Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 11 - ಕನ್ನಡ ಸತ್ಯವೇದವು C.L. Bible (BSI)


ಚೊಚ್ಚಲುಗಳ ಸಾವಿನ ಮುನ್ಸೂಚನೆ

1 ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆ ಎಂದರು: “ಫರೋಹನಿಗೂ ಈಜಿಪ್ಟಿನವರಿಗೂ ಇನ್ನೊಂದು ಪಿಡುಗನ್ನು ಬರಮಾಡುತ್ತೇನೆ. ಅದು ಬಂದನಂತರ ಅವನು ನಿಮಗೆ ಇಲ್ಲಿಂದ ಹೋಗುವುದಕ್ಕೆ ಅಪ್ಪಣೆಕೊಡುವನು. ಅದು ಮಾತ್ರವಲ್ಲ, ನಿಮ್ಮೆಲ್ಲರನ್ನು ಅಲ್ಲಿಂದ ಅಟ್ಟಿಬಿಡುವನು.

2 ಆದುದರಿಂದ ಸ್ತ್ರೀಪುರುಷರೆಲ್ಲರು ತಮ್ಮ ತಮ್ಮ ನೆರೆಹೊರೆಯವರಿಂದ ಬೆಳ್ಳಿಬಂಗಾರದ ಒಡವೆಗಳನ್ನು ಕೇಳಿಕೊಳ್ಳಬೇಕೆಂದು ನಿಮ್ಮ ಜನರಿಗೆ ಸ್ಪಷ್ಟವಾಗಿಹೇಳು,” ಎಂದರು.

3 ಈಜಿಪ್ಟಿನವರಿಗೆ ಇಸ್ರಯೇಲರ ಮೇಲೆ ಕನಿಕರ ಉಂಟಾಗುವಂತೆ ಮಾಡಿದರು ಸರ್ವೇಶ್ವರ. ಇದಲ್ಲದೆ ಈಜಿಪ್ಟ್ ದೇಶದ ಫರೋಹನ ಪರಿವಾರದವರು ಮೋಶೆಯನ್ನು ಮಹಾಪುರುಷನೆಂದು ಭಾವಿಸಿದರು.

4 ಮೋಶೆ ಫರೋಹನಿಗೆ ಇಂತೆಂದನು: “ಸರ್ವೇಶ್ವರ ಮಾಡಿರುವ ಅಪ್ಪಣೆ ಇದು: ‘ನಡುರಾತ್ರಿಯ ವೇಳೆಯಲ್ಲಿ ನಾನೇ ಈಜಿಪ್ಟಿನವರ ನಡುವೆ ಹಾದುಹೋಗುವೆನು.

5 ಆಗ, ಸಿಂಹಾಸನಾರೂಢನಾದ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಬೀಸುಕಲ್ಲನ್ನು ಹಿಡಿದು ಕೂತಿರುವ ದಾಸಿಯ ಚೊಚ್ಚಲು ಮಗನವರೆಗೂ ಈಜಿಪ್ಟ್ ದೇಶದಲ್ಲಿ ಚೊಚ್ಚಲು ಮಕ್ಕಳೆಲ್ಲರು ಸಾಯುವರು. ಪಶುಪ್ರಾಣಿಗಳಲ್ಲೂ ಚೊಚ್ಚಲಾದವುಗಳೆಲ್ಲಾ ಸಾಯುವುವು.

6 ಆಗ ಈಜಿಪ್ಟ್ ದೇಶದಲ್ಲೆಲ್ಲಾ ದೊಡ್ಡ ಗೋಳಾಟ ಉಂಟಾಗುವುದು. ಅಂಥ ಗೋಳಾಟ ಈವರೆಗೂ ಇರಲಿಲ್ಲ. ಇನ್ನು ಮುಂದೆಯೂ ಇರುವುದಿಲ್ಲ.

7 ಆದರೆ ಇಸ್ರಯೇಲರಲ್ಲಿರುವ ಮನುಷ್ಯನ ವಿರುದ್ಧವಾಗಲಿ, ಪ್ರಾಣಿಯ ವಿರುದ್ಧವಾಗಲಿ, ಒಂದು ನಾಯಿ ಕೂಡ ಬೊಗಳುವುದಿಲ್ಲ. ಇದರಿಂದ ಸರ್ವೇಶ್ವರ ಇಸ್ರಯೇಲರಿಗೂ ಈಜಿಪ್ಟಿನವರಿಗೂ ತಾರತಮ್ಯ ಮಾಡಿದ್ದಾರೆಂದು ನಿಮಗೆ ಗೊತ್ತಾಗುವುದು.

8 ಆಗ ನಿನ್ನ ಪರಿವಾರದವರಾದ ಇವರೆಲ್ಲರು ನನ್ನ ಬಳಿಗೆ ಬಂದು ಅಡ್ಡಬಿದ್ದು - ನೀವೂ ನಿಮ್ಮ ಅಧೀನದಲ್ಲಿರುವ ಜನರೆಲ್ಲರು ನಮ್ಮನ್ನು ಬಿಟ್ಟು ಹೋಗಿಬಿಡಿ - ಎಂದು ಬೇಡುವರು. ಇದಾದ ಮೇಲೆ ನಾನು ಹೊರಟುಹೋಗುವೆನು.’ ಈ ಮಾತುಗಳನ್ನು ಹೇಳಿ ಮೋಶೆ ಕೋಪದಿಂದ ಕಿಡಿಕಿಡಿಯಾಗಿ ಫರೋಹನನ್ನು ಬಿಟ್ಟು ಹೊರಟುಹೋದನು.

9 ಸರ್ವೇಶ್ವರ ಮೋಶೆಗೆ, “ಫರೋಹನು ನಿಮ್ಮ ಮಾತನ್ನು ಕೇಳುವುದಿಲ್ಲ; ಆದ್ದರಿಂದ ಈಜಿಪ್ಟ್ ದೇಶದಲ್ಲಿ ಸೂಚಕಕಾರ್ಯಗಳನ್ನು ಹೆಚ್ಚಾಗಿ ನಡೆಸಲು ಆಸ್ಪದ ದೊರಕುವುದು,” ಎಂದು ಹೇಳಿದರು.

10 ಮೋಶೆ ಮತ್ತು ಆರೋನರು ಫರೋಹನ ಮುಂದೆ ಈ ಸೂಚಕಕಾರ್ಯಗಳನ್ನೆಲ್ಲಾ ಮಾಡಿದ್ದರೂ ಸರ್ವೇಶ್ವರ ಫರೋಹನ ಹೃದಯವನ್ನು ಕಲ್ಲಾಗಿಸಿದ್ದರು. ಅವನು ತನ್ನ ದೇಶವನ್ನು ಬಿಟ್ಟು ಹೊರಡುವುದಕ್ಕೆ ಇಸ್ರಯೇಲರಿಗೆ ಅಪ್ಪಣೆಕೊಡದೆ ಹೋದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು