ಮುನ್ನುಡಿ
ಯೋನನ ಗ್ರಂಥ ಇತರ ಪ್ರವಾದನಾ ಗ್ರಂಥಗಳಿಗಿಂತ ಭಿನ್ನವಾಗಿದೆ. ದೈವಾಜ್ಞೆಯನ್ನು ಅನುಸರಿಸದೆ ದೇವರ ಸನ್ನಿಧಿಯಿಂದ ತಪ್ಪಿಸಿಕೊಂಡಿರಲು ಪ್ರಯತ್ನಿಸಿದ ಒಬ್ಬ ಪ್ರವಾದಿಯ ಅನುಭವವನ್ನು ಈ ಗ್ರಂಥದಲ್ಲಿ ವಿವರಿಸಲಾಗಿದೆ.
ಅಸ್ಸೀರಿಯದ ರಾಜಧಾನಿ ನಿನೆವೆ. ಅಲ್ಲಿನ ಜನರು ಸದಾ ದುರ್ಮಾರ್ಗದಲ್ಲಿದ್ದು ಪಾಪಾಕ್ರಮಗಳಲ್ಲೇ ತಮ್ಮ ಜೀವನವನ್ನು ಸಾಗಿಸುತ್ತಾರೆ. ಇಂಥ ಸನ್ನಿವೇಶದಲ್ಲಿ ನಿನೆವೆಗೆ ಹೋಗಿ ಪ್ರವಾದನೆ ಮಾಡಬೇಕು, ಆ ನಗರದ ವಿನಾಶದ ಬಗ್ಗೆ ಜನರಿಗೆ ಮುಂಚಿತವಾಗಿ ಎಚ್ಚರಿಕೆಯನ್ನು ನೀಡಬೇಕು ಎಂಬ ದೈವಾಜ್ಞೆ ಯೋನನಿಗೆ ವಿಧಿಸಲಾಗುತ್ತದೆ. ಆದರೆ ದೇವರು ನಿಜವಾಗಿಯೂ ನಿನೆವೆಯನ್ನು ನಾಶವಾಗಲು ಬಿಡುವುದಿಲ್ಲ, ಅವರು ಅಷ್ಟು ಕರುಣೆಯುಳ್ಳವರು ಎಂದು ಮನಗಂಡ ಯೋನನು ನಿನೆವೆಗೆ ಹೋಗದೆ, ಬೇರೆ ದಾರಿಯನ್ನು ಹಿಡಿಯುತ್ತಾನೆ. ಕೆಲವು ಅನಿರೀಕ್ಷಿತ ಹಾಗೂ ಭಯಂಕರ ಘಟನೆಗಳ ನಂತರ ಅರೆಮನಸ್ಸಿನಿಂದ ನಿನೆವೆಗೆ ಹೋಗಲು ಒಪ್ಪಿಕೊಳ್ಳುತ್ತಾನೆ. ಅಂತಿಮವಾಗಿ ನಿನೆವೆ ನಾಶವಾಗದಿದ್ದುದರಿಂದ ಮುನಿಸಿಕೊಂಡು ಹಿಮ್ಮೆಟ್ಟುತ್ತಾನೆ.
ವಿಶ್ವದ ಸಂಪೂರ್ಣಸ್ವಾಮ್ಯ ದೇವರದೇ. ಸರ್ವವನ್ನು ಸೃಷ್ಟಿಸಿ ಕಾಪಾಡುವವರು ಅವರೇ. ಅವರ ಪ್ರೀತಿ ಅಚಲ. ಅವರ ಕರುಣೆಗೆ ಎಲ್ಲೆಯೇ ಇಲ್ಲ. ಅವರು ದುರ್ಜನರನ್ನು ದಂಡಿಸಿ ನಾಶಗೊಳಿಸುವಂಥವರಲ್ಲ. ಸರ್ವರನ್ನೂ ಅನಂತ ಕೃಪೆಯಿಂದ ಕಾಪಾಡಿ ಸಂರಕ್ಷಿಸುವ ಸ್ವಭಾವ ಅವರದು - ಎಂಬ ಅಂಶಗಳನ್ನು ಈ ಗ್ರಂಥದಲ್ಲಿ ವಾಚಕರು ಗಮನಿಸಬಹುದು.
ಪರಿವಿಡಿ
ಯೋನನ ಕರೆ - ಅವಿಧೇಯತೆ 1:1-17
ಬಿಡುಗಡೆಗಾಗಿ ಯೋನನು ಮಾಡಿದ ಪ್ರಾರ್ಥನೆ 2:1-10
ನಿನೆವೆಯ ಬಗ್ಗೆ ದೇವರಿತ್ತ ಸಂದೇಶ 3:1-10
ನಿನೆವೆಯ ಮೇಲೆ ದೇವರ ಕರುಣೆ 4:1-11