1 ಸಮುಯೇಲ 4 - ಕನ್ನಡ ಸತ್ಯವೇದವು J.V. (BSI)1 ಸಮುವೇಲನು ಇಸ್ರಾಯೇಲ್ಯರೆಲ್ಲರಿಗೆ ದೈವೋತ್ತರಗಳನ್ನು ತಿಳಿಸುತ್ತಿದ್ದನು. ಇಸ್ರಾಯೇಲ್ಯರು ಫಿಲಿಷ್ಟಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟು ಎಬೆನೆಜೆರಿನ ಸಮೀಪದಲ್ಲಿ ಪಾಳೆಯಮಾಡಿಕೊಂಡರು; ಫಿಲಿಷ್ಟಿಯರು ಬಂದು ಅಫೇಕಿನಲ್ಲಿ ಇಳುಕೊಂಡರು. ಫಿಲಿಷ್ಟಿಯರು ಇಸ್ರಾಯೇಲ್ಯರನ್ನು ಜಯಿಸಿದ್ದು ಏಲಿಯ ಮಕ್ಕಳ ಮರಣ 2 ಇವರು ಇಸ್ರಾಯೇಲ್ಯರಿಗೆ ಎದುರಾಗಿ ವ್ಯೂಹಕಟ್ಟಿ ಯುದ್ಧಮಾಡಲು ಇಸ್ರಾಯೇಲ್ಯರು ಸೋತರು; ಫಿಲಿಷ್ಟಿಯರು ರಣರಂಗದಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ಇಸ್ರಾಯೇಲ್ಯರನ್ನು ಸಂಹರಿಸಿದರು. 3 ಇಸ್ರಾಯೇಲ್ಯರು ತಮ್ಮ ಪಾಳೆಯಕ್ಕೆ ಹಿಂದಿರುಗಿದ ಮೇಲೆ ಅವರ ಹಿರಿಯರು ಅವರಿಗೆ - ಯೆಹೋವನು ಈ ಹೊತ್ತು ನಮ್ಮನ್ನು ಫಿಲಿಷ್ಟಿಯರಿಂದ ಅಪಜಯಪಡಿಸಿದ್ದೇಕೆ? ಶೀಲೋವಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರಿಸೋಣ; ಆತನು ನಮ್ಮ ಮಧ್ಯದಲ್ಲಿ ಬಂದು ಶತ್ರುಗಳ ಕೈಗೆ ನಮ್ಮನ್ನು ತಪ್ಪಿಸಲಿ ಎಂದು ಆಲೋಚನೆ ಹೇಳಿದ್ದರಿಂದ 4 ಅವರು ಜನರನ್ನು ಕಳುಹಿಸಿ ಕೆರೂಬಿಗಳ ಮಧ್ಯದಲ್ಲಿ ಆಸೀನನಾಗಿರುವ ಸೈನ್ಯಾಧೀಶ್ವರ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರಿಸಿದರು. ಏಲಿಯ ಇಬ್ಬರು ಮಕ್ಕಳಾದ ಹೊಫ್ನಿ, ಫೀನೆಹಾಸ್ ಎಂಬವರು ದೇವರ ಒಡಂಬಡಿಕೆಯ ಮಂಜೂಷದ ಸಂಗಡ ಇದ್ದರು. 5 ಯೆಹೋವನ ಒಡಂಬಡಿಕೆಯ ಮಂಜೂಷವು ಪಾಳೆಯಕ್ಕೆ ಬಂದಾಗ ಇಸ್ರಾಯೇಲ್ಯರೆಲ್ಲರೂ ಭೂವಿುಯು ಪ್ರತಿಧ್ವನಿಕೊಡುವಷ್ಟು ಆರ್ಭಟಿಸಿದರು. 6 ಫಿಲಿಷ್ಟಿಯರು ಇದನ್ನು ಕೇಳಿ - ಇಬ್ರಿಯರ ಪಾಳೆಯದಲ್ಲಿ ಇಂಥ ಆರ್ಭಟಕ್ಕೇನು ಕಾರಣವೆಂದು ವಿಚಾರಿಸುವಲ್ಲಿ ಯೆಹೋವನ ಮಂಜೂಷವು ಪಾಳೆಯದಲ್ಲಿ ಬಂದದ್ದೇ ಕಾರಣವೆಂದು ಗೊತ್ತಾಯಿತು. 7 ದೇವರು ಇವರ ಪಾಳೆಯಕ್ಕೆ ಬಂದಿದ್ದಾನಲ್ಲಾ ಎಂದು ಫಿಲಿಷ್ಟಿಯರು ಬಹಳವಾಗಿ ಭಯಪಟ್ಟು - ಅಯ್ಯೋ, ಮುಂಚೆ ಹೀಗಿದ್ದಿಲ್ಲ. 8 ಅಯ್ಯೋ, ಪ್ರತಾಪವುಳ್ಳ ಈ ದೇವರುಗಳ ಕೈಯಿಂದ ನಮ್ಮನ್ನು ಬಿಡಿಸುವವರಾರು? ಐಗುಪ್ತ್ಯರನ್ನು ಅರಣ್ಯದಲ್ಲಿ ಸಂಪೂರ್ಣವಾಗಿ ನಾಶಮಾಡಿಬಿಟ್ಟ ದೇವರುಗಳು ಇವರೇ ಅಲ್ಲವೋ! 9 ಫಿಲಿಷ್ಟಿಯರೇ, ಬಲಗೊಳ್ಳಿರಿ, ಶೂರರಾಗಿರ್ರಿ; ನಿಮಗೆ ದಾಸರಾಗಿದ್ದ ಇಬ್ರಿಯರಿಗೆ ನೀವೇ ದಾಸರಾದೀರಿ. 10 ಆದಕಾರಣ ಶೌರ್ಯದಿಂದ ಯುದ್ಧಮಾಡಬೇಕು ಎಂದು ಹೇಳಿಕೊಂಡು ಯುದ್ಧಮಾಡಲು ಇಸ್ರಾಯೇಲ್ಯರು ಸೋತು ತಮ್ಮ ತಮ್ಮ ಮನೆಗಳಿಗೆ ಓಡಿಹೋದರು. ಮಹಾಸಂಹಾರವಾಯಿತು; ಇಸ್ರಾಯೇಲ್ಯರಲ್ಲಿ ಮೂವತ್ತು ಸಾವಿರ ಕಾಲಾಳುಗಳು ಮಡಿದರು. 11 ದೇವರ ಮಂಜೂಷವು ಶತ್ರುವಶವಾಯಿತು; ಏಲಿಯ ಮಕ್ಕಳಾದ ಹೊಫ್ನಿ ಫೀನೆಹಾಸರು ಹತರಾದರು. 12 ಅದೇ ದಿವಸ ಒಬ್ಬ ಬೆನ್ಯಾಮೀನ್ಯನು ರಣರಂಗದಿಂದ ತಪ್ಪಿಸಿಕೊಂಡು ತನ್ನ ಬಟ್ಟೆಗಳನ್ನು ಹರಿದುಕೊಂಡು ತಲೆಯ ಮೇಲೆ ಮಣ್ಣುಹಾಕಿಕೊಂಡು 13 ಶೀಲೋವಿಗೆ ಬಂದು ನಡೆದದ್ದನ್ನು ತಿಳಿಸಲಾಗಿ ಜನರೆಲ್ಲಾ ಗೋಳಾಡತೊಡಗಿದರು. ದೇವರ ಮಂಜೂಷವೇನಾಯಿತೋ ಎಂಬ ಚಿಂತೆಯಿಂದ ಮಂದಿರದ್ವಾರದ ಬಳಿಯಲ್ಲಿ ಆಸೀನನಾಗಿ ದಾರಿಯನ್ನು ನೋಡುತ್ತಿದ್ದ ಏಲಿಯು ಆ ದುಃಖ ಧ್ವನಿಯನ್ನು ಕೇಳಿ 14 ಈ ಗದ್ದಲವೇನೆಂದು ವಿಚಾರಿಸಲು ಒಡನೆ ಆ ಮನುಷ್ಯನು ಏಲಿಯ ಬಳಿಗೆ ಬಂದು ಎಲ್ಲವನ್ನೂ ತಿಳಿಸಿದನು. 15 ಏಲಿಯು ತೊಂಭತ್ತೆಂಟು ವರುಷದವನು; ಕಣ್ಣುಗಳು ಇಂಗಿಹೋಗಿ ಕುರುಡನಾಗಿದ್ದನು. 16 ಆ ಮನುಷ್ಯನು ಏಲಿಗೆ - ನಾನು ರಣರಂಗದಲ್ಲಿದ್ದವನು; ಈ ಹೊತ್ತೇ ಅಲ್ಲಿಂದ ಓಡಿಬಂದೆನು ಅನ್ನಲು ಏಲಿಯು ಅವನನ್ನು - ನನ್ನ ಮಗನೇ, ವರ್ತಮಾನವೇನು ಎಂದು ಕೇಳಿದನು. 17 ಅವನು ಏಲಿಗೆ - ಇಸ್ರಾಯೇಲ್ಯರು ಫಿಲಿಷ್ಟಿಯರಿಗೆ ಬೆನ್ನು ತೋರಿಸಿದರು; ಮಹಾಸಂಹಾರವಾಯಿತು. ನಿನ್ನ ಇಬ್ಬರು ಮಕ್ಕಳಾದ ಹೊಫ್ನಿ ಫೀನೆಹಾಸರು ಸತ್ತರು; ದೇವರ ಮಂಜೂಷವು ಶತ್ರುವಶವಾಯಿತು ಎಂದು ತಿಳಿಸಿದನು. 18 ಮುದುಕನೂ ಸ್ಥೂಲಕಾಯನೂ ಆದ ಏಲಿಯು ದೇವರ ಒಡಂಬಡಿಕೆಯ ಮಂಜೂಷದ ವರ್ತಮಾನವನ್ನು ಕೇಳಿದೊಡನೆ ಪೀಠದಿಂದ ಹಿಂದಕ್ಕೆ ಬಾಗಲಿನ ಕಡೆಗೆ ಬಿದ್ದು ಕುತ್ತಿಗೆ ಮುರಿದು ಸತ್ತನು. ಅವನು ಇಸ್ರಾಯೇಲ್ಯರನ್ನು ನಾಲ್ವತ್ತು ವರುಷ ಪಾಲಿಸಿದನು. 19 ಫೀನೆಹಾಸನ ಹೆಂಡತಿಯಾದ ಅವನ ಸೊಸೆಯು ದಿನತುಂಬಿದ ಗರ್ಭಿಣಿಯಾಗಿದ್ದು ದೇವರ ಮಂಜೂಷವು ಶತ್ರುವಶವಾದದ್ದನ್ನೂ ಮಾವನೂ ಗಂಡನೂ ಹತರಾದದ್ದನ್ನೂ ಕೇಳಿದೊಡನೆ ಪ್ರಸವವೇದನೆಯುಂಟಾಗಿ ಮಗುವನ್ನು ಹೆತ್ತಳು. 20 ಆಕೆಯು ಸಾಯುವ ಸಮಯದಲ್ಲಿ ಬಳಿಯಲ್ಲಿ ನಿಂತಿದ್ದ ಸ್ತ್ರೀಯರು - ಭಯಪಡಬೇಡ, ಮಗನನ್ನು ಹೆತ್ತಿದ್ದೀ ಎಂದು ಹೇಳಿದರು. ಆಕೆಯು ಅವರ ಮಾತಿಗೆ ಲಕ್ಷ್ಯಕೊಡಲಿಲ್ಲ, ಪ್ರತ್ಯುತ್ತರ ಕೊಡಲಿಲ್ಲ. 21 ದೇವರ ಮಂಜೂಷವು ಶತ್ರುವಶವಾದದರಿಂದಲೂ ಮಾವನೂ ಗಂಡನೂ ಮೃತಿ ಹೊಂದಿದರಿಂದಲೂ - ಮಹಿಮೆಯು ಇಸ್ರಾಯೇಲ್ಯರನ್ನು ಬಿಟ್ಟುಹೋಯಿತೆಂದು ಹೇಳಿ ಆ ಕೂಸಿಗೆ ಈಕಾಬೋದ್ ಎಂದು ಹೆಸರಿಟ್ಟಳು. 22 ದೇವರ ಮಂಜೂಷವು ಶತ್ರುವಶವಾದದರಿಂದಲೇ ಇಸ್ರಾಯೇಲ್ಯರ ಮಹಿಮೆಯು ಹೋಯಿತೆಂದು ಹೇಳಿದಳು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India