Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಅರಸುಗಳು 5 - ಕನ್ನಡ ಸತ್ಯವೇದವು J.V. (BSI)


ಎಲೀಷನು ಕುಷ್ಠರೋಗಿಯಾದ ನಾಮಾನನನ್ನು ವಾಸಿಮಾಡಿದ್ದು

1 ಅರಾಮ್ಯರ ಅರಸನಿಗೆ ನಾಮಾನನೆಂಬೊಬ್ಬ ಸೇನಾಪತಿಯಿದ್ದನು. ಯೆಹೋವನು ಇವನ ಮುಖಾಂತರವಾಗಿ ಅರಾಮ್ಯರಿಗೆ ಜಯವನ್ನು ಅನುಗ್ರಹಿಸಿದದರಿಂದ ಅರಸನು ಇವನನ್ನು ಮಹಾಪುರುಷನೆಂದೂ ಸನ್ಮಾನಯೋಗ್ಯನೆಂದೂ ಎಣಿಸುತ್ತಿದ್ದನು. ಆದರೆ ಪರಾಕ್ರಮಶಾಲಿಯಾದ ಇವನು ಕುಷ್ಠರೋಗಿಯಾಗಿದ್ದನು.

2 ಅರಾಮ್ಯರು ಒಂದು ಸಾರಿ ಸುಲಿಗೆಮಾಡುವದಕ್ಕೋಸ್ಕರ ಇಸ್ರಾಯೇಲ್ಯರ ಪ್ರಾಂತಕ್ಕೆ ಹೋಗಿ ಬರುವಾಗ ಅಲ್ಲಿನ ಒಬ್ಬ ಹುಡುಗಿಯನ್ನು ಹಿಡಿದುಕೊಂಡು ಬಂದರು; ಆಕೆಯು ನಾಮಾನನ ಹೆಂಡತಿಗೆ ದಾಸಿಯಾದಳು.

3 ಆಕೆಯು ಒಂದು ದಿವಸ ತನ್ನ ಯಜಮಾನಿಗೆ - ನಮ್ಮ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಹತ್ತಿರ ಇರುತ್ತಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು. ಅವನು ಇವನನ್ನು ಕುಷ್ಠರೋಗದಿಂದ ವಾಸಿಮಾಡುತ್ತಿದ್ದನು ಎಂದು ಹೇಳಿದಳು.

4 ನಾಮಾನನು ಅರಸನ ಸನ್ನಿಧಿಗೆ ಹೋಗಿ ಇಸ್ರಾಯೇಲ್‍ದೇಶದ ಹುಡುಗಿಯು ಹೇಳಿದ್ದನ್ನು ತಿಳಿಸಲು ಅವನು -

5 ನೀನು ಅಲ್ಲಿಗೆ ಹೋಗಿ ಬಾ; ನಾನು ನಿನ್ನ ಕೈಯಲ್ಲಿ ಇಸ್ರಾಯೇಲ್ಯರ ಅರಸನಿಗೆ ಒಂದು ಪತ್ರವನ್ನು ಕೊಡುತ್ತೇನೆ ಅಂದನು. ನಾಮಾನನು ಹತ್ತು ತಲಾಂತು ಬೆಳ್ಳಿ, ಆರು ಸಾವಿರ ತೊಲೆ ಬಂಗಾರ, ಹತ್ತು ದುಸ್ತು ಬಟ್ಟೆಗಳು ಇವುಗಳನ್ನು ತೆಗೆದುಕೊಂಡು

6 ಸಮಾರ್ಯಕ್ಕೆ ಹೊರಟುಹೋಗಿ ಪತ್ರವನ್ನು ಇಸ್ರಾಯೇಲ್ಯರ ಅರಸನಿಗೆ ಕೊಟ್ಟನು. ಅದರಲ್ಲಿ - ನನ್ನ ಸೇವಕನಾದ ನಾಮಾನನನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ; ನೀನು ಅವನ ಕುಷ್ಠರೋಗವನ್ನು ವಾಸಿಮಾಡತಕ್ಕದೆಂದು ಈ ಪತ್ರದಿಂದ ತಿಳಿದುಕೋ ಎಂಬದಾಗಿ ಬರೆದಿತ್ತು.

7 ಇಸ್ರಾಯೇಲ್ಯರ ಅರಸನು ಪತ್ರವನ್ನು ಓದಿದ ಕೂಡಲೆ ಬಟ್ಟೆಗಳನ್ನು ಹರಿದುಕೊಂಡು ತನ್ನ ಪರಿವಾರದವರಿಗೆ - ತಾನು ಕಳುಹಿಸಿದ ಮನುಷ್ಯನನ್ನು ಕುಷ್ಠರೋಗದಿಂದ ವಾಸಿಮಾಡಬೇಕಂತೆ; ಇದು ಎಂಥ ಅಪ್ಪಣೆ! ನಾನೇನು ದೇವರೋ? ಜೀವದಾನ ಮಾಡುವದಕ್ಕಾಗಲಿ ಸಾಯಿಸುವದಕ್ಕಾಗಲಿ ನನಗೆ ಸಾಮರ್ಥ್ಯವುಂಟೋ? ಇವನು ನನ್ನೊಡನೆ ಜಗಳವಾಡುವದಕ್ಕೆ ಕಾರಣ ಹುಡುಕುತ್ತಾನಲ್ಲದೆ ಮತ್ತೇನು? ನೀವೇ ಆಲೋಚಿಸಿ ನೋಡಿರಿ ಎಂದು ಹೇಳಿದನು.

8 ಇಸ್ರಾಯೇಲ್ಯರ ಅರಸನು ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬದನ್ನು ದೇವರ ಮನುಷ್ಯನಾದ ಎಲೀಷನು ಕೇಳಿ ದೂತರ ಮುಖಾಂತರವಾಗಿ ಅವನಿಗೆ - ನೀನು ನಿನ್ನ ಬಟ್ಟೆಗಳನ್ನು ಹರಿದುಕೊಂಡದ್ದೇಕೆ? ಅವನನ್ನು ನನ್ನ ಬಳಿಗೆ ಕಳುಹಿಸು; ಇಸ್ರಾಯೇಲ್ಯರಲ್ಲಿ ಒಬ್ಬ ಪ್ರವಾದಿಯಿದ್ದಾನೆಂಬದು ಅವನಿಗೆ ಗೊತ್ತಾಗಲಿ ಎಂದು ಹೇಳಿ ಕಳುಹಿಸಿದನು.

9 ನಾಮಾನನು ರಥರಥಾಶ್ವಗಳೊಡನೆ ಎಲೀಷನ ಮನೆಗೆ ಹೋಗಿ ಬಾಗಲಿನ ಮುಂದೆ ನಿಂತನು.

10 ಎಲೀಷನು ಅವನಿಗೆ - ಹೋಗಿ ಯೊರ್ದನ್ ಹೊಳೆಯಲ್ಲಿ ಏಳು ಸಾರಿ ಸ್ನಾನಮಾಡು; ಆಗ ನಿನ್ನ ದೇಹವು ಮುಂಚಿನಂತಾಗುವದು; ನೀನು ಶುದ್ಧನಾಗುವಿ ಎಂದು ಹೇಳಿಕಳುಹಿಸಿದನು.

11 ನಾಮಾನನು ಇದನ್ನು ಕೇಳಿ ಕೋಪಗೊಂಡು - ಇದೇನು! ಅವನು ಹೇಗೂ ಹೊರಗೆ ಬಂದು ನಿಂತು ತನ್ನ ದೇವರಾದ ಯೆಹೋವನ ಹೆಸರು ಹೇಳಿ ಕುಷ್ಠದ ಮೇಲೆ ಕೈಯಾಡಿಸಿ ವಾಸಿಮಾಡುವನೆಂದು ನೆನಸಿದೆನು.

12 ದಮಸ್ಕದ ಅಬಾನಾ, ಪರ್ಪರ್ ಎಂಬ ಹೊಳೆಗಳು ಇಸ್ರಾಯೇಲ್ಯರ ಎಲ್ಲಾ ಹೊಳೆಹಳ್ಳಗಳಿಗಿಂತ ಉತ್ತಮವಾಗಿವೆಯಲ್ಲವೋ? ಸ್ನಾನದಿಂದ ವಾಸಿಯಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಲ್ಲವೇ ಎಂದು ಹೇಳಿ ಬಲು ಸಿಟ್ಟಿನಿಂದ ಹೊರಟುಹೋದನು.

13 ಆಗ ಅವನ ಸೇವಕರು ಹತ್ತಿರ ಬಂದು ಅವನಿಗೆ - ಅಪ್ಪನವರೇ, ಪ್ರವಾದಿಯು ಒಂದು ಕಠಿಣವಾದ ಕೆಲಸವನ್ನು ಹೇಳಿದ್ದರೆ ಅದನ್ನು ಮಾಡುತ್ತಿದ್ದಿರಲ್ಲಾ; ಹಾಗಾದರೆ ಸ್ನಾನಮಾಡಿ ಶುದ್ಧನಾಗು ಎಂದು ಹೇಳಿದರೆ ಯಾಕೆ ಅದರಂತೆ ಮಾಡಬಾರದು ಅಂದರು.

14 ಅವನು ಯೊರ್ದನಿಗೆ ಹೋಗಿ ಏಳು ಸಾರಿ ಅದರಲ್ಲಿ ಮುಣುಗಿ ಎದ್ದನು. ಕೂಡಲೆ ದೇವರ ಮನುಷ್ಯನ ಮಾತಿಗನುಸಾರವಾಗಿ ಅವನ ದೇಹವು ಕೂಸಿನ ದೇಹದಂತೆ ಶುದ್ಧವಾಯಿತು.

15 ಅನಂತರ ಅವನು ತನ್ನ ಪರಿವಾರದವರೊಡನೆ ಹಿಂದಿರುಗಿ ದೇವರ ಮನುಷ್ಯನ ಹತ್ತಿರ ಹೋಗಿ ಅವನ ಮುಂದೆ ನಿಂತು - ಇಸ್ರಾಯೇಲ್ ದೇಶದಲ್ಲಿರುವ ದೇವರ ಹೊರತಾಗಿ ಲೋಕದಲ್ಲಿ ಬೇರೆ ದೇವರು ಇರುವದೇ ಇಲ್ಲವೆಂಬದು ಈಗ ನನಗೆ ಗೊತ್ತಾಯಿತು; ನೀನು ದಯವಿಟ್ಟು ಕಾಣಿಕೆಯನ್ನು ಅಂಗೀಕರಿಸಬೇಕು ಎಂದು ಹೇಳಿದನು.

16 ಅದಕ್ಕೆ ಎಲೀಷನು - ನಾನು ಸನ್ನಿಧಿ ಸೇವೆಮಾಡುತ್ತಿರುವ ಯೆಹೋವನಾಣೆ, ನಿನ್ನಿಂದ ಏನೂ ತೆಗೆದುಕೊಳ್ಳುವದಿಲ್ಲ ಅಂದನು. ನಾಮಾನನು ಎಷ್ಟು ಒತ್ತಾಯಪಡಿಸಿದರೂ ಅವನು ತೆಗೆದುಕೊಳ್ಳಲೇ ಇಲ್ಲ.

17 ಆಗ ಅವನು ಎಲೀಷನಿಗೆ - ನೀನು ನನ್ನದನ್ನು ಸ್ವೀಕರಿಸದಿದ್ದರೆ ನಿನ್ನ ಸೇವಕನಾದ ನನಗೆ ಎರಡು ಹೇಸರಕತ್ತೆಗಳು ಹೊರುವಷ್ಟು ಮಣ್ಣನ್ನು ಕೊಡಿಸಬೇಕೆಂದು ಬೇಡಿಕೊಳ್ಳುತ್ತೇನೆ. ನಾನು ಇನ್ನು ಮುಂದೆ ಎಲ್ಲಾ ದೇವತೆಗಳನ್ನು ಬಿಟ್ಟು ಯೆಹೋವನೊಬ್ಬನಿಗೇ ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸಬೇಕೆಂದಿರುತ್ತೇನೆ.

18 ಆದರೆ ಈ ವಿಷಯದಲ್ಲಿ ಯೆಹೋವನು ನನ್ನನ್ನು ಕ್ಷವಿುಸಲಿ; ನನ್ನ ಒಡೆಯನು ಆರಾಧನೆಗೋಸ್ಕರ ರಿಮ್ಮೋನನ ದೇವಸ್ಥಾನಕ್ಕೆ ಹೋಗಿ ನನ್ನ ಕೈಹಿಡಿದು ಆ ದೇವತೆಗೆ ನಮಸ್ಕಾರ ಮಾಡುವಾಗ ನಾನೂ ನಮಸ್ಕಾರ ಮಾಡಬೇಕಾಗುವದು. ಈ ಒಂದು ವಿಷಯದಲ್ಲಿ ಮಾತ್ರ ಯೆಹೋವನು ನನಗೆ ಕ್ಷಮೆಯನ್ನು ಅನುಗ್ರಹಿಸಬೇಕು ಅನ್ನಲು

19 ಎಲೀಷನು ಅವನಿಗೆ - ಸಮಾಧಾನದಿಂದ ಹೋಗು ಎಂದು ಉತ್ತರಕೊಟ್ಟನು. ಅವನು ಹೊರಟು ಹೋದನು.

20 ನಾಮಾನನು ಸ್ವಲ್ಪದೂರಕ್ಕೆ ಹೋದನಂತರ ದೇವರ ಮನುಷ್ಯನಾದ ಎಲೀಷನ ಸೇವಕ ಗೇಹಜಿಯು ಮನಸ್ಸಿನಲ್ಲಿ - ನನ್ನ ಯಜಮಾನನು ಆ ಅರಾಮ್ಯನಾದ ನಾಮಾನನಿಂದ ಏನೂ ತೆಗೆದುಕೊಳ್ಳದೆ ಅವನನ್ನು ಹಾಗೆಯೇ ಕಳುಹಿಸಿಬಿಟ್ಟನಲ್ಲಾ; ಯೆಹೋವನಾಣೆ, ನಾನು ಅವನ ಹಿಂದೆ ಓಡುತ್ತಾ ಹೋಗಿ ಅವನಿಂದ ಸ್ವಲ್ಪವನ್ನಾದರೂ ಬಾಚಿಕೊಂಡು ಬರುವೆನು ಅಂದುಕೊಂಡು ಹೊರಟನು.

21 ನಾಮಾನನು ತನ್ನ ಹಿಂದೆ ಓಡುತ್ತಾ ಬರುವ ಗೇಹಜಿಯನ್ನು ಕಂಡು ರಥದಿಂದಿಳಿದು ಅವನನ್ನು ಎದುರುಗೊಂಡು - ಕ್ಷೇಮವೋ ಎಂದು ಕೇಳಿದನು.

22 ಅವನು - ಕ್ಷೇಮ, ಎಫ್ರಾಯೀಮ್ ಪರ್ವತ ಪ್ರದೇಶದಿಂದ ಪ್ರವಾದಿಮಂಡಲಿಯವರಾದ ಇಬ್ಬರು ಯೌವನಸ್ಥರು ಬಂದಿರುತ್ತಾರೆ. ಆದದರಿಂದ ಅವರಿಗೋಸ್ಕರ ಬೇಗನೆ ಒಂದು ತಲಾಂತು ಬೆಳ್ಳಿಯನ್ನೂ ಎರಡು ದುಸ್ತುಬಟ್ಟೆಗಳನ್ನೂ ತೆಗೆದುಕೊಂಡು ಬರಬೇಕೆಂಬದಾಗಿ ನನ್ನ ಯಜಮಾನನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದನು ಎಂದು ಉತ್ತರಕೊಟ್ಟನು.

23 ನಾಮಾನನು - ಎರಡು ತಲಾಂತನ್ನಾದರೂ ತೆಗೆದುಕೊಳ್ಳಬಾರದೇ ಎಂದು ಅವನನ್ನು ಒತ್ತಾಯಪಡಿಸಿ ಅದನ್ನು ಎರಡು ಚೀಲಗಳಲ್ಲಿ ಹಾಕಿಸಿ ಆ ಚೀಲಗಳನ್ನೂ ಎರಡು ದುಸ್ತುಬಟ್ಟೆಗಳನ್ನೂ ಇಬ್ಬರು ಸೇವಕರ ಮೇಲೆ ಹೊರಿಸಿ ಅವರನ್ನು ಗೇಹಜಿಯ ಸಂಗಡ ಕಳುಹಿಸಿದನು. ಅವರು ಹೊತ್ತುಕೊಂಡು ಇವನ ಮುಂದೆ ನಡೆದರು.

24 ಗುಡ್ಡವನ್ನು ಮುಟ್ಟಿದಾಗ ಗೇಹಜಿಯು ಅವುಗಳನ್ನು ತೆಗೆದುಕೊಂಡು ಮನೆಯಲ್ಲಿ ಅಡಗಿಸಿಟ್ಟು ಆಳುಗಳನ್ನು ಕಳುಹಿಸಿಬಿಟ್ಟನು.

25 ಅವರು ಹೋದನಂತರ ಇವನು ತನ್ನ ಯಜಮಾನನ ಬಳಿಗೆ ಬಂದನು. ಎಲೀಷನು ಅವನನ್ನು - ಗೇಹಜಿಯೇ, ಎಲ್ಲಿಗೆ ಹೋಗಿ ಬಂದಿ ಎಂದು ಕೇಳಿದನು. ಅದಕ್ಕೆ ಅವನು - ನಿನ್ನ ಸೇವಕನಾದ ನಾನು ಎಲ್ಲಿಯೂ ಹೋಗಲಿಲ್ಲ ಎಂದು ಉತ್ತರಕೊಟ್ಟನು.

26 ಆಗ ಎಲೀಷನು ಅವನಿಗೆ - ಒಬ್ಬನು ರಥದಿಂದಿಳಿದು ಬಂದು ನಿನ್ನನ್ನು ಎದುರುಗೊಂಡದು ನನ್ನ ಜ್ಞಾನ ದೃಷ್ಟಿಗೆ ಕಾಣಿಸಲಿಲ್ಲವೆಂದು ನೆನಸುತ್ತೀಯೋ? ದ್ರವ್ಯ, ಬಟ್ಟೆಗಳು, ಎಣ್ಣೇ ಮರದ ತೋಪುಗಳು, ದ್ರಾಕ್ಷೇತೋಟಗಳು, ಕುರಿದನಗಳು, ದಾಸದಾಸೀ ಜನವು ಇವುಗಳನ್ನು ಸಂಪಾದಿಸುವದಕ್ಕೆ ಇದು ಸಮಯವೋ?

27 ನಾಮಾನನ ಕುಷ್ಠವು ನಿನ್ನನ್ನೂ ನಿನ್ನ ಸಂತಾನದವರನ್ನೂ ಸದಾಕಾಲ ಹಿಡಿದಿರುವದು ಅಂದನು. ಕೂಡಲೆ ಅವನಿಗೆ ಕುಷ್ಠ ಹತ್ತಿತು. ಅವನು ಹಿಮದಂತೆ ಬಿಳುಪಾಗಿ ಅವನ ಸನ್ನಿಧಿಯಿಂದ ಹೊರಟುಹೋದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು