1 ಅರಸುಗಳು 12 - ಕನ್ನಡ ಸತ್ಯವೇದವು J.V. (BSI)ರೆಹಬ್ಬಾಮನೂ ಯಾರೊಬ್ಬಾಮನೂ ( 12—14 ) ರಾಜ್ಯಭೇದ 1 ರೆಹಬ್ಬಾಮನು ಶೆಕೆವಿುಗೆ ಹೋದನು; ಅಲ್ಲಿ ಎಲ್ಲಾ ಇಸ್ರಾಯೇಲ್ಯರೂ ಅವನನ್ನು ಅರಸನನ್ನಾಗಿ ಮಾಡುವದಕ್ಕೆ ಕೂಡಿ ಬಂದಿದ್ದರು. 2 ಇದಲ್ಲದೆ ಅರಸನಾದ ಸೊಲೊಮೋನನಿಗೆ ತಪ್ಪಿಸಿಕೊಂಡು ಐಗುಪ್ತಕ್ಕೆ ಓಡಿಹೋಗಿದ್ದ ನೆಬಾಟನ ಮಗನಾದ ಯಾರೊಬ್ಬಾಮನನ್ನು ಕರಿಸಿಕೊಂಡಿದ್ದರು. 3 ಯಾರೊಬ್ಬಾಮನು ನಡೆದ ಸಂಗತಿಗಳ ವರ್ತಮಾನವನ್ನು ಕೇಳಿ ಎಲ್ಲಾ ಇಸ್ರಾಯೇಲ್ಯರೊಡನೆ ರೆಹಬ್ಬಾಮನ ಬಳಿಗೆ ಹೋಗಿ ಅವನಿಗೆ - 4 ನಿನ್ನ ತಂದೆಯು ನಮ್ಮ ಮೇಲೆ ಭಾರವಾದ ನೊಗವನ್ನು ಹೇರಿದನು; ನಿನ್ನ ತಂದೆಯು ನೇವಿುಸಿದ ಬಿಟ್ಟೀಕೆಲಸವನ್ನು ನೀನು ಕಡಿಮೆಮಾಡಿ ನಮ್ಮ ಮೇಲಿರುವ ಭಾರವಾದ ನೊಗವನ್ನು ಹಗುರ ಮಾಡುವದಾದರೆ ನಾವು ನಿನ್ನನ್ನು ಸೇವಿಸುವೆವು ಎಂದು ಹೇಳಲು ಅವನು - 5 ನೀವು ಈಗ ಹೋಗಿ ಮೂರು ದಿನಗಳಾದ ನಂತರ ತಿರಿಗಿ ಬನ್ನಿರಿ ಎಂದು ಉತ್ತರಕೊಟ್ಟನು; ಜನರು ಹೋದರು. 6 ಆಗ ಅರಸನಾದ ರೆಹಬ್ಬಾಮನು ತನ್ನ ತಂದೆಯಾದ ಸೊಲೊಮೋನನ ಕಾಲದಲ್ಲಿ ಮಂತ್ರಿಗಳಾಗಿದ್ದ ಹಿರಿಯರನ್ನು ಕೂಡಿಸಿ ತಾನು ಜನರಿಗೆ ಕೊಡತಕ್ಕ ಉತ್ತರದ ವಿಷಯದಲ್ಲಿ ಅವರ ಆಲೋಚನೆಯನ್ನು ಕೇಳಿದನು. 7 ಅವರು ಅವನಿಗೆ - ನೀನು ಈ ಹೊತ್ತು ಈ ಜನರ ಮಾತನ್ನು ಕೇಳಿ ಅವರಿಗೆ ಒಳಗಾಗಿ ಒಳ್ಳೇ ಉತ್ತರಕೊಡುವದಾದರೆ ಅವರು ಯಾವಾಗಲೂ ನಿನಗೆ ಒಳಗಾಗಿರುವರು ಅಂದರು. 8 ಆದರೆ ಅವನು ಹಿರಿಯರ ಆಲೋಚನೆಯನ್ನು ನಿರಾಕರಿಸಿ ತನ್ನ ಸಂಗಡ ಬೆಳೆದು ತನ್ನ ಮಂತ್ರಿಗಳಾದ ಯೌವನಸ್ಥರನ್ನು ಕರಿಸಿ - 9 ನನ್ನ ತಂದೆಯು ಹೇರಿದ ನೊಗವನ್ನು ಹಗುರ ಮಾಡಬೇಕೆಂದು ಬೇಡಿಕೊಳ್ಳುವ ಈ ಜನರಿಗೆ ಯಾವ ಉತ್ತರವನ್ನು ಕೊಡತಕ್ಕದ್ದು? ಈ ವಿಷಯದಲ್ಲಿ ನಿಮ್ಮ ಆಲೋಚನೆ ಏನು ಎಂದು ಕೇಳಲು 10 ಅವರು ಅವನಿಗೆ - ನಿನ್ನ ತಂದೆಯು ನಮ್ಮ ಮೇಲೆ ಹೇರಿರುವ ನೊಗವನ್ನು ಹಗುರಮಾಡು ಎಂಬದಾಗಿ ನಿನ್ನನ್ನು ಬೇಡಿಕೊಂಡ ಜನರಿಗೆ ನೀನು - ನನ್ನ ತಂದೆಯ ನಡುವಿಗಿಂತ ನನ್ನ ಕಿರಿಬೆರಳು ದಪ್ಪವಾಗಿದೆ. 11 ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹಾಕಿರುವದು ನಿಜ; ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುತ್ತೇನೆ; ಅವನು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ನಿಮ್ಮನ್ನು ಮುಳ್ಳು ಕೊರಡೆಗಳಿಂದ ದಂಡಿಸುವೆನು ಎಂಬದಾಗಿ ಹೇಳಬೇಕು ಎಂದು ಉತ್ತರಕೊಟ್ಟರು. 12 ಯಾರೊಬ್ಬಾಮನೂ ಎಲ್ಲಾ ಜನರೂ ಅರಸನಾದ ರೆಹಬ್ಬಾಮನ ಅಪ್ಪಣೆಯಂತೆ ಮೂರನೆಯ ದಿನದಲ್ಲಿ ತಿರಿಗಿ ಅವನ ಬಳಿಗೆ ಬಂದರು. 13 ಅರಸನು ಅವರಿಗೆ ಕಠಿಣವಾದ ಉತ್ತರವನ್ನು ಕೊಟ್ಟನು; ಅವನು ಹಿರಿಯರ ಆಲೋಚನೆಯನ್ನು ನಿರಾಕರಿಸಿ 14 ಯೌವನಸ್ಥರ ಆಲೋಚನೆಗನುಸಾರವಾಗಿ ಜನರಿಗೆ - ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹೇರಿರುವದು ನಿಜ; ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುವೆನು; ಅವನು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ಮುಳ್ಳುಕೊರಡೆಗಳಿಂದ ದಂಡಿಸುವೆನು ಎಂದು ನುಡಿದನು. 15 ಅವನು ಜನರ ಮಾತನ್ನು ಕೇಳದೆಹೋದದ್ದು ಯೆಹೋವನಿಂದಲೇ. ಈ ಪ್ರಕಾರ ಯೆಹೋವನು ಶೀಲೋವಿನವನಾದ ಅಹೀಯನ ಮುಖಾಂತರವಾಗಿ ನೆಬಾಟನ ಮಗನಾದ ಯಾರೊಬ್ಬಾಮನಿಗೆ ಹೇಳಿಸಿದ ಮಾತು ನೆರವೇರಿತು. 16 ಅರಸನು ತಮ್ಮ ಮಾತನ್ನು ಲಕ್ಷಿಸಲಿಲ್ಲವೆಂದು ನೋಡಿ ಇಸ್ರಾಯೇಲ್ಯರೆಲ್ಲರೂ ಅವನಿಗೆ - ದಾವೀದನಲ್ಲಿ ನಮಗೇನು ಪಾಲು? ಇಷಯನ ಮಗನಲ್ಲಿ ನಮಗೇನು ಬಾಧ್ಯತೆ? ಇಸ್ರಾಯೇಲ್ಯರೇ, ನಿಮ್ಮ ನಿಮ್ಮ ನಿವಾಸಗಳಿಗೆ ಹೋಗಿರಿ; ದಾವೀದನವರೇ, ನಿಮ್ಮ ಕುಲವನ್ನು ನೀವೇ ನೋಡಿಕೊಳ್ಳಿರಿ ಎಂದು ಹೇಳಿ ತಮ್ಮ ತಮ್ಮ ನಿವಾಸಗಳಿಗೆ ಹೋದರು. 17 ಯೆಹೂದ ಪ್ರಾಂತದಲ್ಲಿದ್ದ ಇಸ್ರಾಯೇಲ್ಯರಾದರೋ ರೆಹಬ್ಬಾಮನ ಅಧೀನದಲ್ಲಿದ್ದರು. 18 ರೆಹಬ್ಬಾಮನು ಬಿಟ್ಟೀಕೆಲಸದವರ ಮೇಲ್ವಿಚಾರಕನಾದ ಅದೋರಾಮನನ್ನು ಇಸ್ರಾಯೇಲ್ಯರ ಬಳಿಗೆ ಕಳುಹಿಸಲು ಅವರು ಇವನನ್ನು ಕಲ್ಲೆಸೆದು ಕೊಂದರು. ಅರಸನಾದ ರೆಹಬ್ಬಾಮನು ಬೇಗನೇ ರಥವನ್ನೇರಿ ಯೆರೂಸಲೇವಿುಗೆ ಓಡಿ ಹೋದನು. 19 ಇಸ್ರಾಯೇಲ್ಯರು ಅಂದಿನಿಂದ ಇಂದಿನವರೆಗೂ ದಾವೀದನ ಕುಟುಂಬದವರೊಡನೆ ಸಮಾಧಾನವಾಗಲೇ ಇಲ್ಲ. 20 ಯಾರೊಬ್ಬಾಮನು ಹಿಂದಿರುಗಿ ಬಂದಿದ್ದಾನೆಂಬ ವರ್ತಮಾನವು ಇಸ್ರಾಯೇಲ್ಯರಿಗೆ ಗೊತ್ತಾದಾಗ ಅವರೆಲ್ಲರೂ ಅವನನ್ನು ನೆರೆದ ಸಭೆಯ ಮುಂದೆ ಕರಿಸಿ ತಮ್ಮ ಅರಸನನ್ನಾಗಿ ನೇವಿುಸಿಕೊಂಡರು. ದಾವೀದನ ಕುಟುಂಬದವರನ್ನು ಯೆಹೂದ ಕುಲವೇ ಹೊರತು ಬೇರೆ ಯಾವ ಕುಲವೂ ಹಿಂಬಾಲಿಸಲಿಲ್ಲ. 21 ಸೊಲೊಮೋನನ ಮಗನಾದ ರೆಹಬ್ಬಾಮನು ಯೆರೂಸಲೇಮನ್ನು ಮುಟ್ಟಿದನಂತರ ಇಸ್ರಾಯೇಲ್ಯರಿಗೆ ವಿರೋಧವಾಗಿ ಯುದ್ಧಮಾಡುವದಕ್ಕೂ ರಾಜ್ಯವನ್ನು ತಿರಿಗಿ ತನಗೆ ವಶಪಡಿಸಿಕೊಳ್ಳುವದಕ್ಕೂ ಯೆಹೂದ ಬೆನ್ಯಾಮೀನ್ಕುಲಗಳಿಂದ ಲಕ್ಷದ ಎಂಭತ್ತುಸಾವಿರ ಮಂದಿ ಶ್ರೇಷ್ಠ ಸೈನಿಕರನ್ನು ಕೂಡಿಸಿದನು. 22 ಆಗ ದೇವರ ಮನುಷ್ಯನಾದ ಶೆಮಾಯನಿಗೆ - 23 ನೀನು ಹೋಗಿ ಸೊಲೊಮೋನನ ಮಗನೂ ಯೆಹೂದದ ಅರಸನೂ ಆದ ರೆಹಬ್ಬಾಮನಿಗೂ ಯೆಹೂದ ಬೆನ್ಯಾಮೀನ್ ಕುಲಗಳವರಿಗೂ 24 ಉಳಿದ ಜನರಿಗೂ - ಯೆಹೋವನ ಮಾತನ್ನು ಕೇಳಿರಿ, ನೀವು ನಿಮ್ಮ ಸಹೋದರರಾದ ಇಸ್ರಾಯೇಲ್ಯರೊಡನೆ ಯುದ್ಧಮಾಡುವದಕ್ಕೆ ಹೋಗಬಾರದು; ಎಲ್ಲರೂ ಹಿಂದಿರುಗಿ ಹೋಗಿರಿ; ಈ ಕಾರ್ಯವು ಯೆಹೋವನಿಂದಾಗಿದೆ ಎಂದು ಹೇಳಬೇಕು ಎಂಬ ದೈವೋತ್ತರ ಉಂಟಾಗಲು ಅವರು ಯೆಹೋವನ ಮಾತನ್ನು ಕೇಳಿ ಹಿಂದಿರುಗಿಹೋದರು. ಯಾರೊಬ್ಬಾಮನು ತನ್ನ ರಾಜ್ಯವನ್ನು ಬಲಪಡಿಸಿದ್ದು 25 ಯಾರೊಬ್ಬಾಮನು ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿನ ಶೆಕೆಮ್ಪಟ್ಟಣವನ್ನು ಭದ್ರಪಡಿಸಿ ಅಲ್ಲಿ ವಾಸಿಸಿದನು. ಅಲ್ಲಿಂದ ಪೆನೂವೇಲಿಗೆ ಹೋಗಿ ಅದನ್ನೂ ಭದ್ರಪಡಿಸಿದನು; 26 ಅವನು ತನ್ನ ಮನಸ್ಸಿನಲ್ಲಿ - ರಾಜ್ಯವು ತಿರಿಗಿ ದಾವೀದನ ಕುಟುಂಬದವರಿಗೆ ಆಗುವದೋ ಏನೋ; 27 ಜನರು ಯೆರೂಸಲೇವಿುನಲ್ಲಿರುವ ಯೆಹೋವನ ಆಲಯಕ್ಕೆ ಯಜ್ಞಾರ್ಪಣೆಗಾಗಿ ಹೋಗುವದಾದರೆ ಅವರ ಮನಸ್ಸು ಅವರ ಒಡೆಯನೂ ಯೆಹೂದದ ಅರಸನೂ ಆದ ರೆಹಬ್ಬಾಮನ ಕಡೆಗೆ ತಿರುಗೀತು; ಅವರು ನನ್ನನ್ನು ಕೊಂದು ಅವನ ಬಳಿಗೆ ಹೋದಾರು ಅಂದುಕೊಂಡು 28 ಬಹಳವಾಗಿ ಆಲೋಚಿಸಿ ಕಡೆಯಲ್ಲಿ ಬಂಗಾರದ ಎರಡು ಬಸವ ಮೂರ್ತಿಗಳನ್ನು ಮಾಡಿಸಿ ಇಸ್ರಾಯೇಲ್ಯರಿಗೆ - ನೀವು ಜಾತ್ರೆಗಾಗಿ ಯೆರೂಸಲೇವಿುಗೆ ಹೋದದ್ದು ಸಾಕಾಯಿತು; ಇಗೋ, ನಿಮ್ಮನ್ನು ಐಗುಪ್ತದಿಂದ ಕರತಂದ ದೇವರುಗಳು ಇಲ್ಲಿರುತ್ತವೆ ಎಂದು ಹೇಳಿ 29 ಅವುಗಳಲ್ಲಿ ಒಂದನ್ನು ಬೇತೇಲಿನಲ್ಲಿರಿಸಿ ಇನ್ನೊಂದನ್ನು ದಾನಿಗೆ ಕಳುಹಿಸಿದನು. 30 (ಇದು ಪಾಪಕ್ಕೆ ಕಾರಣವಾಯಿತು.) ಜನರು ಈ ಎರಡನೆಯ ವಿಗ್ರಹವನ್ನು ಮೆರವಣಿಗೆಯಿಂದ ದಾನಿಗೆ ಒಯ್ದರು. 31 ಇದಲ್ಲದೆ ಅವನು ಪೂಜಾಗಿರಿಗಳ ಮೇಲೆ ಗುಡಿಗಳನ್ನು ಕಟ್ಟಿಸಿ ಲೇವಿಯರಲ್ಲದ ಕನಿಷ್ಠ ಜನರನ್ನೂ ಯಾಜಕರನ್ನಾಗಿ ನೇವಿುಸಿದನು. 32 ಅವನು ಎಂಟನೆಯ ತಿಂಗಳ ಹದಿನೈದನೆಯ ದಿವಸ ಬೇತೇಲಿನಲ್ಲಿ ಯೆಹೂದದೇಶದ ಜಾತ್ರೆಗೆ ಸರಿಯಾದ ಜಾತ್ರೆಯು ನಡೆಯಬೇಕೆಂದು ಅಪ್ಪಣೆಮಾಡಿ ತಾನೂ ಅಲ್ಲಿಗೆ ಹೋಗಿ ಅಲ್ಲಿ ನಿಲ್ಲಿಸಿದ ಬಸವನ ಮೂರ್ತಿಗಳಿಗೋಸ್ಕರ ವೇದಿಯ ಮೇಲೆ ಯಜ್ಞಮಾಡಿದನು. ತಾನು ಏರ್ಪಡಿಸಿದ ಪೂಜಾಸ್ಥಳಗಳ ಯಾಜಕರನ್ನು ಬೇತೇಲಿನ ದೇವಸ್ಥಾನದ ಸೇವೆಗೆ ನೇವಿುಸಿದನು. ಒಬ್ಬ ಯೆಹೂದಪ್ರವಾದಿಯು ಬೇತೇಲಿನ ವೇದಿಯನ್ನು ಶಪಿಸಿದ್ದೂ ಮರಣ ಹೊಂದಿದ್ದೂ 33 ಇಸ್ರಾಯೇಲ್ಯರು ಎಂಟನೆಯ ತಿಂಗಳ ಹದಿನೈದನೆಯ ದಿವಸದಲ್ಲಿ ಹಬ್ಬವನ್ನಾಚರಿಸಬೇಕೆಂದು ಯಾರೊಬ್ಬಾಮನು ಸ್ವೇಚ್ಫೆಯಿಂದ ಗೊತ್ತುಮಾಡಿ ಆ ಸಮಯಕ್ಕೆ ತಾನೂ ಬೇತೇಲಿನ ಯಜ್ಞವೇದಿಯ ಬಳಿಗೆ ಹೋಗಿ ಧೂಪಸುಡುವದಕ್ಕಾಗಿ ಅದರ ಮೆಟ್ಲುಗಳನ್ನು ಹತ್ತುತ್ತಿರುವಾಗ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India