ್ತು ಒಂಟೆಗಳು ಹೊರುವಷ್ಟನ್ನು ತೆಗೆದುಕೊಂಡು ಎಲೀಷನ ಬಳಿಗೆ ಹೋಗಿ ಅವನ ಮುಂದೆ ನಿಂತು - ನಿನ್ನ ಮಗನೂ ಅರಾಮ್ಯರ ಅರಸನೂ ಆದ ಬೆನ್ಹದದನು ತನಗೆ ಸ್ವಸ್ಥವಾಗುವದೋ ಇಲ್ಲವೋ ಎಂಬದನ್ನು ವಿಚಾರಿಸುವದಕ್ಕಾಗಿ ನನ್ನನ್ನು ನಿನ್ನ ಹತ್ತಿರ ಕಳುಹಿಸಿದ್ದಾನೆ ಎಂದು ಹೇಳಿದನು. 10 ಆಗ ದೇವರ ಮನುಷ್ಯನಾದ ಎಲೀಷನು ಅವನಿಗೆ - ಹೇಗೂ ನಿನಗೆ ವಾಸಿಯಾಗುವದು ಎಂಬದಾಗಿ ಬೆನ್ಹದದನಿಗೆ ಹೇಳು; ಆದರೂ ಅವನು ಸತ್ತೇ ಹೋಗುವನೆಂದು ಯೆಹೋವನು ನನಗೆ ತಿಳಿಸಿದ್ದಾನೆ ಎಂದು ಹೇಳಿ 11 ಅವನು ನಾಚಿಕೊಳ್ಳುವ ತನಕ ಸ್ಥಿರದೃಷ್ಟಿಯಿಂದ ಅವನನ್ನು ನೋಡಿ ಅಳತೊಡಗಿದನು. 12 ಹಜಾಯೇಲನು ಅವನನ್ನು - ನನ್ನ ಒಡೆಯಾ, ಯಾಕೆ ಅಳುತ್ತೀ ಎಂದು ಕೇಳಿದನು. ಅದಕ್ಕೆ ಅವನು - ನೀನು ಇಸ್ರಾಯೇಲ್ಯರಿಗೆ ಎಷ್ಟು ಕೇಡು ಮಾಡುವಿಯೆಂಬದು ನನಗೆ ಪ್ರಕಟವಾಯಿತು. ನೀನು ಅವರ ಕೋಟೆಗಳಿಗೆ ಬೆಂಕಿ ಹೊತ್ತಿಸುವಿ; ಯೌವನಸ್ಥರನ್ನು ಕತ್ತಿಯಿಂದ ಸಂಹರಿಸುವಿ; ಮಕ್ಕಳನ್ನು ಬಂಡೆಗೆ ಅಪ್ಪಳಿಸುವಿ; ಗರ್ಭಿಣಿಯರ ಹೊಟ್ಟೆಯನ್ನು ಸೀಳುವಿ ಎಂದು ಉತ್ತರ ಕೊಟ್ಟನು. 13 ಹಜಾಯೇಲನು ಎಲೀಷನನ್ನು - ನಿನ್ನ ಸೇವಕನಾದ ನಾನು ನಾಯಿಯಂತಿರುತ್ತೇನಷ್ಟೆ; ನನ್ನಿಂದ ಇಂಥ ಮಹಾಕಾರ್ಯವಾಗುವದು ಹೇಗೆ ಎಂದು ಕೇಳಲು ಅವನು - ನೀನು ಅರಾಮ್ಯರ ಅರಸನಾಗುವಿಯೆಂದು ಯೆಹೋವನು ನನಗೆ ತಿಳಿಸಿದ್ದಾನೆ ಅಂದನು. 14 ಹಜಾಯೇಲನು ಎಲೀಷನನ್ನು ಬಿಟ್ಟು ತನ್ನ ಯಜಮಾನನ ಬಳಿಗೆ ಹೋದಾಗ ಅವನು ಇವನನ್ನು - ಎಲೀಷನು ಏನು ಹೇಳಿದನು ಎಂದು ಕೇಳಿದನು. ಅದಕ್ಕೆ ಇವನು - ನಿನಗೆ ಹೇಗೂ ಸ್ವಸ್ಥವಾಗುವದೆಂದು ಹೇಳಿದನು ಎಂಬದಾಗಿ ಉತ್ತರಕೊಟ್ಟನು. 15 ಮರುದಿನ ಬೆಳಿಗ್ಗೆ ಇವನು ಕವುದಿಯನ್ನು ತೆಗೆದುಕೊಂಡು ನೀರಿನಲ್ಲಿ ತೋಯಿಸಿ ಅರಸನ ಮುಖದ ಮೇಲೆ ಹಾಕಿದದರಿಂದ ಅವನು ಸತ್ತನು. ಹಜಾಯೇಲನು ಅವನಿಗೆ ಬದಲಾಗಿ ಅರಸನಾದನು. ಯೆಹೂದ್ಯರ ಅರಸರಾದ ಯೆಹೋರಾಮ್ ಅಹಜ್ಯ ಎಂಬವರು 16 ಅಹಾಬನ ಮಗನೂ ಇಸ್ರಾಯೇಲ್ಯರ ಅರಸನೂ ಆದ ಯೋರಾಮನ ಆಳಿಕೆಯ ಐದನೆಯ ವರುಷದಲ್ಲಿ ಯೆಹೂದರಾಜನಾದ ಯೆಹೋಷಾಫಾಟನ ಮಗ ಯೆಹೋರಾಮನು ಆಳತೊಡಗಿದನು. 17 ಇವನು ಪಟ್ಟಕ್ಕೆ ಬಂದಾಗ ಮೂವತ್ತೆರಡು ವರುಷದವನಾಗಿದ್ದು ಯೆರೂಸಲೇವಿುನಲ್ಲಿ ಎಂಟು ವರುಷ ಆಳಿದನು. 18 ಇವನು ಅಹಾಬನ ಮಗಳನ್ನು ಮದುವೆಮಾಡಿಕೊಂಡದರಿಂದ ಅಹಾಬನ ಕುಟುಂಬದವರಾದ ಇಸ್ರಾಯೇಲ್ ರಾಜರ ಮಾರ್ಗವನ್ನು ಅನುಸರಿಸಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು. 19 ಆದರೂ ಯೆಹೋವನು ಯೆಹೂದರಾಜ್ಯವನ್ನು ನಾಶಮಾಡಲಿಲ್ಲ. ನಿನ್ನ ಮತ್ತು ನಿನ್ನ ಸಂತಾನದವರ ದೀಪವನ್ನು ಎಂದೂ ನಂದಿಸುವದಿಲ್ಲ ಎಂಬದಾಗಿ ತನ್ನ ಸೇವಕನಾದ ದಾವೀದನಿಗೆ ಮಾಡಿದ ಪ್ರಮಾಣವನ್ನು ನೆನಸಿ ಅದನ್ನು ಉಳಿಸಿದನು. 20 ಇವನ ಕಾಲದಲ್ಲಿ ಎದೋಮ್ಯರು ಯೆಹೂದ್ಯರಿಗೆ ವಿರೋಧವಾಗಿ ತಿರುಗಿಬಿದ್ದು ಸ್ವತಂತ್ರರಾಗಿ ತಮಗೆ ಒಬ್ಬ ಅರಸನನ್ನು ನೇವಿುಸಿಕೊಂಡರು. 21 ಆಗ ಯೆಹೋರಾಮನು ತನ್ನ ಎಲ್ಲಾ ರಥಬಲಸಹಿತವಾಗಿ ಯೊರ್ದನ್ ಹೊಳೆಯನ್ನು ದಾಟಿ ಚಾಯೀರಿಗೆ ಹೋದನು. ಎದೋಮ್ಯರು ಬಂದು ಅವನನ್ನು ಸುತ್ತಿಕೊಳ್ಳಲು ಅವನು ರಾತ್ರಿಯಲ್ಲೆದ್ದು ಅವರನ್ನೂ ಅವರ ರಥಬಲದ ಅಧಿಪತಿಗಳನ್ನೂ ಸೋಲಿಸಿ ಪಾರಾದನು. ಅವನ ಸೈನ್ಯದವರೂ ತಮ್ಮತಮ್ಮ ನಿವಾಸಗಳಿಗೆ ಓಡಿಹೋದರು. 22 ಹೀಗೆ ಎದೋಮ್ಯರು ಯೆಹೂದ್ಯರಿಗೆ ವಿರೋಧವಾಗಿ ತಿರುಗಿಬಿದ್ದರು. ಅವರು ಅಂದಿನಿಂದ ಇಂದಿನವರೆಗೂ ಸ್ವತಂತ್ರರಾಗಿರುತ್ತಾರೆ. ಅದೇ ಕಾಲದಲ್ಲಿ ಲಿಬ್ನದವರೂ ಸ್ವತಂತ್ರರಾದರು. 23 ಯೆಹೋರಾಮನ ಉಳಿದ ಚರಿತ್ರೆಯೂ ಅವನ ಕೃತ್ಯಗಳೂ ಯೆಹೂದರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. 24 ಅವನು ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ದಾವೀದ ನಗರದೊಳಗೆ ಕುಟುಂಬ ಶ್ಮಶಾನಭೂವಿುಯಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಅಹಜ್ಯನು ಅರಸನಾದನು. 25 ಅಹಾಬನ ಮಗನೂ ಇಸ್ರಾಯೇಲ್ಯರ ಅರಸನೂ ಆದ ಯೋರಾಮನ ಆಳಿಕೆಯ ಹನ್ನೆರಡನೆಯ ವರುಷದಲ್ಲಿ ಯೆಹೂದದ ಅರಸನಾದ ಯೆಹೋರಾಮನ ಮಗ ಅಹಜ್ಯನು ಅರಸನಾದನು. 26 ಇವನು ಪಟ್ಟಕ್ಕೆ ಬಂದಾಗ ಇಪ್ಪತ್ತೆರಡು ವರುಷದವನಾಗಿದ್ದು ಯೆರೂಸಲೇವಿುನಲ್ಲಿ ಒಂದು ವರುಷ ಆಳಿದನು. ಇಸ್ರಾಯೇಲ್ಯರ ಅರಸನಾದ ಒವ್ರಿುಯ ಮೊಮ್ಮಗಳಾದ ಅತಲ್ಯ ಎಂಬಾಕೆಯು ಇವನ ತಾಯಿ. 27 ಇವನಿಗೂ ಅಹಾಬನ ಕುಟುಂಬದವರಿಗೂ ಬೀಗತನವಿದ್ದದರಿಂದ ಇವನು ಅವರ ಮಾರ್ಗದಲ್ಲೇ ನಡೆದು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು. 28 ಇದಲ್ಲದೆ ಇವನು ಅರಾಮ್ಯರ ಅರಸನಾದ ಹಜಾಯೇಲನೊಡನೆ ಯುದ್ಧಮಾಡುವದಕ್ಕಾಗಿ ಅಹಾಬನ ಮಗನಾದ ಯೋರಾಮನ ಜೊತೆಯಲ್ಲಿ ರಾಮೋತ್ ಗಿಲ್ಯಾದಿಗೆ ಹೋದನು. 29 ಅರಾಮ್ಯರು ಯೋರಾಮನನ್ನು ಗಾಯಪಡಿಸಲು ಅವನು ಯುದ್ಧದಲ್ಲಾದ ಗಾಯಗಳನ್ನು ಮಾಯಿಸಿಕೊಳ್ಳುವದಕ್ಕಾಗಿ ಇಜ್ರೇಲಿಗೆ ಬಂದನು. ಅವನು ಅಸ್ವಸ್ಥನಾಗಿದ್ದದರಿಂದ ಯೆಹೂದ್ಯರ ಅರಸನಾದ ಯೆಹೋರಾಮನ ಮಗ ಅಹಜ್ಯನು ಅವನನ್ನು ನೋಡುವದಕ್ಕೋಸ್ಕರ ಅಲ್ಲಿಗೆ ಹೋದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India