Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 40 - ಕನ್ನಡ ಸತ್ಯವೇದವು C.L. Bible (BSI)


ವಾಗ್ದಾನ - ಅಭಯದಾನ

1 ನಿಮ್ಮ ದೇವರು ಇಂತೆನ್ನುತ್ತಾರೆ : “ಸಂತೈಸಿ, ನನ್ನ ಜನರನ್ನು ಸಂತೈಸಿರಿ.

2 ಜೆರುಸಲೇಮಿನೊಡನೆ ಪ್ರೀತಿಯಿಂದ ಮಾತನಾಡಿ; ಅದರ ಊಳಿಗತನ ಮುಗಿಯಿತೆನ್ನಿ; ತಕ್ಕ ಪ್ರಾಯಶ್ಚಿತ್ತವಾಗಿದೆ ಅದು ಗೈದ ದೋಷಕೆ ಸರ್ವೇಶ್ವರ ಸ್ವಾಮಿಯಿಂದಲೇ ಅದರ ಎಲ್ಲಾ ಪಾಪಕೃತ್ಯಗಳಿಗೆ ಇಮ್ಮಡಿ ಶಿಕ್ಷೆಯಾಗಿದೆ ಎಂದು ಕೂಗಿ ಹೇಳಿ ಆ ನಗರಿಗೆ.”

3 ಇಗೋ, ಈ ವಾಣಿಯನ್ನು ಕೇಳಿ : “ಸರ್ವೇಶ್ವರ ಸ್ವಾಮಿಗೆ ಮಾರ್ಗವನ್ನು ಸಿದ್ಧಮಾಡಿ ಅರಣ್ಯದಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ಸರಾಗಮಾಡಿ ಅಡವಿಯಲಿ.

4 ತುಂಬಬೇಕು ಎಲ್ಲ ಹಳ್ಳಕೊಳ್ಳಗಳನು ಮಟ್ಟಮಾಡಬೇಕು ಎಲ್ಲ ಬೆಟ್ಟಗುಡ್ಡಗಳನು. ನೆಲಸಮಮಾಡಬೇಕು ದಿಬ್ಬದಿಣ್ಣೆಗಳನು ಸಮತಲಗೊಳಿಸಬೇಕು ತಗ್ಗುಮುಗ್ಗಾದ ಸ್ಥಳಗಳನು.

5 ಗೋಚರವಾಗುವುದಾಗ ಸರ್ವೇಶ್ವರ ಸ್ವಾಮಿಯ ಮಹಿಮೆಯು, ಮಾನವರೆಲ್ಲರೂ ಅದನ್ನು ಕಾಣುವರು ಒಟ್ಟಿಗೆ, ಸರ್ವೇಶ್ವರ ಸ್ವಾಮಿಯೇ ಇದನ್ನು ಬಾಯಾರೆ ನುಡಿದಿದ್ದಾರೆ.”

6 ಆ ವಾಣಿ ಮತ್ತೆ ಕೇಳಿಸಿತು : ‘ಗಟ್ಟಿಯಾಗಿ ಕೂಗು’ ಎಂದಿತು ನಾನೇನೆಂದು ಕೂಗಲಿ ಎನ್ನಲು ಈ ಪರಿಯಾಗಿ ಉತ್ತರಿಸಿತು : “ನರಮಾನವರೆಲ್ಲ ಬರೀ ಹುಲ್ಲಿನಂತೆ ಅವರ ಸೊಬಗೆಲ್ಲಾ ಬಯಲಿನ ಕುಸುಮದಂತೆ.

7 ಪ್ರಭುವಿನ ಶ್ವಾಸ ಬೀಸಲು ಒಣಗಿ ಹೋಗುವುದಾ ಹುಲ್ಲು ಬಾಡಿ ಹೋಗುವುದಾ ಹೂವು ಮಾನವರೆಲ್ಲ ಹುಲ್ಲೇ ಹುಲ್ಲು.

8 ಒಣಗಿ ಹೋಗುವುದಾ ಹುಲ್ಲು, ಬಾಡಿಹೋಗುವುದಾ ಹೂವು, ನಮ್ಮ ದೇವರ ನುಡಿಯಾದರೋ ಇರುವುದು ಚಿರಕಾಲವು.”

9 ಪರ್ವತವನ್ನೇರು ಶುಭಸಂದೇಶಕಳಾದ ಸಿಯೋನೇ, ಧ್ವನಿಯೇರಿಸು, ಶುಭವಾರ್ತೆ ಸಾರಬಲ್ಲ ಜೆರುಸಲೇಮೇ, ಧ್ವನಿಯೇರಿಸು, ನಿರ್ಭಯದಿಂದ ಏರಿಸು ‘ಇಗೋ, ನಿಮ್ಮ ದೇವರು’ ಎಂದು ಜೂದ ನಗರಗಳಿಗೆ ಸಾರು.

10 ಇಗೋ, ಬರುತಿಹನು ಸ್ವಾಮಿ ಸರ್ವೇಶ್ವರ ಶೂರನಂತೆ ರಾಜ್ಯವಾಳುವನು ತನ್ನ ಭುಜಬಲದಿಂದಲೇ ಇಗೋ, ಶ್ರಮಕ್ಕೆ ತಕ್ಕ ಪ್ರತಿಫಲ ಆತನ ಕೈಯಲ್ಲಿದೆ ಆತ ಜಯಿಸಿದ ಪರಿವಾರ ಆತನ ಮುಂದಿದೆ.

11 ಆತ ಮೇಯಿಸುವನು ತನ್ನ ಮಂದೆಯನ್ನು ಕುರುಬನ ಹಾಗೆ ಮರಿಗಳನ್ನು ಕೈಗೆ ಎತ್ತಿಕೊಳ್ಳುವನು, ಅಪ್ಪಿಕೊಳ್ಳುವನು ಎದೆಗೆ ನಡೆಸುವನು ಹಾಲೂಡಿಸುವ ಕುರಿಗಳನ್ನು ಮೆಲ್ಲಗೆ.


ಇಸ್ರಯೇಲಿನ ಅನುಪಮದೇವ

12 ಅಳೆವನಾರು ಸಮುದ್ರಸಾಗರಗಳನ್ನು ಬೊಗಸೆಗೈಯಿಂದ? ಮೊಳ ಹಾಕುವವನಾರು ಆಕಾಶಮಂಡಲವನ್ನು ಕೈಗೇಣಿನಿಂದ? ತುಂಬುವವನಾರು ಧರೆಯ ಮರಳನ್ನೆಲ್ಲಾ ಕೊಳಗದೊಳಗೆ? ತೂಗಿದವನಾರು ಬೆಟ್ಟಗುಡ್ಡಗಳನ್ನು ತ್ರಾಸುತಕ್ಕಡಿಯೊಳಗೆ?

13 ಆದೇಶವಿತ್ತವನಾರು ಸರ್ವೇಶ್ವರನ ಆತ್ಮಕೆ? ಉಪದೇಶವಿತ್ತ ಸಲಹೆಗಾರನಾರು ಆತನಿಗೆ?

14 ಜ್ಞಾನೋದಯ ನೀಡಿದವನಾರು ಆತನಿಗೆ? ನ್ಯಾಯಮಾರ್ಗ ತೋರಿಸಿದವನಾರು ಆತನಿಗೆ? ಬುದ್ಧಿ ಕಲಿಸಿದವನಾರು ಆತನಿಗೆ? ಏನೇ ಮಾರ್ಗವನ್ನು ಸೂಚಿಸಿದವನಾರು ಆತನಿಗೆ?

15 ಆತನ ಗಣನೆಗೆ ರಾಷ್ಟ್ರಗಳು ಕಪಿಲೆಯಿಂದ ಉದುರುವ ತುಂತುರುಗಳು ತ್ರಾಸಿನ ತಟ್ಟೆಯ ಮೇಲಿರುವ ಧೂಳಿನ ಕಣಗಳು ದ್ವೀಪಗಳೋ ಆತನ ತೂಕಕ್ಕೆ ಅಣುರೇಣುಗಳು.

16 ಲೆಬನೋನಿನ ಪಶುಗಳು ಸಾಲವು ದಹನಬಲಿಗೆ ಅಲ್ಲಿನ ಮರಗಳು ಸಾಲವು ಅದರ ಸೌದೆಗೆ.

17 ಸಕಲ ರಾಷ್ಟ್ರಗಳು ಆತನ ದೃಷ್ಟಿಗೆ ಏನೂ ಇಲ್ಲದಂತೆ ಅವುಗಳು ಆತನ ಎಣಿಕೆಗೆ ಶುದ್ಧ ಸೊನ್ನೆಯಂತೆ.

18 ಇಂತಿರಲು ಯಾರಿಗೆ ಹೋಲಿಸಬಲ್ಲಿರಿ ದೇವರನು? ಕೊಡಬಲ್ಲಿರಾ ಆತನಿಗೆ ಯಾವುದಾದರೊಂದು ಉಪಮಾನವನು?

19 ವಿಗ್ರಹವಾದರೋ ಎರಕ ಹೊಯ್ಯಲ್ಪಟ್ಟಿತು ಶಿಲ್ಪಿಯಿಂದ ಅದಕ್ಕೆ ಬಡಿದಿರುವ ಚಿನ್ನದ ಕವಚ ಅಕ್ಕಸಾಲಿಗನಿಂದ ಅದಕ್ಕೆ ತೊಡಿಸಿರುವ ಬೆಳ್ಳಿಸರಪಣಿ ಆ ವಾಜನಿಂದ.

20 ಇಷ್ಟು ಹಣವನ್ನು ವೆಚ್ಚ ಮಾಡಲಾಗದ ಬಡವನು ಹುಡುಕುವನು ಹುಳಿತುಹೋಗದ ಮರವನು ಬಾಗಿ ಬೀಳದ ವಿಗ್ರಹವನ್ನು ಮಾಡಬಲ್ಲಾ ಕುಶಲನನು.

21 ನಿಮಗೆ ತಿಳಿದಿಲ್ಲವೋ, ನೀವು ಕೇಳಿಲ್ಲವೋ ಆದಿಯಿಂದ ನಿಮಗೆ ಉಪದೇಶವಾಗಿ ಬಂದಿಲ್ಲವೋ? ಪೃಥ್ವಿಸ್ಥಾಪನೆ ಹೇಗಾಯಿತೆಂದು ನೀವು ಗ್ರಹಿಸಿಲ್ಲವೋ?

22 ಆಸೀನನಾಗಿಹನು ಆತ ಭೂಮಂಡಲಕ್ಕಿಂತ ಮೇಲೆ ಭೂನಿವಾಸಿಗಳು ಕಾಣುತಿಹರು ಆತನಿಗೆ ಮಿಡತೆಗಳಂತೆ ಹರಡಿಹನು ಆಕಾಶಮಂಡಲವನು ನವಿರು ಬಟ್ಟೆಯಂತೆ ಮೇಲೆತ್ತಿಕಟ್ಟಿಹನು ಅದನ್ನು ನಿವಾಸದ ಗುಡಾರದಂತೆ.

23 ನಾಶಗೊಳಿಸುವನಾತ ದೇಶಾಧಿಪತಿಗಳನು ನಿರ್ನಾಮಗೊಳಿಸುವನು ರಾಜಾಧಿರಾಜರನು.

24 ನೆಟ್ಟಕೂಡಲೇ, ಬಿತ್ತಿದಾಕ್ಷಣವೇ, ಭೂಮಿಯಲ್ಲಿ ಬೇರೂರುವಾಗಲೆ ಬಾಡುವುದು ಇವರ ಸಂತಾನ ಆತನ ಶ್ವಾಸದಿಂದಲೆ; ಬಡಿದು ಹೊಯ್ಯಲ್ಪಡುವುದು ಒಣಹುಲ್ಲಿನಂತೆ ಬಿರುಗಾಳಿಯಿಂದಲೆ.

25 “ಇಂತಿರಲು ನನ್ನನ್ನು ಯಾರಿಗೆ ಹೋಲಿಸಬಲ್ಲಿರಿ?” ಯಾರಿಗೆ ನನ್ನನ್ನು ಸರಿಸಮಾನ ಮಾಡಬಲ್ಲಿರಿ?” ಎಂದು ಕೇಳುತ್ತಿಹರು ಪರಮಪಾವನ ಸ್ವಾಮಿ.

26 ಕಣ್ಣೆತ್ತಿ, ದಿಟ್ಟಿಸಿನೋಡಿ ಆಕಾಶದತ್ತ ಯಾರು ಆ ತಾರೆಗಳನ್ನು ರಚಿಸಿದಾತ? ಆ ತಾರಾ ಸಮೂಹವನ್ನು ಕ್ರಮಾನುಸಾರ ನಡೆಸುವಾತ, ಒಂದೊಂದನ್ನೂ ಹೆಸರಿಟ್ಟು ಕರೆಯುವಾತ, ಅವುಗಳಲ್ಲಿ ಒಂದನ್ನೂ ಕಾಣೆಯಾಗಲು ಬಿಡದಾತ, ಅಷ್ಟು ಬಲಾಢ್ಯನು, ಶಕ್ತಿವಂತನು ಆತ

27 ಹೀಗಿರಲು ಎಲೈ ಯಕೋಬ್ಯರೇ, ಇಸ್ರಯೇಲರೇ, ‘ಮರೆಯಾಗಿದೆ ಪ್ರಭುವಿಗೆ ನನ್ನ ಕುಂದುಕೊರತೆ, ನ್ಯಾಯನೀತಿ ದೊರಕದಿದೆ ನನಗೆ ಇದರತ್ತ ದೇವರ ಲಕ್ಷ್ಯಬೀಳದಿದೆ’ ಎನ್ನುತ್ತಿರುವಿರಿ ಏಕೆ?

28 ನೀವು ಕೇಳಿಲ್ಲವೇ? ನಿಮಗೆ ತಿಳಿದಿಲ್ಲವೇ? ಸರ್ವೇಶ್ವರ ಅನಂತ ದೇವರಲ್ಲವೇ? ಭೂದಿಗಂತಗಳನ್ನು ಆತ ಸೃಜಿಸಿದನಲ್ಲವೇ? ದಣಿವೆಂಬುದು ಇಲ್ಲ, ಬಳಲಿಕೆ ಎಂಬುದು ಇಲ್ಲ ಆತನಿಗೆ. ಆತನ ದಕ್ಷಸಾಮರ್ಥ್ಯ ಅಗಮ್ಯ ಪರಿಶೋಧನೆಗೆ.

29 ದಯಪಾಲಿಸುವನಾತ ಬಲಾಭಿವೃದ್ಧಿಯನ್ನು ಬಳಲಿದವನಿಗೆ ಅನುಗ್ರಹಿಸುವನಾತ ಚೈತನ್ಯವನು ನಿತ್ರಾಣನಿಗೆ.

30 ಯುವಕರೂ ದಣಿದು ಬಳಲುವರು ತರುಣರೂ ಸೊರಗಿ ಮುಗ್ಗರಿಸುವರು.

31 ಸರ್ವೇಶ್ವರನನ್ನು ಎದುರುನೋಡುವವರು ಹೊಸ ಚೇತನವನ್ನು ಹೊಂದುವರು. ರೆಕ್ಕೆ ಚಾಚಿದ ಹದ್ದುಗಳಂತೆ ಹಾರುವರು ಓಡಿದರೂ ದಣಿಯರು, ನಡೆದರೂ ಬಳಲರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು