Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 39 - ಕನ್ನಡ ಸತ್ಯವೇದವು C.L. Bible (BSI)


ಗೋಗನ ಸೋಲು

1 “ನರಪುತ್ರನೇ, ನೀನು ಗೋಗನಿಗೆ ವಿರುದ್ಧ ಈ ದೈವೋಕ್ತಿಯನ್ನು ನುಡಿ: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ‘ರೋಷ್, ಮೆಷೆಕ್, ತೂಬಲ್ ಜನಾಂಗಗಳ ಒಡೆಯನಾದ ಗೋಗನೇ,

2 ಇಗೋ, ನಾನು ನಿನಗೆ ವಿರುದ್ಧನಾಗಿ, ನಿನ್ನನ್ನು ತಿರುಗಿಸಿ ಮುನ್ನಡೆಸಿ, ಉತ್ತರದಿಕ್ಕಿನ ಕಟ್ಟಕಡೆಯಿಂದ ಬರಮಾಡಿ, ಇಸ್ರಯೇಲಿನ ಪರ್ವತಗಳ ಮೇಲೆ ನುಗ್ಗಿಸಿ,

3 ನಿನ್ನ ಎಡಗೈಯಿಂದ ಬಿಲ್ಲನ್ನು ಕಿತ್ತುಹಾಕಿ, ನಿನ್ನ ಬಲಗೈಯಿಂದ ಬಾಣಗಳನ್ನು ಉದುರಿಸಿಬಿಡುವೆನು.

4 ನೀನು, ನಿನ್ನ ಸೇನೆ ಹಾಗು ಪರಿವಾರ ಇಸ್ರಯೇಲಿನ ಪರ್ವತಗಳಲ್ಲಿ ಬಿದ್ದುಬಿಡುವಿರಿ; ನಾನು ನಿಮ್ಮನ್ನು ಮಾಂಸಾಹಾರಿಗಳಾದ ಬಗೆಬಗೆಯ ಹಕ್ಕಿಗಳಿಗೂ ಭೂಜಂತುಗಳಿಗೂ ಆಹಾರ ಮಾಡುವೆನು. ನೀವು ಬಯಲಿನಲ್ಲೇ ಬೀಳುವಿರಿ.

5 ನಾನೇ ಅಪ್ಪಣೆಕೊಟ್ಟಿದ್ದೇನೆ. ಇದು ಸರ್ವೇಶ್ವರನಾದ ದೇವರ ನುಡಿ.

6 ನಾನು ಮಾಗೋಗ್ ದೇಶದ ಮೇಲೂ ಕರಾವಳಿಯ ಸೀಮೆಗಳಲ್ಲಿ ನಿರ್ಭಯವಾಗಿ ವಾಸಿಸುವವರ ಮೇಲೂ ಬೆಂಕಿಯನ್ನು ಕಳುಹಿಸುವೆನು; ಆಗ ನಾನೇ ಸರ್ವೇಶ್ವರ ಎಂದು ಅವರಿಗೆ ನಿಶ್ಚಿತವಾಗುವುದು.

7 ನಾನು ನನ್ನ ಪವಿತ್ರನಾಮವನ್ನು ನನ್ನ ಜನರಾದ ಇಸ್ರಯೇಲರ ನಡುವೆ ವ್ಯಕ್ತಗೊಳಿಸುವೆನು, ಅದನ್ನು ಇನ್ನು ಮುಂದೆ ಅಪಕೀರ್ತಿಗೆ ಗುರಿಯಾಗಲುಬಿಡೆನು; ನಾನೇ ಸರ್ವೇಶ್ವರ, ಇಸ್ರಯೇಲಿನ ಪರಮಪಾವನಸ್ವಾಮಿ ಎಂದು ಜನಾಂಗಗಳಿಗೆ ಗೊತ್ತಾಗುವುದು.”

8 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಇಗೋ ಬಂದಿತು, ಸಂಭವಿಸಿತು; ನಾನು ಮುಂತಿಳಿಸಿದ ದಿನ ಇದೇ.

9 ಇಸ್ರಯೇಲಿನ ಪಟ್ಟಣಗಳ ನಿವಾಸಿಗಳು ಬಯಲಿಗೆ ಬಂದು, ಶತ್ರುವಿನ ಆಯುಧಗಳಿಗೆ ಬೆಂಕಿಯಿಕ್ಕಿ ಸುಟ್ಟುಬಿಡುವರು; ಹೌದು, ಖೇಡ್ಯ, ಗುರಾಣಿ, ಬಿಲ್ಲು, ಬಾಣ, ದೊಣ್ಣೆ, ಈಟಿ ಇವುಗಳನ್ನು ಏಳು ವರ್ಷಗಳ ತನಕ ಸುಡುತ್ತಲೇ ಬರುವರು.

10 ಕಾಡಿನಿಂದ ಸೌದೆಯನ್ನು ತರಬೇಕಾಗುವುದಿಲ್ಲ, ವನದಲ್ಲಿ ಮರವನ್ನು ಕಡಿಯಬೇಕಾಗುವುದಿಲ್ಲ; ಆಯುಧಗಳನ್ನೇ ಉರಿಸುವರು. ತಮ್ಮನ್ನು ಸೂರೆಮಾಡಿದವರನ್ನು ತಾವು ಸೂರೆಮಾಡುವರು, ತಮ್ಮನ್ನು ಕೊಳ್ಳೆಹೊಡೆದವರನ್ನು ತಾವು ಕೊಳ್ಳೆಹೊಡೆಯುವರು; ಇದು ಸರ್ವೇಶ್ವರನಾದ ದೇವರ ನುಡಿ.


ಗೋಗನ ಭೂಸ್ಥಾಪನೆ

11 “ಆ ದಿನದಲ್ಲಿ ನಾನು ಇಸ್ರಯೇಲಿನೊಳಗೆ ಲವಣಸಮುದ್ರದ ಪೂರ್ವದಿಕ್ಕಿನಲ್ಲಿ ಪ್ರಯಾಣಿಕರ ಮಾರ್ಗವಾದ ಕಣಿವೆಯನ್ನು ಗೋಗನಿಗೆ ಹೂಳುವ ಸ್ಥಳವನ್ನಾಗಿ ಏರ್ಪಡಿಸುವೆನು; ಅಲ್ಲಿ ಪ್ರಯಾಣಮಾಡಲು ಆಗುವುದಿಲ್ಲ; ಅಲ್ಲೇ ಗೋಗನನ್ನೂ ಅವನ ಸಮೂಹವೆಲ್ಲವನ್ನೂ ಹೂಣಿಡುವರು; ಅದು ‘ಹಮೋನ್ ಗೋಗ್’ ಕಣಿವೆ ಎನಿಸಿಕೊಳ್ಳುವುದು.

12 ಇಸ್ರಯೇಲರು ನಾಡನ್ನು ಶುದ್ಧಿಮಾಡುವುದಕ್ಕಾಗಿ ಏಳು ತಿಂಗಳು ಅವರನ್ನು ಹೂಣುತ್ತಲೇ ಇರುವರು.

13 ಹೌದು, ದೇಶದ ಸಕಲ ಪ್ರಜೆಗಳು ಅವರನ್ನು ಹೂಳಿಬಿಡುವರು. ಹೀಗೆ ನನ್ನ ಮಹಿಮೆಯನ್ನು ಪ್ರತ್ಯಕ್ಷಗೊಳಿಸುವಾಗ ನನ್ನ ಜನರಿಗೆ ಗೌರವ ಉಂಟಾಗುವುದು; ಇದು ಸರ್ವೇಶ್ವರನಾದ ದೇವರ ನುಡಿ.

14 ತರುವಾಯ ಅವರು ನಾಡನ್ನು ಶುದ್ಧಿಮಾಡುವುದಕ್ಕೆ ತಕ್ಕವರನ್ನು ಆರಿಸಿ, ‘ನೀವು ನಾಡಿನಲ್ಲಿ ತಿರುಗಾಡುತ್ತಾ ನೆಲದ ಮೇಲೆ ಉಳಿದಿರುವ ಎಲುಬುಗಳನ್ನು ಹೂಣಿಡಿ’ ಎಂದು ನಿಯತವಾಗಿ ನೇಮಿಸುವರು; ಏಳು ತಿಂಗಳು ಕಳೆದ ಕೂಡಲೆ, ಇವರು ಈ ಹುಡುಕುವ ಕೆಲಸದಲ್ಲಿ ತೊಡಗುವರು.

15 ದಾರಿಗಳಲ್ಲಿ ಯಾವನೇ ಆಗಲಿ ಪ್ರಯಾಣ ಮಾಡುತ್ತಿರುವಾಗ ಮನುಷ್ಯನ ಎಲುಬನ್ನು ಕಂಡರೆ ಅಲ್ಲಿ ಒಂದು ಗುರುತನ್ನು ನಿಲ್ಲಿಸುವನು; ಹೂಣಿಡುವವರು ಗೋಗನ ಸಮೂಹದ ಕಣಿವೆಯಲ್ಲಿ ಅದನ್ನು ಹೂಣುವ ತನಕ ಆ ಗುರುತು ಹಾಗೇ ನಿಂತಿರುವುದು.

16 (ಇದಲ್ಲದೆ ಒಂದು ಪಟ್ಟಣಕ್ಕೆ ‘ಹಮೋನ್’ ಪುರವೆಂದು ಹೆಸರಾಗುವುದು.) ಹೀಗೆ ದೇಶವನ್ನು ಶುದ್ಧಿಮಾಡುವರು.”

17 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ನರಪುತ್ರನೇ, ಎಲ್ಲ ಬಗೆಯ ಪಕ್ಷಿಗಳಿಗೂ ಸಮಸ್ತ ಭೂಜಂತುಗಳಿಗೂ ಹೀಗೆ ನುಡಿ: ನೀವು ಕೂಡಿಬನ್ನಿ; ನಾನು ಇಸ್ರಯೇಲಿನ ಪರ್ವತಗಳ ಮೇಲೆ ನಿಮಗಾಗಿ ಮಾಡುವ ಮಹಾಯಜ್ಞಕ್ಕೆ ಎಲ್ಲ ಕಡೆಯಿಂದಲೂ ನೆರೆದುಬಂದು ಮಾಂಸವನ್ನು ತಿಂದು, ರಕ್ತವನ್ನು ಕುಡಿಯಿರಿ.

18 ಟಗರು, ಕುರಿ, ಹೋತ, ಹೋರಿ, ಅಂತು ಬಾಷಾನಿನ ಕೊಬ್ಬಿದ ಪಶುಗಳು, ಅಂದರೆ ಬಲಿಷ್ಠರು, ಭೂಪತಿಗಳು ಇವರ ಮಾಂಸ ಹಾಗೂ ರಕ್ತ ನಿಮಗೆ ಸಿಕ್ಕುವುವು.

19 ನಾನು ನಿಮಗಾಗಿ ವಧಿಸಿರುವ ಯಜ್ಞಪಶುಗಳ ಮಾಂಸವನ್ನು ಹೊಟ್ಟೆತುಂಬಾ ತಿನ್ನುವಿರಿ, ರಕ್ತವನ್ನು ಅಮಲೇರುವಷ್ಟು ಕುಡಿಯುವಿರಿ.

20 ನಾನು ಸಿದ್ಧಪಡಿಸುವ ಆ ಔತಣದಲ್ಲಿ ಕುದುರೆ, ರಾಹುತ ಶೂರ, ಸಕಲವಿಧವಾದ ಯುದ್ಧವೀರರನ್ನು ಯಥೇಚ್ಛವಾಗಿ ಭಕ್ಷಿಸುವಿರಿ; ಇದು ಸರ್ವೇಶ್ವರನಾದ ದೇವರ ನುಡಿ.”


ಇಸ್ರಯೇಲಿನ ಪುನರ್‍ಸ್ಥಾಪನೆ

21 “ಹೀಗೆ ನಾನು ಜನಾಂಗಗಳ ನಡುವೆ ನನ್ನ ಮಹಿಮೆಯನ್ನು ಸ್ಥಾಪಿಸುವೆನು. ಆಗ ಆ ಸೈನಿಕರ ಮೇಲೆ ಕೈಮಾಡಿ ನ್ಯಾಯದಂಡನೆ ನಡೆಸಿದವನು ನಾನೇ ಎಂದು ಆ ಜನಾಂಗಗಳಿಗೆಲ್ಲಾ ಗೋಚರವಾಗುವುದು,

22 ಇಸ್ರಯೇಲ್ ವಂಶದವರು, ನಾನೇ ತಮ್ಮ ದೇವರಾದ ಸರ್ವೇಶ್ವರನೆಂದು ಅಂದಿನಿಂದ ಯಾವಾಗಲು ತಿಳಿದುಕೊಳ್ಳುವರು.

23 ಇದಲ್ಲದೆ, ಇಸ್ರಯೇಲರು ತಮ್ಮ ಅಧರ್ಮದ ನಿಮಿತ್ತವೇ ಸೆರೆಯಾಗಿಹೋದರೆಂದು ಮತ್ತು ಅವರು ನನಗೆ ದ್ರೋಹ ಮಾಡಿದ್ದರಿಂದಲೆ ನಾನು ಅವರಿಗೆ ವಿಮುಖನಾಗಿ ಅವರೆಲ್ಲರು ಖಡ್ಗಹತರಾಗುವಂತೆ ಅವರನ್ನು ಶತ್ರುವಶಮಾಡಿದೆನೆಂದು ಜನಾಂಗಗಳಿಗೆ ಗೊತ್ತಾಗುವುದು;

24 ಅವರ ಅಶುದ್ಧತನಕ್ಕೂ ದುರಾಚಾರಗಳಿಗೂ ತಕ್ಕಂತೆ ನಾನು ಅವರನ್ನು ದಂಡಿಸಿ ಅವರಿಗೆ ವಿಮುಖನಾದೆನು.”

25 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ನನ್ನ ಪವಿತ್ರನಾಮಕ್ಕೆ ಇನ್ನು ಅಪಕೀರ್ತಿಬಾರದಂತೆ ನಾನು ಈಗ ಆಗ್ರಹವುಳ್ಳವನಾಗಿ ಯಕೋಬ್ಯರ ದುರವಸ್ಥೆಯನ್ನು ತಪ್ಪಿಸಿ ಇಸ್ರಯೇಲ್ ವಂಶದವರಿಗೆಲ್ಲ ಕೃಪೆತೋರುವೆನು.

26 ನಾನು ನನ್ನ ಜನರನ್ನು ಅನ್ಯಜನಾಂಗಗಳ ವಶದಿಂದ ತಪ್ಪಿಸಿ ಆ ಶತ್ರುಗಳ ದೇಶಗಳಿಂದ ಒಟ್ಟುಗೂಡಿಸಿ, ಬಹುಜನಾಂಗಗಳ ಕಣ್ಣೆದುರಿಗೆ ಅವರ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು.

27 ಅನಂತರ ಅವರು ಸ್ವದೇಶದಲ್ಲಿ ಯಾರ ಭಯವೂ ಇಲ್ಲದೆ ನೆಮ್ಮದಿಯಿಂದ ವಾಸಿಸುತ್ತಿರುವಾಗ ತಾವು ನನಗೆ ಮಾಡಿದ ಎಲ್ಲ ದ್ರೋಹಿಗಳ ಹೊರೆಯನ್ನು ಹೊರುತ್ತಾ ನಾಚಿಕೆಪಡುವರು.

28 ನಾನು ಅವರನ್ನು ಜನಾಂಗಗಳೊಳಗೆ ಸೆರೆಹೋಗುವಂತೆ ಮಾಡಿ, ಆಮೇಲೆ ಒಟ್ಟುಗೂಡಿಸಿ, ಸ್ವದೇಶಕ್ಕೆ ತಂದದ್ದರಿಂದ ನಾನೇ ತಮ್ಮ ದೇವರಾದ ಸರ್ವೇಶ್ವರ ಎಂದು ದೃಢಮಾಡಿಕೊಳ್ಳುವರು. ಅವರಲ್ಲಿ ಯಾರನ್ನೂ ಸೆರೆಯಲ್ಲಿ ಬಿಟ್ಟುಬಿಡೆನು;

29 ಇನ್ನೆಂದಿಗೂ ಅವರಿಗೆ ವಿಮುಖನಾಗೆನು; ಇಸ್ರಯೇಲ್ ವಂಶದ ಮೇಲೆ ನನ್ನ ಆತ್ಮವನ್ನು ಸುರಿಸಿದ್ದೇನೆ; ಇದು ಸರ್ವೇಶ್ವರನಾದ ದೇವರ ನುಡಿ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು