1 ಅರಸುಗಳು 14 - ಕನ್ನಡ ಸತ್ಯವೇದವು J.V. (BSI)ಯಾರೊಬ್ಬಾಮನ ಮಗನಾದ ಅಬೀಯನು ಅಸ್ವಸ್ಥನಾದದ್ದು; ಅವನ ಮತ್ತು ಯಾರೊಬ್ಬಾಮನ ಮರಣ 1 ಆ ಕಾಲದಲ್ಲಿ ಯಾರೊಬ್ಬಾಮನ ಮಗನಾದ ಅಬೀಯನು ಅಸ್ವಸ್ಥನಾದನು. 2 ಆಗ ಯಾರೊಬ್ಬಾಮನು ತನ್ನ ಹೆಂಡತಿಗೆ - ನೀನು ಎದ್ದು ನನ್ನ ಹೆಂಡತಿಯೆಂದು ಯಾರಿಗೂ ಗೊತ್ತಾಗದಂತೆ ವೇಷ ಮಾರ್ಪಡಿಸಿಕೊಂಡು ಶೀಲೋವಿಗೆ ಹೋಗು. ನಾನು ಈ ಜನರ ಮೇಲೆ ಅರಸನಾಗಬೇಕೆಂದು ನನಗೆ ಮುಂತಿಳಿಸಿದ ಪ್ರವಾದಿಯಾದ ಅಹೀಯನು ಅಲ್ಲಿರುತ್ತಾನೆ. 3 ನೀನು ಹತ್ತು ರೊಟ್ಟಿಗಳನ್ನೂ ವಿುಠಾಯಿಯನ್ನೂ ಒಂದು ಕುಪ್ಪಿ ಜೇನುತುಪ್ಪವನ್ನೂ ತೆಗೆದುಕೊಂಡು ಅವನ ಬಳಿಗೆ ಹೋಗು; ಹುಡುಗನಿಗೆ ಏನಾಗುವದೆಂದು ಅವನು ತಿಳಿಸುವನು ಎಂದು ಹೇಳಿದನು. 4 ಆಕೆಯು ಅವನು ಹೇಳಿದಂತೆಯೇ ಮಾಡಿ ಶೀಲೋವಿನಲ್ಲಿದ್ದ ಅಹೀಯನ ಮನೆಗೆ ಹೋದಳು. ಮುಪ್ಪಿನ ದೆಸೆಯಿಂದ ಅಹೀಯನ ಕಣ್ಣುಗಳು ಮೊಬ್ಬಾಗಿದ್ದದ್ದರಿಂದ ಕಾಣಿಸುತ್ತಿರಲಿಲ್ಲ. 5 ಆದರೆ ಯೆಹೋವನು ಅವನಿಗೆ - ಯಾರೊಬ್ಬಾಮನ ಹೆಂಡತಿಯು ಅಸ್ವಸ್ಥನಾದ ತನ್ನ ಮಗನ ವಿಷಯದಲ್ಲಿ ದೈವೋತ್ತರವನ್ನು ಕೇಳುವದಕ್ಕೆ ತನ್ನನ್ನು ಅನ್ಯಳೆಂದು ತೋರ್ಪಡಿಸಿಕೊಂಡು ಬರುತ್ತಾಳೆಂದೂ ಆಕೆಗೆ ಇಂಥಿಂಥ ಉತ್ತರ ಕೊಡಬೇಕೆಂದೂ ತಿಳಿಸಿದ್ದನು. 6 ಆಕೆಯು ಅಹೀಯನ ಮನೆಯನ್ನು ಪ್ರವೇಶಿಸುವಾಗಲೇ ಅಹೀಯನು ಆಕೆಯ ಕಾಲುಸಪ್ಪಳವನ್ನು ಕೇಳಿ - ಯಾರೊಬ್ಬಾಮನ ಹೆಂಡತಿಯೇ, ಬಾ; ಯಾಕೆ ನಿನ್ನನ್ನು ಅನ್ಯಳೆಂದು ತೋರ್ಪಡಿಸಿಕೊಳ್ಳುತ್ತೀ? ನಿನಗೆ ಕಠಿಣವಾದ ಉತ್ತರವನ್ನು ಕೊಡಬೇಕೆಂದು ನನಗೆ ಅಪ್ಪಣೆಯಾಗಿದೆ. 7 ನೀನು ಹೋಗಿ ಯಾರೊಬ್ಬಾಮನಿಗೆ ಇಸ್ರಾಯೇಲ್ ದೇವರಾದ ಯೆಹೋವನ ಅಪ್ಪಣೆಯನ್ನು ತಿಳಿಸು. ಆತನು ಅವನಿಗೆ - ನಾನು ನಿನ್ನನ್ನು ಜನರ ಮಧ್ಯದಿಂದ ಉನ್ನತಸ್ಥಾನಕ್ಕೆ ತಂದೆನು; ನಿನ್ನನ್ನು ನನ್ನ ಪ್ರಜೆಗಳಾದ ಇಸ್ರಾಯೇಲ್ಯರ ನಾಯಕನನ್ನಾಗಿ ಮಾಡಿದೆನು. 8 ರಾಜ್ಯವನ್ನು ದಾವೀದನ ಕುಟುಂಬದವರಿಂದ ಕಿತ್ತುಕೊಂಡು ನಿನಗೆ ಕೊಟ್ಟೆನು. ಆದರೂ ನೀನು ನನ್ನ ಆಜ್ಞೆಗಳನ್ನು ಕೈಕೊಂಡು ಪೂರ್ಣಮನಸ್ಸಿನಿಂದ ನನ್ನನ್ನು ಹಿಂಬಾಲಿಸಿ ಮೆಚ್ಚಿಸಿದಂಥ ನನ್ನ ಸೇವಕನಾದ ದಾವೀದನಂತೆ ನಡೆಯಲಿಲ್ಲ. 9 ನೀನು ನಿನ್ನ ಎಲ್ಲಾ ಪೂರ್ವಾಧಿಕಾರಿಗಳಿಗಿಂತಲೂ ದುಷ್ಟನಾದಿ; ನನ್ನನ್ನು ಉಲ್ಲಂಘಿಸಿ ಅನ್ಯದೇವತೆಗಳನ್ನೂ ಎರಕದ ವಿಗ್ರಹಗಳನ್ನೂ ಪೂಜಿಸಿ ನನಗೆ ಕೋಪವನ್ನೆಬ್ಬಿಸಿದಿ. 10 ಆದದರಿಂದ ಯಾರೊಬ್ಬಾಮನೇ, ಕೇಳು; ನಾನು ನಿನ್ನ ಮನೆಯವರ ಮೇಲೆ ಕೇಡನ್ನು ಬರಮಾಡುವೆನು; ನಿನ್ನ ಕುಟುಂಬದ ಗಂಡಸರಲ್ಲಿ ಸ್ವತಂತ್ರರಾಗಲಿ ಪರತಂತ್ರರಾಗಲಿ, ಎಲ್ಲರನ್ನೂ ಇಸ್ರಾಯೇಲ್ಯರೊಳಗಿಂದ ಸಂಹರಿಸಿಬಿಡುವೆನು. ಒಬ್ಬನು ಕಸವನ್ನು ಗುಡಿಸಿ ತೆಗೆದುಹಾಕುವಂತೆ ನಾನು ನಿನ್ನ ಮನೆಯವರನ್ನು ತೆಗೆದುಹಾಕುವೆನು; ಅವರು ನಿರ್ನಾಮವಾಗುವರು. 11 ಅವರಲ್ಲಿ ಪಟ್ಟಣದೊಳಗೆ ಸಾಯುವಂಥವರನ್ನು ನಾಯಿಗಳೂ ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದುಬಿಡುವವು ಎಂದು ಹೇಳುತ್ತಾನೆ. ಇದು ಯೆಹೋವನ ಮಾತು. 12 ನೀನು ನಿನ್ನ ಮನೆಗೆ ಹೋಗು; ನೀನು ಪಟ್ಟಣದೊಳಗೆ ಕಾಲಿಡುವಷ್ಟರಲ್ಲಿ ಹುಡುಗನು ಸಾಯುವನು. 13 ಇಸ್ರಾಯೇಲ್ಯರೆಲ್ಲರೂ ಅವನಿಗೋಸ್ಕರ ಗೋಳಾಡಿ ಅವನ ಶವವನ್ನು ಸಮಾಧಿಮಾಡುವರು. ಯಾರೊಬ್ಬಾಮನ ಮನೆಯವರೊಳಗೆ ಇಸ್ರಾಯೇಲ್ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿರುವದರಿಂದ ಇವನೊಬ್ಬನೇ ಸಮಾಧಿಹೊಂದುವನು. 14 ಯೆಹೋವನು ಇಸ್ರಾಯೇಲ್ಯರ ಮೇಲೆ ಬೇರೊಬ್ಬ ಅರಸನನ್ನು ನೇವಿುಸುವನು. ಅವನು ಕೂಡಲೆ ಯಾರೊಬ್ಬಾಮನ ಮನೆಯವರನ್ನು ಸಂಹರಿಸಿಬಿಡುವನು. 15 ಇನ್ನು ಏನೇನು ಸಂಭವಿಸುವದೋ! ಯೆಹೋವನು ಇಸ್ರಾಯೇಲ್ಯರನ್ನು ಹೊಡಿಯುವನು. ಆಗ ಅವರು ನೀರಿನಲ್ಲಿರುವ ಆಪುಹುಲ್ಲೋ ಎಂಬಂತೆ ಹೊಯ್ದಾಡುವರು. ಅವರು ಅಶೇರವಿಗ್ರಹಸ್ತಂಭಗಳನ್ನು ಮಾಡಿಕೊಂಡು ಆತನಿಗೆ ಕೋಪವನ್ನೆಬ್ಬಿಸಿದದರಿಂದ ಆತನು ಅವರನ್ನು ಅವರ ಪಿತೃಗಳಿಗೆ ಕೊಟ್ಟ ದೇಶದಿಂದ ಕಿತ್ತುಹಾಕಿ ಯೂಫ್ರೇಟೀಸ್ ನದಿಯ ಆಚೆಯಲ್ಲಿರುವ ದೇಶದೊಳಗೆ ಚದರಿಸಿಬಿಡುವನು. 16 ಯೆಹೋವನು ಯಾರೊಬ್ಬಾಮನ ಪಾಪಗಳ ನಿವಿುತ್ತವಾಗಿಯೂ ಅವನ ಪ್ರೇರಣೆಯಿಂದ ಇಸ್ರಾಯೇಲ್ಯರು ಮಾಡಿದ ಪಾಪಗಳ ನಿವಿುತ್ತವಾಗಿಯೂ ಅವರನ್ನು ಶತ್ರುಗಳಿಗೆ ಒಪ್ಪಿಸುವನು ಎಂದು ಆಕೆಗೆ ಹೇಳಿದನು. 17 ಯಾರೊಬ್ಬಾಮನ ಹೆಂಡತಿಯು ತಿರ್ಚಾ ಊರಿಗೆ ಹೊರಟುಹೋಗಿ ತನ್ನ ಮನೆಯ ಹೊಸ್ತಿಲಲ್ಲಿ ಕಾಲಿಟ್ಟ ಕೂಡಲೆ ಹುಡುಗನು ಸತ್ತನು. 18 ಯೆಹೋವನು ಪ್ರವಾದಿಯಾದ ಅಹೀಯನ ಮುಖಾಂತರವಾಗಿ ತಿಳಿಸಿದ ಪ್ರಕಾರ ಎಲ್ಲಾ ಇಸ್ರಾಯೇಲ್ಯರು ಅವನಿಗೋಸ್ಕರ ಗೋಳಾಡಿ ಅವನ ಶವವನ್ನು ಸಮಾಧಿಮಾಡಿದರು. 19 ಯಾರೊಬ್ಬಾಮನ ಇತರ ಕೃತ್ಯಗಳೂ ಅವನ ಯುದ್ಧ ರಾಜ್ಯಭಾರಗಳ ವಿವರವೂ ಇಸ್ರಾಯೇಲ್ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. 20 ಅವನು ಇಪ್ಪತ್ತೆರಡು ವರುಷ ಆಳಿ ಪಿತೃಗಳ ಬಳಿಗೆ ಸೇರಿದನು. ಅವನಿಗೆ ಬದಲಾಗಿ ಅವನ ಮಗನಾದ ನಾದಾಬನು ಅರಸನಾದನು. ಯೆಹೂದ್ಯರ ಅರಸನಾದ ರೆಹಬ್ಬಾಮನು 21 ಸೊಲೊಮೋನನ ಮಗನಾದ ರೆಹಬ್ಬಾಮನು ಯೆಹೂದದ ಅರಸನಾದನು. ಅವನು ಪಟ್ಟಕ್ಕೆ ಬಂದಾಗ ನಾಲ್ವತ್ತೊಂದು ವರುಷದವನಾಗಿದ್ದು ಯೆಹೋವನು ತನ್ನ ಹೆಸರಿಗೋಸ್ಕರ ಇಸ್ರಾಯೇಲ್ಯರ ಎಲ್ಲಾ ಕುಲಗಳಿಂದ ಆರಿಸಿಕೊಂಡ ಯೆರೂಸಲೇಮ್ ಪಟ್ಟಣದಲ್ಲಿ ಹದಿನೇಳು ವರುಷ ಆಳಿದನು. ಅಮ್ಮೋನಿಯಳಾದ ನಯಮಾ ಎಂಬಾಕೆಯು ಅವನ ತಾಯಿ. 22 ಯೆಹೂದ್ಯರು ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು; ಅವರು ತಮ್ಮ ಪಿತೃಗಳಿಗಿಂತಲೂ ದುಷ್ಟರಾಗಿ ಆತನನ್ನು ರೇಗಿಸಿದರು. 23 ಪಿತೃಗಳಂತೆಯೇ ಅವರೂ ತಮಗೋಸ್ಕರ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡರು. ಪ್ರತಿಯೊಂದು ದಿನ್ನೆಯ ಮೇಲೆಯೂ ಚೆನ್ನಾಗಿ ಬೆಳೆದಿರುವ ಪ್ರತಿಯೊಂದು ಮರದ ಕೆಳಗೆಯೂ ಕಲ್ಲಿನ ಕಂಬಗಳನ್ನೂ ಅಶೇರ ವಿಗ್ರಹಸ್ತಂಭಗಳನ್ನೂ ನಿಲ್ಲಿಸಿದರು. 24 ಇದಲ್ಲದೆ ಅವರ ದೇಶದಲ್ಲಿ ವೇಶ್ಯಾವೃತ್ತಿಯನ್ನನುಸರಿಸುತ್ತಿರುವ ದೇವದಾಸ ದೇವದಾಸಿಯರು ಇದ್ದರು. ಯೆಹೋವನು ಅವರ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳಲ್ಲಿದ್ದ ದುರಾಚಾರಗಳನ್ನೆಲ್ಲಾ ಅವರೂ ನಡಿಸುವವರಾದರು. 25 ರೆಹಬ್ಬಾಮನ ಆಳಿಕೆಯ ಐದನೆಯ ವರುಷದಲ್ಲಿ ಐಗುಪ್ತದ ಅರಸನಾದ ಶೀಶಕನು ಯೆರೂಸಲೇವಿುಗೆ ವಿರೋಧವಾಗಿ ಬಂದು 26 ಯೆಹೋವನ ಆಲಯದ ಮತ್ತು ಅರಮನೆಯ ಎಲ್ಲಾ ದ್ರವ್ಯವನ್ನೂ ಸೊಲೊಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನೂ ತೆಗೆದುಕೊಂಡು ಹೋದನು. 27 ಅರಸನಾದ ರೆಹಬ್ಬಾಮನು ಅವುಗಳಿಗೆ ಬದಲಾಗಿ ತಾಮ್ರದ ಗುರಾಣಿಗಳನ್ನು ಮಾಡಿಸಿ ಅವುಗಳನ್ನು ಅರಮನೆಯ ದ್ವಾರಪಾಲಕರಾಗಿದ್ದ ಮೈಗಾವಲಿನವರ ದಳವಾಯಿಗಳಿಗೆ ಒಪ್ಪಿಸಿದನು. 28 ಅರಸನು ಯೆಹೋವನ ಆಲಯಕ್ಕೆ ಹೋಗುವಾಗೆಲ್ಲಾ ಅವರು ಅವುಗಳನ್ನು ಹಿಡಿದುಕೊಳ್ಳುವರು; ಅಲ್ಲಿಂದ ತಿರಿಗಿ ಬಂದ ಮೇಲೆ ಅವುಗಳನ್ನು ತಮ್ಮ ಕೋಣೆಯಲ್ಲಿಡುವರು. 29 ರೆಹಬ್ಬಾಮನ ಉಳಿದ ಚರಿತ್ರೆಯೂ ಅವನ ಎಲ್ಲಾ ಕೃತ್ಯಗಳೂ ಯೆಹೂದರಾಜಕಾಲ ವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. 30 ರೆಹಬ್ಬಾಮನಿಗೂ ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧ ನಡೆಯುತ್ತಿತ್ತು. 31 ರೆಹಬ್ಬಾಮನು ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ದಾವೀದನಗರದೊಳಗೆ ಅವನ ಹಿರಿಯರ ಶ್ಮಶಾನ ಭೂವಿುಯಲ್ಲಿ ಸಮಾಧಿಮಾಡಿದರು. ಅಮ್ಮೋನಿಯಳಾದ ನಯಮಾ ಎಂಬಾಕೆಯು ಅವನ ತಾಯಿ. ಅನಂತರ ಅವನ ಮಗನಾದ ಅಬೀಯಾಮನು ಅವನಿಗೆ ಬದಲಾಗಿ ಅರಸನಾದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India