Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಅರಸುಗಳು 11 - ಕನ್ನಡ ಸತ್ಯವೇದವು J.V. (BSI)


ಅತಲ್ಯ

1 ಅಹಜ್ಯನು ಮರಣಹೊಂದಿದನೆಂಬದನ್ನು ಅವನ ತಾಯಿಯಾದ ಅತಲ್ಯಳು ಕೇಳಿದಾಗ ಫಕ್ಕನೆ ರಾಜಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟಳು.

2 ಆದರೆ ಅರಸನಾದ ಯೆಹೋರಾಮನ ಮಗಳೂ ಅಹಜ್ಯನ ತಂಗಿಯೂ ಆದ ಯೆಹೋಷೆಬಳೆಂಬಾಕೆಯು ಯಾರಿಗೂ ತಿಳಿಯದಂತೆ ತನ್ನ ಅಣ್ಣನ ಮಗನಾದ ಯೆಹೋವಾಷನನ್ನು ಹತವಾಗುವದಕ್ಕಿದ್ದ ರಾಜಪುತ್ರರ ಮಧ್ಯದಿಂದ ಅವನ ದಾದಿಯೊಡನೆ ತೆಗೆದುಕೊಂಡು ಹೋಗಿ ಮಲಗುವ ಕೋಣೆಯಲ್ಲಿ ಅಡಗಿಸಿಟ್ಟಳು.

3 ಹೀಗೆ ಅವನು ಅತಲ್ಯಳಿಂದ ಹತವಾಗದಂತೆ ತಪ್ಪಿಸಲ್ಪಟ್ಟು ಆರು ವರುಷಗಳವರೆಗೂ ಯೆಹೋಷೆಬಳೊಡನೆ ಗುಪ್ತವಾಗಿ ಯೆಹೋವನ ಆಲಯದಲ್ಲಿದ್ದನು. ಈ ಆರು ವರುಷಗಳಲ್ಲಿ ಅತಲ್ಯಳೇ ದೇಶವನ್ನು ಆಳುತ್ತಿದ್ದಳು.

4 ಏಳನೆಯ ವರುಷದಲ್ಲಿ ಯೆಹೋಯಾದಾವನು ಕಾರಿ ಎಂಬ ಸಿಪಾಯಿಗಳ ಮತ್ತು ಕಾವಲುದಂಡಿನವರ ಶತಾಧಿಪತಿಗಳನ್ನು ತನ್ನ ಹತ್ತಿರ ಯೆಹೋವನ ಆಲಯಕ್ಕೆ ಕರಿಸಿದನು. ಅಲ್ಲಿ ಅವನು ಅವರ ಸಂಗಡ ಪ್ರಮಾಣಪೂರ್ವಕವಾದ ಒಡಂಬಡಿಕೆಯನ್ನು ಮಾಡಿಕೊಂಡನಂತರ

5 ರಾಜಕುಮಾರನನ್ನು ತೋರಿಸಿ ಅವರಿಗೆ - ಸಬ್ಬತ್‍ದಿನದಲ್ಲಿ ಮನೆಗೆ ಹೋಗುವ ಸೈನ್ಯದ ಮೂರರಲ್ಲೊಂದು ಭಾಗವು ಅರಮನೆಯನ್ನು ಕಾಯಬೇಕು;

6 ಇನ್ನೊಂದು ಭಾಗವು ಸೂರ್ ಬಾಗಲಿನಲ್ಲಿಯೂ ಮತ್ತೊಂದು ಭಾಗವು ಕಾವಲುದಂಡಿನ ಹಿಂದಣ ಬಾಗಲಿನಲ್ಲಿಯೂ ಇರಬೇಕು. ಈ ಪ್ರಕಾರ ನೀವು ಅರಮನೆಯನ್ನು ಭದ್ರವಾಗಿ ಕಾಯಬೇಕು.

7 ಇದಲ್ಲದೆ ಸಬ್ಬತ್‍ದಿನದಲ್ಲಿ ಕಾಯುವದಕ್ಕಾಗಿ ಬರುವ ನಿಮ್ಮ ಇಮ್ಮಡಿಯಾದ ಸೈನ್ಯವು ಯೆಹೋವನ ಆಲಯದಲ್ಲಿರುವ ಅರಸನನ್ನು ಕಾಯಬೇಕು.

8 ನೀವು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅವನ ಸುತ್ತಲೂ ನಿಂತು ನಿಮ್ಮ ಗುಂಪಿನಲ್ಲಿ ನುಗ್ಗುವಂಥವನನ್ನು ಸಂಹರಿಸಬೇಕು. ಅರಸನು ಹೊರಗೆ ಹೋಗಿ ಬರುವಾಗೆಲ್ಲಾ ನೀವು ಅವನ ಜೊತೆಯಲ್ಲೇ ಇರಬೇಕು, ಇದೇ ನನ್ನ ಅಪ್ಪಣೆ ಎಂದು ಹೇಳಿದನು.

9 ಯಾಜಕನಾದ ಯೆಹೋಯಾದಾವನು ಆಜ್ಞಾಪಿಸಿದಂತೆ ಶತಾಧಿಪತಿಗಳು ಸಬ್ಬತ್‍ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಕಾಯುವದಕ್ಕಾಗಿ ಬರತಕ್ಕ ಸಿಪಾಯಿಗಳನ್ನು ಕರಕೊಂಡು ಅವನ ಬಳಿಗೆ ಬಂದರು.

10 ಅವನು ಆ ಶತಾಧಿಪತಿಗಳಿಗೆ ಯೆಹೋವನ ಆಲಯದಲ್ಲಿ ಇಡಲ್ಪಟ್ಟಿದ್ದ ದಾವೀದನ ಬರ್ಜಿಯನ್ನೂ ಗುರಾಣಿಗಳನ್ನೂ ಕೊಟ್ಟನು.

11 ಕಾವಲುದಂಡಿನವರು ಆಯುಧ ಹಿಡಿದುಕೊಂಡು ಅರಸನನ್ನು ಕಾಯುವದಕ್ಕೋಸ್ಕರ ದೇವಾಲಯದ ದಕ್ಷಿಣದಿಕ್ಕಿನ ಮೂಲೆಯಿಂದ ಯಜ್ಞವೇದಿಯವರೆಗೂ ಅಲ್ಲಿಂದ ಉತ್ತರದಿಕ್ಕಿನ ಮೂಲೆಯವರೆಗೂ ಸಾಲಾಗಿ ನಿಂತರು.

12 ಯೆಹೋಯಾದಾವನು ರಾಜಪುತ್ರನನ್ನು ಹೊರಗೆ ಕರಕೊಂಡು ಬಂದು ಅವನ ತಲೆಯ ಮೇಲೆ ಕಿರೀಟವನ್ನಿಟ್ಟು ಕೈಯಲ್ಲಿ ಧರ್ಮಶಾಸ್ತ್ರವನ್ನು ಕೊಟ್ಟು ಅವನಿಗೆ ರಾಜ್ಯಾಭಿಷೇಕಮಾಡಿದನು. ಕೂಡಲೆ ಜನರು ಚಪ್ಪಾಳೆಹೊಡೆದು ಅರಸನು ಚಿರಂಜೀವಿಯಾಗಿರಲಿ ಎಂದು ಕೂಗಿದರು.

13 ಅತಲ್ಯಳು ಕಾವಲುದಂಡಿನವರ ಮತ್ತು ಇತರ ಜನರ ಗದ್ದಲವನ್ನು ಕೇಳಿ ಅವರು ಕೂಡಿದ್ದ ಯೆಹೋವನ ಆಲಯಕ್ಕೆ ಬಂದಳು.

14 ಅಲ್ಲಿ ಅರಸನು ಪದ್ಧತಿಯ ಪ್ರಕಾರ ಸ್ತಂಭದ ಬಳಿಯಲ್ಲಿ ನಿಂತಿದ್ದನು; ಅಧಿಪತಿಗಳೂ ತುತೂರಿಗಳನ್ನು ಊದುವವರೂ ಅರಸನ ಹತ್ತಿರ ಇದ್ದರು. ಸಾಧಾರಣ ಜನರೆಲ್ಲರೂ ಸಂತೋಷದಿಂದ ಕೊಂಬೂದುತ್ತಿದ್ದರು. ಇದನ್ನು ಕಂಡ ಕೂಡಲೆ ಆಕೆಯು ಬಟ್ಟೆಗಳನ್ನು ಹರಿದುಕೊಂಡು - ದ್ರೋಹ, ದ್ರೋಹ ಎಂದು ಕೂಗಿದಳು.

15 ಆಗ ಯಾಜಕನಾದ ಯೆಹೋಯಾದಾವನು ಸೇನಾನಿಗಳಾದ ಶತಾಧಿಪತಿಗಳಿಗೆ - ಈಕೆಯನ್ನು ಯೆಹೋವನ ಆಲಯದಲ್ಲಿ ಕೊಲ್ಲಬೇಡಿರಿ; ಎರಡು ಸಾಲು ಸಿಪಾಯಿಗಳು ಈಕೆಯನ್ನು ನಡುವೆ ಮಾಡಿ ಹೊರಗೆ ಕರಕೊಂಡು ಹೋಗಲಿ; ಮತ್ತು ಈಕೆಯನ್ನು ಹಿಂಬಾಲಿಸುವಂಥವರನ್ನು ಕತ್ತಿಯಿಂದ ಕೊಲ್ಲಿರಿ ಎಂದು ಆಜ್ಞಾಪಿಸಿದನು.

16 ಅವರು ಆಕೆಯನ್ನು ಹಿಡಿದು ಕುದುರೆಗಳ ಬಾಗಲಿನಿಂದ ಅರಮನೆಗೆ ಒಯ್ದು ಅಲ್ಲಿ ಹತಿಸಿದರು.

17 ಅನಂತರ ಯೆಹೋಯಾದಾವನ ಪ್ರೇರಣೆಯಿಂದ ಅರಸನೂ ಪ್ರಜೆಗಳೂ ತಾವು ಯೆಹೋವನ ಪ್ರಜೆಗಳಾಗಿರುವದಾಗಿ ಆತನಿಗೆ ಪ್ರಮಾಣಮಾಡಿದರು. ಇದಲ್ಲದೆ ರಾಜಪ್ರಜೆಗಳಿಗೂ ಒಡಂಬಡಿಕೆಯಾಯಿತು.

18 ಯೆಹೂದ್ಯರೆಲ್ಲರೂ ಬಾಳನ ದೇವಸ್ಥಾನಕ್ಕೆ ಹೋಗಿ ಬಾಳನ ಪೂಜಾರಿಯಾದ ಮತ್ತಾನನನ್ನು ವೇದಿಗಳ ಮುಂದೆಯೇ ಕೊಂದು ದೇವಸ್ಥಾನವನ್ನೂ ಅದರಲ್ಲಿದ್ದ ವೇದಿ ವಿಗ್ರಹಗಳನ್ನೂ ಸಂಪೂರ್ಣವಾಗಿ ಹಾಳು ಮಾಡಿದರು.

19 ಯೆಹೋಯಾದಾವನು ದೇವಾಲಯಕ್ಕೆ ಕಾವಲಿಟ್ಟು ಶತಾಧಿಪತಿಗಳು, ಕಾರಿ ಎನಿಸಿಕೊಳ್ಳುವ ಸೈನ್ಯ, ಕಾವಲುದಂಡು, ಸಾಧಾರಣ ಜನರು ಇವರೊಡನೆ ಅರಸನನ್ನು ಯೆಹೋವನ ಆಲಯದಿಂದ ಕಾವಲುದಂಡಿನವರ ಬಾಗಲಿನ ಮಾರ್ಗವಾಗಿ ಅರಮನೆಗೆ ಕರಕೊಂಡು ಹೋಗಿ ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು. ದೇಶದವರೆಲ್ಲರೂ ಬಹಳವಾಗಿ ಸಂತೋಷಪಟ್ಟರು;

20 ಪಟ್ಟಣದಲ್ಲಿ ಶಾಂತಿಯಿತ್ತು; ಅತಲ್ಯಳನ್ನು ಅರಮನೆಯಲ್ಲಿ ಕತ್ತಿಯಿಂದ ಸಂಹರಿಸಿದರು.

21 ಯೆಹೋವಾಷನು ಅರಸನಾದಾಗ ಏಳು ವರುಷದವನಾಗಿದ್ದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು