Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 4 - ಕನ್ನಡ ಸತ್ಯವೇದವು C.L. Bible (BSI)


ಹನ್ನೆರಡು ಸ್ಮಾರಕ ಸ್ತಂಭಗಳು

1 ಜನರೆಲ್ಲರು ಜೋರ್ಡನಿನ ಆಚೆ ಕಡೆಗೆ ಸೇರಿದ ಮೇಲೆ ಸರ್ವೇಶ್ವರಸ್ವಾಮಿ ಯೆಹೋಶುವನಿಗೆ ಹೀಗೆಂದರು:

2 “ಜನರಲ್ಲಿ ಕುಲಕ್ಕೆ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸಿಕೊ.

3 ಅವರಿಗೆ, ‘ನೀವು ಜೋರ್ಡನಿನ ಮಧ್ಯದಲ್ಲಿ ಯಾಜಕರು ನಿಂತ ಸ್ಥಳದಿಂದ ಹನ್ನೆರಡು ಕಲ್ಲುಗಳನ್ನು ಎತ್ತಿ, ಅವುಗಳನ್ನು ನಿಮ್ಮ ಸಂಗಡ ಈಚೆ ದಡಕ್ಕೆ ತಂದು ನೀವು ಈ ರಾತ್ರಿ ತಂಗುವ ಸ್ಥಳದಲ್ಲಿ ನಿಲ್ಲಿಸಿ’ ಎಂದು ಆಜ್ಞಾಪಿಸು,” ಎಂದರು.

4 ಆಗ ಯೆಹೋಶುವನು ತಾನು ಇಸ್ರಯೇಲರಿಂದ ಕುಲಕ್ಕೆ ಒಬ್ಬನಂತೆ ಆರಿಸಿಕೊಂಡ ಹನ್ನೆರಡು ಮಂದಿಯನ್ನು ಕರೆದು ಅವರಿಗೆ,

5 “ನೀವು ನಮ್ಮ ದೇವರಾದ ಸರ್ವೇಶ್ವರನ ಮಂಜೂಷದ ಮುಂದಾಗಿ ಜೋರ್ಡನಿನ ಮಧ್ಯಕ್ಕೆ ಹೋಗಿ ಇಸ್ರಯೇಲ್ ಕುಲಗಳ ಸಂಖ್ಯೆಗೆ ಸರಿಯಾಗಿ ಪ್ರತಿಯೊಬ್ಬನು ಒಂದೊಂದು ಕಲ್ಲನ್ನು ಹೆಗಲ ಮೇಲೆ ಹೊತ್ತುಕೊಂಡು ಬನ್ನಿ.

6 ಅವು ನಿಮ್ಮ ಮಧ್ಯೆ ಸ್ಮಾರಕ ಆಗಿರುವುವು. ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು, ‘ಈ ಕಲ್ಲುಗಳು ಏನನ್ನು ಸೂಚಿಸುತ್ತವೆ?’ ಎಂದು ಕೇಳುವಾಗ ನೀವು ಅವರಿಗೆ,

7 ‘ಸರ್ವೇಶ್ವರನ ಒಡಂಬಡಿಕೆಯ ಮಂಜೂಷವು ಜೋರ್ಡನನ್ನು ದಾಟುವಾಗ ಅದರ ಮುಂದೆ ಜೋರ್ಡನಿನ ನೀರು ನಿಂತುಹೋಯಿತು,’ ಎಂದು ಹೇಳಿರಿ. ಅದರ ನೀರು ನಿಂತುಹೋಯಿತೆಂಬುದಕ್ಕೆ ಈ ಕಲ್ಲುಗಳು ಇಸ್ರಯೇಲರಿಗೆ ಚಿರಸ್ಮಾರಕಗಳಾಗಿರುವುವು,” ಎಂದು ಹೇಳಿದನು.

8 ಇಸ್ರಯೇಲರು ಯೆಹೋಶುವನು ಆಜ್ಞಾಪಿಸಿದಂತೆಯೇ ಮಾಡಿದರು. ಸರ್ವೇಶ್ವರಸ್ವಾಮಿ ಯೆಹೋಶುವನಿಗೆ ಹೇಳಿದ ಪ್ರಕಾರ ಅವರು ಇಸ್ರಯೇಲರ ಸಂಖ್ಯೆಗೆ ಅನುಸಾರವಾಗಿ ಜೋರ್ಡನಿನ ಮಧ್ಯದಿಂದ ಹನ್ನೆರಡು ಕಲ್ಲುಗಳನ್ನು ಎತ್ತಿ ತಮ್ಮ ಬಿಡಾರದ ಸ್ಥಳಕ್ಕೆ ತಂದು ಅಲ್ಲಿ ಅವುಗಳನ್ನು ನಿಲ್ಲಿಸಿದರು.

9 ಇದಲ್ಲದೆ ಯೆಹೋಶುವನು ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು, ಜೋರ್ಡನಿನ ಮಧ್ಯೆ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ನಿಂತಿದ್ದ ಸ್ಥಳದಲ್ಲಿ ನಿಲ್ಲಿಸಿದನು. ಅವು ಇಂದಿನವರೆಗೂ ಅಲ್ಲೇ ಇವೆ.

10 ಮೋಶೆ ಆಜ್ಞಾಪಿಸಿದಂತೆ ಯೆಹೋಶುವನು ಜನರಿಗೆ ತಿಳಿಸಿದ ಸರ್ವೇಶ್ವರನ ಅಪ್ಪಣೆಗಳನ್ನೆಲ್ಲ ಅವರು ನೆರವೇರಿಸುವ ತನಕ ಮಂಜೂಷವನ್ನು ಹೊತ್ತ ಯಾಜಕರು ಜೋರ್ಡನಿನ ಮಧ್ಯದಲ್ಲೇ ನಿಂತರು.

11 ಜನರು ಬೇಗನೆ ನದಿ ದಾಟಿದರು. ಅವರೆಲ್ಲರು ಆಚೆಗೆ ಸೇರಿದ ಮೇಲೆ ಯಾಜಕರು ಸರ್ವೇಶ್ವರನ ಮಂಜೂಷದೊಡನೆ ನದಿ ದಾಟಿ ಜನರ ಮುಂದುಗಡೆಯೇ ಹೋದರು.

12 ರೂಬೇನ್ಯರು, ಗಾದ್ಯರು ಹಾಗೂ ಮನಸ್ಸೆ ಕುಲದ ಅರ್ಧಜನರು ಮೋಶೆ ತಮಗೆ ಆಜ್ಞಾಪಿಸಿದಂತೆ ಯುದ್ಧಸನ್ನದ್ಧರಾಗಿ ಮಿಕ್ಕ ಇಸ್ರಯೇಲರಿಗಿಂತ ಮುಂದಾಗಿ ಹೊರಟು ನದಿ ದಾಟಿದರು.

13 ಸುಮಾರು ನಾಲ್ವತ್ತು ಸಾವಿರ ಯೋಧರಿಂದ ಕೂಡಿದ ಅವರು ಸರ್ವೇಶ್ವರನ ಸಮ್ಮುಖದಲ್ಲಿ ನದಿ ದಾಟಿ ಯುದ್ಧ ಮಾಡುವುದಕ್ಕಾಗಿ ಜೆರಿಕೋವಿನ ಬಯಲಿಗೆ ಬಂದರು.

14 ಆ ದಿನ ಸರ್ವೇಶ್ವರ ಯೆಹೋಶುವನನ್ನು ಇಸ್ರಯೇಲರೆಲ್ಲರ ದೃಷ್ಟಿಯಲ್ಲಿ ಇಷ್ಟು ಘನಪಡಿಸಿದ್ದರಿಂದ ಅವರು ಮೋಶೆಯಲ್ಲಿ ಹೇಗೋ ಹಾಗೆಯೇ ಇವನಲ್ಲಿಯೂ, ಇವನು ಜೀವದಿಂದಿದ್ದ ಕಾಲವೆಲ್ಲ ಗೌರವವುಳ್ಳವರು ಆಗಿದ್ದರು.

15 ಸರ್ವೇಶ್ವರ ಯೆಹೋಶುವನಿಗೆ:

16 “ಆಜ್ಞಾಶಾಸನಗಳ ಮಂಜೂಷವನ್ನು ಹೊತ್ತ ಯಾಜಕರಿಗೆ ಜೋರ್ಡನಿನಿಂದ ಮೇಲೆ ಬರಬೇಕೆಂದು ಆಜ್ಞಾಪಿಸು,” ಎಂದರು.

17 ಆತ ಅವರಿಗೆ ಅಂತೆಯೇ ವಿಧಿಸಿದನು.

18 ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಜೋರ್ಡನಿನಿಂದ ಮೇಲೆ ಬಂದು ಒಣನೆಲದಲ್ಲಿ ಕಾಲಿಟ್ಟ ಕೂಡಲೇ ನೀರು ಮುಂಚಿನಂತೆ ಬಂದು ಜೋರ್ಡನ್ ನದಿಯ ದಡಮೀರಿ ಹರಿಯಿತು.


ಗಿಲ್ಗಾಲಿಗೆ ಆಗಮನ

19 ಜನರು ಮೊದಲನೇ ತಿಂಗಳಿನ ಹತ್ತನೆಯ ದಿನ ಜೋರ್ಡನನ್ನು ದಾಟಿ ಜೆರಿಕೋವಿನ ಪೂರ್ವಗಡಿಯಲ್ಲಿರುವ ಗಿಲ್ಗಾಲೆಂಬಲ್ಲಿಗೆ ಬಂದು ತಂಗಿದರು.

20 ಯೆಹೋಶುವನು ಜೋರ್ಡನಿನಿಂದ ತೆಗೆದುಕೊಂಡು ಬಂದ ಹನ್ನೆರಡು ಕಲ್ಲುಗಳನ್ನು ಗಿಲ್ಗಾಲಿನಲ್ಲೇ ನಿಲ್ಲಿಸಿದನು.

21 ಆತ ಇಸ್ರಯೇಲರಿಗೆ, “ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ಈ ಕಲ್ಲುಗಳನ್ನು ಏಕೆ ನೆಟ್ಟಿದ್ದಾರೆಂದು ಕೇಳಿದರೆ ನೀವು ಅವರಿಗೆ,

22 ‘ಇಸ್ರಯೇಲರು ಒಣನೆಲವಾಗಿದ್ದ ಈ ಜೋರ್ಡನನ್ನು ದಾಟಿ ಬಂದುದಕ್ಕಾಗಿ’ ಎಂದು ಹೇಳಿ.

23 ನಿಮ್ಮ ದೇವರಾದ ಸರ್ವೇಶ್ವರ ನಮ್ಮ ಕಣ್ಮುಂದೆ ಕೆಂಪುಸಮುದ್ರವನ್ನು ಬತ್ತಿಸಿ, ನಮ್ಮನ್ನು ದಾಟಿಸಿದಂತೆ ಈಗ ನಿಮ್ಮ ಕಣ್ಮುಂದೆಯೇ ಈ ಜೋರ್ಡನನ್ನು ಬತ್ತಿಸಿ, ನಿಮ್ಮನ್ನು ದಾಟಿಸಿದ್ದಾರೆ.

24 ಇದರಿಂದ ಭೂನಿವಾಸಿಗಳೆಲ್ಲರು ಸರ್ವೇಶ್ವರನ ಹಸ್ತವು ಪರಾಕ್ರಮವುಳ್ಳದ್ದೆಂದು ತಿಳಿದುಕೊಳ್ಳುವರು. ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಯಾವಾಗಲೂ ಭಯಭಕ್ತಿಯುಳ್ಳವರಾಗಿರುವರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು