Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಅರಸುಗಳು 12 - ಕನ್ನಡ ಸತ್ಯವೇದವು J.V. (BSI)


ಯೆಹೂದದ ಅರಸನಾದ ಯೆಹೋವಾಷನು

1 ಯೆಹೋವಾಷನು ಯೇಹುವಿನ ಆಳಿಕೆಯ ಏಳನೆಯ ವರುಷದಲ್ಲಿ ಅರಸನಾಗಿ ಯೆರೂಸಲೇವಿುನಲ್ಲಿ ನಾಲ್ವತ್ತು ವರುಷ ಆಳಿದನು. ಬೇರ್ಷೆಬದವಳಾದ ಚಿಬ್ಯಳು ಅವನ ತಾಯಿ.

2 ಯಾಜಕನಾದ ಯೆಹೋಯಾದಾವನು ಅವನಿಗೆ ಬೋಧಕನಾಗಿದ್ದ ಕಾಲದಲ್ಲಿ ಅವನು ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿಯೇ ನಡೆದುಕೊಳ್ಳುತ್ತಿದ್ದನು.

3 ಆದರೆ ಅವನು ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲವಾದದರಿಂದ ಜನರು ಅವುಗಳ ಮೇಲೆಯೇ ಯಜ್ಞಧೂಪಗಳನ್ನು ಅರ್ಪಿಸುತ್ತಿದ್ದರು.

4 ಯೆಹೋವಾಷನು ಯಾಜಕರಿಗೆ - ನೀವು ಯೆಹೋವನ ಆಲಯಕ್ಕೆ ಸೇರುವ ಎಲ್ಲಾ ಪರಿಶುದ್ಧದ್ರವ್ಯವನ್ನು ಅಂದರೆ ಖಾನೇಷುಮಾರಿಯಲ್ಲಿ ಲೆಕ್ಕಿಸಲ್ಪಟ್ಟ ಪ್ರತಿಯೊಬ್ಬನು ತಂದುಕೊಡುವ ಹಣ, ದೇವರಿಗೆ ಪ್ರತಿಷ್ಠಿತನಾದ ಮನುಷ್ಯನು ತನ್ನ ಪ್ರಾಣವನ್ನು ಬಿಡಿಸಿಕೊಳ್ಳುವದಕ್ಕಾಗಿ ತರುವ ಹಣ, ಜನರು ಯೆಹೋವನ ಆಲಯಕ್ಕೆ ಸ್ವೇಚ್ಫೆಯಿಂದ ತಂದೊಪ್ಪಿಸುವ ಹಣ ಇವುಗಳನ್ನು ತೆಗೆದುಕೊಂಡು

5 ದೇವಾಲಯವು ಎಲ್ಲೆಲ್ಲಿ ಶಿಥಿಲವಾಗಿರುತ್ತದೆಂದು ನೋಡಿ ಅದನ್ನು ಸರಿಮಾಡುವದಕ್ಕೋಸ್ಕರ ವಿನಿಯೋಗಿಸಿರಿ; ಪ್ರತಿಯೊಬ್ಬನೂ ತನ್ನ ತನ್ನ ಪರಿಚಿತರಿಂದಲೇ ಹಣ ತೆಗೆದುಕೊಳ್ಳಬೇಕು ಎಂದು ಆಜ್ಞಾಪಿಸಿದನು.

6 ಯಾಜಕರು ಅರಸನಾದ ಯೆಹೋವಾಷನ ಆಳಿಕೆಯ ಇಪ್ಪತ್ತಮೂರನೆಯ ವರುಷದವರೆಗೂ ದೇವಾಲಯವನ್ನು ಜೀರ್ಣೋದ್ಧಾರಮಾಡಿರಲಿಲ್ಲ.

7 ಆದದರಿಂದ ಅವನು ಯೆಹೋಯಾದಾವ ಮೊದಲಾದ ಯಾಜಕರನ್ನು ಕರೆದು ಅವರಿಗೆ - ನೀವು ಈ ವರೆಗೂ ದೇವಾಲಯವನ್ನೇಕೆ ಜೀರ್ಣೋದ್ಧಾರ ಮಾಡಲಿಲ್ಲ? ಇನ್ನು ಮುಂದೆ ನಿಮ್ಮ ಪರಿಚಿತರು ತಂದು ಕೊಡುವ ಹಣವನ್ನು ನಿಮ್ಮ ಕೈಯಲ್ಲಿಟ್ಟುಕೊಳ್ಳದೆ ಕೂಡಲೆ ಅದನ್ನು ದೇವಾಲಯದ ಜೀರ್ಣೋದ್ಧಾರಕ್ಕಾಗಿ ಕೊಡಿರಿ ಎಂದು ಹೇಳಿದನು.

8 ಆಗ ಯಾಜಕರು ಅವನಿಗೆ - ನಾವು ಇನ್ನು ಮುಂದೆ ಜನರಿಂದ ಹಣ ತೆಗೆದುಕೊಳ್ಳುವದಿಲ್ಲ. ದೇವಾಲಯದ ಜೀರ್ಣೋದ್ಧಾರಕ್ಕೆ ಕೈಹಾಕುವದಿಲ್ಲ ಎಂಬದಾಗಿ ಮಾತುಕೊಟ್ಟರು.

9 ಯಾಜಕನಾದ ಯೆಹೋಯಾದಾವನು ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು ಬಂದು ಅದರ ಮುಚ್ಚಳದಲ್ಲಿ ತೂತುಮಾಡಿ ಅದನ್ನು ಯೆಹೋವನ ಆಲಯದ ಬಾಗಲಿನ ಬಲಗಡೆಯಲ್ಲಿ ಯಜ್ಞವೇದಿಯ ಹತ್ತಿರ ಇಟ್ಟನು. ದ್ವಾರಪಾಲಕರಾದ ಯಾಜಕರು ಯೆಹೋವನ ಆಲಯಕ್ಕೆ ತರಲ್ಪಟ್ಟ ಹಣವನ್ನೆಲ್ಲಾ ಅದರಲ್ಲಿಯೇ ಹಾಕಿಸುತ್ತಿದ್ದರು.

10 ಪೆಟ್ಟಿಗೆಯಲ್ಲಿ ತಕ್ಕಷ್ಟು ಹಣಕೂಡಿದೆಯೆಂದು ಕಂಡು ಬಂದಾಗೆಲ್ಲಾ ರಾಜಲೇಖಕನೂ ಮಹಾಯಾಜಕನೂ ಬಂದು ಅದನ್ನು ಚೀಲಗಳಲ್ಲಿ ಹಾಕಿ ತೂಕಮಾಡಿ ಯೆಹೋವನ ಆಲಯದ ಹಣವು ಇಷ್ಟಿಷ್ಟು ಆಯಿತೆಂದು ಬರೆದುಕೊಂಡು

11 ಅದನ್ನು ಆಲಯದ ಕೆಲಸವನ್ನು ನಡಿಸುವ ಮೊಕ್ತೇಸರರಿಗೆ ಒಪ್ಪಿಸುವರು; ಇವರು ಅದನ್ನು ಅಲ್ಲಿ ಕೆಲಸಮಾಡುವ ಬಡಗಿ, ಶಿಲ್ಪಿ, ಉಪ್ಪಾರ, ಕಲ್ಲುಕುಟಿಕ

12 ಇವರ ಸಂಬಳಕ್ಕಾಗಿಯೂ ಮರ, ಕೆತ್ತಿದ ಕಲ್ಲು ಇವುಗಳನ್ನು ಕೊಂಡುಕೊಳ್ಳುವದಕ್ಕಾಗಿಯೂ ಆಲಯದ ಜೀರ್ಣೋದ್ಧಾರದ ಬೇರೆ ಎಲ್ಲಾ ವೆಚ್ಚಕ್ಕಾಗಿಯೂ ಉಪಯೋಗಿಸುವರು.

13 ಯೆಹೋವನ ಆಲಯಕ್ಕೆ ತರಲ್ಪಟ್ಟ ಹಣವನ್ನು ಜೀರ್ಣೋದ್ಧಾರಕಾರ್ಯದವರ ಸಂಬಳಕ್ಕಾಗಿ ಉಪಯೋಗಿಸಿದರೇ ಹೊರತು

14 ಯೆಹೋವನ ಆಲಯದ ಬೆಳ್ಳಿಯ ಬಟ್ಟಲು, ಕತ್ತರಿ, ಬೋಗುಣಿ, ತುತೂರಿ, ಬೆಳ್ಳಿಬಂಗಾರದ ಪಾತ್ರೆ ಇವುಗಳನ್ನು ಮಾಡುವದಕ್ಕಾಗಿ ಉಪಯೋಗಿಸಲಿಲ್ಲ.

15 ಕೆಲಸಗಾರರಿಗೆ ಸಂಬಳ ಕೊಡುವ ಮೊಕ್ತೇಸರರು ನಂಬಿಗಸ್ತರಾಗಿದ್ದದರಿಂದ ಅವರ ವಶಕ್ಕೆ ಕೊಡಲ್ಪಟ್ಟ ಹಣದ ಲೆಕ್ಕವನ್ನು ಯಾರೂ ಕೇಳಲಿಲ್ಲ.

16 ಅಪರಾಧ ಪ್ರಾಯಶ್ಚಿತ್ತಕ್ಕಾಗಿಯೂ ದೋಷಪರಿಹಾರಕ್ಕಾಗಿಯೂ ತರಲ್ಪಟ್ಟ ಹಣವು ಯಾಜಕರ ಭಾಗವಾಗಿತ್ತು; ಅದು ಯೆಹೋವನ ಆಲಯಕ್ಕೆ ಸೇರಲಿಲ್ಲ.

17 ಇದೇ ಕಾಲದಲ್ಲಿ ಅರಾಮ್ಯರ ಅರಸನಾದ ಹಜಾಯೇಲನು ಬಂದು ಗತ್ ಊರಿಗೆ ಮುತ್ತಿಗೆಹಾಕಿ ಅದನ್ನು ಸ್ವಾಧೀನಪಡಿಸಿಕೊಂಡು ಅಲ್ಲಿಂದ ಯೆರೂಸಲೇವಿುಗೆ ವಿರೋಧವಾಗಿ ಹೊರಟನು.

18 ಯೆಹೂದದ ಅರಸನಾದ ಯೆಹೋವಾಷನು ಇದನ್ನು ಕೇಳಿ ತಾನೂ ತನ್ನ ಪೂರ್ವಿಕರಾದ ಯೆಹೋಷಾಫಾಟ್, ಯೆಹೋರಾಮ್, ಅಹಜ್ಯ ಎಂಬ ಯೆಹೂದರಾಜರೂ ದೇವಸ್ಥಾನಕ್ಕೆ ಕಾಣಿಕೆಯಾಗಿ ಕೊಟ್ಟ ಒಡವೆಗಳು, ಯೆಹೋವನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿದ್ದ ಬಂಗಾರ ಇವುಗಳನ್ನು ತೆಗೆದುಕೊಂಡು ಅರಾಮ್ಯರ ಅರಸನಾದ ಹಜಾಯೇಲನಿಗೆ ಕಳುಹಿಸಿದನು. ಆಗ ಅವನು ಯೆರೂಸಲೇಮನ್ನು ಬಿಟ್ಟು ಹೋದನು.

19 ಯೆಹೋವಾಷನ ಉಳಿದ ಚರಿತ್ರೆಯೂ ಅವನ ಎಲ್ಲಾ ಕೃತ್ಯಗಳೂ ಯೆಹೂದರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.

20 ಯೆಹೋವಾಷನ ಉದ್ಯೋಗಸ್ಥರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿದರು.

21 ಅವರಲ್ಲಿ ಶಿಮೆಯಾತನ ಮಗನಾದ ಯೋಜಾಕಾರ್, ಶೋಮೇರನ ಮಗನಾದ ಯೆಹೋಜಾಬಾದ್ ಎಂಬವರು ಸಿಲ್ಲಾ ಊರಿಗೆ ಹೋಗುವ ಗಟ್ಟದ ದಾರಿಯಲ್ಲಿರುವ ವಿುಲ್ಲೋಕೋಟೆಯಲ್ಲಿ ಅವನನ್ನು ಕೊಂದರು. ಅವನ ಜನರು ಅವನ ಶವವನ್ನು ದಾವೀದ ನಗರದೊಳಗೆ ಅವನ ಕುಟುಂಬಶ್ಮಶಾನ ಭೂವಿುಯಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಅಮಚ್ಯನು ಅರಸನಾದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು