Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಧರ್ಮೋಪದೇಶಕಾಂಡ 8 - ಕನ್ನಡ ಸತ್ಯವೇದವು C.L. Bible (BSI)


ಸೌಭಾಗ್ಯದ ನಾಡು ಸ್ವಂತ ಪುಣ್ಯದಿಂದಲ್ಲ, ಸರ್ವೇಶ್ವರನ ಕೃಪೆಯಿಂದ

1 “ನಾನು ಈಗ ನಿಮಗೆ ಬೋಧಿಸುವ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸಬೇಕು. ಅನುಸರಿಸಿದರೆ ನೀವು ಬಾಳಿ ಅಭಿವೃದ್ಧಿಯಾಗುವಿರಿ. ಸರ್ವೇಶ್ವರ ನಿಮ್ಮ ಪಿತೃಗಳಿಗೆ ಪ್ರಮಾಣರೂಪವಾಗಿ ಕೊಟ್ಟ ನಾಡನ್ನು ಸೇರಿ ಸ್ವಾಧೀನಮಾಡಿಕೊಳ್ಳುವಿರಿ.

2 “ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಈ ನಲವತ್ತು ವರ್ಷ ಮರುಭೂಮಿಯಲ್ಲಿ ನಡೆಸಿದ್ದನ್ನು ಹಾಗು ನೀವು ಅವರ ಆಜ್ಞೆಗಳನ್ನು ಕೈಕೊಳ್ಳುವವರೋ ಅಲ್ಲವೋ ಎಂದು ತಿಳಿದುಕೊಳ್ಳುವುದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನು ನೆನಪಿಗೆ ತಂದುಕೊಳ್ಳಿರಿ.

3 ಮಾನವರು ಆಹಾರ ಮಾತ್ರದಿಂದಲ್ಲ, ಸರ್ವೇಶ್ವರ ಆಡುವ ಪ್ರತಿಯೊಂದು ಮಾತಿನಿಂದಲೂ ಜೀವಿಸುತ್ತಾರೆಂಬುದು ನಿಮಗೆ ತಿಳಿಯುವಂತೆ ಅವರು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿದರು. ಹಸಿವೆಯಿಂದ ಬಳಲಿಸಿದರು. ನಿಮಗೂ ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಮನ್ನವನ್ನು ಕೊಟ್ಟು ಪೋಷಿಸಿದರು.

4 ಈ ನಲವತ್ತು ವರ್ಷ ನಿಮ್ಮ ಮೈಮೇಲಿದ್ದ ಉಡುಪು ಹರಿದುಹೋಗಲಿಲ್ಲ; ನಿಮ್ಮ ಕಾಲುಗಳು ಊದುಹೋಗಲಿಲ್ಲ.

5 ಒಬ್ಬ ತಂದೆ ತನ್ನ ಮಗನನ್ನು ಹೇಗೊ ಹಾಗೆಯೇ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಶಿಕ್ಷಿಸುತ್ತಾ ಬಂದರೆಂಬುದನ್ನು ನೀವು ಆಲೋಚಿಸಿ ನೋಡಬೇಕು.

6 ಅವರ ಆಜ್ಞೆಗಳನ್ನು ಅನುಸರಿಸುತ್ತಾ ಅವರು ಹೇಳಿದ ಮಾರ್ಗದಲ್ಲೇ ನಡೆದು ಅವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು.

7 “ನಿಮ್ಮ ದೇವರಾದ ಸರ್ವೇಶ್ವರ ಉತ್ತಮವಾದ ನಾಡಿಗೆ ನಿಮ್ಮನ್ನು ಸೇರಿಸುತ್ತಾರೆ. ಆ ನಾಡಿನ ಹಳ್ಳಗಳಲ್ಲಿ ನೀರು ಯಾವಾಗಲೂ ಹರಿಯುತ್ತಿರುತ್ತದೆ; ತಗ್ಗುಗಳಲ್ಲಾಗಲಿ, ಗುಡ್ಡಗಳಲ್ಲಿ ಆಗಲಿ, ಎಲ್ಲಾ ಕಡೆಯು ಬಾವಿಗಳಿಂದಲೂ ಬುಗ್ಗೆಗಳಿಂದಲೂ ನೀರು ಉಕ್ಕುತ್ತಿರುತ್ತದೆ.

8 ಆ ನಾಡಿನಲ್ಲಿ ಗೋದಿ, ಜವೆಗೋದಿ, ದ್ರಾಕ್ಷಿ, ಅಂಜೂರ, ದಾಳಿಂಬೆ ಇವುಗಳು ಬೆಳೆಯುತ್ತವೆ; ಎಣ್ಣೆಮರಗಳು ಹಾಗು ಜೇನುತುಪ್ಪ ಸಿಕ್ಕುತ್ತವೆ.

9 ಅಲ್ಲಿ ನೀವು ದುರ್ಭಿಕ್ಷವನ್ನೇ ಕಾಣದೆ, ಸಮೃದ್ಧಿ ಆಗಿ ಉಂಡು, ಯಾವ ಕೊರತೆಯೂ ಇಲ್ಲದೆ ಇರುವಿರಿ. ಆ ನಾಡಿನಲ್ಲಿ ಕಬ್ಬಿಣದ ಕಲ್ಲು ಸಿಕ್ಕುತ್ತದೆ. ಅಲ್ಲಿಯ ಬೆಟ್ಟಗಳಲ್ಲಿ ತಾಮ್ರದ ಗಣಿಗಳಿವೆ.

10 ನೀವು ಹೊಟ್ಟೆತುಂಬ ಉಂಡು ಸುಖದಿಂದಿರುವಾಗ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಇಂಥ ಉತ್ತಮ ನಾಡನ್ನು ಕೊಟ್ಟದ್ದಕ್ಕಾಗಿ ಅವರನ್ನು ಸ್ತುತಿಸಬೇಕು.


ಸರ್ವೇಶ್ವರನನ್ನೇ ಮರೆತುಬಿಡಬೇಡಿ

11 “ಎಚ್ಚರಿಕೆ, ನಾನು ಈಗ ನಿಮಗೆ ಬೋಧಿಸುವ ನಿಮ್ಮ ದೇವರಾದ ಸರ್ವೇಶ್ವರನ ಆಜ್ಞಾವಿಧಿನಿರ್ಣಯಗಳನ್ನು ಕೈಕೊಳ್ಳದವರೂ ಅವರನ್ನು ಮರೆತುಬಿಡುವವರೂ ಆಗಬೇಡಿ.

12 ನೀವು ಹೊಟ್ಟೆ ತುಂಬ ಉಂಡು, ಸುಖವಾಗಿದ್ದು, ಒಳ್ಳೊಳ್ಳೆಯ ಮನೆಗಳನ್ನು ಕಟ್ಟಿಸಿಕೊಂಡು, ಅವುಗಳಲ್ಲಿ ವಾಸವಾಗಿರುವ ಕಾಲದಲ್ಲಿ,

13 ನಿಮ್ಮ ದನಕರುಗಳು, ಆಡುಕುರಿಗಳು, ಬೆಳ್ಳಿಬಂಗಾರ ಹಾಗು ಆಸ್ತಿಯೆಲ್ಲವೂ ಹೆಚ್ಚುತ್ತಿರುವಾಗ,

14 ನೀವು ಗರ್ವಗೊಂಡು ನಿಮ್ಮ ದೇವರಾದ ಸರ್ವೇಶ್ವರನನ್ನು ಮರೆತುಬಿಟ್ಟೀರಿ!

15-16 ಅವರು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ಪರೀಕ್ಷಿಸಿದ ನಂತರ ನಿಮಗೆ ಒಳಿತನ್ನು ಉಂಟುಮಾಡಬೇಕೆಂಬ ಉದ್ದೇಶದಿಂದ ಈಜಪ್ಟ್ ದೇಶದಲ್ಲಿ ಗುಲಾಮರಾಗಿದ್ದ ನಿಮ್ಮನ್ನು ಬಿಡುಗಡೆ ಮಾಡಿದರು. ವಿಷಸರ್ಪಗಳೂ ಚೇಳುಗಳೂ ಇದ್ದ ಆ ಘೋರವಾದ ಮಹಾಮರುಭೂಮಿಯನ್ನೂ ನೀರು ಬತ್ತಿಹೋಗಿದ್ದ ಭೂಮಿಗಳನ್ನೂ ದಾಟಿಸಿದರು; ಗಟ್ಟಿಯಾದ ಬಂಡೆಯೊಳಗಿಂದ ನೀರನ್ನು ಹೊರಡಿಸಿಕೊಟ್ಟರು. ನಿಮ್ಮ ಪೂರ್ವಿಕರಿಗೆ ತಿಳಿಯದೆ ಇದ್ದ ಮನ್ನವನ್ನು ಕೊಟ್ಟು ಪೋಷಿಸಿದರು. ಅಂಥವರನ್ನು ಮರೆತು ಮನಸ್ಸಿನಲ್ಲೇ

17 ‘ಈ ಭಾಗ್ಯ ನಮ್ಮ ಸಾಮರ್ಥ್ಯ ಸಾಹಸಗಳಿಂದಲೇ ನಮಗೆ ಲಭಿಸಿತು’ ಎಂದುಕೊಂಡೀರಿ ಎಚ್ಚರಿಕೆ!

18 ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯೇ ನಿಮ್ಮ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ಮಾಡಿದ ವಾಗ್ದಾನವನ್ನು ಈಗ ನಿಮಗೆ ಮನಮುಟ್ಟುವ ರೀತಿಯಲ್ಲಿ ನೆರವೇರಿಸಿದ್ದಾರೆ. ನಿಮಗೆ ಇಷ್ಟು ಭಾಗ್ಯವನ್ನು ಸಂಪಾದಿಸುವ ಸಾಮರ್ಥ್ಯವನ್ನು ಕೊಟ್ಟಿದ್ದಾರೆ ಎಂಬುದನ್ನು ಜ್ಞಾಪಕಮಾಡಿಕೊಳ್ಳಿ.

19 ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ಮರೆತು, ಇತರ ದೇವರುಗಳನ್ನು ಅವಲಂಬಿಸಿ, ಪೂಜಿಸಿದರೆ ನೀವು ತಪ್ಪದೆ ನಾಶವಾಗಿಹೋಗುವಿರೆಂದು ನಿಮ್ಮನ್ನು ಈಗ ಖಂಡಿತವಾಗಿ ಎಚ್ಚರಿಸುತ್ತೇನೆ.

20 ನೀವು ನಿಮ್ಮ ದೇವರಾದ ಸರ್ವೇಶ್ವರನ ಮಾತನ್ನು ಕೇಳದೆಹೋದರೆ, ಅವರಿಂದ ನಿಮ್ಮ ಮುಂದೆಯೇ ನಾಶವಾಗಿಹೋಗುವ ಅನ್ಯಜನಾಂಗಗಳಂತೆ ನೀವೂ ನಾಶವಾಗಿಹೋಗುವಿರಿ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು