ಧರ್ಮೋಪದೇಶಕಾಂಡ 26 - ಕನ್ನಡ ಸತ್ಯವೇದವು C.L. Bible (BSI)ಪ್ರಥಮಫಲಗಳ ಸಮರ್ಪಣೆ 1 “ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವದೇಶವಾಗಲು ಕೊಡುವ ನಾಡನ್ನು ನೀವು ಸೇರಿ ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸುವಾಗ 2 ಅವರು ದಯಪಾಲಿಸಿದ ಹೊಲದ ಎಲ್ಲ ಬೆಳೆಗಳಲ್ಲೂ ಕೆಲವು ಪ್ರಥಮ ಫಲಗಳನ್ನು ಪುಟ್ಟಿಯಲ್ಲಿಟ್ಟು ನಿಮ್ಮ ದೇವರಾದ ಸರ್ವೇಶ್ವರ ತಮ್ಮ ನಾಮಸ್ಥಾಪನೆಗಾಗಿ ಆರಿಸಿಕೊಳ್ಳುವ ಸ್ಥಳಕ್ಕೆ ತೆಗೆದುಕೊಂಡುಹೋಗಿರಿ. 3 ಆ ಕಾಲದಲ್ಲಿ ಇರುವ ಮಹಾಯಾಜಕನಿಗೆ, ‘ಸರ್ವೇಶ್ವರ ನಮ್ಮ ಪಿತೃಗಳಿಗೆ ಪ್ರಮಾಣಮಾಡಿಕೊಟ್ಟ ನಾಡಿನಲ್ಲಿ ನಾನು ಸೇರಿದ್ದಾಯಿತೆಂದು ನಾವು ಸೇವೆಮಾಡುವ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ಈಗ ಒಪ್ಪಿಕೊಳ್ಳುತ್ತೇನೆ’ ಎಂದು ಹೇಳಬೇಕು. 4 “ಯಾಜಕನು ಆ ಪುಟ್ಟಿಯನ್ನು ನಿಮ್ಮ ಕೈಯಿಂದ ತೆಗೆದುಕೊಂಡು ನಿಮ್ಮ ದೇವರಾದ ಸರ್ವೇಶ್ವರನ ಬಲಿಪೀಠದ ಮುಂದೆ ಇಡುವನು. 5 ಆಗ ನೀವು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ, ಅರಾಮ್ಯನಾದ ನಮ್ಮ ಮೂಲಪಿತೃವು ಗತಿಯಿಲ್ಲದವನಾಗಿ ಸ್ವಲ್ಪ ಮಂದಿಯೊಡನೆ ಈಜಿಪ್ಟ್ ದೇಶಕ್ಕೆ ಹೋಗಿ ಅಲ್ಲಿ ಇಳಿದುಕೊಂಡನು. ಅಲ್ಲಿ ಅವನ ಸಂತಾನದವರು ಹೆಚ್ಚಿ ಮಹಾಬಲಿಷ್ಠ ಜನಾಂಗವಾದರು. 6 ಈಜಿಪ್ಟರು ನಮ್ಮನ್ನು ಉಪದ್ರವಪಡಿಸಿ, ಬಾಧಿಸಿ, ನಮ್ಮಿಂದ ಕಠಿಣವಾಗಿ ದುಡಿಸಿಕೊಂಡರು. 7 ಆಗ ನಾವು ನಮ್ಮ ಪಿತೃಗಳ ದೇವರಾದ ಸರ್ವೇಶ್ವರನಿಗೆ ಮೊರೆಯಿಟ್ಟೆವು; ಅವರು ಆಲಿಸಿ ನಮ್ಮ ದುರವಸ್ಥೆಯನ್ನೂ ಕಷ್ಟ ಉಪದ್ರವಗಳನ್ನೂ ನೋಡಿ, 8 ಭುಜಬಲ, ಶಿಕ್ಷಾಹಸ್ತ, ಮಹಾಭೀತಿ, ಮಹತ್ಕಾರ್ಯ, ಸೂಚಕಕಾರ್ಯ, ಇವುಗಳನ್ನು ಪ್ರಯೋಗಿಸಿ ನಮ್ಮನ್ನು ಬಿಡಿಸಿದರು. 9 ಈಜಿಪ್ಟ್ ದೇಶದಿಂದ ಕರೆದುತಂದು ಹಾಲೂಜೇನೂ ಹರಿಯುವ ಈ ನಾಡನ್ನು ನಮಗೆ ಕೊಟ್ಟಿದ್ದಾರೆ. 10 ಆದುದರಿಂದ ಸರ್ವೇಶ್ವರಾ, ನೀವು ಅನುಗ್ರಹಿಸಿರುವ ಭೂಮಿಯ ಬೆಳೆಯಲ್ಲಿ ಪ್ರಥಮಫಲಗಳನ್ನು ನಾವು ಕಾಣಿಕೆಯಾಗಿ ತಂದಿದ್ದೇವೆ; ಸ್ವೀಕರಿಸಬೇಕು’ ಎಂದು ಹೇಳಿ ಆ ಪ್ರಥಮಫಲಗಳನ್ನು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿಟ್ಟು ಅವರನ್ನು ಆರಾಧಿಸಬೇಕು. 11 ಸರ್ವೇಶ್ವರ ನಿಮಗೂ ನಿಮ್ಮ ಮನೆಯವರಿಗೂ ಉಂಟುಮಾಡಿದ ಎಲ್ಲ ಸುಖ ಸಂತೋಷಗಳಿಗಾಗಿ ನೀವೂ ಲೇವಿಯರೂ ನಿಮ್ಮ ಮಧ್ಯೆಯಿರುವ ಪರದೇಶಿಗಳೂ ಸಂಭ್ರಮದಿಂದಿರಬೇಕು. ಪ್ರತಿ ಮೂರನೆಯ ವರ್ಷದಲ್ಲಿ ದಶಮಾಂಶದ ಸಮರ್ಪಣೆ 12 “ದಶಮಾಂಶವನ್ನು ಕೊಡಬೇಕಾದ ಮೂರನೆಯ ಸಂವತ್ಸರದಲ್ಲಿ ನಿಮಗುಂಟಾದ ಆದಾಯದ ದಶಮ ಭಾಗವನ್ನು ಪ್ರತ್ಯೇಕಿಸಿದಾಗ ನಿಮ್ಮ ನಿಮ್ಮ ಊರುಗಳಲ್ಲಿರುವ ಲೇವಿಯರು, ಪರದೇಶಿಗಳು, ತಾಯಿತಂದೆಯಿಲ್ಲದವರು ಹಾಗು ವಿಧವೆಯರೂ ಉಂಡು ಸಂತೋಷವಾಗಿರುವಂತೆ ಅದನ್ನು ಅವರಿಗೆ ಕೊಡಬೇಕು. 13 ಆಗ ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ, ‘ನಾವು ಮೀಸಲಾದ ವಸ್ತುಗಳನ್ನು ಮನೆಯಿಂದ ತೆಗೆದುಬಿಟ್ಟಿದ್ದೇವೆ; ನೀವು ಆಜ್ಞಾಪಿಸಿದ ಮೇರೆಗೆ ಅವುಗಳನ್ನು ಲೇವಿಯನಿಗೆ, ಪರದೇಶಿಗೆ, ತಾಯಿತಂದೆ ಇಲ್ಲದ ವ್ಯಕ್ತಿಗೆ, ವಿಧವೆಗೆ ಇಂಥವರಿಗೆ ಕೊಟ್ಟು ಇದ್ದೇವೆ, ನಿಮ್ಮ ಆಜ್ಞೆಗಳಲ್ಲಿ ಒಂದನ್ನೂ ಮೀರಲಿಲ್ಲ, ಮರೆಯಲೂ ಇಲ್ಲ. 14 ನಾವು ಸತ್ತವರಿಗಾಗಿ ದುಃಖಿಸುವ ಕಾಲದಲ್ಲೆಲ್ಲಾ ಅದರಲ್ಲಿ ಏನೂ ತಿನ್ನಲಿಲ್ಲ; ಅಶುದ್ಧರಾಗಿ ಅದನ್ನು ತೆಗೆದು ಹಾಕಲಿಲ್ಲ; ಸತ್ತವರಿಗಾಗಿ ಅದರಲ್ಲಿ ಏನೂ ಕೊಡಲಿಲ್ಲ; ನಮ್ಮ ದೇವರಾದ ಸರ್ವೇಶ್ವರನ ಮಾತಿನಲ್ಲಿ ಲಕ್ಷ್ಯವಿಟ್ಟು ನೀವು ಆಜ್ಞಾಪಿಸಿದ್ದನ್ನೆಲ್ಲಾ ಅನುಸರಿಸಿದ್ದೇವೆ. 15 ನೀವು ನಿಮ್ಮ ಪರಿಶುದ್ಧ ವಾಸಸ್ಥಾನವಾಗಿರುವ ಪರಲೋಕದಿಂದ ಕೆಳಗಿರುವ ನಮ್ಮನ್ನು ಕಟಾಕ್ಷಿಸಿ, ನಿಮ್ಮ ಜನರಾದ ಇಸ್ರಯೇಲರನ್ನು ಹಾಗು ಹಾಲೂಜೇನೂ ಹರಿಯುವ ನಾಡೆಂದು ನೀವು ನಮ್ಮ ಪಿತೃಗಳಿಗೆ ವಾಗ್ದಾನಮಾಡಿದ ಮೇರೆಗೆ ನಮಗೆ ಕೊಟ್ಟಿರುವ ಈ ಭೂಮಿಯನ್ನು ಆಶೀರ್ವದಿಸಿ, ದೇವರೇ,’ ಎಂದು ಹೇಳಬೇಕು. ಇಸ್ರಾಯೇಲರು ದೇವಜನಾಂಗ 16 “ಈ ಆಜ್ಞಾವಿಧಿಗಳನ್ನು ನೀವು ಅನುಸರಿಸಬೇಕೆಂದು ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಇಂದು ಆಜ್ಞಾಪಿಸಿದ್ದಾರೆ. ಆದುದರಿಂದ ನೀವು ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಇವುಗಳನ್ನು ಕೈಕೊಂಡು ನಡೆಯಬೇಕು. 17 ನಮಗೆ ಸರ್ವೇಶ್ವರನೇ ದೇವರಾಗಿರುವರೆಂದು ಹಾಗು ಅವರು ಹೇಳಿದ ಮಾರ್ಗದಲ್ಲೇ ನಡೆದು ಅವರ ಆಜ್ಞಾವಿಧಿನಿರ್ಣಯಗಳನ್ನು ಕೈಕೊಂಡು ಅವರ ಮಾತಿಗೆ ಲಕ್ಷ್ಯಕೊಡುವೆವೆಂದೂ ನೀವು ಈಗ ಒಡಂಬಟ್ಟಿದ್ದೀರಿ. 18 ಸರ್ವೇಶ್ವರ ಸ್ವಾಮಿ ಆದರೋ ನಿಮ್ಮ ವಿಷಯದಲ್ಲಿ, ‘ಇವರು ನನ್ನ ಆಜ್ಞೆಗಳನ್ನೆಲ್ಲ ಅನುಸರಿಸುವವರಾದರೆ ನನ್ನ ವಾಗ್ದಾನಾನುಸಾರ ನನಗೆ ಸ್ವಕೀಯಜನರಾಗಿರುವರು. 19 ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತ ಇವರಿಗೆ ಹೆಚ್ಚಾದ ಕೀರ್ತಿಘನಮಾನಗಳನ್ನುಂಟು ಮಾಡುವೆನು ಹಾಗು ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಸರ್ವೇಶ್ವರನಿಗೆ ಮೀಸಲಾದ ಜನರಾಗಲು ಒಡಂಬಟ್ಟಿದ್ದಾರೆ,’ ಎನ್ನುವರು,” ಎಂದು ಹೇಳಿದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India