Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಸಮುಯೇಲ 21 - ಕನ್ನಡ ಸತ್ಯವೇದವು J.V. (BSI)


ದಾವೀದನು ನೋಬಕ್ಕೂ ಅಲ್ಲಿಂದ ಗತ್ ಊರಿಗೂ ಓಡಿಹೋದದ್ದು

1 ದಾವೀದನು ನೋಬ್ ಊರಲ್ಲಿದ್ದ ಯಾಜಕನಾದ ಅಹೀಮೆಲೆಕನ ಬಳಿಗೆ ಬಂದನು. ಅಹೀಮೆಲೆಕನು ದಾವೀದನನ್ನು ಭಯಭಕ್ತಿಯಿಂದ ಎದುರುಗೊಂಡು - ನಿನ್ನ ಜೊತೆಯಲ್ಲಿ ಒಬ್ಬನಾದರೂ ಇಲ್ಲವಲ್ಲಾ! ನೀನು ಒಬ್ಬನೇ ಬಂದದ್ದೇಕೆ ಎಂದು ಅವನನ್ನು ಕೇಳಲು ಅವನು -

2 ಅರಸನು ಒಂದು ಕೆಲಸವನ್ನು ಆಜ್ಞಾಪಿಸಿ ಇದನ್ನು ಯಾರಿಗೂ ತಿಳಿಸಬಾರದೆಂದು ಕಟ್ಟುಮಾಡಿ ನನ್ನನ್ನು ಕಳುಹಿಸಿದ್ದಾನೆ. ನನ್ನ ಆಳುಗಳು ಇಂಥಿಂಥ ಸ್ಥಳದಲ್ಲಿ ನನ್ನನ್ನು ಸಂಧಿಸಬೇಕೆಂದು ಗೊತ್ತುಮಾಡಿದ್ದೇನೆ.

3 ಈಗ ನಿನ್ನ ಕೈಯಲ್ಲಿ ಏನಾದರೂ ಉಂಟೋ? ನಾಲ್ಕೈದು ರೊಟ್ಟಿಗಳಾದರೂ ಬೇರೆ ಯಾವ ಆಹಾರಪದಾರ್ಥವಾದರೂ ಇದ್ದರೆ ನನಗೆ ಕೊಟ್ಟುಬಿಡು ಅಂದನು.

4 ಯಾಜಕನು ದಾವೀದನಿಗೆ - ನನ್ನ ಬಳಿಯಲ್ಲಿ ಮೀಸಲ ರೊಟ್ಟಿಗಳ ಹೊರತು ಬೇರೆ ರೊಟ್ಟಿಗಳಿಲ್ಲ; ನಿನ್ನ ಆಳುಗಳು ಸ್ತ್ರೀಸಂಗ ಬಿಟ್ಟವರಾಗಿದ್ದರೆ ಅವುಗಳನ್ನು ಕೊಡಬಹುದು ಎನ್ನಲು ದಾವೀದನು -

5 ನಮ್ಮ ಎಲ್ಲಾ ಯುದ್ಧಪ್ರಯಾಣಗಳಲ್ಲಿ ಸ್ತ್ರೀನಿಷೇಧ ಮಾಡುವಂತೆ ಈಗಲೂ ಮಾಡಿದ್ದೇವೆ. ನಾವು ಸಾಧಾರಣಕಾರ್ಯಕ್ಕೆ ಹೊರಟಾಗಲೂ ಆಳುಗಳ ಸಾಮಾನುಗಳು ಪರಿಶುದ್ಧವಾಗಿರುತ್ತಿದ್ದವು. ಈ ದಿನದಲ್ಲಿ ಅವು ಎಷ್ಟೋ ಹೆಚ್ಚಾಗಿ ಪರಿಶುದ್ಧವಾಗಿರುವವಲ್ಲವೇ ಎಂದು ಉತ್ತರಕೊಟ್ಟನು.

6 ಬಿಸಿರೊಟ್ಟಿಗಳನ್ನು ಅರ್ಪಿಸಿದ ಆ ದಿನದಲ್ಲಿ ಯೆಹೋವನ ಸನ್ನಿಧಿಯಿಂದ ತೆಗೆಯಲ್ಪಟ್ಟ ನೈವೇದ್ಯವಾದ ಮೊದಲ ರೊಟ್ಟಿಗಳ ಹೊರತು ಅಲ್ಲಿ ಬೇರೆ ರೊಟ್ಟಿಗಳಿರಲಿಲ್ಲವಾದದರಿಂದ ಯಾಜಕನು ಆ ಪರಿಶುದ್ಧವಾದ ರೊಟ್ಟಿಗಳನ್ನೇ ಕೊಟ್ಟುಬಿಟ್ಟನು.

7 ಅದೇ ದಿವಸ ಸೌಲನ ಪಶುಪಾಲರಲ್ಲಿ ಪ್ರಧಾನನಾದ ದೋಯೇಗನೆಂಬ ಎದೋಮ್ಯನು ಯೆಹೋವನ ಆಲಯದಲ್ಲಿ ತಡೆಯಲ್ಪಟ್ಟಿದ್ದನು.

8 ದಾವೀದನು ಅಹೀಮೆಲೆಕನನ್ನು - ಅರಸನ ಕಾರ್ಯವು ಅವಸರವಾಗಿದ್ದದರಿಂದ ಕತ್ತಿಯನ್ನಾಗಲಿ ಬೇರೆ ಆಯುಧವನ್ನಾಗಲಿ ತೆಗೆದುಕೊಂಡು ಬರಲು ಆಗಲಿಲ್ಲ; ನಿನ್ನ ಬಳಿಯಲ್ಲಿ ಬರ್ಜಿಯಾಗಲಿ ಕತ್ತಿಯಾಗಲಿ ಇಲ್ಲವೋ ಎಂದು ಕೇಳಲು ಅವನು -

9 ನೀನು ಏಲಾ ತಗ್ಗಿನಲ್ಲಿ ಕೊಂದುಹಾಕಿದ ಫಿಲಿಷ್ಟಿಯನಾದ ಗೊಲ್ಯಾತನ ಕತ್ತಿಯು ಒಂದು ಬಟ್ಟೆಯಲ್ಲಿ ಸುತ್ತಲ್ಪಟ್ಟು ಏಫೋದಿನ ಹಿಂದೆ ಇಡಲ್ಪಟ್ಟಿದೆ; ಬೇಕಾದರೆ ಅದನ್ನು ತೆಗೆದುಕೋ. ಅದರ ಹೊರತು ನನ್ನ ಬಳಿಯಲ್ಲಿ ಬೇರೊಂದಿಲ್ಲ ಎಂದು ಉತ್ತರಕೊಟ್ಟನು. ದಾವೀದನು - ಅದಕ್ಕೆ ಸಮಾನವಾದದ್ದು ಮತ್ತೊಂದಿಲ್ಲ, ಅದನ್ನೇ ಕೊಡು ಎಂದು ಹೇಳಿ ತೆಗೆದುಕೊಂಡನು.

10 ದಾವೀದನು ಸೌಲನ ಭಯದಿಂದ ಅದೇ ದಿವಸ ಗತ್ ಊರಿನ ಅರಸನಾದ ಆಕೀಷನ ಬಳಿಗೆ ಓಡಿಹೋದನು.

11 ಆಕೀಷನ ಸೇವಕರು - ಸೌಲನು ಸಾವಿರಗಟ್ಟಳೆಯಾಗಿ ಕೊಂದನು; ದಾವೀದನು ಹತ್ತು ಸಾವಿರಗಟ್ಟಳೆಯಾಗಿ ಕೊಂದನು ಎಂಬದಾಗಿ ಸ್ತ್ರೀಯರು ಕುಣಿಯುತ್ತಾ ಹಾಡಿದ್ದು ಇವನನ್ನು ಕುರಿತಲ್ಲವೋ? ಎಂದು ಮಾತಾಡಿಕೊಂಡರು.

12 ದಾವೀದನು ಈ ಮಾತುಗಳನ್ನು ಕೇಳುತ್ತಲೆ ಗತ್ ಊರಿನ ಅರಸನಾದ ಆಕೀಷನಿಗೆ ಬಹಳವಾಗಿ ಹೆದರಿ

13 ಅವನ ಸೇವಕರ ಮುಂದೆ ತನ್ನ ಬುದ್ಧಿಯನ್ನು ಮಾರ್ಪಡಿಸಿಕೊಂಡು ಗಡ್ಡದ ಮೇಲೆಲ್ಲಾ ಜೊಲ್ಲು ಸುರಿಸುತ್ತಾ ಕದಗಳನ್ನು ಕೆರೆಯುತ್ತಾ ತನ್ನನ್ನು ಹುಚ್ಚನಂತೆ ತೋರಿಸಿಕೊಂಡನು.

14 ಆಗ ಆಕೀಷನು ತನ್ನ ಸೇವಕರಿಗೆ - ಈ ಮನುಷ್ಯನು ಹುಚ್ಚನೆಂದು ನಿಮಗೆ ಕಾಣುವದಿಲ್ಲವೋ? ಇವನನ್ನು ನನ್ನ ಹತ್ತಿರ ಯಾಕೆ ತಂದಿರಿ?

15 ನನ್ನ ಬಳಿಯಲ್ಲಿ ಹುಚ್ಚರು ಕಡಿಮೆಯೆಂದು ನೆನಸಿ ನನ್ನನ್ನು ಮರುಳಾಟದಿಂದ ಬೇಸರಗೊಳಿಸುವದಕ್ಕಾಗಿ ಇವನನ್ನು ತಂದಿರೋ? ಇಂಥವನು ನನ್ನ ಮನೆಗೆ ಬರಬೇಕೋ ಅಂದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು