Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 19 - ಕನ್ನಡ ಸತ್ಯವೇದವು C.L. Bible (BSI)

1 ಕಪಟವಾಗಿ ಮಾತಾಡುವ ಮೂಢನಿಗಿಂತ ನಿರ್ದೋಷಿಯಾಗಿ ನಡೆವ ಬಡವನೇ ಲೇಸು.

2 ಅರಿವಿಲ್ಲದ ಹುರುಪು ಸರಿಯಲ್ಲ; ದುಡುಕುವ ಕಾಲು ದಾರಿತಪ್ಪುವುದು ದಿಟ.

3 ಮನುಷ್ಯನ ಬಾಳಿನ ಅಳಿವು ತನ್ನ ಮೂರ್ಖತನದಿಂದ; ಆದರೂ ಅವನು ಸಿಡಿದೇಳುವುದು ಸರ್ವೇಶ್ವರನ ವಿರುದ್ಧ.

4 ಧನವಂತನಿಗೆ ಸ್ನೇಹಿತರು ಬಹುಮಂದಿ; ಬಡವನಿಗಿದ್ದ ಗೆಳೆಯನೂ ಪರಾರಿ.

5 ಕಳ್ಳಸಾಕ್ಷಿ ದಂಡನೆಯನ್ನು ಪಡೆಯದಿರನು; ಸುಳ್ಳಾಡುವವನು ಅದನ್ನು ತಪ್ಪಿಸಿಕೊಳ್ಳಲಾರನು.

6 ಉದಾರಿಯ ಕೃಪೆಕೋರುವವರು ಅನೇಕರು; ದಾನಶೂರನಿಗೆ ಎಲ್ಲರು ಸ್ನೇಹಿತರು.

7 ಬಡವನನ್ನು ಬಂಧುಗಳೆಲ್ಲರು ಹಗೆಮಾಡುವರು; ಮಿತ್ರರೋ ಖರೆಯಾಗಿ ಅವನಿಗೆ ದೂರವಾಗುವರು; ಹಿಂಬಾಲಿಸಿ ಬರುವವರು ಅವನ ಬಾಯಿಮಾತನ್ನು ನಂಬರು.

8 ಬುದ್ಧಿಯನ್ನು ಗಳಿಸುವವನು ತನಗೆ ತಾನೇ ಗೆಳೆಯನು; ವಿವೇಕವನ್ನು ಕಾಪಾಡುವವನು ಪಡೆಯುವನು ಏಳಿಗೆಯನ್ನು.

9 ಕಳ್ಳಸಾಕ್ಷಿ ದಂಡನೆಯನ್ನು ಹೊಂದದಿರನು; ಸುಳ್ಳಾಡುವವನು ಹಾಳಾಗಿ ಹೋಗುವನು.

10 ಭೋಗಜೀವನ ಬುದ್ಧಿಹೀನನಿಗೆ ಯೋಗ್ಯವಲ್ಲ; ದೊರೆಗಳ ಮೇಲೆ ದೊರೆತನ ದಾಸನಿಗೆ ತಕ್ಕುದಲ್ಲ.

11 ವಿವೇಕಿಯು ಸಿಟ್ಟುಗೊಳ್ಳಲು ತಡಮಾಡುತ್ತಾನೆ; ತಪ್ಪನ್ನು ಕ್ಷಮಿಸುವುದೆಂದರೆ ಅವನಿಗೆ ಹೆಮ್ಮೆ.

12 ರಾಜನ ರೋಷ ಸಿಂಹದ ಗರ್ಜನೆಯು; ಅವನ ದಯೆ ಹುಲ್ಲಿನ ಮೇಲಣ ಇಬ್ಬನಿಯು.

13 ಬುದ್ಧಿಹೀನನಾದ ಮಗ ತಂದೆಗೆ ತರುತ್ತಾನೆ ಹಾನಿ; ಜಗಳವಾಡುವ ಹೆಂಡತಿ ತಟತಟನೆ ತೊಟ್ಟಿಕ್ಕುವ ಹನಿ.

14 ಮನೆಮಾರು, ಆಸ್ತಿಪಾಸ್ತಿ ಬರುತ್ತವೆ ಪಿತ್ರಾರ್ಜಿತವಾಗಿ; ವಿವೇಕಿಯಾದ ಹೆಂಡತಿ ಸಿಕ್ಕುವುದು ಸರ್ವೇಶ್ವರನ ಅನುಗ್ರಹವಾಗಿ.

15 ಮೈಗಳ್ಳತನ ಗಾಢನಿದ್ರೆಯಲ್ಲಿ ಮುಳುಗಿಸುವುದು; ಸೋಮಾರಿಯು ಹಸಿವಿನಿಂದ ಬಳಲುವನು.

16 ದೈವಾಜ್ಞೆಯನ್ನು ಪಾಲಿಸುವವನು ತನ್ನನ್ನೇ ಕಾಪಾಡಿಕೊಳ್ಳುವನು; ದೈವವಾರ್ತೆಯ ಬಗ್ಗೆ ಅಜಾಗ್ರತನಾಗಿರುವವನು ಸಾಯುವನು.

17 ಬಡವರಿಗೆ ತೋರುವ ದಯೆ ಸರ್ವೇಶ್ವರನಿಗೆ ಕೊಟ್ಟ ಸಾಲ; ಆ ಉಪಕಾರಕ್ಕೆ ಸರ್ವೇಶ್ವರನಿಂದಲೆ ಪ್ರತ್ಯುಪಕಾರ.

18 ತಿದ್ದಿಕೊಳ್ಳುವನೆಂಬ ನಂಬಿಕೆಯಿರುವಾಗಲೆ ಮಗನನ್ನು ಶಿಕ್ಷಿಸು; ಇಲ್ಲವಾದರೆ ಅವನ ಅಳಿವಿಗೆ ನೀನೇ ಕಾರಣವಾಗುವೆ.

19 ಕಡುಕೋಪಿ ದಂಡನೆಯನ್ನು ಅನುಭವಿಸಲಿ ಬಿಡು; ಒಮ್ಮೆ ಬಿಡಿಸಿದರೆ, ಬಾರಿಬಾರಿಗೂ ಬಿಡಿಸಬೇಕಾಗುವುದು.

20 ಬುದ್ಧಿವಾದವನ್ನು ಕೇಳು, ತಿದ್ದುಪಾಟನ್ನು ಅಂಗೀಕರಿಸು; ಹಾಗೆ ಮಾಡಿದರೆ ಮುಂದಕ್ಕೆ ಜ್ಞಾನಿಯಾಗಿ ಬಾಳುವೆ.

21 ಮನುಜನ ಮನದಲ್ಲಿ ಏಳುವ ಯೋಜನೆಗಳು ಹಲವು; ಈಡೇರುವುದಾದರೊ ಸರ್ವೇಶ್ವರನ ಸಂಕಲ್ಪವು.

22 ಅತಿಯಾಸೆ ಗತಿಕೇಡು; ಇದ್ದೂ ಇಲ್ಲವೆನ್ನುವವನಿಗಿಂತ ಏನೂ ಇಲ್ಲದವನೆ ಲೇಸು.

23 ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವನಿಗೆ ಜೀವಪ್ರಾಪ್ತಿ; ಅಂಥವನು ಸಂತುಷ್ಟನಾಗಿ ಬಾಳುವನು, ಅವನಿಗೆ ಕೇಡು ಸಂಭವಿಸದು.

24 ಮೈಗಳ್ಳ ಕೈ ಹಾಕುತ್ತಾನೆ ತುತ್ತಿಗೆ; ಆದರೆ ಎತ್ತಲಾರ ಬಾಯ ಹತ್ತಿರಕ್ಕೆ.

25 ಕುಚೋದ್ಯನಿಗೆ ಹೊಡೆ, ಮುಗ್ಧರು ಅದನ್ನು ಕಂಡು ಜಾಣರಾಗುವರು; ಜ್ಞಾನಿಯನ್ನು ಗದರಿಸಿದರೆ ಸಾಕು, ಅವನು ಮತ್ತಷ್ಟು ಜ್ಞಾನಿಯಾಗುವನು.

26 ತಂದೆಯನ್ನು ಹೊಡೆದು, ತಾಯಿಯನ್ನು ಓಡಿಸುವ ಮಗನು ನಿಂದೆ ಅವಮಾನಗಳಿಗೆ ತುತ್ತಾಗುವನು.

27 ಮಗನೇ, ಉಪದೇಶ ಕೇಳುವುದನ್ನು ನಿಲ್ಲಿಸಬೇಡ; ನಿಲ್ಲಿಸಿದೆಯಾದರೆ ಬುದ್ಧಿಮಾತಿನಿಂದ ವಂಚಿತನಾಗುವೆ.

28 ನೀಚಸಾಕ್ಷಿ ನ್ಯಾಯತೀರ್ಪನ್ನು ಮರ್ಯಾದಿಸನು; ದುಷ್ಟಸಾಕ್ಷಿ ದ್ರೋಹವನ್ನೂ ನುಂಗಿಬಿಡುವನು.

29 ಕುಚೋದ್ಯನಿಗೆ ಕಾದಿದೆ ನ್ಯಾಯತೀರ್ಪು; ದಡ್ಡನ ಬೆನ್ನಿಗೆ ಬೀಳಲಿದೆ ದೊಣ್ಣೆಪೆಟ್ಟು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು