Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 15 - ಕನ್ನಡ ಸತ್ಯವೇದವು C.L. Bible (BSI)


ಕೆಲಸಕ್ಕೆಬಾರದ ದ್ರಾಕ್ಷಿಯ ಕಟ್ಟಿಗೆ

1 ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ ಇದು:

2 “ನರಪುತ್ರನೇ, ವನವೃಕ್ಷಗಳಲ್ಲಿ ದ್ರಾಕ್ಷಾವೃಕ್ಷದ ವಿಶಿಷ್ಟತೆಯೇನು? ಕಾಡುಗಿಡಗಳ ಕಟ್ಟಿಗೆಗಿಂತ ದ್ರಾಕ್ಷಿಯ ಕಟ್ಟಿಗೆಯಲಿ ಹೆಚ್ಚಾದುದೇನು?

3 ದ್ರಾಕ್ಷಿಯ ಕಟ್ಟಿಗೆಯನ್ನು ಬಳಸಿ ಮಾಡುತ್ತಾರೆಯೆ ಏನನ್ನಾದರು? ಸಾಮಗ್ರಿಗಳನ್ನು ತಗಲಿಹಾಕಲು ಅದರಿಂದ ಮಾಡುತ್ತಾರೆಯೇ ಗೂಟವನ್ನಾದರು?

4 ಇಲ್ಲ, ಬೆಂಕಿಗೆ ಹಾಕುತ್ತಾರೆ. ಸೌದೆಯಾಗಿ, ಅದನ್ನು ಬೆಂಕಿ ಸುಟ್ಟುಬಿಡುತ್ತದೆ. ಅದರ ಎರಡು ಕೊನೆಗಳೂ ಇದ್ದಲಾಗುತ್ತವೆ. ಅದರ ಮಧ್ಯಭಾಗವು ಬಾರದು ಯಾವ ತರದ ಬಳಕೆಗು.

5 ಇದ್ದ ಹಾಗೆಯೆ ಇದ್ದಾಗ ಅದು ಬಾರಲಿಲ್ಲ ಯಾವ ಕೆಲಸಕ್ಕು. ಬೆಂಕಿಯಲ್ಲಿ ಸುಟ್ಟು ಇದ್ದಲಾದಾಗ ಯಾವುದಕ್ಕೆ ಬಂದೀತು?”

6 ಇಂತಿರಲು ಸರ್ವೇಶ್ವರನಾದ ದೇವರು ಹೇಳುವುದಿದು: “ವನವೃಕ್ಷಗಳಲ್ಲಿ ದ್ರಾಕ್ಷಾವೃಕ್ಷವನ್ನೆ ಅಗ್ನಿಗೆ ನಾನು ಸೌದೆಯನ್ನಾಗಿಸಿರುವಂತೆ ಕೊಟ್ಟಿರುವೆನು ಜೆರುಸಲೇಮನ್ನು ವಿನಾಶಕ್ಕೆ.

7 ನಾನವರ ಮೇಲಿಡುವೆನು ಕೋಪ ದೃಷ್ಟಿಯನ್ನು; ಬೆಂಕಿಯಿಂದ ತಪ್ಪಿಸಿಕೊಂಡರೂ ನುಂಗಿಬಿಡುವುದು ಅದು ಅವರನ್ನು. ನಾನವರ ಮೇಲೆ ಕೋಪ ದೃಷ್ಟಿಯನ್ನಿಟ್ಟಾಗ ನಾನೇ ಸರ್ವೇಶ್ವರನೆಂದು ನಿಮಗೆ ಮನದಟ್ಟಾಗುವುದು.

8 ಅವರು ದ್ರೋಹ ಮಾಡಿದ್ದರಿಂದ ನಾಡು ಕಾಡಾಗುವುದು ನನ್ನಿಂದ.” ಇದು ಸರ್ವೇಶ್ವರನಾದ ದೇವರ ನುಡಿ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು