Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಅರಸುಗಳು 19 - ಕನ್ನಡ ಸತ್ಯವೇದವು J.V. (BSI)


ದೇವರು ಹೋರೇಬಿನಲ್ಲಿ ಎಲೀಯನಿಗೆ ಕಾಣಿಸಿಕೊಂಡದ್ದು; ಎಲೀಷನು ಅವನ ಸೇವಕನಾದದ್ದು

1 ಎಲೀಯನು ಎಲ್ಲಾ ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದನ್ನೂ ಅವನು ಮಾಡಿದ ಬೇರೆ ಎಲ್ಲಾ ಕಾರ್ಯಗಳನ್ನೂ ಅಹಾಬನು ಈಜೆಬೆಲಳಿಗೆ ತಿಳಿಸಿದಾಗ

2 ಆಕೆಯು ಎಲೀಯನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ - ನೀನು ಪ್ರವಾದಿಗಳ ಪ್ರಾಣವನ್ನು ತೆಗೆದಂತೆ ನಾಳೆ ಇಷ್ಟು ಹೊತ್ತಿಗೆ ನಾನು ನಿನ್ನ ಪ್ರಾಣವನ್ನು ತೆಗೆಯದೆ ಹೋದರೆ ದೇವತೆಗಳು ನನಗೆ ಬೇಕಾದದ್ದನ್ನು ಮಾಡಲಿ ಎಂದು ಹೇಳಿಕಳುಹಿಸಿದಳು.

3 ಅವನು ಇದನ್ನು ಕೇಳಿದೊಡನೆ ತನ್ನ ಪ್ರಾಣರಕ್ಷಣೆಗಾಗಿ ಅಲ್ಲಿಂದ ಹೊರಟು ಯೆಹೂದದ ಬೇರ್ಷೆಬಕ್ಕೆ ಬಂದು ಅಲ್ಲಿ ತನ್ನ ಸೇವಕನನ್ನು ಬಿಟ್ಟನು.

4 ತರುವಾಯ ತಾನೊಬ್ಬನಾಗಿ ಅರಣ್ಯದೊಳಗೆ ಒಂದು ದಿವಸದ ಪ್ರಯಾಣದಷ್ಟು ದೂರ ಹೋಗಿ ಒಂದು ಜಾಲೀಗಿಡದ ಕೆಳಗೆ ಕೂತುಕೊಂಡು ಮರಣವನ್ನು ಅಪೇಕ್ಷಿಸಿದನು. ಅವನು - ಯೆಹೋವನೇ, ನನಗೆ ಸಾಕಾಯಿತು; ನನ್ನ ಪ್ರಾಣವನ್ನು ತೆಗೆದುಬಿಡು; ನಾನು ನನ್ನ ಪಿತೃಗಳಿಗಿಂತ ಉತ್ತಮನಲ್ಲ ಎಂದು ದೇವರನ್ನು ಪ್ರಾರ್ಥಿಸಿ

5 ಅದೇ ಗಿಡದ ಕೆಳಗೆ ಮಲಗಿಕೊಂಡು ನಿದ್ರೆಮಾಡಿದನು. ಫಕ್ಕನೆ ಒಬ್ಬ ದೇವದೂತನು ಅವನನ್ನು ತಟ್ಟಿ - ಎದ್ದು ಊಟಮಾಡು ಎಂದು ಹೇಳಿದನು.

6 ಎಲೀಯನು ಎದ್ದು ನೋಡಲಾಗಿ ಕೆಂಡದ ಮೇಲೆ ಸುಟ್ಟ ರೊಟ್ಟಿಯೂ ಒಂದು ತಂಬಿಗೆ ನೀರೂ ತನ್ನ ತಲೆಯ ಹತ್ತಿರ ಇರುವದನ್ನು ಕಂಡು ಅವುಗಳನ್ನು ತೆಗೆದುಕೊಂಡು ತಿಂದು ಕುಡಿದು ತಿರಿಗಿ ಮಲಗಿದನು.

7 ಯೆಹೋವನ ದೂತನು ಎರಡನೆಯ ಸಾರಿ ಬಂದು ಅವನನ್ನು ತಟ್ಟಿ ಅವನಿಗೆ - ಎದ್ದು ಊಟಮಾಡು; ನೀನು ನಿನ್ನ ಶಕ್ತಿ ಮೀರುವಷ್ಟು ಪ್ರಯಾಣಮಾಡಬೇಕಾಗಿದೆ ಅಂದನು.

8 ಅವನು ಎದ್ದು ತಿಂದು ಕುಡಿದು ಅದರ ಬಲದಿಂದ ನಾಲ್ವತ್ತು ದಿವಸ ಹಗಲಿರುಳು ಪ್ರಯಾಣಮಾಡಿ ದೇವಗಿರಿಯಾದ ಹೋರೇಬಿಗೆ ಮುಟ್ಟಿ

9 ಅಲ್ಲಿನ ಒಂದು ಗವಿಯಲ್ಲಿ ಇಳುಕೊಂಡನು. ಆಗ ಅವನಿಗೆ ಯೆಹೋವನಿಂದ - ಎಲೀಯನೇ, ನೀನು ಇಲ್ಲೇನು ಮಾಡುತ್ತೀ ಎಂಬ ವಾಣಿಯು ಕೇಳಿಸಿತು.

10 ಅವನು ಅದಕ್ಕೆ - ಸೇನಾಧೀಶ್ವರನಾದ ದೇವರೇ, ಯೆಹೋವನೇ, ಇಸ್ರಾಯೇಲ್ಯರು ನಿನ್ನ ನಿಬಂಧನೆಯನ್ನು ಮೀರಿದ್ದಾರೆ, ಯಜ್ಞವೇದಿಗಳನ್ನು ಕೆಡವಿಹಾಕಿದ್ದಾರೆ, ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದಾರೆ, ನಾನೊಬ್ಬನೇ ಉಳಿದು ನಿನ್ನ ಗೌರವವನ್ನು ಕಾಪಾಡುವದರಲ್ಲಿ ಆಸಕ್ತನಾಗಿದ್ದೆನು; ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಬೇಕೆಂದಿದ್ದಾರೆ ಎಂದು ಉತ್ತರಕೊಟ್ಟನು.

11 ಆಗ ತಿರಿಗಿ - ನೀನು ಹೊರಗೆ ಬಂದು ಬೆಟ್ಟದ ಮೇಲೆ ಯೆಹೋವನ ಮುಂದೆ ನಿಲ್ಲು ಎಂಬ ವಾಣಿಯಾಯಿತು. ಆಹಾ, ಯೆಹೋವನು ಅಲ್ಲಿ ಹಾದುಹೋದನು. ಆತನ ಮುಂದೆ ಪರ್ವತಗಳನ್ನು ಭೇದಿಸಿ ಬಂಡೆಗಳನ್ನು ಪುಡಿಪುಡಿಮಾಡುವಂಥ ದೊಡ್ಡ ಬಿರುಗಾಳಿಯು ಬೀಸಿತು; ಯೆಹೋವನು ಅದರಲ್ಲಿ ಇರಲಿಲ್ಲ. ತರುವಾಯ ಭೂಕಂಪವುಂಟಾಯಿತು; ಅದರಲ್ಲಿಯೂ ಆತನಿರಲಿಲ್ಲ.

12 ಭೂಕಂಪವಾದನಂತರ ಸಿಡಿಲುಂಟಾಯಿತು; ಅದರಲ್ಲಿಯೂ ಯೆಹೋವನಿರಲಿಲ್ಲ.

13 ಕಡೆಗೆ ಮಂದಮಾರುತ ಶಬ್ದ! ಅದನ್ನು ಕೇಳಿದ ಕೂಡಲೆ ಎಲೀಯನು ತನ್ನ ಕಂಬಳಿಯಿಂದ ಮೋರೆಯನ್ನು ಮುಚ್ಚಿಕೊಂಡು ಹೋಗಿ ಗವಿಯ ದ್ವಾರದಲ್ಲಿ ನಿಂತನು. ಆಗ - ಎಲೀಯನೇ, ನೀನು ಇಲ್ಲೇನು ಮಾಡುತ್ತೀ ಎಂಬ ವಾಣಿಯು ಕೇಳಿಸಿತು.

14 ಅದಕ್ಕೆ ಅವನು - ಸೇನಾಧೀಶ್ವರನಾದ ಯೆಹೋವನೇ, ಇಸ್ರಾಯೇಲ್ಯರು ನಿನ್ನ ನಿಬಂಧನೆಯನ್ನು ಮೀರಿದ್ದಾರೆ, ಯಜ್ಞವೇದಿಗಳನ್ನು ಕೆಡವಿಹಾಕಿದ್ದಾರೆ, ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದಾರೆ, ನಾನೊಬ್ಬನೇ ಉಳಿದು ನಿನ್ನ ಗೌರವವನ್ನು ಕಾಪಾಡುವದರಲ್ಲಿ ಆಸಕ್ತನಾಗಿದ್ದೆನು; ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಬೇಕೆಂದಿದ್ದಾರೆ ಎಂದು ಉತ್ತರಕೊಟ್ಟನು.

15 ಆಗ ಯೆಹೋವನು ಅವನಿಗೆ - ನೀನು ಬಂದ ದಾರಿಯಿಂದ ಹಿಂದಿರುಗಿ ದಮಸ್ಕದ ಅರಣ್ಯಕ್ಕೆ ಹೋಗು; ಅಲ್ಲಿಂದ ಪಟ್ಟಣದೊಳಗೆ ಪ್ರವೇಶಿಸಿ ಹಜಾಯೇಲನನ್ನು ಅರಾಮ್ಯರ ಅರಸನನ್ನಾಗಿ ಅಭಿಷೇಕಿಸು;

16 ನಿಂಷಿಯ ಮಗನಾದ ಯೇಹುವನ್ನು ಇಸ್ರಾಯೇಲ್ಯರ ಅರಸನನ್ನಾಗಿಯೂ ಅಬೇಲ್‍ಮೆಹೋಲದವನೂ ಶಾಫಾಟನ ಮಗನೂ ಆದ ಎಲೀಷನನ್ನು ನಿನಗೆ ಬದಲಾಗಿ ಪ್ರವಾದಿಯನ್ನಾಗಿಯೂ ಅಭೀಷೇಕಿಸು.

17 ಹಜಾಯೇಲನ ಕತ್ತಿಗೆ ತಪ್ಪಿಸಿಕೊಂಡವರನ್ನು ಯೇಹುವು ಕೊಲ್ಲುವನು; ಇವನ ಕತ್ತಿಗೆ ತಪ್ಪಿಸಿಕೊಂಡವರನ್ನು ಎಲೀಷನು ಕೊಲ್ಲುವನು.

18 ಆದರೆ ಬಾಳನ ವಿಗ್ರಹಕ್ಕೆ ಅಡ್ಡಬೀಳದೆಯೂ ಅದನ್ನು ಮುದ್ದಿಡದೆಯೂ ಇರುವ ಏಳು ಸಾವಿರ ಮಂದಿ ಇಸ್ರಾಯೇಲ್ಯರನ್ನು ಉಳಿಸುವೆನು ಎಂದು ಹೇಳಿದನು.

19 ಎಲೀಯನು ಅಲ್ಲಿಂದ ಹೊರಟುಹೋಗಿ ಶಾಫಾಟನ ಮಗನಾದ ಎಲೀಷನನ್ನು ಕಂಡನು. ಅವನು ಹೊಲವನ್ನು ಉಳುವದಕ್ಕೆ ಹನ್ನೆರಡು ಜೋಡಿ ಎತ್ತುಗಳನ್ನು ತಂದು ಹನ್ನೆರಡನೆಯ ಜೋಡಿಯಿಂದ ತಾನಾಗಿ ಉಳುತ್ತಿದ್ದನು. ಎಲೀಯನು ಅಲ್ಲಿಂದ ಹಾದುಹೋಗುವಾಗ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು.

20 ಕೂಡಲೆ ಅವನು ಎತ್ತುಗಳನ್ನು ಬಿಟ್ಟು ಓಡುತ್ತಾ ಬಂದು ಎಲೀಯನಿಗೆ - ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ಬರುವದಕ್ಕೆ ಅಪ್ಪಣೆಯಾಗಲಿ; ಅನಂತರ ನಿನ್ನನ್ನು ಹಿಂಬಾಲಿಸುವೆನು ಅಂದನು. ಅದಕ್ಕೆ ಎಲೀಯನು - ಹೋಗು; ನಾನು ನಿನಗೆ ಮಾಡಿದ್ದೇನು ಎಂದು ಉತ್ತರಕೊಟ್ಟನು.

21 ಎಲೀಷನು ಹಿಂದಿರುಗಿಹೋಗಿ ತಾನು ಉಳುತ್ತಿದ್ದ ಜೋಡಿ ಎತ್ತುಗಳನ್ನು ತೆಗೆದುಕೊಂಡು ಅವುಗಳನ್ನು ವಧಿಸಿ ಮಾಂಸವನ್ನು ರಂಟೆಯ ಕಟ್ಟಿಗೆಯಿಂದ ಬೇಯಿಸಿ ಜನರಿಗೆ ಔತಣಮಾಡಿಸಿದನು. ಅನಂತರ ಅವನು ಎದ್ದು ಎಲೀಯನನ್ನು ಹಿಂಬಾಲಿಸಿ ಅವನ ಸೇವಕನಾದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು