2 ಅರಸುಗಳು 13 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲ್ಯರ ಅರಸನಾದ ಯೆಹೋವಾಹಾಜನು 1 ಯೆಹೂದದ ಅರಸನೂ ಅಹಜ್ಯನ ಮಗನೂ ಆದ ಯೆಹೋವಾಷನ ಆಳಿಕೆಯ ಇಪ್ಪತ್ತಮೂರನೆಯ ವರುಷದಲ್ಲಿ ಯೇಹುವಿನ ಮಗನಾದ ಯೆಹೋವಾಹಾಜನು ಇಸ್ರಾಯೇಲ್ಯರ ಅರಸನಾಗಿ ಸಮಾರ್ಯದಲ್ಲಿ ಹದಿನೇಳು ವರುಷ ಆಳಿದನು. 2 ಅವನು ಇಸ್ರಾಯೇಲ್ಯರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು. 3 ಆದದರಿಂದ ಯೆಹೋವನು ಇಸ್ರಾಯೇಲ್ಯರ ಮೇಲೆ ಕೋಪಗೊಂಡು ಅವರನ್ನು ಅರಾಮ್ಯರ ಅರಸನಾದ ಹಜಾಯೇಲನ ಕೈಗೂ ಅವನ ಮಗನಾದ ಬೆನ್ಹದದನ ಕೈಗೂ ಒಪ್ಪಿಸಿದನು. ಅವರು ಯೆಹೋವಾಹಾಜನ ಜೀವಮಾನದಲ್ಲೆಲ್ಲಾ ಇವರ ಕೈಯಲ್ಲಿದ್ದರು. 4 (ಯೆಹೋವಾಹಾಜನು ಯೆಹೋವನಿಗೆ ಮೊರೆಯಿಟ್ಟನು. ಆತನು ಅವನ ಮೊರೆಯನ್ನು ಲಾಲಿಸಿ ಅರಾಮ್ಯರ ಅರಸನಿಂದ ಬಹಳವಾಗಿ ಬಾಧಿಸಲ್ಪಟ್ಟ ಇಸ್ರಾಯೇಲ್ಯರ ಮೇಲೆ ಕಟಾಕ್ಷವಿಟ್ಟು 5 ಅವರಿಗೆ ಒಬ್ಬ ರಕ್ಷಕನನ್ನು ಅನುಗ್ರಹಿಸಿದನು. ಇವನ ಮುಖಾಂತರವಾಗಿ ಅವರು ಅರಾಮ್ಯರ ಕೈಯಿಂದ ಬಿಡುಗಡೆಯಾಗಿ ಮುಂಚಿನಂತೆ ತಮ್ಮ ತಮ್ಮ ಮನೆಗಳಲ್ಲಿ ಸುರಕ್ಷಿತರಾಗಿ ವಾಸಿಸುವವರಾದರು. 6 ಆದರೂ ಅವರು ತಮ್ಮನ್ನು ಪಾಪಕ್ಕೆ ಪ್ರೇರಿಸಿದ ಯಾರೊಬ್ಬಾಮನ ಮನೆಯವರ ಮಾರ್ಗದಲ್ಲಿ ನಡೆದರು; ಅದನ್ನು ಬಿಡಲೇ ಇಲ್ಲ. ಸಮಾರ್ಯದಲ್ಲಿ ಅಶೇರವಿಗ್ರಹಸ್ತಂಭವು ಇದ್ದೇ ಇತ್ತು.) 7 ಯೆಹೋವಾಹಾಜನಿಗೆ ಐವತ್ತು ಮಂದಿ ರಾಹುತರು, ಹತ್ತು ರಥಗಳು, ಹತ್ತುಸಾವಿರ ಮಂದಿ ಕಾಲಾಳುಗಳು ಮಾತ್ರ ಉಳಿದರು. ಅರಾಮ್ಯರ ಅರಸನು ಬೇರೆ ಎಲ್ಲರನ್ನೂ ಸಂಹರಿಸಿ ಕಣದ ಧೂಳಿನಂತೆ ಮಾಡಿದನು. 8 ಯೆಹೋವಾಹಾಜನ ಉಳಿದ ಚರಿತ್ರೆಯೂ ಅವನ ಶೂರಕೃತ್ಯಗಳ ವಿವರವೂ ಇಸ್ರಾಯೇಲ್ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. 