Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 22 - ಕನ್ನಡ ಸತ್ಯವೇದವು C.L. Bible (BSI)

1 ಅತುಳ ಐಶ್ವರ್ಯಕ್ಕಿಂತ ಒಳ್ಳೆಯ ಹೆಸರು ಉತ್ತಮ; ಬೆಳ್ಳಿಬಂಗಾರಕ್ಕಿಂತ ಪ್ರೀತಿ ವಿಶ್ವಾಸ ಅಮೂಲ್ಯ.

2 ಬಡವರು ಬಲ್ಲಿದರು ಸ್ಥಿತಿಯಲ್ಲಿ ಎದುರುಬದುರು; ಅವರೆಲ್ಲರನ್ನು ಸೃಷ್ಟಿಸಿದಾತ ಸರ್ವೇಶ್ವರನು.

3 ಜಾಣ ಕೇಡನ್ನು ಕಂಡು ಅಡಗಿಕೊಳ್ಳುತ್ತಾನೆ; ಕೋಣ ಮುನ್ನುಗ್ಗಿ ಹಾನಿಗೆ ಈಡಾಗುತ್ತಾನೆ.

4 ಸರ್ವೇಶ್ವರನಲ್ಲಿ ಭಯಭಕ್ತಿ ದೀನಮನೋಭಾವ, ಇವು ನೀಡುವ ಫಲ-ಸಂಪತ್ತು, ಸನ್ಮಾನ, ಆಯುಸ್ಸು.

5 ವಕ್ರಬುದ್ಧಿಯುಳ್ಳವನ ಹಾದಿತುಂಬ ಮುಳ್ಳು, ಉರುಳು; ಅದರಿಂದ ದೂರವಿರುವನು ಪ್ರಾಣದಾಸೆಯುಳ್ಳವನು.

6 ಬಾಲ್ಯದಲ್ಲೇ ಮಕ್ಕಳನ್ನು ಸರಿದಾರಿಯಲ್ಲಿ ಪಳಗಿಸು; ಮುಪ್ಪಿನಲ್ಲೂ ಅವರು ಆ ಪದ್ಧತಿ ಮೀರಿ ನಡೆಯದಿರಲಿ.

7 ಬಲ್ಲಿದನು ಬಡವನಿಗೆ ಒಡೆಯ; ಸಾಲಗಾರನು ಸಾಲಕೊಟ್ಟವನಿಗೆ ಸೇವಕ.

8 ಕೆಟ್ಟತನವನ್ನು ಬಿತ್ತುವವನು ಕೇಡನ್ನೆ ಕೊಯ್ಯುವನು; ಅವನ ಸಿಟ್ಟು ಅವನನ್ನೆ ಸುಟ್ಟುಬಿಡುವುದು.

9 ಉದಾರ ದೃಷ್ಟಿಯುಳ್ಳವನು ಆಶೀರ್ವದಿತನು; ಆಹಾರವನ್ನು ಬಡವರೊಂದಿಗೆ ಆತ ಹಂಚಿಕೊಳ್ಳುವನು.

10 ಕುಚೋದ್ಯನನ್ನು ಓಡಿಸಿಬಿಟ್ಟರೆ ಜಗಳ ನಿಲ್ಲುವುದು, ವ್ಯಾಜ್ಯ ಮುಗಿಯುವುದು, ನಿಂದೆ ಅವಮಾನ ಇಲ್ಲದಾಗುವುದು.

11 ಸವಿಮಾತಿನಿಂದ ಅರಸನ ಗೆಳೆತನ ಪಡೆಯಬಹುದು; ಸರ್ವೇಶ್ವರ ಬಯಸುವುದು ಅಂತರಂಗ ಶುದ್ಧಿಯನ್ನು.

12 ಸರ್ವೇಶ್ವರನ ದೃಷ್ಟಿ ಸಜ್ಜನರನ್ನು ಕಾಯುವುದು; ವಂಚಕರ ಮಾತನ್ನು ನಿರರ್ಥಕಗೊಳಿಸುವುದು.

13 “ಹೊರಗಡೆ ಕಾದಿದೆ ಸಿಂಹ, ಬೀದಿಗೆ ಕಾಲಿಟ್ಟರೆ ತಿಂದುಬಿಡುವುದು!” ಇದು ಮೈಗಳ್ಳನ ಪಿಳ್ಳೆಯ ನೆವ.

14 ವ್ಯಭಿಚಾರಿಣಿಯ ಬಾಯಿ ಆಳವಾದ ಬಾವಿ; ಸರ್ವೇಶ್ವರನಿಗೆ ಸಿಟ್ಟೆಬ್ಬಿಸಿದವನು ಬೀಳುವನು ಅದರಲ್ಲಿ.

15 ಮಂಕುತನ ಮಕ್ಕಳ ಮನಸ್ಸಿಗೆ ಸಹಜ; ಬೆತ್ತದ ಬಿಸಿಯಿಂದ ಅದನ್ನು ತೊಲಗಿಸಲು ಸಾಧ್ಯ.

16 ಹಣ ಹೆಚ್ಚಿಸಲು ಬಡವರನ್ನು ಪೀಡಿಸುವವನಿಗೆ, ಲಂಚಕೊಟ್ಟು ಬಲ್ಲಿದರನ್ನು ಒಲಿಸುವವನಿಗೆ, ಕೊರತೆಯೆ ಕಟ್ಟಿಟ್ಟ ಬುತ್ತಿ.


ಮುತ್ತಿನಂಥ ಮೂವತ್ತು ಮಾತುಗಳು

17 ಜ್ಞಾನಿಗಳ ನುಡಿಗಳನ್ನು ಕಿವಿಗೊಟ್ಟು ಕೇಳು; ನನ್ನ ಬೋಧನೆಯನ್ನು ಮನಸ್ಸಿನಲ್ಲಿಡು.

18 ಆ ನುಡಿಗಳನ್ನು ನಿನ್ನ ಅಂತರಂಗದಲ್ಲಿ ಕಾದಿಡು; ಅವು ನಿನ್ನ ತುಟಿಯ ಮೇಲೆ ಸಿದ್ಧವಿದ್ದರೆ ಒಳಿತು.

19 ಸರ್ವೇಶ್ವರನಲ್ಲಿ ನೀನು ಭರವಸೆ ಇಡುವಂತೆ, ಅವುಗಳನ್ನು ತಿಳಿಸಿರುವೆನು ಇಂದೆ.

20 ಉಚಿತಾಲೋಚನೆಯನ್ನೂ ತಿಳುವಳಿಕೆಯನ್ನೂ ನೀಡಬಲ್ಲ ಮೂವತ್ತು ವಚನಗಳನ್ನು ನಿನಗೆ ಈ ಮುಂಚೆಯೆ ಬರೆದಿರುವೆನಲ್ಲಾ.

21 ಸತ್ಯವಾದ ಆ ವಚನಗಳು ಎಷ್ಟೋ ಯಥಾರ್ಥವೆಂದು ತಿಳಿದು ನಿನ್ನನ್ನು ಪ್ರಶ್ನಿಸಿದವರಿಗೆ ಅವುಗಳನ್ನು ಅರಿಕೆಮಾಡು.


- 1 -

22 ಬಡವರಿಗೆ ದಿಕ್ಕಿಲ್ಲವೆಂದು ಅವರನ್ನು ಶೋಷಣೆಗೆ ಗುರಿಮಾಡಬೇಡ; ನ್ಯಾಯಾಲಯದಲ್ಲಿ ಆ ದಟ್ಟದರಿದ್ರರನ್ನು ಬಾಧಿಸಬೇಡ;

23 ಸರ್ವೇಶ್ವರನೇ ಅವರ ಪರವಾಗಿ ವಾದಿಸುವನು; ಸೂರೆಮಾಡಬಂದವರ ಪ್ರಾಣವನ್ನು ಆತನೆ ಸೂರೆ ಮಾಡುವನು.


- 2 -

24 ಕೋಪಿಷ್ಠನ ಸಂಗಡ ಸ್ನೇಹ ಬೆಳೆಸಬೇಡ, ಸಿಟ್ಟುಗಾರನ ಸಹವಾಸ ಮಾಡಬೇಡ.

25 ಹಾಗೆ ಮಾಡಿದರೆ ಅವರ ದುರ್ನಡತೆಯನ್ನು ಕಲಿತುಕೊಳ್ಳುವೆ, ನಿನ್ನ ಪ್ರಾಣ ಉರುಲಿಗೆ ತುತ್ತಾಗುವುದು, ಎಚ್ಚರಿಕೆ!


-3 -

26 ಬೇರೆಯವರ ಸಾಲಕ್ಕೆ ಹೊಣೆಯಾಗಬೇಡ, ಅದಕ್ಕಾಗಿ ಕೈ ಮೇಲೆ ಕೈ ಇಟ್ಟು ಜಾಮೀನು ನಿಲ್ಲಬೇಡ.

27 ಆ ಸಾಲ ತೀರಿಸಲು ನಿನ್ನಿಂದ ಸಾಧ್ಯವಾಗದಿರಲು, ಅವನೇಕೆ ನೀನು ಮಲಗಿರುವ ಹಾಸಿಗೆಯನ್ನೇ ಕಿತ್ತುಕೊಳ್ಳಬೇಕು?


- 4 -

28 ನಿನ್ನ ಪೂರ್ವಜರು ಹಾಕಿರುವ ಎಲ್ಲೆ ಗುರುತನ್ನು, ಸ್ಥಳಾಂತರಿಸಬೇಡ ನೀನು.


- 5 -

29 ತನ್ನ ಕೆಲಸದಲ್ಲಿ ನಿಪುಣನಾದವನನ್ನು ಗುರುತುಹಚ್ಚು; ಅಂಥವನು ರಾಜರನ್ನಲ್ಲದೆ ನೀಚರನ್ನು ಸೇವಿಸಲಾರನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು