Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 29 - ಕನ್ನಡ ಸತ್ಯವೇದವು C.L. Bible (BSI)

1 ಎಷ್ಟು ಗದರಿಸಿದರೂ ತಗ್ಗದ ಹಟಮಾರಿ ಫಕ್ಕನೆ ಬೀಳುವನು, ಮತ್ತೆ ಏಳನು.

2 ಸಜ್ಜನರ ಅಧಿಕಾರದಿಂದ ಜನರಿಗೆ ನಲಿದಾಟ; ದುರ್ಜನರ ಆಳ್ವಿಕೆಯಿಂದ ಜನರಿಗೆ ನರಳಾಟ.

3 ಜ್ಞಾನಪ್ರಿಯ ಮಗನಿಂದ ತಂದೆಗೆ ಸಂತೋಷ; ವೇಶ್ಯೆಯರ ಸಂಗದಿಂದ ಆಸ್ತಿ ವಿನಾಶ.

4 ನ್ಯಾಯಪಾಲಕ ರಾಜನಿಂದ ನಾಡಿನ ಅಭಿವೃದ್ಧಿ; ಲಂಚಕೋರ ಅರಸನಿಂದ ದೇಶ ಹಿಡಿವುದು ವಿನಾಶದ ಹಾದಿ.

5 ನೆರೆಯವನನ್ನು ಅಳತೆಮೀರಿ ಹೊಗಳುವವನು ಅವನ ಕಾಲಿಗೆ ಬಲೆಯನ್ನು ಒಡ್ಡುವನು.

6 ಕೆಟ್ಟವನು ತನ್ನ ಪಾಪಪಾಶದಲ್ಲೆ ಸಿಕ್ಕಿಬೀಳುವನು; ಒಳ್ಳೆಯವನು ಉಲ್ಲಾಸದಿಂದ ಹಾಡಿ ಹರ್ಷಿಸುವನು.

7 ನೀತಿವಂತನು ದಲಿತರ ಹಕ್ಕುಬಾಧ್ಯತೆಯನ್ನು ಕಾದಿರಿಸುವನು; ದುಷ್ಟರಿಗಿಲ್ಲ ಅದನ್ನು ಗ್ರಹಿಸುವಷ್ಟು ಅಕ್ಕರೆ.

8 ಕುಚೋದ್ಯರು ಪಟ್ಟಣಕ್ಕೆ ಬೆಂಕಿ ಹಚ್ಚುವರು; ಜ್ಞಾನಿಗಳೊ ರೋಷಾಗ್ನಿಯನ್ನು ಆರಿಸುವರು.

9 ಮೂರ್ಖನ ಸಂಗಡ ಜ್ಞಾನಿ ತರ್ಕಮಾಡಿದ್ದೆ ಆದರೆ ಆ ಮೂರ್ಖ ರೇಗಬಹುದು, ನಗಬಹುದು, ತರ್ಕಮಾತ್ರ ಮುಗಿಯದು.

10 ಕೊಲೆಪಾತಕರು ನೀತಿವಂತನನ್ನು ದ್ವೇಷಿಸುವರು; ಅಂಥವನ ಪ್ರಾಣಕ್ಕೂ ಹೊಂಚುಹಾಕುವರು.

11 ಮೂಢನು ತನ್ನ ಕೋಪವನ್ನೆಲ್ಲ ವ್ಯಕ್ತಪಡಿಸುವನು; ಜ್ಞಾನಿ ತನ್ನ ಕೋಪವನ್ನು ತಡೆಹಿಡಿದು ಶಮನಗೊಳ್ಳುವನು.

12 ಸುಳ್ಳುವರದಿಗೆ ಕಿವಿಗೊಡುವ ರಾಜಸೇವಕರೆಲ್ಲರು ದುರುಳರು.

13 ದಲಿತನೂ, ದಬ್ಬಾಳಿಕೆ ನಡೆಸುವವನೂ ಸ್ಥಿತಿಯಲ್ಲಿ ಎದುರುಬದುರು; ಆದರೆ ಸರ್ವೇಶ್ವರನೆ ಅವರಿಬ್ಬರ ಕಣ್ಣುಗಳನ್ನು ಬೆಳಗಿಸುವವನು.

14 ಬಡಬಗ್ಗರನ್ನು ನ್ಯಾಯವಾಗಿ ಆಳುವ ಅರಸನ ಸಿಂಹಾಸನ ಸದಾ ಸುಭದ್ರ.

15 ಬೆತ್ತ ಬೆದರಿಕೆಗಳು ಜ್ಞಾನ ತರುತ್ತವೆ; ಶಿಕ್ಷಿಸದೆ ಬಿಟ್ಟ ಮಗನು ತಾಯಿಗೆ ತರುತ್ತಾನೆ ಅಪಕೀರ್ತಿ.

16 ದುಷ್ಟರ ವೃದ್ಧಿ ಪಾಪಾಭಿವೃದ್ಧಿ; ಅವರ ಪತನವನ್ನು ಸಜ್ಜನರು ಕಣ್ಣಾರೆ ಕಾಣುವರು.

17 ನಿನ್ನ ಮಗನನ್ನು ದಂಡಿಸಿ ಸರಿಪಡಿಸು; ಅವನು ನಿನ್ನನ್ನು ಸಂತೋಷಪಡಿಸುವನು, ಮನೋಲ್ಲಾಸಗೊಳಿಸುವನು.

18 ಪ್ರವಾದನೆಗಳಿಲ್ಲದಿರುವಾಗ ಪ್ರಜೆಗಳು ಅಂಕೆಮೀರಿ ನಡೆಯುತ್ತಾರೆ, ಧರ್ಮಶಾಸ್ತ್ರಾನುಸಾರ ನಡೆಯುವವನು ಭಾಗ್ಯವಂತನು.

19 ಮಾತಿನಿಂದ ಮಾತ್ರ ಸೇವಕನನ್ನು ತಿದ್ದಲಾಗದು; ಮಾತು ಕಿವಿಗೆ ಬಿದ್ದರೂ ಅದನ್ನು ಗ್ರಹಿಸಲಾರದು.

20 ದುಡುಕಿ ಮಾತಾಡುವವನನ್ನು ನೋಡು; ಅಂಥವನಿಗಿಂತಲು ಮೂಢನ ಸುಧಾರಣೆ ಹೆಚ್ಚು ಸಾಧ್ಯ.

21 ಬಾಲ್ಯದಿಂದ ಕೋಮಲವಾಗಿ ಸಾಕಲಾದ ಸೇವಕನು, ಕೊನೆಗೆ ಕುಮಾರನಂತೆ ನಿನ್ನದೆಲ್ಲವನ್ನು ಕಿತ್ತುಕೊಂಡಾನು.

22 ಕೋಪಿಷ್ಠನು ಜಗಳವೆಬ್ಬಿಸುವನು; ಕ್ರೋಧಶೀಲನು ದೋಷಭರಿತನು.

23 ಗರ್ವವು ಮನುಷ್ಯನನ್ನು ದೀನಸ್ಥಿತಿಗೆ ಇಳಿಸುವುದು; ನಮ್ರತೆ ಅವನನ್ನು ಗೌರವಸ್ಥಿತಿಗೆ ಏರಿಸುವುದು.

24 ಚೋರರ ಮಿತ್ರ ಸ್ವಂತ ಪ್ರಾಣಕ್ಕೆ ಶತ್ರು, ಶಾಪ ಕಿವಿಗೆ ಬೀಳುತ್ತಿದ್ದರೂ ಆತ ಮೌನ ತಾಳುವನು.

25 ಮಾನವರಿಗೆ ಹೆದರಿ ನಡೆವವನು ಬಲೆಗೆ ಸಿಕ್ಕಿಬೀಳುವನು; ಸರ್ವೇಶ್ವರನಲ್ಲಿ ನಂಬಿಕೆಯಿಟ್ಟವನು ಸಂರಕ್ಷಣೆ ಹೊಂದುವನು.

26 ರಾಜ್ಯಾಧಿಕಾರಿಗಳಲ್ಲಿ ದಯೆ ಯಾಚಿಸುವವರು ಅನೇಕರು; ಪ್ರತಿಯೊಬ್ಬನಿಗೆ ಸರಿಯಾದ ನ್ಯಾಯ ದೊರಕಿಸುವವನು ಸರ್ವೇಶ್ವರನು.

27 ಸಜ್ಜನರಿಗೆ ದುರ್ಮಾರ್ಗಿ ತಿರಸ್ಕೃತನು; ದುರ್ಜನರಿಗೆ ಸನ್ಮಾರ್ಗಿ ತಿರಸ್ಕೃತನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು