Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಅರಸುಗಳು 10 - ಕನ್ನಡ ಸತ್ಯವೇದವು J.V. (BSI)


ಯೇಹುವಿನ ಕ್ರೂರತನವೂ ಇಸ್ರಾಯೇಲ್‍ರಾಜ್ಯದ ಕ್ಷಯವೂ

1 ಸಮಾರ್ಯಪಟ್ಟಣದಲ್ಲಿ ಅಹಾಬನ ಸಂತಾನದ ಎಪ್ಪತ್ತುಮಂದಿ ರಾಜಪುತ್ರರಿದ್ದರು. ಯೇಹುವು ಆ ಪಟ್ಟಣದಲ್ಲಿದ್ದ ಇಜ್ರೇಲಿನ ಅಧಿಕಾರಿಗಳಾದ ಹಿರಿಯರಿಗೂ ರಾಜಪುತ್ರಪಾಲಕರಿಗೂ ಪತ್ರಗಳನ್ನು ಬರೆದು ಅವುಗಳನ್ನು ದೂತರ ಮುಖಾಂತರವಾಗಿ ಕಳುಹಿಸಿದನು.

2 ಅವುಗಳಲ್ಲಿ - ನಿಮ್ಮ ವಶದಲ್ಲಿ ನಿಮ್ಮ ಯಜಮಾನನ ಮಕ್ಕಳೂ ರಥಾಶ್ವಬಲಗಳೂ ಕೋಟೆಕೊತ್ತಲುಗಳುಳ್ಳ ಪಟ್ಟಣವೂ ಯುದ್ಧಾಯುಧಗಳೂ ಇರುತ್ತವಷ್ಟೆ.

3 ಈ ಪತ್ರವು ನಿಮಗೆ ಮುಟ್ಟಿದೊಡನೆ ಆ ರಾಜಪುತ್ರರಲ್ಲಿ ಉತ್ತಮನೂ ಸಮರ್ಥನೂ ಆದ ಒಬ್ಬನನ್ನು ಆರಿಸಿಕೊಂಡು ಅವನನ್ನು ಅವನ ತಂದೆಯ ಸಿಂಹಾಸನದ ಮೇಲೆ ಕುಳ್ಳಿರಿಸಿ ನಿಮ್ಮ ಯಜಮಾನನ ಕುಟುಂಬದವರಿಗೋಸ್ಕರ ಯುದ್ಧಮಾಡಿರಿ ಎಂಬದಾಗಿ ಬರೆದಿತ್ತು.

4 ಅವರು ಬಹಳವಾಗಿ ಭಯಪಟ್ಟು - ಇಬ್ಬರು ರಾಜರೂ ಅವನ ಮುಂದೆ ನಿಲ್ಲಲಾರದೆ ಹೋದರು; ನಾವು ನಿಲ್ಲುವದು ಹೇಗೆ ಅಂದುಕೊಂಡರು.

5 ಅನಂತರ ರಾಜಗೃಹಾಧಿಪತಿ, ಪುರಾಧಿಕಾರಿ, ಹಿರಿಯರು, ರಾಜಪುತ್ರಪಾಲಕರು ಇವರೆಲ್ಲಾ ಕೂಡಿ ಯೇಹುವಿಗೆ - ನಾವು ನಿನ್ನ ಆಜ್ಞಾಧಾರಕರಾದ ಸೇವಕರು; ನಾವಾಗಿ ನಮಗೊಬ್ಬ ಅರಸನನ್ನು ನೇವಿುಸಿಕೊಳ್ಳುವದಿಲ್ಲ; ನಿನ್ನ ಚಿತ್ತವೇ ನೆರವೇರಲಿ ಎಂದು ಹೇಳಿಕಳುಹಿಸಿದರು.

6 ಆಗ ಯೇಹುವು ಇನ್ನೊಂದು ಪತ್ರದ ಮೂಲಕವಾಗಿ ಅವರಿಗೆ - ನೀವು ನನ್ನ ಪಕ್ಷದವರಾಗಿದ್ದು ನನ್ನ ಆಜ್ಞಾನುಸಾರವಾಗಿ ನಡೆದುಕೊಳ್ಳಮನಸ್ಸುಳ್ಳವರಾಗಿದ್ದರೆ ನಾಳೆ ಇಷ್ಟು ಹೊತ್ತಿಗೆ ನಿಮ್ಮ ಯಜಮಾನನ ಸಂತಾನದವರ ತಲೆಗಳೊಡನೆ ಬನ್ನಿರಿ ಎಂದು ಆಜ್ಞಾಪಿಸಿದನು. ಎಪ್ಪತ್ತು ಮಂದಿ ರಾಜಪುತ್ರರು ಪಟ್ಟಣದ ಪ್ರಧಾನಪುರುಷರ ಪರಾಂಬರಿಕೆಯಲ್ಲಿದ್ದರು.

7 ಪ್ರಧಾನ ಪುರುಷರು ಪತ್ರವನ್ನು ಓದಿದೊಡನೆ ಆ ಎಪ್ಪತ್ತು ಮಂದಿಯನ್ನು ಹಿಡಿದು ಕೊಂದು ಅವರ ತಲೆಗಳನ್ನು ಪುಟ್ಟಿಗಳಲ್ಲಿ ಹಾಕಿ ಇಜ್ರೇಲಿನಲ್ಲಿದ್ದ ಯೇಹುವಿಗೆ ಕಳುಹಿಸಿದರು.

8 ರಾಜಪುತ್ರರ ತಲೆಗಳನ್ನು ತಂದಿದ್ದಾರೆಂಬ ವರ್ತಮಾನವು ಯೇಹುವಿಗೆ ಮುಟ್ಟಿದಾಗ ಅವನು - ಬೆಳಗಾಗುವ ತನಕ ಅವುಗಳನ್ನು ಹೆಬ್ಬಾಗಲಿನ ಹತ್ತಿರ ಎರಡು ರಾಶಿಗಳಾಗಿ ಹಾಕಬೇಕೆಂದು ಆಜ್ಞಾಪಿಸಿದನು.

9 ಮರುದಿನ ಬೆಳಿಗ್ಗೆ ಅವನು ಅವುಗಳ ಹತ್ತಿರ ಹೋಗಿ ಎಲ್ಲಾ ಜನರ ಎದುರಿಗೆ ನಿಂತು ಅವರಿಗೆ - ನೀವು ನಿರಪರಾಧಿಗಳು; ನಾನಾದರೋ ನನ್ನ ಯಜಮಾನನಿಗೆ ವಿರೋಧವಾಗಿ ಒಳಸಂಚುಮಾಡಿ ಅವನನ್ನು ಕೊಂದವನು; ಆದರೆ ಇವರನ್ನೆಲ್ಲಾ ಹತಿಸಿದವರಾರು?

10 ಇಗೋ ಯೆಹೋವನು ಅಹಾಬನ ಮನೆಯವರನ್ನು ಕುರಿತು ಹೇಳಿದ ಮಾತುಗಳೆಲ್ಲಾ ತಪ್ಪದೆ ನೆರವೇರುವವೆಂದು ತಿಳಿದುಕೊಳ್ಳಿರಿ. ಯೆಹೋವನು ತನ್ನ ಸೇವಕನಾದ ಎಲೀಯನ ಮುಖಾಂತರವಾಗಿ ಹೇಳಿದ್ದನ್ನು ಮಾಡಿದ್ದಾನಷ್ಟೆ ಎಂದು ಹೇಳಿದನು.

11 ಅನಂತರ ಅವನು ಇಜ್ರೇಲಿನಲ್ಲಿ ಉಳಿದ ಅಹಾಬನ ಕುಟುಂಬದವರನ್ನೂ ಅವನ ಸರದಾರರು, ಆಪ್ತವಿುತ್ರರು, ಪುರೋಹಿತರು ಇವರನ್ನೂ ಸಂಹರಿಸಿದನು; ಒಬ್ಬನನ್ನೂ ಉಳಿಸಲಿಲ್ಲ.

12 ಆಮೇಲೆ ಯೇಹುವು ಸಮಾರ್ಯಕ್ಕೆ ಹೊರಟು ಹೋದನು. ಅವನು ದಾರಿಯಲ್ಲಿ ಕುರುಬರ ಛತ್ರಕ್ಕೆ ಬಂದಾಗ

13 ಯೆಹೂದ್ಯರ ಅರಸನಾದ ಅಹಜ್ಯನ ಸಹೋದರರನ್ನು ಕಂಡು ಅವರನ್ನು - ನೀವು ಯಾರು ಎಂದು ಕೇಳಿದನು. ಅದಕ್ಕೆ ಅವರು - ನಾವು ಅಹಜ್ಯನ ಸಹೋದರರು; ರಾಜಪುತ್ರರನ್ನೂ ರಾಜಮಾತೆಯ ಮಕ್ಕಳನ್ನೂ ವಂದಿಸುವದಕ್ಕೋಸ್ಕರ ಇಲ್ಲಿಗೆ ಬಂದಿದ್ದೇವೆ ಎಂದು ಉತ್ತರಕೊಟ್ಟರು.

14 ಆಗ ಯೇಹುವು ತನ್ನ ಸೇವಕರಿಗೆ - ಅವರನ್ನು ಸಜೀವಿಗಳಾಗಿ ಹಿಡಿಯಿರಿ ಎಂದು ಆಜ್ಞಾಪಿಸಿದನು. ಅವರು ಅವರನ್ನು ಹಿಡಿದು ವಧಿಸಿ ಆ ಛತ್ರದ ಬಾವಿಯಲ್ಲಿ ಹಾಕಿದರು. ಅವರು ನಾಲ್ವತ್ತೆರಡು ಮಂದಿಯಿದ್ದರು; ಅವರಲ್ಲಿ ಒಬ್ಬನನ್ನೂ ಬಿಡಲಿಲ್ಲ.

15 ಅವನು ಅಲ್ಲಿಂದ ಮುಂದೆ ಹೋಗುತ್ತಿರುವಾಗ ತನ್ನನ್ನು ಎದುರುಗೊಳ್ಳುವದಕ್ಕಾಗಿ ಬಂದ ರೇಕಾಬನ ಮಗನಾದ ಯೆಹೋನಾದಾಬನನ್ನು ಕಂಡು ವಂದಿಸಿ - ನಿನ್ನ ವಿಷಯದಲ್ಲಿ ನನ್ನ ಮನಸ್ಸು ಯಥಾರ್ಥವಾಗಿರುವಂತೆ ನಿನ್ನ ಮನಸ್ಸೂ ಯಥಾರ್ಥವಾಗಿರುತ್ತದೋ ಎಂದು ಕೇಳಿದನು. ಅವನು - ಹೌದು ಎಂದು ಉತ್ತರಕೊಟ್ಟನು. ಆಗ ಯೇಹುವು - ಹಾಗಾದರೆ ನಿನ್ನ ಕೈಕೊಡು ಅನ್ನಲು ಅವನು ಕೈಕೊಟ್ಟನು.

16 ಯೇಹುವು ಅವನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ನನ್ನ ಜೊತೆಯಲ್ಲಿ ಬಂದು ಯೆಹೋವನಲ್ಲಿ ನನಗಿರುವ ಆಸಕ್ತಿಯನ್ನು ನೋಡು ಎಂದು ಹೇಳಿ ಅವನನ್ನು ಕೈ ಹಿಡಿದು ತನ್ನ ರಥದಲ್ಲಿ ಕರಕೊಂಡು ಹೋದನು.

17 ಸಮಾರ್ಯವನ್ನು ಸೇರಿದನಂತರ ಅಲ್ಲಿ ಉಳಿದಿದ್ದ ಅಹಾಬನ ಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟನು. ಹೀಗೆ ಯೆಹೋವನು ಎಲೀಯನ ಮುಖಾಂತರವಾಗಿ ಹೇಳಿಸಿದ ಮಾತು ನೆರವೇರಿತು.

18 ತರುವಾಯ ಅವನು ಎಲ್ಲಾ ಜನರನ್ನು ಕೂಡಿಸಿ ಅವರಿಗೆ - ಅಹಾಬನು ಬಾಳನನ್ನು ಸ್ವಲ್ಪ ಮಾತ್ರ ಸೇವಿಸಿದನು; ಯೇಹುವಾದರೋ ಅಧಿಕವಾಗಿ ಸೇವಿಸಬೇಕೆಂದಿರುತ್ತಾನೆ.

19 ಆದದರಿಂದ ನೀವು ಬಾಳನ ಎಲ್ಲಾ ಪ್ರವಾದಿಗಳನ್ನೂ ಭಕ್ತರನ್ನೂ ಯಾಜಕರನ್ನೂ ನನ್ನ ಬಳಿಗೆ ಕರಕೊಂಡು ಬನ್ನಿರಿ; ನಾನು ಬಾಳನಿಗೋಸ್ಕರ ಮಹಾಯಜ್ಞವನ್ನು ಸಮರ್ಪಿಸಬೇಕೆಂದಿರುತ್ತೇನಾದದರಿಂದ ಅವರಲ್ಲಿ ಒಬ್ಬನೂ ಬಾರದಿರಕೂಡದು; ಬಾರದವನು ಸಾಯಬೇಕು ಎಂದು ಹೇಳಿದನು. ಅವನು ಬಾಳನ ಭಕ್ತರನ್ನು ಸಂಹರಿಸಬೇಕೆಂದು ಈ ಯುಕ್ತಿಯನ್ನು ಮಾಡಿದನು.

20 ಇದಲ್ಲದೆ ಅವನು ದೂತರ ಮುಖಾಂತರವಾಗಿ - ಬಾಳನ ಎಲ್ಲಾ ಭಕ್ತರೂ ತಮ್ಮನ್ನು ಶುದ್ಧಪಡಿಸಿಕೊಂಡು ಜಾತ್ರೆಗೆ ಬರಬೇಕೆಂದು ಇಸ್ರಾಯೇಲ್ಯರ ಸಮಸ್ತ ಪ್ರಾಂತಗಳಲ್ಲಿ ಪ್ರಕಟಿಸಿದನು.

21 ಆಗ ಬಾಳನ ಭಕ್ತರಲ್ಲಿ ಒಬ್ಬನೂ ತಪ್ಪದೆ ಎಲ್ಲರೂ ಕೂಡಿ ಬಂದದರಿಂದ ಬಾಳನ ದೇವಸ್ಥಾನವೂ ಪೂರ್ಣವಾಗಿ ತುಂಬಿತು.

22 ಯೇಹುವು ವಸ್ತ್ರಾಗಾರದ ಅಧಿಪತಿಗೆ - ಬಾಳನ ಭಕ್ತರೆಲ್ಲರಿಗೂ ಬಟ್ಟೆಗಳನ್ನು ಕೊಡು ಎಂದು ಆಜ್ಞಾಪಿಸಲು ಅವನು ತಂದುಕೊಟ್ಟನು.

23 ಅನಂತರ ಯೇಹುವು ರೇಕಾಬನ ಮಗನಾದ ಯೆಹೋನಾದಾಬನೊಡನೆ ದೇವಸ್ಥಾನವನ್ನು ಪ್ರವೇಶಿಸಿ ಬಾಳನ ಭಕ್ತರಿಗೆ - ಯೆಹೋವನ ಭಕ್ತರು ನಿಮ್ಮ ಮಧ್ಯದಲ್ಲಿ ಬಂದಿರುತ್ತಾರೋ ವಿಚಾರಿಸಿ ನೋಡಿರಿ; ಬಾಳನ ಭಕ್ತರು ಮಾತ್ರ ಅಲ್ಲಿರಬೇಕು ಎಂದು ಹೇಳಿದನು.

24 ಆಮೇಲೆ ಅವರು ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸುವದಕ್ಕೆ ಹೋದರು. ಇದಕ್ಕೆ ಮೊದಲೇ ಅವನು ದೇವಸ್ಥಾನದ ಹೊರಗೆ ಎಂಭತ್ತು ಮಂದಿಯನ್ನು ಕಾಯುವದಕ್ಕಾಗಿ ಇರಿಸಿ ಅವರಿಗೆ - ನಾನು ಯಾರನ್ನು ನಿಮ್ಮ ಕೈಗೆ ಸಿಕ್ಕುವ ಹಾಗೆ ಮಾಡುವೆನೋ ಅವರಲ್ಲಿ ಒಬ್ಬನನ್ನೂ ಬಿಡಬೇಡಿರಿ; ಬಿಟ್ಟರೆ ಅವನ ಪ್ರಾಣಕ್ಕೆ ಬದಲಾಗಿ ನಿಮ್ಮ ಪ್ರಾಣವು ಹೋಗುವದು ಎಂಬದಾಗಿ ಆಜ್ಞಾಪಿಸಿದ್ದನು.

25 ಸರ್ವಾಂಗಹೋಮವನ್ನು ಅರ್ಪಿಸಿದ ಕೂಡಲೆ ಯೇಹುವು ಕಾವಲುಗಾರರಿಗೂ ಸೇನಾಪತಿಗಳಿಗೂ - ಒಳಗೆ ಹೋಗಿ ಅವರನ್ನೆಲ್ಲಾ ಸಂಹರಿಸಿರಿ; ಒಬ್ಬನೂ ತಪ್ಪಿಸಿಕೊಳ್ಳಕೂಡದು ಎಂದು ಹೇಳಿದನು. ಅವರು ಒಳಗೆ ಹೋಗಿ ಅವರನ್ನು ಕತ್ತಿಯಿಂದ ಕೊಂದು ಅವರ ಶವಗಳನ್ನು ಹೊರಗೆ ಹಾಕಿ ಬಾಳನ ದೇವಸ್ಥಾನಕ್ಕೆ ಸೇರಿದ ಕೇರಿಯನ್ನು ಪ್ರವೇಶಿಸಿ

26 ಅಲ್ಲಿನ ವಿಗ್ರಹ ಸ್ತಂಭಗಳನ್ನು ತೆಗೆದುಕೊಂಡು ಬಂದು ಸುಟ್ಟುಬಿಟ್ಟರು.

27 ಇದಲ್ಲದೆ ಬಾಳನ ವಿಗ್ರಹಸ್ತಂಭವನ್ನೂ ದೇವಸ್ಥಾನವನ್ನೂ ಕೆಡವಿ ಹಾಳುಮಾಡಿದರು. ಅಂದಿನಿಂದ ಇಂದಿನವರೆಗೂ ಆ ಸ್ಥಳವನ್ನು ಶೌಚಕ್ಕಾಗಿ ಉಪಯೋಗಿಸುತ್ತಾರೆ.

28 ಹೀಗೆ ಯೇಹುವು ಇಸ್ರಾಯೇಲ್ಯರಲ್ಲಿ ಬಾಳನ ಪೂಜೆಯನ್ನು ನಿಲ್ಲಿಸಿದನು.

29 ಆದರೂ ಅವನು ಇಸ್ರಾಯೇಲ್ಯರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಬೇತೇಲ್, ದಾನ್ ಎಂಬ ಊರುಗಳಲ್ಲಿದ್ದ ಚಿನ್ನದ ಬಸವಗಳನ್ನು ಪೂಜಿಸುತ್ತಿದ್ದನು.

30 ಯೆಹೋವನು ಯೇಹುವಿಗೆ - ನೀನು ನನ್ನ ದೃಷ್ಟಿಗೆ ಸರಿಯಾದದ್ದನ್ನು ನಡಿಸಿ ನನ್ನ ಮೆಚ್ಚಿಕೆಯನ್ನು ಪಡೆದಿ; ಅಹಾಬನ ಮನೆಯವರನ್ನು ಕುರಿತು ನನ್ನ ಚಿತ್ತವನ್ನು ನೆರವೇರಿಸಿದಿ; ಆದದರಿಂದ ನಿನ್ನ ಸಂತಾನದವರು ನಾಲ್ಕನೆಯ ತಲೆಯವರೆಗೂ ಇಸ್ರಾಯೇಲ್ ಸಿಂಹಾಸನದ ಮೇಲೆ ಕೂತುಕೊಳ್ಳುವರು ಎಂದು ಹೇಳಿದನು.

31 ಆದರೆ ಅವನು ಇಸ್ರಾಯೇಲ್‍ದೇವರಾದ ಯೆಹೋವನ ಧರ್ಮಶಾಸ್ತ್ರವನ್ನು ಪೂರ್ಣಮನಸ್ಸಿನಿಂದ ಕೈಕೊಳ್ಳುವದಕ್ಕೆ ಪ್ರಯತ್ನಿಸಲಿಲ್ಲ; ಇಸ್ರಾಯೇಲ್ಯರನ್ನು ಪಾಪಕ್ಕೆ ಪ್ರೇರಿಸಿದ ಯಾರೊಬ್ಬಾಮನ ಮಾರ್ಗವನ್ನು ಬಿಡಲಿಲ್ಲ.

32 ಯೆಹೋವನು ಈ ಕಾಲದಲ್ಲಿ ಇಸ್ರಾಯೇಲ್ಯರನ್ನು ಕುಗ್ಗಿಸತೊಡಗಿದನು. ಹಜಾಯೇಲನು ಬಂದು ಯೊರ್ದನಿನ ಪೂರ್ವದಿಕ್ಕಿಗೂ

33 ಅರ್ನೊನ್‍ತಗ್ಗಿನ ಅರೋಯೇರ್ ಪಟ್ಟಣದ ಉತ್ತರದಿಕ್ಕಿಗೂ ಇರುವ ಗಿಲ್ಯಾದ್ ಬಾಷಾನ್ ಪ್ರಾಂತಗಳಲ್ಲಿ ವಾಸವಾಗಿದ್ದ ಗಾದ್ ರೂಬೇನ್ ಮನಸ್ಸೆ ಕುಲಗಳವರನ್ನೂ ಬೇರೆ ಎಲ್ಲಾ ಪ್ರಾಂತಗಳಲ್ಲಿರುವ ಇಸ್ರಾಯೇಲ್ಯರನ್ನೂ ಬಾಧಿಸಿದನು.

34 ಯೇಹುವಿನ ಉಳಿದ ಚರಿತ್ರೆಯೂ ಅವನ ಶೂರಕೃತ್ಯಗಳ ವಿವರವೂ ಇಸ್ರಾಯೇಲ್‍ರಾಜಕಾಲ ವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.

35 ಅವನು ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ಸಮಾರ್ಯದಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಯೆಹೋವಾಹಾಜನು ಅರಸನಾದನು. ಯೇಹುವು ಸಮಾರ್ಯಪಟ್ಟಣದಲ್ಲಿದ್ದುಕೊಂಡು ಇಸ್ರಾಯೇಲ್ಯರನ್ನು ಆಳಿದ್ದು ಇಪ್ಪತ್ತೆಂಟು ವರುಷ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು