ಧರ್ಮೋಪದೇಶಕಾಂಡ 11 - ಕನ್ನಡ ಸತ್ಯವೇದವು C.L. Bible (BSI)ಇಸ್ರಯೇಲರ ಹಿಂದಿನ ಅನುಭವಗಳು 1 “ಆದುದರಿಂದ ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಪ್ರೀತಿಯಿಟ್ಟು, ಅವರ ನಿಯಮಗಳನ್ನು ಕೈಕೊಂಡು ಅವರ ಆಜ್ಞಾವಿಧಿನಿರ್ಣಯಗಳನ್ನು ಯಾವಾಗಲೂ ಅನುಸರಿಸಬೇಕು. 2 “ನಿಮ್ಮ ದೇವರಾದ ಸರ್ವೇಶ್ವರ ಪ್ರಯೋಗಿಸಿದ ಶಿಕ್ಷಣಕ್ರಮವನ್ನೂ ಮಹಿಮೆಯನ್ನೂ ಭುಜಬಲವನ್ನೂ ಶಿಕ್ಷಾಹಸ್ತವನ್ನೂ 3 ಅಂದರೆ, ಅವರು ಈಜಿಪ್ಟ್ ದೇಶದಲ್ಲಿ ಫರೋಹನನ್ನೂ ಅವನ ದೇಶವನ್ನೂ ಶಿಕ್ಷಿಸುವುದಕ್ಕಾಗಿ ನಡೆಸಿದ ಸೂಚಕ ಮತ್ತು ಮಹತ್ಕಾರ್ಯಗಳನ್ನೂ; 4 ಈಜಿಪ್ಟಿನವರು ರಥಾಶ್ವಬಲಗಳಿಂದ ಕೂಡಿದಂಥ ದಂಡಿನ ಸಮೇತ ನಿಮ್ಮನ್ನು ಹಿಂದಟ್ಟಿ ಬಂದಾಗ ಕೆಂಪುಸಮುದ್ರದ ನೀರನ್ನು ಅವರ ಮೇಲೆ ಬರಮಾಡಿ ಸಂಪೂರ್ಣವಾಗಿ ನಾಶಮಾಡಿದ್ದನ್ನೂ; 5 ನೀವು ಈ ಸ್ಥಳಕ್ಕೆ ಸೇರುವ ತನಕ ನಿಮಗೆ ಮರುಭೂಮಿಯಲ್ಲಿ ಮಾಡಿದ ಉಪಕಾರಗಳನ್ನೂ; 6 ರೂಬೇನನ ಮೊಮ್ಮಕ್ಕಳೂ ಎಲೀಯಾಬನ ಮಕ್ಕಳೂ ಆದ ದಾತಾನ್ ಅಬೀರಾಮರು ದಂಗೆಯೆದ್ದಾಗ ಭೂಮಿ ಬಾಯ್ದೆರೆದು ಅವರನ್ನೂ ಅವರ ಮನೆಯವರನ್ನೂ ಡೇರೆಗಳನ್ನೂ ಅವರಿಗೆ ಸೇರಿದ ಎಲ್ಲ ಪಶುಪ್ರಾಣಿಗಳನ್ನೂ ಇಸ್ರಯೇಲರ ನಡುವೆ ನುಂಗಿಬಿಟ್ಟದ್ದನ್ನೂ ಈಗ ಜ್ಞಾಪಕಮಾಡಿಕೊಳ್ಳಿ. ಈ ಕಾರ್ಯಗಳನ್ನು ನೋಡದೆ ಹಾಗು ತಿಳಿಯದೆ ಇರುವ ನಿಮ್ಮ ಮಕ್ಕಳಿಗೆ ನಾನು ಈ ಮಾತನ್ನು ಹೇಳುತ್ತಿಲ್ಲ; 7 ಸರ್ವೇಶ್ವರ ನಡೆಸಿದ ಆ ವಿಶೇಷಕಾರ್ಯಗಳನ್ನು ಪ್ರತ್ಯಕ್ಷವಾಗಿ ನೋಡಿದವರಾದ ನಿಮಗೇ ಹೇಳುತ್ತಾ ಇದ್ದೇನೆ. ವಾಗ್ದತ್ತ ನಾಡಿನ ಸೌಭಾಗ್ಯ 8 “ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲ ನೀವು ಅನುಸರಿಸಬೇಕು. ಆಗ ನೀವು ಬಲವುಳ್ಳವರಾಗಿ ಈ ನದಿ ದಾಟಿ ಆಚೆಯಿರುವ ನಾಡನ್ನು ಸೇರಿ ಸ್ವಾಧೀನಮಾಡಿಕೊಳ್ಳುವಿರಿ; 9 ಸರ್ವೇಶ್ವರ ನಿಮ್ಮ ಪಿತೃಗಳಿಗೂ ಅವರ ಸಂತತಿಗೂ ಕೊಡುತ್ತೇನೆಂದು ಪ್ರಮಾಣಮಾಡಿದ ಆ ನಾಡಿನಲ್ಲಿ ನೀವು ಬಹುಕಾಲ ಬಾಳುವಿರಿ; ಅದು ಹಾಲೂ ಜೇನೂ ಹರಿಯುವ ನಾಡು. 10 ನೀವು ಸ್ವಾಧೀನಮಾಡಿಕೊಳ್ಳಲು ಹೋಗುವ ನಾಡು ನೀವು ಬಿಟ್ಟುಬಂದ ಈಜಿಪ್ಟ್ ದೇಶದ ಹಾಗಲ್ಲ. ಈಜಿಪ್ಟಿನಲ್ಲಿ ನೀವು ಹೊಲಗದ್ದೆಗಳಲ್ಲಿ ಬೀಜ ಬಿತ್ತಿದ ಮೇಲೆ ಕಾಯಿಪಲ್ಯಗಳ ತೋಟವನ್ನು ಸಾಗುವಳಿಮಾಡುವ ರೀತಿಯಲ್ಲಿ ಏತವನ್ನು ತುಳಿದು ನೀರುಕಟ್ಟುತ್ತಿದ್ದಿರಿ. 11 ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ನಾಡೋ ಹಳ್ಳದಿಣ್ಣೆಗಳ ನಾಡು; ಆಕಾಶದಿಂದ ಮಳೆಬಿದ್ದಂತೆ ನೀರುದೊರಕುತ್ತದೆ. 12 ಅದು ನಿಮ್ಮ ದೇವರಾದ ಸರ್ವೇಶ್ವರ ಪರಾಂಬರಿಸುವ ನಾಡು; ಸಂವತ್ಸರದ ಪ್ರಾರಂಭ ಮೊದಲುಗೊಂಡು ಕೊನೆಯವರೆಗೂ ಅವರು ಅದನ್ನು ಸದಾ ಕಟಾಕ್ಷಿಸುವರು. 13 ನಾನು ಈಗ ನಿಮಗೆ ಬೋಧಿಸುವ ಆಜ್ಞೆಗಳಿಗೆ ಲಕ್ಷ್ಯಕೊಟ್ಟು ನಿಮ್ಮ ದೇವರಾದ ಸರ್ವೇಶ್ವರನನ್ನು ಸಂಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಪ್ರೀತಿಸಿ ಅವರಿಗೆ ಸೇವೆಸಲ್ಲಿಸಿದರೆ, 14 ನಿಮಗೆ ಗೋದಿ, ದ್ರಾಕ್ಷಿ, ಎಣ್ಣೇಕಾಯಿ ಇವುಗಳ ಬೆಳೆ ಚೆನ್ನಾಗಿ ಆಗುವುದು. ನಿಮ್ಮ ಭೂಮಿಗೆ ಬೇಕಾದ ಮುಂಗಾರು ಹಿಂಗಾರುಗಳನ್ನು ಅವರು ಸರಿಯಾಗಿ ಸುರಿಸುವರು. 15 ಅಡವಿಯಲ್ಲಿ ದನಕರುಗಳಿಗೆ ಬೇಕಾದಷ್ಟು ಹುಲ್ಲನ್ನು ಕೊಡುವರು; ನೀವು ಆಹಾರದಿಂದ ತೃಪ್ತರಾಗುವಿರಿ. 16 ಆದರೆ ನೀವು ಎಚ್ಚರಿಕೆಯಿಂದಿರಬೇಕು; ಮರುಳುಗೊಂಡು ಸರ್ವೇಶ್ವರ ಹೇಳಿದ ಮಾರ್ಗವನ್ನು ಬಿಟ್ಟು, ಇತರ ದೇವರುಗಳನ್ನು ಅವಲಂಬಿಸಿ, ಪೂಜಿಸಿದರೆ, 17 ಅವರು ನಿಮ್ಮ ಮೇಲೆ ಸಿಟ್ಟಗೊಂಡು ಮಳೆಬಾರದಂತೆ ಆಕಾಶವನ್ನು ಮುಚ್ಚಿಡಬಹುದು. ಆಗ ಭೂಮಿಯಲ್ಲಿ ಬೆಳೆಯಾಗದೆ ಸರ್ವೇಶ್ವರ ನಿಮಗೆ ಕೊಡುವ ಆ ಉತ್ತಮನಾಡಿನಲ್ಲಿ ನೀವು ಉಳಿಯದೆ ಬೇಗ ನಾಶವಾಗಿಹೋಗುವಿರಿ. ಉಪಸಂಹಾರ 18 “ಆದುದರಿಂದ ನೀವು ಈ ನನ್ನ ಮಾತುಗಳನ್ನು ನಿಮ್ಮ ಹೃದಯದಲ್ಲೂ ಮನಸ್ಸಿನಲ್ಲೂ ಇಟ್ಟುಕೊಳ್ಳಬೇಕು; ಇವುಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು; ಇವು ನಿಮ್ಮ ಹಣೆಗೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತಿರಬೇಕು. 19 ನೀವು ಮನೆಯಲ್ಲಿರುವಾಗಲೂ ಪ್ರಯಾಣದಲ್ಲಿರುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡುತ್ತಾ ನಿಮ್ಮ ಮಕ್ಕಳಿಗೆ ಇವುಗಳನ್ನು ಮನದಟ್ಟಾಗಿಸಬೇಕು. 20 ನಿಮ್ಮ ಮನೇ ಬಾಗಿಲಿನ ನಿಲುವುಪಟ್ಟಿಗಳ ಹಾಗು ಹೆಬ್ಬಾಗಿಲುಗಳ ಮೇಲೆಯೂ ಇವುಗಳನ್ನೂ ಬರೆಯಬೇಕು. 21 ಹೀಗೆ ಮಾಡಿದರೆ ಭೂಮಿಯ ಮೇಲೆ ಆಕಾಶ ಎಷ್ಟುಕಾಲ ನಿಂತಿರುವುದೋ ಅಷ್ಟು ಕಾಲವೂ ನೀವು ಹಾಗು ನಿಮ್ಮ ಸಂತತಿಯವರು ನಿಮ್ಮ ಪಿತೃಗಳಿಗೆ ಸರ್ವೇಶ್ವರ ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ಆ ನಾಡಿನಲ್ಲಿ ಬಾಳುವಿರಿ. 22 “ನಾನು ಬೋಧಿಸುವ ಈ ಧರ್ಮೋಪದೇಶವನ್ನೆಲ್ಲ ನೀವು ಅನುಸರಿಸುವವರಾಗಿ, ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ, ಎಲ್ಲ ವಿಷಯಗಳಲ್ಲೂ ಅವರು ಹೇಳುವ ಮಾರ್ಗದಲ್ಲೇ ನಡೆದು, ಅವರನ್ನೇ ಹೊಂದಿಕೊಂಡಿದ್ದರೆ, 23 ಅವರು ಆ ಜನಾಂಗಗಳನ್ನೆಲ್ಲ ನಿಮ್ಮ ಬಳಿಯಿಂದ ಹೊರದೂಡುವರು; ನಿಮಗಿಂತಲೂ ಮಹಾಬಲಿಷ್ಠಜನಾಂಗಗಳ ನಾಡನ್ನು ಸ್ವಾಧೀನಮಾಡಿಕೊಳ್ಳುವಿರಿ. 24 ನೀವು ಹೆಜ್ಜೆಯಿಡುವ ಎಲ್ಲ ಸ್ಥಳಗಳೂ ನಿಮ್ಮದಾಗುವುವು; ಮರುಭೂಮಿ ಮೊದಲುಗೊಂಡು ಲೆಬನೋನ್ ಪರ್ವತದವರೆಗೂ ಮತ್ತು ಯೂಫ್ರೆಟಿಸ್ ನದಿಯಿಂದ ಪಶ್ಚಿಮ ಸಮುದ್ರದವರೆಗೂ ನಿಮ್ಮ ನಾಡು ವ್ಯಾಪಿಸುವುದು. 25 ಯಾರೂ ನಿಮ್ಮ ಮುಂದೆ ನಿಲ್ಲುವುದಿಲ್ಲ. ನೀವು ಕಾಲಿಡುವ ಎಲ್ಲ ಪ್ರದೇಶಗಳ ಜನಗಳಿಗೂ ನಿಮ್ಮಿಂದ ದಿಗಿಲೂ ಹೆದರಿಕೆಯೂ ಉಂಟಾಗುವ ಹಾಗೆ ನಿಮ್ಮ ದೇವರಾದ ಸರ್ವೇಶ್ವರ ತಾನೇ ಹೇಳಿರುವಂತೆ ಮಾಡುವರು. 26 “ಇಗೋ ನೋಡಿ, ಈ ದಿನ ಆಶೀರ್ವಾದವನ್ನೂ ಶಾಪವನ್ನೂ ನಿಮ್ಮ ಮುಂದೆ ಇಡುತ್ತಾ ಇದ್ದೇನೆ. 27 ನಾನು ಈಗ ನಿಮಗೆ ಬೋಧಿಸುವ ನಿಮ್ಮ ದೇವರಾದ ಸರ್ವೇಶ್ವರನ ಆಜ್ಞೆಗಳಿಗೆ ನೀವು ವಿಧೇಯರಾಗಿ ನಡೆದರೆ, ಆಶೀರ್ವಾದ ನಿಮ್ಮದಾಗುವುದು. 28 ಈ ಆಜ್ಞೆಗಳಿಗೆ ವಿಧೇಯರಾಗದೆ, ನಾನು ಈಗ ಬೋಧಿಸುವ ಮಾರ್ಗವನ್ನು ಬಿಟ್ಟು ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ಅವಲಂಬಿಸಿದರೆ, ನಿಮಗೆ ಶಾಪ ತಗಲುವುದು. 29 “ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ನಾಡಿಗೆ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಸೇರಿಸಿದ ನಂತರ ನೀವು ಗೆರಿಜ್ಜೀಮ್ ಬೆಟ್ಟದ ಮೇಲೆ ಆಶೀರ್ವಾದವನ್ನೂ ಏಬಾಲ್ ಬೆಟ್ಟದ ಮೇಲೆ ಶಾಪವನ್ನೂ ಪ್ರಕಟಿಸಬೇಕು. 30 ಆ ಬೆಟ್ಟಗಳು ಜೋರ್ಡನ್ ನದಿಯ ಆಚೆ, ಪಡುವಣ ದಾರಿಯ ಪಶ್ಚಿಮದಲ್ಲಿ ಕಾನಾನ್ಯರು ವಾಸಿಸುವ ಅರಾಬಾ ಪ್ರದೇಶದಲ್ಲಿ, ಗಿಲ್ಗಾಲಿಗೆ ಎದುರಾಗಿ ಮೋರೆ ಎಂಬ ವೃಕ್ಷದ ಬಳಿಯಲ್ಲಿ ಇವೆ. 31 “ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ನೀವು ಜೋರ್ಡನ್ ನದಿಯನ್ನು ದಾಟಬೇಕಾಗಿದೆ. ನೀವು ಆ ನಾಡನ್ನು ವಶಪಡಿಸಿಕೊಂಡು, ಅದರಲ್ಲಿ ವಾಸಮಾಡುವಾಗ, 32 ನಾನು ಈಗ ನಿಮಗೆ ತಿಳಿಸುವ ಎಲ್ಲ ಆಜ್ಞಾವಿಧಿಗಳನ್ನು ಅನುಸರಿಸಿ ನಡೆಯಲೇಬೇಕು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India