Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 33 - ಕನ್ನಡ ಸತ್ಯವೇದವು C.L. Bible (BSI)


ಬಿಡುಗಡೆಯ ಬಗ್ಗೆ ಮತ್ತೊಂದು ವಾಗ್ದಾನ

1 ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದಾಗ ಅವನಿಗೆ ಸರ್ವೇಶ್ವರ ಎರಡನೆಯ ವಾಕ್ಯವನ್ನು ಅನುಗ್ರಹಿಸಿದರು.

2 ಲೋಕವನ್ನು ಸೃಷ್ಟಿಸಿ, ರೂಪಿಸಿ, ಸ್ಥಾಪಿಸಿದವರು ಹಾಗೂ ‘ಸರ್ವೇಶ್ವರ’ ಎಂದು ನಾಮಾಂಕಿತಗೊಂಡ ಅವರು ನನಗೆ ಹೀಗೆಂದರು:

3 “ನನ್ನನ್ನು ಬೇಡಿಕೊ, ನಾನು ನಿನಗೆ ಸದುತ್ತರವನ್ನು ದಯಪಾಲಿಸುವೆನು. ನಿನಗೆ ತಿಳಿಯದ ಮಹತ್ತಾದ ಗೂಢಾರ್ಥಗಳನ್ನು ಗೋಚರಪಡಿಸುವೆನು.

4 ಮುತ್ತಿಗೆಗೂ ಕತ್ತಿಗೂ ತುತ್ತಾಗಲಿರುವ ಈ ಊರಿನವರ ಮನೆಗಳ ವಿಷಯವಾಗಿ ಮತ್ತು ಜುದೇಯದ ಅರಸರ ಉಪ್ಪರಿಗೆಗಳ ವಿಷಯವಾಗಿ ಇಸ್ರಯೇಲರ ದೇವರಾದ ಸರ್ವೇಶ್ವರ ಆದ ನನ್ನ ನುಡಿ ಇದು:

5 ಈ ಊರಿನವರು ಬಾಬಿಲೋನಿಯರ ವಿರುದ್ಧ ಕದನಕ್ಕೆ ಹೊರಟರೆ ಏನು ಪ್ರಯೋಜನ? ತಮ್ಮ ಹೆಣಗಳಿಂದ ಅವರನ್ನು ತೃಪ್ತಿಪಡಿಸುವರಷ್ಟೆ. ಇವರ ಅಧರ್ಮದ ನಿಮಿತ್ತ ಈ ನಗರಕ್ಕೆ ವಿಮುಖವಾಗಿ, ಕಡುಕೋಪಾವೇಶನಾಗಿ ನಾನೇ ಇವರನ್ನು ಸದೆಬಡಿಯುವೆನು.

6 ಆದರೂ ಈ ನಗರವನ್ನು ಉದ್ಧಾರಮಾಡಿ, ಸುಧಾರಿಸಿ, ಇದರ ನಿವಾಸಿಗಳನ್ನು ಗುಣಪಡಿಸುವೆನು. ಸಮೃದ್ಧಿಯಾದ ಸೌಭಾಗ್ಯವನ್ನು ಹಾಗೂ ಶಾಂತಿಸಮಾಧಾನವನ್ನು ಇವರಿಗೆ ಅನುಗ್ರಹಿಸುವೆನು.

7 ಜುದೇಯದ ಹಾಗೂ ಇಸ್ರಯೇಲಿನ ಗುಲಾಮಗಿರಿಯನ್ನು ಬಿಡಿಸಿ ಮೊದಲಿನಂತೆಯೆ ಅವುಗಳನ್ನು ಪುನರ್‍ ನಿರ್ಮಿಸುವೆನು.

8 ಅವರು ನನಗೆ ವಿರುದ್ಧವಾಗಿ ಮಾಡಿದ ಅಧರ್ಮವನ್ನೆಲ್ಲ ತೊಲಗಿಸಿ ಅವರನ್ನು ಶುದ್ಧೀಕರಿಸುವೆನು; ನನಗೆ ವಿರುದ್ಧ ಮಾಡಿರುವ ಪಾಪದ್ರೋಹಗಳನ್ನೆಸಗಿ ಕಟ್ಟಿಕೊಂಡಿರುವ ಅಪರಾಧಗಳನ್ನೆಲ್ಲ ಕ್ಷಮಿಸುವೆನು.

9 ನಾನು ಈ ಜನರಿಗೆ ಅನುಗ್ರಹಿಸುವ ಎಲ್ಲ ಸೌಭಾಗ್ಯಗಳ ಸುದ್ದಿಯನ್ನು ಸಕಲ ಭೂರಾಜ್ಯಗಳು ಕೇಳುವರು. ಈ ನಗರಕ್ಕೆ ನಾನು ನೀಡುವ ಸುಖಸಮಾಧಾನಗಳನ್ನು ಅವರು ನೋಡುವರು ಹಾಗೂ ಹೆದರಿ ನಡುಗುವರು. ಇದರಿಂದಾಗಿ ಆ ಎಲ್ಲ ರಾಜ್ಯಗಳ ಮುಂದೆ ನನಗೆ ಅದು ಕೀರ್ತಿಯನ್ನು, ಮಹಿಮೆಯನ್ನು ಹಾಗೂ ಆನಂದವನ್ನು ತರುವುದು.”

10 ಸರ್ವೇಶ್ವರ ಹೀಗೆನ್ನುತ್ತಾರೆ: “ಜನರಾಗಲಿ ಜಾನುವಾರುಗಳಾಗಲಿ ಇಲ್ಲದೆ ಪಾಳುಬಿದ್ದ ಸ್ಥಳವೆಂದು ನೀವು ಕರೆಯುವ ಈ ಸ್ಥಳದಲ್ಲೇ, ಅಂದರೆ ಜನಪಶುರಹಿತವಾಗಿ ನಿವಾಸಿಗಳಿಲ್ಲದೆ ಹಾಳುಬಿದ್ದಿರುವ ಜುದೇಯದ ಊರುಗಳಲ್ಲೇ, ಜೆರುಸಲೇಮಿನ ಬೀದಿಗಳಲ್ಲೇ

11 ಹರ್ಷಧ್ವನಿ, ಉಲ್ಲಾಸ, ಕೋಲಾಹಲ, ವಧೂವರರ ಸ್ವರ, ಇವು ಮತ್ತೆ ಕೇಳಿಬರುವುವು. ‘ಸೇನಾಧೀಶ್ವರ ಸರ್ವೇಶ್ವರನಿಗೆ ಕೃತಜ್ಞತಾಸ್ತೋತ್ರ ಮಾಡಿ; ಆತ ಒಳ್ಳೆಯವನು, ಆತನ ಪ್ರೀತಿ ಶಾಶ್ವತ’ ಎಂದು ಹಾಡುತ್ತಾ ಕೃತಜ್ಞತಾಬಲಿಯನ್ನು ದೇವಾಲಯಕ್ಕೆ ತರುವರು. ಅವರ ಗಾನ ನಿಮ್ಮ ಕಿವಿಗೆ ಬೀಳುವುದು. ನಾಡನ್ನು ಬಿಡುಗಡೆಮಾಡಿ ಹಿಂದಿನ ಸುಸ್ಥಿತಿಗೆ ಏರಿಸುವೆನು.

12 ಸರ್ವಶಕ್ತ ಸರ್ವೇಶ್ವರನ ಮಾತುಗಳಿವು: “ಜನರಾಗಲಿ ಜಾನುವಾರುಗಳಾಗಲಿ ಇಲ್ಲದೆ ಹಾಳುಬಿದ್ದಿರುವ ಈ ಪ್ರಾಂತ್ಯ ಹಾಗು ಇಲ್ಲಿನ ಊರುಕೇರಿಗಳು ಮತ್ತೆ ಕುರುಬರು ತಮ್ಮ ಹಿಂಡುಗಳನ್ನು ಇಲ್ಲಿ ತಂಗಿಸಲು ಆಸರೆಯಾಗುವುವು.

13 ಮಲೆನಾಡಿನ, ಕೆಳನಾಡಿನ ಹಾಗೂ ದಕ್ಷಿಣ ಪ್ರಾಂತ್ಯದ ಊರುಗಳು, ಬೆನ್ಯಾಮಿನ್ ನಾಡು, ಜೆರುಸಲೇಮಿನ ಸುತ್ತಮುತ್ತಲ ಪ್ರದೇಶಗಳು, ಜುದೇಯದ ಊರುಗಳು, ಈಎಲ್ಲ ಸ್ಥಳಗಳಲ್ಲಿ ಮಂದೆಗಳು ಲೆಕ್ಕಿಸುವವನ ಕಣ್ಮುಂದೆ ಮತ್ತೆ ಹಾದುಹೋಗುವುವು. ಇದು ಸರ್ವೇಶ್ವರನಾದ ನನ್ನ ನುಡಿ.”


ಮುಂಬರಲಿರುವ ವ್ಯವಸ್ಥಾಪನೆ

14 ಸರ್ವೇಶ್ವರ ಹೀಗೆನ್ನುತ್ತಾರೆ: “ಗಮನಿಸಿರಿ! ದಿನಗಳು ಬರಲಿವೆ. ಇಸ್ರಯೇಲ್, ಯೆಹೂದ ವಂಶಗಳ ವಿಷಯವಾಗಿ ನಾನು ನುಡಿದಿರುವ ಶುಭವಾಕ್ಯವನ್ನು ನೆರವೇರಿಸುವ ದಿನಗಳು ಬರಲಿವೆ.

15 ಆ ಕಾಲದಲ್ಲಿ, ಆ ದಿನಗಳಲ್ಲಿ, ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಕೆಯೊಂದನ್ನು ಚಿಗುರಿಸುವೆನು. ಆತನು ನಾಡಿನಲ್ಲಿ ನ್ಯಾಯನೀತಿಯನ್ನು ನಿರ್ವಹಿಸುವನು.

16 ಆಗ ಯೆಹೂದ್ಯರು ಸುರಕ್ಷಿತವಾಗಿರುವರು. ಜೆರುಸಲೇಮಿನವರು ನೆಮ್ಮದಿಯಿಂದ ವಾಸಿಸುವರು. ‘ಯೆಹೂವಚಿದ್ಕೇನು’ (ಅಂದರೆ ಸರ್ವೇಶ್ವರನೇ ನಮ್ಮ ಸದ್ಧರ್ಮ) ಎಂಬ ಹೆಸರು ಈ ನಗರಕ್ಕೆ ಸಲ್ಲುವುದು.

17 ಸರ್ವೇಶ್ವರನಾದ ನಾನು ಹೇಳುವುದೇನೆಂದರೆ: ದಾವೀದ ವಂಶವು ನಿಂತುಹೋಗದು. ಇಸ್ರಯೇಲರ ವಂಶದವರು ಆ ಸಿಂಹಾಸನದಲ್ಲಿ ಆಸೀನರಾಗುತ್ತಾ ಬರುವರು.

18 ಅದಕ್ಕೆ ಆ ಸಂತಾನದವರಲ್ಲಿ ಒಬ್ಬ ಗಂಡಸು ಇಲ್ಲದೆ ಇರನು. ಅಂತೆಯೇ ನನ್ನ ಸನ್ನಿಧಿಯಲ್ಲಿ ನಿರಂತರವಾಗಿ ದಹನಬಲಿಯನ್ನು, ನೈವೇದ್ಯವನ್ನು ಹಾಗೂ ಕಾಣಿಕೆಯನ್ನು ಒಪ್ಪಿಸತಕ್ಕ ಒಬ್ಬನು ಲೇವಿಕುಲದಲ್ಲಿ ಇದ್ದೇ ಇರುವನು.”

19 ಸರ್ವೇಶ್ವರ, ಯೆರೆಮೀಯನಿಗೆ ಈ ಮಾತನ್ನೂ ದಯಪಾಲಿಸಿದರು:

20 “ಸರ್ವೇಶ್ವರನಾದ ನನ್ನ ನುಡಿ ಇದು: ಹಗಲಿರುಳೆಂಬ ನನ್ನ ನಿಬಂಧನೆಗಳನ್ನು ನಿಲ್ಲಿಸಿ, ಹಗಲನ್ನು ಮತ್ತು ಇರುಳನ್ನು ಅದರದರ ಸಮಯದಲ್ಲಿ ಉಂಟಾಗದಂತೆ ಮಾಡಲು ನಿಮ್ಮಿಂದಾದೀತೆ?

21 ಆಗುವುದಾದರೆ ಮಾತ್ರ ನನ್ನ ದಾಸ ದಾವೀದನೊಂದಿಗೂ ನನ್ನ ಪರಿಚಾರಕರಾದ ಲೇವಿಕುಲದ ಯಾಜಕರೊಂದಿಗೂ ನಾನು ಮಾಡಿದ ಒಡಂಬಡಿಕೆ ನಿಂತುಹೋಗುವುದು ಮತ್ತು ದಾವೀದನ ಸಿಂಹಾಸನವನ್ನು ಏರಿ ಆಳತಕ್ಕ ಅವನ ಸಂತಾನದವನು ಒಬ್ಬನೂ ಇಲ್ಲವಾಗುವನು.

22 ಆದರೆ, ನನ್ನ ದಾಸ ದಾವೀದನ ಸಂತಾನವನ್ನು ಅಸಂಖ್ಯಾತ ನಕ್ಷತ್ರಗಣದಷ್ಟು ಹೆಚ್ಚಿಸುವೆನು. ನನ್ನ ಪರಿಚಾರಕರಾದ ಲೇವಿಯ ಸಂಖ್ಯೆಯನ್ನು ಎಣಿಸಲಾಗದ ಸಮುದ್ರತೀರದ ಮರಳಿನಷ್ಟು ಅಧಿಕರಿಸುವೆನು.”

23 ಇದಲ್ಲದೆ ಸರ್ವೇಶ್ವರ ಯೆರೆಮೀಯನಿಗೆ ಈ ವಾಕ್ಯವನ್ನು ಅನುಗ್ರಹಿಸಿದರು:

24 “ಸರ್ವೇಶ್ವರನಾದ ನಾನು ಆರಿಸಿಕೊಂಡಿದ್ದ ಎರಡು ವಂಶಗಳನ್ನು ನಿರಾಕರಿಸಿಬಿಟ್ಟಿದ್ದೇನೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಈ ಮಾತನ್ನು ನೀನು ಗಮನಿಸಿರಬೇಕು. ನನ್ನ ಜನರು ಒಂದು ಜನಾಂಗವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಅಸಡ್ಡೆ ಮಾಡುತ್ತಿದ್ದಾರೆ ಅಲ್ಲವೆ?

25 ಸರ್ವೇಶ್ವರನಾದ ನಾನು ಹೇಳುವುದನ್ನು ಕೇಳು: ಹಗಲಿರುಳೆಂಬ ಸ್ಥಿರವಾದ ನಿಬಂಧನೆಯನ್ನು ನಾನು ಮಾಡದೆಹೋಗಿದ್ದರೆ, ಭೂಮ್ಯಾಕಾಶಗಳಿಗೆ ನಿಯಮವನ್ನು ನಾನು ವಿಧಿಸದೆಹೋಗಿದ್ದರೆ, ಆಗ ಮಾತ್ರ ನಾನು ಯಕೋಬನ ಸಂತಾನದವರನ್ನು ತ್ಯಜಿಸುತ್ತಿದ್ದೆ.

26 ಅಬ್ರಹಾಮ, ಇಸಾಕ, ಯಕೋಬ ಇವರ ಸಂತತಿಯನ್ನು ಆಳತಕ್ಕ ಒಡೆಯನನ್ನು ದಾಸ ದಾವೀದನ ವಂಶದಿಂದ ಆರಿಸದೆ ಆ ವಂಶವನ್ನು ನಿರಾಕರಿಸುತ್ತಿದ್ದೆ. ಆದರೆ ಈಗ ಗುಲಾಮಗಿರಿಯಿಂದ ಅವರನ್ನು ಬಿಡುಗಡೆಮಾಡುವೆನು. ಅವರಿಗೆ ಕರುಣೆಯನ್ನು ತೋರಿಸಿಯೇ ತೋರಿಸುವೆನು.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು