ಪ್ರಸಂಗಿ 11 - ಕನ್ನಡ ಸತ್ಯವೇದವು C.L. Bible (BSI)ಜ್ಞಾನಿಯ ನಡವಳಿಕೆ 1 ನಿನ್ನ ಆಹಾರ ಧಾನ್ಯವನ್ನು ಹೊರನಾಡಿನ ವ್ಯಾಪಾರಕ್ಕೆ ಹಾಕು. ಬಹುದಿನದ ಮೇಲೆ ಅದು ಬಡ್ಡಿ ಸಮೇತ ನಿನಗೆ ಸಿಕ್ಕುವುದು. 2 ನಿನ್ನ ಹಣವನ್ನು ವಿಭಾಗಿಸಿ ಏಳೆಂಟು ಸ್ಥಳಗಳಲ್ಲಿ ಇಡು. ಏಕೆಂದರೆ ಎಲ್ಲಿ, ಎಂಥ ಕೇಡು ಸಂಭವಿಸಬಹುದೆಂದು ನಿನಗೆ ತಿಳಿಯದು. 3 ಮಳೆ ತುಂಬಿದ ಮೋಡಗಳು ನೆಲದ ಮೇಲೆ ಸುರಿದುಬಿಡುತ್ತವೆ. ಮರವು ದಕ್ಷಿಣದ ಕಡೆಗಾಗಲಿ, ಉತ್ತರದ ಕಡೆಗಾಗಲಿ ಉರುಳಿದರೆ ಬಿದ್ದ ಕಡೆಯಲ್ಲೆ ಬಿದ್ದಿರುತ್ತದೆ. 4 ಗಾಳಿಗಾಗಿಯೇ ಕಾದಿರುವವನು, ಮೋಡಕ್ಕಾಗಿಯೇ ಎದುರು ನೋಡುತ್ತಿರುವವನು ಎಂದಿಗೂ ಬೀಜಬಿತ್ತಲಾರನು; ಎಂದಿಗೂ ಪೈರು ಕೊಯ್ಯಲಾರನು. 5 ಗಾಳಿಯ ಚಲನೆಯನ್ನಾಗಲಿ ಗರ್ಭಿಣಿಯ ಭ್ರೂಣದ ಬೆಳವಣಿಗೆಯನ್ನಾಗಲಿ ನಿನ್ನಿಂದ ತಿಳಿಯಲಾಗದು. ಅಂತೆಯೇ ಸರ್ವೇಶ್ವರನಾದ ದೇವರ ಕಾರ್ಯವನ್ನು ನಿನ್ನಿಂದ ಗ್ರಹಿಸಲಾಗದು. 6 ಮುಂಜಾನೆಯಲ್ಲೇ ಬೀಜಬಿತ್ತು; ಸಂಜೆಯಲ್ಲೂ ನಿನ್ನ ಕೈಗೆ ಬಿಡುವುಕೊಡಬೇಡ; ಇದು ಸಫಲವೋ ಅದು ಸಫಲವೋ ನಿನ್ನಿಂದ ಹೇಳಲಾಗದು. ಒಂದು ವೇಳೆ ಎರಡೂ ಒಳ್ಳೆಯ ಬೆಳೆಯನ್ನು ಕೊಡಬಹುದು. 7 ಬೆಳಕು ಬಹಳ ಇಂಪು; ಸೂರ್ಯನ ಕಾಂತಿ ಕಣ್ಣುಗಳಿಗೆ ಸೊಂಪು. ಮಾನವನು ಎಷ್ಟೇ ಧೀರ್ಘಕಾಲ ಬದುಕಿರಲಿ ತನ್ನ ಬಾಳಿನ ದಿನಗಳಲ್ಲೆಲ್ಲಾ ಆನಂದಿಸಲಿ; ಆದರೆ ಅಂಧಕಾರದ ದಿನಗಳು ಸಹ ಬಹಳ ಇವೆ ಎಂಬುದನ್ನು ನೆನಪಿಗೆ ತಂದುಕೊಳ್ಳಲಿ. ಆ ಬಳಿಕ ಬರುವುದೆಲ್ಲಾ ನಿರರ್ಥಕ. ಯುವಜನರಿಗೆ ಹಿತವಚನ 8-9 ಯುವಕನೇ, ಯೌವನದಲ್ಲಿ ಆನಂದಿಸು. ಯೌವನ ದಿನಗಳಲ್ಲಿ ಹೃತ್ಪೂರ್ವಕವಾಗಿ ಸಂತೋಷಿಸು. ಮನಸ್ಸಿಗೆ ತಕ್ಕಂತೆಯೂ ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೊ. ಆದರೆ ಈ ಎಲ್ಲ ವಿಷಯಗಳಲ್ಲಿ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವರೆಂಬುದನ್ನು ಮನದಲ್ಲಿಡು. 10 ನಿನ್ನ ಹೃದಯದಿಂದ ವ್ಯಥೆಯನ್ನೂ ನಿನ್ನ ದೇಹದಿಂದ ಯಾತನೆಯನ್ನೂ ದೂರಮಾಡು. ಯೌವನವೂ ಪ್ರಾಯವೂ ಬೇಗ ಮಾಯವಾಗುವುವು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India