9 ಅವನು ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ಸಮಾರ್ಯದಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಯೋವಾಷನು ಅರಸನಾದನು. ಇಸ್ರಾಯೇಲ್ಯರ ಅರಸನಾದ ಯೋವಾಷನೂ ಎಲೀಷನ ಮರಣವೂ 10 ಯೆಹೂದದ ಅರಸನಾದ ಯೆಹೋವಾಷನ ಆಳಿಕೆಯ ಮೂವತ್ತೇಳನೆಯ ವರುಷದಲ್ಲಿ ಯೆಹೋವಾಹಾಜನ ಮಗನಾದ ಯೋವಾಷನು ಇಸ್ರಾಯೇಲ್ಯರ ಅರಸನಾಗಿ ಸಮಾರ್ಯದಲ್ಲಿ ಹದಿನಾರು ವರುಷ ಆಳಿದನು. 11 ಇವನು ಇಸ್ರಾಯೇಲ್ಯರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು. 12 ಇವನ ಉಳಿದ ಚರಿತ್ರೆಯೂ ಎಲ್ಲಾ ಶೂರ ಕೃತ್ಯಗಳೂ ಇವನು ಯೆಹೂದ್ಯರ ಅರಸನಾದ ಅಮಚ್ಯನು ಎಂಬವನೊಡನೆ ನಡಿಸಿದ ಯುದ್ಧದ ವಿವರವೂ ಇಸ್ರಾಯೇಲ್ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. 13 ಇವನು ಪಿತೃಗಳ ಬಳಿಗೆ ಸೇರಲು ಇವನ ಶವವನ್ನು ಸಮಾರ್ಯದೊಳಗೆ ಇಸ್ರಾಯೇಲ್ ರಾಜಶ್ಮಶಾನದಲ್ಲಿ ಸಮಾಧಿಮಾಡಿದರು. ಇವನ ತರುವಾಯ ಯಾರೊಬ್ಬಾಮನು ಸಿಂಹಾಸನವನ್ನೇರಿದನು. 14 ಎಲೀಷನು ಮರಣಕರ ರೋಗದಲ್ಲಿ ಬಿದ್ದನು. ಇಸ್ರಾಯೇಲ್ಯರ ಅರಸನಾದ ಯೋವಾಷನು ಇದನ್ನು ಕೇಳಿ ಅವನ ಬಳಿಗೆ ಹೋಗಿ - ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲ್ಯರಿಗೆ ರಥರಥಾಶ್ವಬಲಗಳಾಗಿದ್ದವನೇ ಎಂದು ಕೂಗುತ್ತಾ ಅವನ ಮುಖದ ಮೇಲೆ ಬಿದ್ದು ಬಹಳವಾಗಿ ಅತ್ತನು. 15 ಆಗ ಎಲೀಷನು ಇಸ್ರಾಯೇಲ್ಯರ ಅರಸನಿಗೆ - ಬಿಲ್ಲನ್ನೂ ಬಾಣಗಳನ್ನೂ ತರಿಸು ಎಂದು ಹೇಳಿದನು; ಅವನು ತರಿಸಿದನು. 16 ಆಗ ಅವನಿಗೆ - ಬಿಲ್ಲನ್ನು ಹಿಡಿದುಕೋ ಎಂದು ಆಜ್ಞಾಪಿಸಿದನು. ಅವನು ಹಿಡಿದುಕೊಳ್ಳಲು ತನ್ನ ಕೈಯನ್ನು ಅವನ ಕೈ ಮೇಲೆ ಇಟ್ಟು - 17 ಮೂಡಣ ದಿಕ್ಕಿಗಿರುವ ಕಿಟಕಿಯನ್ನು ತೆರೆ ಎಂದನು. ಅವನು ತೆರೆದನು. ಅನಂತರ - ಬಾಣವನ್ನೆಸೆ ಎಂದು ಆಜ್ಞಾಪಿಸಿದನು. ಅವನು ಎಸೆಯಲು - ಇದು ಜಯಪ್ರದವಾದ ಯೆಹೋವನ ಬಾಣ; ಅರಾಮ್ಯರನ್ನು ಜಯಿಸುವ ಬಾಣ. ನೀನು ಅರಾಮ್ಯರನ್ನು ಅಫೇಕದಲ್ಲಿ ಸೋಲಿಸಿ ಸಂಹರಿಸಿಬಿಡುವಿ ಎಂದು ಹೇಳಿದನು. 18 ಇದಲ್ಲದೆ ಎಲೀಷನು ಇಸ್ರಾಯೇಲ್ಯರ ಅರಸನಿಗೆ - ಬಾಣಗಳನ್ನು ತೆಗೆದುಕೋ ಎಂದು ಆಜ್ಞಾಪಿಸಿದಾಗ ಅವನು ತೆಗೆದುಕೊಳ್ಳಲು - ಇವುಗಳಿಂದ ನೆಲವನ್ನು ಹೊಡಿ ಅಂದನು. ಅವನು ಮೂರು ಸಾರಿ ಹೊಡೆದು ಸುಮ್ಮನೆ ನಿಂತನು. 19 ಆಗ ದೇವರ ಮನುಷ್ಯನು ಅವನ ಮೇಲೆ ಕೋಪಗೊಂಡು - ನೀನು ಐದಾರು ಸಾರಿ ಹೊಡೆಯಬೇಕಾಗಿತ್ತು. ಹಾಗೆ ಮಾಡಿದ್ದರೆ ಅರಾಮ್ಯರು ನಿರ್ನಾಮವಾಗಿ ಹೋಗುವವರೆಗೂ ಅವರ ಮೇಲೆ ನಿನಗೆ ಜಯದೊರಕುತ್ತಿತ್ತು. ನೀನು ಮೂರೇ ಸಾರಿ ಹೊಡೆದದರಿಂದ ಅವರನ್ನು ಮೂರು ಸಾರಿ ಮಾತ್ರ ಸೋಲಿಸುವಿ ಎಂದು ಹೇಳಿದನು. 20 ಎಲೀಷನು ಮೃತಿಹೊಂದಲು ಅವನ ಶವವನ್ನು ಸಮಾಧಿಮಾಡಿದರು. ಮೋವಾಬ್ಯರು ಪ್ರತಿವರುಷದ ಪ್ರಾರಂಭದಲ್ಲಿ ಸುಲಿಗೆ ಮಾಡುವದಕ್ಕೋಸ್ಕರ ಗುಂಪು ಗುಂಪಾಗಿ ಬರುತ್ತಿದ್ದರು. 21 ಒಂದು ದಿವಸ ಜನರು ಒಬ್ಬ ಸತ್ತವನನ್ನು ಸಮಾಧಿಮಾಡುವದಕ್ಕೆ ಹೋದಾಗ ಮೋವಾಬ್ಯರ ಗುಂಪು ಬರುತ್ತಿರುವದನ್ನು ಕಂಡು ಶವವನ್ನು ಎಲೀಷನ ಸಮಾಧಿಯಲ್ಲಿ ಬಿಸಾಡಿ ಓಡಿ ಹೋದರು. ಸತ್ತ ಮನುಷ್ಯನು ಎಲೀಷನ ಎಲುಬುಗಳಿಗೆ ತಗುಲಿದ ಕೂಡಲೆ ಉಜ್ಜೀವಿಸಿ ಎದ್ದು ನಿಂತನು. 22 ಅರಾಮ್ಯರ ಅರಸನಾದ ಹಜಾಯೇಲನು ಯೆಹೋವಾಹಾಜನ ಆಳಿಕೆಯಲ್ಲೆಲ್ಲಾ ಇಸ್ರಾಯೇಲ್ಯರನ್ನು ಪೀಡಿಸುತ್ತಿದ್ದನು. 23 ಆದರೂ ಯೆಹೋವನು ಅವರನ್ನು ಸಂಪೂರ್ಣವಾಗಿ ಹಾಳುಮಾಡಗೊಡಲಿಲ್ಲ. ಅವರನ್ನು ಈ ಕಾಲದಲ್ಲಿಯೂ ತನ್ನ ಸನ್ನಿಧಿಯಿಂದ ತಳ್ಳಿಬಿಡಲಿಲ್ಲ. ತಾನು ಅಬ್ರಹಾಮ್ ಇಸಾಕ್ ಯಾಕೋಬರೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ನೆನಸಿ ಅವರಿಗೆ ದಯೆತೋರಿಸಿದನು; ಕರುಳು ಮರುಗಿದವನಾಗಿ ಅವರಿಗೆ ಪ್ರಸನ್ನನಾದನು. 24 ಅರಾಮ್ಯರ ಅರಸನಾದ ಹಜಾಯೇಲನು ಮರಣಹೊಂದಲು ಅವನಿಗೆ ಬದಲಾಗಿ ಅವನ ಮಗನಾದ ಬೆನ್ಹದದನು ಅರಸನಾದನು. 25 ಯೆಹೋವಾಹಾಜನ ಮಗನಾದ ಯೋವಾಷನು ತನ್ನ ತಂದೆಯ ಕಾಲದಲ್ಲಿ ಹಜಾಯೇಲನು ಯುದ್ಧಮಾಡಿ ಕಿತ್ತುಕೊಂಡಿದ್ದ ಪಟ್ಟಣಗಳನ್ನು ಬೆನ್ಹದದನಿಂದ ತಿರಿಗಿ ತೆಗೆದುಕೊಂಡನು. ಅವನನ್ನು ಮೂರು ಸಾರಿ ಸೋಲಿಸಿ ಇಸ್ರಾಯೇಲ್ಯರ ಎಲ್ಲಾ ಪಟ್ಟಣಗಳನ್ನು ಹಿಂದಕ್ಕೆ ತೆಗೆದುಕೊಂಡನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India