Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 28 - ಕನ್ನಡ ಸತ್ಯವೇದವು C.L. Bible (BSI)

1 ಹಿಂದಟ್ಟದಿದ್ದರೂ ದುಷ್ಟನು ಹೆದರಿ ಓಡುವನು; ಸತ್ಯಸಂಧನು ಸಿಂಹದಂತೆ ಧೈರ್ಯದಿಂದಿರುವನು.

2 ಅರಾಜಕತೆಯಿಂದ ನಾಡಿನಲ್ಲಿ ನಾಯಕರನೇಕರು ತಲೆಯೆತ್ತುವರು; ಜ್ಞಾನ ಹಾಗೂ ವಿವೇಕದಿಂದ ನಾಡು ಸುಸ್ಥಿರವಾಗುವುದು.

3 ದಲಿತರನ್ನೇ ಹಿಂಸಿಸುವ ಬಡವ, ಕಾಳೂ ಉಳಿಯದಂತೆ ಜಡಿಯುವ ಮಳೆಗೆ ಸಮಾನ.

4 ಧರ್ಮಶಾಸ್ತ್ರವನ್ನು ಕೈಗೊಳ್ಳದವರು ದುಷ್ಟರನ್ನು ಹೊಗಳುವರು; ಕೈಗೊಳ್ಳುವವರು ಅವರ ವಿರುದ್ಧ ಹೋರಾಡುವರು.

5 ಕೆಟ್ಟವರು ನ್ಯಾಯ ನೀತಿಯನ್ನು ಗ್ರಹಿಸರು; ಸರ್ವೇಶ್ವರನ ಭಕ್ತರು ಅದನ್ನು ಪೂರ್ತಿಯಾಗಿ ಗ್ರಹಿಸುವರು.

6 ದುರ್ಮಾರ್ಗಿಯಾದ ಧನವಂತನಿಗಿಂತ ನಿರ್ದೋಷಿಯಾಗಿ ನಡೆವ ದರಿದ್ರನೇ ಲೇಸು.

7 ಜ್ಞಾನಿಯಾದ ಮಗ ಧರ್ಮಶಾಸ್ತ್ರವನ್ನು ಕೈಗೊಳ್ಳುವನು; ಹೊಟ್ಟೆಬಾಕರ ಗೆಳೆಯ ತಂದೆಗೆ ಅಪಕೀರ್ತಿ ತರುವನು.

8 ಬಡ್ಡಿಬಾಕಿಗಳಿಂದ ಬೆಳೆದ ಆಸ್ತಿ, ಬಡವರಲ್ಲಿ ಕನಿಕರವುಳ್ಳವನಿಗೆ ನಿಧಿ.

9 ಧರ್ಮಶಾಸ್ತ್ರಕ್ಕೆ ಕಿವಿಮುಚ್ಚಿಕೊಳ್ಳುವವನ ಪ್ರಾರ್ಥನೆ, ದೇವರಿಂದ ತಿರಸ್ಕೃತವಾದ ಪ್ರಾರ್ಥನೆ.

10 ನೆಟ್ಟಗೆ ನಡೆವವರನ್ನು ಕೆಟ್ಟದಾರಿಗೆ ಎಳೆಯುವವನು ತಾನು ತೋಡಿದ ಗುಂಡಿಯಲ್ಲಿ ತಾನೇ ಬೀಳುವನು; ನಿರ್ದೋಷಿಗಳು ಸುಖಸಂತೋಷಕ್ಕೆ ಬಾಧ್ಯಸ್ಥರು.

11 ಹಣವಂತ ತಾನೇ ಜ್ಞಾನಿಯೆಂದು ಎಣಿಸಿಕೊಳ್ಳುವನು; ವಿವೇಕಿಯಾದ ಬಡವ ಅವನೆಂಥವನೆಂದು ಅರ್ಥಮಾಡಿಕೊಳ್ಳುವನು.

12 ಸತ್ಯಸಂಧರಿಗೆ ಜಯವಾದರೆ ಸಂಭ್ರಮ ಸಡಗರ; ದುಷ್ಟರನ್ನು ಉನ್ನತಿಗೇರಿಸಿದರೆ ಬೇರೆಯವರು ಮರೆಯಾಗುವರು.

13 ಪಾಪಗಳನ್ನು ಮುಚ್ಚಿಟ್ಟುಕೊಳ್ಳುವವನಿಗೆ ಮುಕ್ತಿ ದೊರಕದು; ಅವುಗಳನ್ನು ಒಪ್ಪಿಕೊಂಡು ಬಿಟ್ಟರೆ ಕರುಣೆ ದೊರಕುವುದು.

14 ಭಯದಿಂದ ನಡೆದುಕೊಳ್ಳುವವನು ಭಾಗ್ಯವಂತನು; ಕಠಿಣ ಹೃದಯನು ಕೇಡಿಗೆ ತುತ್ತಾಗುವನು.

15 ದಲಿತರನ್ನಾಳುವ ದುರುಳರಾಜ ಗರ್ಜಿಸುವ ಸಿಂಹ, ಹುಡುಕಾಡುವ ಕರಡಿ.

16 ವಿವೇಕಶೂನ್ಯನಾದ ಒಡೆಯ ಮಹಾಹಿಂಸಕ; ದುರ್ಲಾಭವನ್ನು ವಿರೋಧಿಸುವವನಿಗೆ ದೀರ್ಘಾಯುಷ್ಯ.

17 ನರಹತ್ಯಮಾಡಿದ ಪಾಪಾತ್ಮನು ಪಾತಾಳದತ್ತ ಓಡೋಡುತ್ತಿರುವನು; ಅವನನ್ನು ಯಾರೂ ತಡೆಯಬಾರದು.

18 ಸನ್ಮಾರ್ಗಿಗಳಿಗೆ ಸಂರಕ್ಷಣೆ, ದುರ್ಮಾರ್ಗಿಗಳಿಗೆ ಪತನ ತಟ್ಟನೆ.

19 ದುಡಿದು ಹೊಲ ಗೇಯುವವನಿಗೆ ಹೊಟ್ಟೆ ತುಂಬ ಅನ್ನ; ವ್ಯರ್ಥಕಾರ್ಯಗಳಲ್ಲಿ ಆಸಕ್ತನಾದವನಿಗೆ ಬೇಕಾದಷ್ಟು ಬಡತನ.

20 ಪ್ರಾಮಾಣಿಕನಿಗೆ ಪೂರ್ಣಾಶೀರ್ವಾದ; ಹಣವಂತನಾಗಲು ಹಾತೊರೆಯುವವನು ಶಿಕ್ಷಾರ್ಹ.

21 ಪಕ್ಷಪಾತ ತಕ್ಕುದಲ್ಲ; ತುತ್ತನ್ನಕ್ಕಾಗಿ ತಪ್ಪುಮಾಡುವವರುಂಟು.

22 ಆಸ್ತಿ ಗಳಿಸಲು ಲೋಭಿಗೆ ಆತುರ; ತನಗೆ ಕೊರತೆ ಕಾದಿದೆಯೆಂದು ಆತ ಅರಿಯ.

23 ಮುಖಸ್ತುತಿ ಮಾಡುವವನಿಗಿಂತ ಗದರಿಸುವವನೇ ಕೊನೆಗೆ ಹೆಚ್ಚು ದಯಾವಂತ.

24 “ಅದು ತಪ್ಪಲ್ಲ” ಎಂದು ಹೆತ್ತವರ ಆಸ್ತಿಯನ್ನು ಕದಿಯುವವನು ಕೊಳ್ಳೆ ಹೊಡೆಯುವವರ ಸಂಗಡಿಗನು.

25 ಅತ್ಯಾಸೆಪಡುವವನು ಜಗಳವೆಬ್ಬಿಸುವನು; ಸರ್ವೇಶ್ವರನಲ್ಲಿ ಭರವಸೆಯಿಟ್ಟವನು ಬಲಿಷ್ಠನು.

26 ತನ್ನ ಶಕ್ತಿಯಲ್ಲೆ ಭರವಸೆ ಇಡುವವನು ಮೂಢನು; ಜ್ಞಾನಿಗಳ ಮಾರ್ಗದಲ್ಲಿ ನಡೆವವನು ವಿಮುಕ್ತನಾಗುವನು.

27 ಬಡವರಿಗೆ ಕೊಡುವವನು ಕೊರತೆಪಡನು; ಅವರನ್ನು ಕಂಡೂ ಕಾಣದಂತೆ ಇರುವವನು ಬಹುಶಾಪಗ್ರಸ್ಥನು.

28 ದುಷ್ಟರು ಪ್ರಬಲವಾದರೆ ಜನರು ತಲೆಮರೆಸಿಕೊಳ್ಳುವರು; ದುಷ್ಟರು ನಾಶವಾದರೆ ಶಿಷ್ಟರು ವೃದ್ಧಿಯಾಗುವರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು