ಮುನ್ನುಡಿ
“ದೇವರ ಪುತ್ರರಾದ ಯೇಸುಕ್ರಿಸ್ತರ ಶುಭಸಂದೇಶ” ಎಂಬ ಪ್ರಕಟಣೆಯೊಂದಿಗೆ ಪ್ರಾರಂಭವಾಗುತ್ತದೆ ಮಾರ್ಕನ ಶುಭಸಂದೇಶ. ಯೇಸುಸ್ವಾಮಿ ಕಾರ್ಯನಿಷ್ಠ ಹಾಗೂ ಅಧಿಕಾರವುಳ್ಳ ವ್ಯಕ್ತಿ ಎಂದು ಇದರಲ್ಲಿ ಚಿತ್ರಿಸಲಾಗಿದೆ. ಈ ಅಧಿಕಾರ ಅವರ ಬೋಧನೆಯಲ್ಲಿ, ದೆವ್ವಗಳ ಉಚ್ಚಾಟನೆಯಲ್ಲಿ ಹಾಗೂ ಜನರಿಗೆ ಪಾಪವಿಮೋಚನೆಯನ್ನು ನೀಡುವ ಶಕ್ತಿಯಲ್ಲಿ ವ್ಯಕ್ತವಾಗುತ್ತದೆ. ಮಾನವರನ್ನು ಪಾಪಬಂಧನದಿಂದ ಬಿಡುಗಡೆ ಮಾಡುವುದಕ್ಕಾಗಿ ತನ್ನ ಪ್ರಾಣವನ್ನು ಅರ್ಪಿಸಲು ಬಂದ ‘ನರಪುತ್ರ’ ತಾನೇ ಎಂದು ಯೇಸುಸ್ವಾಮಿ ಸ್ಪಷ್ಟಪಡಿಸುತ್ತಾರೆ.
ಸರಳವಾಗಿಯೂ ಕಣ್ಣಿಗೆ ಕಟ್ಟುವಂತೆಯೂ ವರ್ಣಿತವಾಗಿರುವ ಈ ಚರಿತ್ರೆಯಲ್ಲಿ ಯೇಸು ಆಡಿದ ಮಾತುಗಳಿಗಿಂತಲೂ ಮಾಡಿದ ಬೋಧನೆಗಿಂತಲೂ ಹೆಚ್ಚಾಗಿ ಅವರು ಸಾಧಿಸಿದ ಕಾರ್ಯಗಳನ್ನೇ ಮಾರ್ಕನು ಎತ್ತಿ ತೋರಿಸುತ್ತಾನೆ. ಸ್ನಾನಿಕ ಯೊವಾನ್ನನ ಪ್ರಕರಣ ಮತ್ತು ಯೇಸುವಿನ ದೀಕ್ಷಾಸ್ನಾನ ಹಾಗೂ ಪ್ರಲೋಭನೆಗಳ ವಿಷಯವಾಗಿ ಇವುಗಳ ಸಂಕ್ಷಿಪ್ತ ವರದಿಯನ್ನು ಮಾತ್ರ ಕೊಟ್ಟು, ಯೇಸು ಹಲವರಿಗೆ ನೀಡಿದ ಆರೋಗ್ಯದಾನ ಮತ್ತು ಮಾಡಿದ ಬೋಧನೆ ಇವುಗಳನ್ನು ಪ್ರಸ್ತಾಪಿಸುವುದರಲ್ಲಿ ಮಾರ್ಕನು ನಿರತನಾಗುತ್ತಾನೆ. ಕ್ರಮೇಣ ಯೇಸುವಿನ ಅನುಯಾಯಿಗಳು ಅವರನ್ನು ಹೆಚ್ಚು ಹೆಚ್ಚಾಗಿ ಅರ್ಥಮಾಡಿಕೊಳ್ಳುತ್ತಾರೆ; ವಿರೋಧಿಗಳ ದ್ವೇಷವಾದರೋ ಉಕ್ಕಿಹರಿಯುತ್ತದೆ. ಯೇಸುವಿನ ಐಹಿಕ ಜೀವನದ ಅಂತಿಮ ಘಟನೆಗಳನ್ನು ಪ್ರತ್ಯೇಕವಾಗಿ ಅವರ ಶಿಲುಬೆಯ ಮರಣ ಹಾಗು ಪುನರುತ್ಥಾನದ ವಿವರವನ್ನು ಈ ಪುಸ್ತಕದ ಕೊನೆಯ ಭಾಗದಲ್ಲಿ ಕಾಣಬಹುದು.
ಈ ಕೃತಿಗೆ ಎರಡು ಸಮಾಪ್ತಿಗಳಿವೆ, ಇದನ್ನು ಆವರಣ ಚಿಹ್ನೆಗಳ ಮೂಲಕ ಸೂಚಿಸಲಾಗಿದೆ.
ಪರಿವಿಡಿ
ಶುಭಸಂದೇಶದ ಪ್ರಾರಂಭ 1:1-13
ಗಲಿಲೇಯದಲ್ಲಿ ಯೇಸುವಿನ ಬಹಿರಂಗ ಸೇವೆ 1:14—9:50
ಗಲಿಲೇಯದಿಂದ ಜೆರುಸಲೇಮಿಗೆ 10:1-52
ಜೆರುಸಲೇಮಿನಲ್ಲಿ ಯೇಸುವಿನ ಕೊನೆಯ ದಿನಗಳು 11:1—15:47
ಯೇಸುವಿನ ಪುನರುತ್ಥಾನ 16:1-8
ಮೃತ್ಯುಂಜಯ ಯೇಸು ಕೊಟ್ಟ ದರ್ಶನಗಳು ಹಾಗೂ ಅವರ ಸ್ವರ್ಗಾರೋಹಣ 16:9-20