1 ಸಮುಯೇಲ 16 - ಕನ್ನಡ ಸತ್ಯವೇದವು J.V. (BSI)ಸೌಲನೂ ದಾವೀದನೂ ( 16—31 ) ಸಮುವೇಲನು ದಾವೀದನಿಗೆ ರಾಜ್ಯಾಭಿಷೇಕ ಮಾಡಿದ್ದು 1 ಯೆಹೋವನು ಸಮುವೇಲನಿಗೆ - ನಾನು ಸೌಲನನ್ನು ಇಸ್ರಾಯೇಲ್ಯರ ಅರಸನಾಗಿರುವದಕ್ಕೆ ಅಯೋಗ್ಯನೆಂದು ತಳ್ಳಿ ಬಿಟ್ಟೆನಲ್ಲಾ; ನೀನು ಅವನಿಗೋಸ್ಕರ ಎಷ್ಟರವರೆಗೆ ದುಃಖಿಸುತ್ತಿರುವಿ? ಕೊಂಬನ್ನು ಎಣ್ಣೆಯಿಂದ ತುಂಬಿಸಿಕೊಂಡು ಬಾ; ನಾನು ನಿನ್ನನ್ನು ಬೇತ್ಲೆಹೇವಿುನವನಾದ ಇಷಯನ ಬಳಿಗೆ ಕಳುಹಿಸುತ್ತೇನೆ; ಅವನ ಮಕ್ಕಳಲ್ಲೊಬ್ಬನನ್ನು ಅರಸನನ್ನಾಗಿ ಆರಿಸಿಕೊಂಡಿದ್ದೇನೆ ಎಂದು ಹೇಳಿದನು. 2 ಅದಕ್ಕೆ ಸಮುವೇಲನು - ನಾನು ಹೋಗುವದು ಹೇಗೆ? ಇದು ಸೌಲನಿಗೆ ಗೊತ್ತಾದರೆ ಅವನು ನನ್ನನ್ನು ಕೊಂದುಹಾಕುವನಲ್ಲವೇ ಅನ್ನಲು ಆತನು - ನೀನು ಒಂದು ಕಡಸನ್ನು ತೆಗೆದುಕೊಂಡು ಹೋಗಿ ಯೆಹೋವನಿಗೋಸ್ಕರ ಯಜ್ಞಮಾಡುವದಕ್ಕೆ ಬಂದಿದ್ದೇನೆಂದು ಹೇಳಿ ಇಷಯನನ್ನು ಅದಕ್ಕೆ ಕರೆ. 3 ಆಮೇಲೆ ನೀನು ಮಾಡಬೇಕಾದದ್ದನ್ನು ನಾನೇ ತಿಳಿಸುತ್ತೇನೆ; ನಾನು ಯಾವನನ್ನು ತೋರಿಸುತ್ತೇನೋ ಅವನನ್ನು ನೀನು ಅಭಿಷೇಕಿಸಬೇಕು ಎಂದನು. 4 ಯೆಹೋವನು ಹೇಳಿದಂತೆಯೇ ಸಮುವೇಲನು ಬೇತ್ಲೆಹೇವಿುಗೆ ಹೋದನು. ಆ ಊರಿನ ಹಿರಿಯರು ನಡುಗುತ್ತಾ ಬಂದು ಅವನನ್ನು ಎದುರುಗೊಂಡು ನಿನ್ನ ಆಗಮನವು ನಮಗೆ ಶುಭಕರವಾಗಿದೆಯೇ ಎಂದು ಕೇಳಲು ಅವನು - 5 ಹೌದು, ಶುಭಕರವಾಗಿದೆ; ಯೆಹೋವನಿಗೆ ಯಜ್ಞವನ್ನರ್ಪಿಸುವದಕ್ಕೆ ಬಂದಿದ್ದೇನೆ. ನೀವು ನಿಮ್ಮನ್ನು ಶುದ್ಧಪಡಿಸಿಕೊಂಡು ನನ್ನ ಜೊತೆಯಲ್ಲಿ ಯಜ್ಞಕ್ಕೆ ಬನ್ನಿರಿ ಎಂದು ಹೇಳಿ ಇಷಯನನ್ನೂ ಅವನ ಮಕ್ಕಳನ್ನೂ ಶುದ್ಧೀಕರಿಸಿ ಅವರನ್ನೂ ಯಜ್ಞಕ್ಕೆ ಕರೆದನು. 6 ಅವರು ಬರಲು ಅವನು ಎಲೀಯಾಬನನ್ನು ನೋಡಿ - ನಿಶ್ಚಯವಾಗಿ ಯೆಹೋವನು ಅಭಿಷೇಕಕ್ಕೆ ಆರಿಸಿಕೊಂಡವನು ಆತನ ಮುಂದೆ ಇದ್ದಾನೆ ಎಂದುಕೊಂಡನು. 7 ಆದರೆ ಯೆಹೋವನು ಸಮುವೇಲನಿಗೆ - ನೀನು ಅವನ ಚೆಲುವಿಕೆಯನ್ನೂ ನೀಳವನ್ನೂ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ ಅಂದನು. 8 ಇಷಯನು ಅಬೀನಾದಾಬನನ್ನು ಸಮುವೇಲನು ಬಳಿಗೆ ಬರಮಾಡಲು ಸಮುವೇಲನು - ಯೆಹೋವನು ಇವನನ್ನು ಆರಿಸಿಕೊಳ್ಳಲಿಲ್ಲ ಎಂದನು. 9 ತರುವಾಯ ಇಷಯನು ಶಮ್ಮ ಎಂಬವನನ್ನು ಬರಮಾಡಲು ಸಮುವೇಲನು - ಯೆಹೋವನು ಇವನನ್ನು ಆರಿಸಿಕೊಳ್ಳಲಿಲ್ಲ ಎಂದು ಹೇಳಿದನು. 10 ಹೀಗೆ ಇಷಯನು ತನ್ನ ಮಕ್ಕಳಲ್ಲಿ ಏಳು ಮಂದಿಯನ್ನು ಅವನ ಬಳಿಗೆ ಬರಮಾಡಿದರೂ ಅವನು - ಯೆಹೋವನು ಇವರನ್ನು ಆರಿಸಿಕೊಳ್ಳಲಿಲ್ಲ ಎಂದು ನುಡಿದನು. 11 ಅನಂತರ ಸಮುವೇಲನು ಇಷಯನನ್ನು - ನಿನ್ನ ಮಕ್ಕಳೆಲ್ಲಾ ಇಷ್ಟೇ ಮಂದಿಯೋ ಎಂದು ಕೇಳಲು ಅವನು - ಇವರೆಲ್ಲರಿಗಿಂತಲೂ ಚಿಕ್ಕವನು ಒಬ್ಬನಿರುತ್ತಾನೆ; ಅವನು ಕುರಿಮೇಯಿಸುವದಕ್ಕೆ ಹೋಗಿದ್ದಾನೆ ಎಂದು ಉತ್ತರಕೊಟ್ಟನು. ಆಗ ಸಮುವೇಲನು - ಅವನನ್ನು ಕರೇಕಳುಹಿಸು; ಅವನು ಬರುವವರೆಗೂ ನಾವು ಊಟಕ್ಕೆ ಕೂತುಕೊಳ್ಳಬಾರದು ಎಂದು ಹೇಳಲು ಇಷಯನು ಅವನನ್ನು ಕರತರಿಸಿದನು. 12 ಅವನು ಕೆಂಬಣ್ಣದವನೂ ಸುಂದರನೇತ್ರನೂ ನೋಟಕ್ಕೆ ರಮಣೀಯನೂ ಆಗಿದ್ದನು. ಯೆಹೋವನು ಸಮುವೇಲನಿಗೆ - ಎದ್ದು ಇವನನ್ನು ಅಭಿಷೇಕಿಸು; ನಾನು ಆರಿಸಿಕೊಂಡವನು ಇವನೇ ಎಂದು ಆಜ್ಞಾಪಿಸಲು 13 ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲೇ ಅಭಿಷೇಕಿಸಿದನು. ಕೂಡಲೆ ಯೆಹೋವನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು. ಅನಂತರ ಸಮುವೇಲನು ರಾಮಕ್ಕೆ ಹೊರಟು ಹೋದನು. ದುರಾತ್ಮ ಪೀಡಿತನಾದ ಸೌಲನು ದಾವೀದನನ್ನು ಕಿನ್ನರಿಬಾರಿಸುವದಕ್ಕೆ ಹಚ್ಚಿದ್ದು 14 ಯೆಹೋವನ ಆತ್ಮವು ಸೌಲನನ್ನು ಬಿಟ್ಟುಹೋಯಿತು; ಯೆಹೋವನು ಕಳುಹಿಸಿದ ದುರಾತ್ಮವು ಬಂದು ಅವನನ್ನು ಪೀಡಿಸುತ್ತಿದ್ದದರಿಂದ 15 ಅವನ ಸೇವಕರು ಅವನಿಗೆ - ಇಗೋ, ದೇವರಿಂದ ಬಂದ ದುರಾತ್ಮವು ನಿನ್ನನ್ನು ಪೀಡಿಸುತ್ತಾ ಇದೆ. 16 ಸ್ವಾಮೀ, ಅಪ್ಪಣೆಯಾಗಲಿ; ನಿನ್ನ ಸನ್ನಿಧಿಯಲ್ಲಿ ನಿಂತಿರುವ ನಿನ್ನ ಸೇವಕರಾದ ನಾವು ಹೋಗಿ ಕಿನ್ನರಿಬಾರಿಸುವವರಲ್ಲಿ ನಿಪುಣನಾದ ಒಬ್ಬನನ್ನು ಹುಡುಕಿ ತರುತ್ತೇವೆ. ಯೆಹೋವನಿಂದ ಕಳುಹಿಸಲ್ಪಟ್ಟ ದುರಾತ್ಮವು ನಿನ್ನ ಮೇಲೆ ಬರುವಾಗ ಅವನು ಬಾರಿಸಿದರೆ ನಿನಗೆ ಉಪಶಮನವಾಗುವದು ಎಂದು ಹೇಳಿದರು. 17 ಸೌಲನು ಅವರಿಗೆ - ಚೆನ್ನಾಗಿ ಬಾರಿಸಬಲ್ಲವನಾದ ಒಬ್ಬನನ್ನು ನನಗೋಸ್ಕರ ಹುಡುಕಿ ಕರಕೊಂಡು ಬನ್ನಿರಿ ಎಂದು ಆಜ್ಞಾಪಿಸಲು 18 ಸೇವಕರಲ್ಲೊಬ್ಬನು ಅವನಿಗೆ - ಬೇತ್ಲೆಹೇವಿುನವನಾದ ಇಷಯನ ಮಗನನ್ನು ನೋಡಿದ್ದೇನೆ; ಅವನು ಚೆನ್ನಾಗಿ ಬಾರಿಸಬಲ್ಲವನೂ ಪರಾಕ್ರಮಶಾಲಿಯೂ ರಣಶೂರನೂ ವಾಕ್ಚತುರನೂ ಸುಂದರನೂ ಯೆಹೋವನ ಅನುಗ್ರಹವನ್ನು ಹೊಂದಿದವನೂ ಆಗಿದ್ದಾನೆಂದು ತಿಳಿಸಿದನು. 19 ಕೂಡಲೆ ಸೌಲನು ಇಷಯನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ - ಕುರಿಗಳನ್ನು ಮೇಯಿಸುತ್ತಿರುವ ನಿನ್ನ ಮಗನಾದ ದಾವೀದನನ್ನು ನನ್ನ ಬಳಿಗೆ ಕಳುಹಿಸು ಎಂದು ಹೇಳಿಸಿದನು. 20 ಇಷಯನು ರೊಟ್ಟಿಯನ್ನೂ ಒಂದು ಬುದ್ದಲಿ ದ್ರಾಕ್ಷಾರಸವನ್ನೂ ಒಂದು ಹೋತಮರಿಯನ್ನೂ ಕತ್ತೆಯ ಮೇಲೆ ಹೇರಿಸಿ ತನ್ನ ಮಗನಾದ ದಾವೀದನ ಮುಖಾಂತರ ಸೌಲನಿಗೆ ಕಳುಹಿಸಿದನು. 21 ಹೀಗೆ ದಾವೀದನು ಸೌಲನ ಬಳಿಗೆ ಬಂದು ಅವನ ಸೇವಕನಾದನು; ಸೌಲನು ಅವನನ್ನು ಬಹಳವಾಗಿ ಪ್ರೀತಿಸಿ ತನ್ನ ಆಯುಧಗಳನ್ನು ಹೊರುವದಕ್ಕೆ ನೇವಿುಸಿಕೊಂಡನು. 22 ತರುವಾಯ ಸೌಲನು ಇಷಯನ ಬಳಿಗೆ ದೂತರನ್ನು ಅಟ್ಟಿ ಅವನಿಗೆ - ನಾನು ದಾವೀದನನ್ನು ಮೆಚ್ಚಿದ್ದೇನೆ; ಅವನು ನನ್ನ ಸನ್ನಿಧಿಯಲ್ಲಿ ಸೇವೆಮಾಡಲಿ ಎಂದು ತಿಳಿಸಿದನು. 23 ದೇವರಿಂದ ಕಳುಹಿಸಲ್ಪಟ್ಟ ದುರಾತ್ಮವು ಸೌಲನ ಮೇಲೆ ಬಂದಾಗ ದಾವೀದನು ಕಿನ್ನರಿಯನ್ನು ಬಾರಿಸುವನು; ಅದರಿಂದ ದುರಾತ್ಮವು ಸೌಲನನ್ನು ಬಿಟ್ಟುಹೋಗುವದು; ಅವನು ಉಪಶಮನಹೊಂದಿ ಚೆನ್ನಾಗಿರುವನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India