Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 15 - ಕನ್ನಡ ಸತ್ಯವೇದವು C.L. Bible (BSI)

1 ಮೃದುವಾದ ಮಾತು ಸಿಟ್ಟನ್ನಾರಿಸುತ್ತದೆ; ಬಿರುಸಾದ ನುಡಿ ಸಿಟ್ಟನ್ನೇರಿಸುತ್ತದೆ.

2 ಜ್ಞಾನಿಗಳ ನಾಲಿಗೆ ತಿಳುವಳಿಕೆಯನ್ನು ಸಾರ್ಥಕಪಡಿಸುತ್ತದೆ; ಜ್ಞಾನಹೀನರ ಬಾಯಿ ಮೂರ್ಖತನವನ್ನು ಕಕ್ಕುತ್ತದೆ.

3 ಸರ್ವೇಶ್ವರನ ದೃಷ್ಟಿ ಸರ್ವವ್ಯಾಪ್ತ; ಕೆಟ್ಟವರ ಮೇಲೂ ಒಳ್ಳೆಯವರ ಮೇಲೂ ಆತನ ನೋಟ.

4 ಸಂತೈಸುವ ನಾಲಿಗೆ ಜೀವವೃಕ್ಷಕ್ಕೆ ಸಮಾನ; ಹಿಂಸಾತ್ಮಕ ನಾಲಿಗೆ ಮನಮುರಿತಕ್ಕೆ ಸಾಧನ.

5 ಮೂರ್ಖನು ತಂದೆಯ ಶಿಕ್ಷಣವನ್ನು ನಿರ್ಲಕ್ಷ್ಯ ಮಾಡುತ್ತಾನೆ; ಜಾಣನು ಆತನ ಗದರಿಕೆಯನ್ನೂ ಗಮನಿಸುತ್ತಾನೆ.

6 ನೀತಿವಂತನ ಮನೆಯೊಳು ನಿಧಿನಿಕ್ಷೇಪ; ಅನೀತಿವಂತನ ಆದಾಯ ದುಃಖತಾಪ.

7 ತಿಳುವಳಿಕೆಯ ಬಿತ್ತನೆ ಜ್ಞಾನಿಗಳ ಬಾಯಿಂದ; ದುರುಳರ ಹೃದಯಕ್ಕೆ ಅದು ಅಸಾಧ್ಯ.

8 ದುರುಳರು ಅರ್ಪಿಸುವ ಬಲಿ ಸರ್ವೇಶ್ವರನಿಗೆ ಅಸಹ್ಯ; ಸಜ್ಜನರು ಮಾಡುವ ಪ್ರಾರ್ಥನೆ ಆತನಿಗೆ ಪ್ರಿಯ.

9 ದುರುಳರ ನಡತೆ ಸರ್ವೇಶ್ವರನಿಗೆ ಹೇಯ; ನೀತಿವಂತರ ನಡತೆ ಆತನಿಗೆ ಸುಪ್ರಿಯ.

10 ಸನ್ಮಾರ್ಗವನ್ನು ತೊರೆದವನಿಗೆ ಬರುವ ಶಿಕ್ಷೆ ಕಠಿಣ ಬುದ್ಧಿವಾದವನ್ನು ಕೇಳಲೊಲ್ಲದವನಿಗೆ ಬರುವುದು ಮರಣ.

11 ಸರ್ವೇಶ್ವರನ ಕಣ್ಣಿಗೆ ನರಕಪಾತಾಳಗಳೇ ಬಟ್ಟಬಯಲಾಗಿರಲು; ನರಮಾನವರ ಹೃದಯ ಆತನಿಗೆ ಮುಚ್ಚುಮರೆಯೇ?

12 ಕುಚೋದ್ಯನಿಗೆ ಬೇಡ ಬುದ್ಧಿವಾದ; ಅವನಿಗೆ ಬೇಡ ಜ್ಞಾನಿಗಳ ಸತ್ಸಂಘ.

13 ಹರ್ಷಹೃದಯದಿಂದ ಮುಖ ಅರಳುವುದು; ಮನೋವ್ಯಥೆಯಿಂದ ಚೈತನ್ಯ ಕುಂದುವುದು.

14 ವಿವೇಕಿಯ ಮನ ತಿಳುವಳಿಕೆಯನ್ನು ಅರಸುವುದು; ಮತಿಹೀನನ ಬಾಯಿ ಮೂರ್ಖತನವನ್ನು ಮುಕ್ಕುವುದು.

15 ದಲಿತರ ದಿನಗಳೆಲ್ಲ ದುಃಖಭರಿತ; ಹರ್ಷ ಹೃದಯನಿಗೆ ಸದಾ ಹಬ್ಬದಾನಂದ.

16 ನೆಮ್ಮದಿಯಿಲ್ಲದ ಸಿರಿಸಂಪತ್ತಿಗಿಂತಲು, ಸರ್ವೇಶ್ವರನ ಭಯಭಕ್ತಿಯಿಂದ ಕೂಡಿದ ಕಿಂಚಿತ್ತೇ ಮೇಲು.

17 ದ್ವೇಷವಿರುವಲ್ಲಿ ಕೊಬ್ಬಿದ ಮಾಂಸಭೋಜನಕ್ಕಿಂತ, ಪ್ರೀತಿಯಿರುವಲ್ಲಿ ಸೊಪ್ಪಿನ ಊಟವೇ ಲೇಸು.

18 ಉಗ್ರಕೋಪಿ ವ್ಯಾಜ್ಯವೆಬ್ಬಿಸುತ್ತಾನೆ; ದೀರ್ಘಶಾಂತನು ಜಗಳ ತೀರಿಸುತ್ತಾನೆ.

19 ಸೋಮಾರಿಯ ದಾರಿ ಮುಳ್ಳಿನ ಬೇಲಿ; ಸಜ್ಜನರ ಮಾರ್ಗ ರಾಜಬೀದಿ.

20 ಬುದ್ಧಿವಂತ ಮಗ ತಂದೆಯನ್ನು ಸಂತೋಷಗೊಳಿಸುತ್ತಾನೆ; ಬುದ್ಧಿಹೀನನು ಹೆತ್ತ ತಾಯಿಯನ್ನು ತಿರಸ್ಕರಿಸುತ್ತಾನೆ.

21 ಬುದ್ಧಿಹೀನನು ಮೂರ್ಖತನದಲ್ಲಿ ಆನಂದಿಸುತ್ತಾನೆ; ಬುದ್ಧಿವಂತನು ಸನ್ಮಾರ್ಗದಲ್ಲಿ ಮುಂದುವರಿಯುತ್ತಾನೆ.

22 ಆಲೋಚನೆಯಿಲ್ಲದೆ ಉದ್ದೇಶಗಳು ಈಡೇರವು; ಹಲವಾರು ಆಲೋಚನಾಪರರಿರುವಲ್ಲಿ ಅವು ಕೈಗೂಡುವುವು.

23 ಸದುತ್ತರ ಕೊಡುವವನಿಗೆ ಎಷ್ಟೋ ಸಂತೋಷ; ಸಮಯೋಚಿತ ವಚನ ಎಷ್ಟೋ ಸ್ವಾರಸ್ಯ.

24 ವಿವೇಕಿಗಳ ಮಾರ್ಗ ಏರಿಸುವುದು ಸಜ್ಜೀವಕ್ಕೆ; ಅದನ್ನು ಕೈಗೊಳ್ಳುವವರು ಇಳಿಯರು ಪಾತಾಳಕ್ಕೆ.

25 ಗರ್ವಿಷ್ಠನ ಮನೆಯನ್ನು ಸರ್ವೇಶ್ವರ ಕೆಡವಿಬಿಡುವನು; ವಿಧವೆಯ ಎಲ್ಲೆ ಮೇರೆಯನ್ನು ಸುಭದ್ರಪಡಿಸುವನು.

26 ದುರುಳರ ಕುಯುಕ್ತಿ ಸರ್ವೇಶ್ವರನಿಗೆ ಅಸಹ್ಯ; ಸಜ್ಜನರ ಸುಸೂಕ್ತಿ ಆತನಿಗೆ ಪ್ರಿಯ.

27 ಸೂರೆಮಾಡುವವನು ಸ್ವಂತ ಮನೆಗೇ ಕೇಡುಮಾಡುತ್ತಾನೆ; ಲಂಚವನ್ನು ದ್ವೇಷಿಸುವವನು ಸುಖವಾಗಿ ಬಾಳುತ್ತಾನೆ.

28 ಸಜ್ಜನರು ಸಮಾಲೋಚಿಸಿ ಉತ್ತರಿಸುತ್ತಾರೆ; ದುರ್ಜನರು ಕೆಟ್ಟದ್ದನ್ನು ಕಕ್ಕುತ್ತಿರುತ್ತಾರೆ.

29 ಸರ್ವೇಶ್ವರನು ದುರುಳರಿಗೆ ದೂರ; ನೀತಿವಂತರ ಪ್ರಾರ್ಥನೆಗೆ ಹತ್ತಿರ.

30 ಹಸನ್ಮುಖ ಕಂಡಾಗ ಹೃದಯಕ್ಕೆ ಆನಂದ; ಶುಭಸಮಾಚಾರದಿಂದ ದೇಹಕ್ಕೆ ಉತ್ತೇಜನ.

31 ಹಿತಕರ ಬುದ್ಧಿವಾದಕ್ಕೆ ಕಿವಿಗೊಡುವವನು ಸಜ್ಜನರ ಸತ್ಸಂಘದಲ್ಲಿ ಪಾಲ್ಗೊಳ್ಳುವನು.

32 ಶಿಸ್ತನ್ನು ನಿರಾಕರಿಸುವವನು ತನ್ನನ್ನೇ ತೃಣೀಕರಿಸುತ್ತಾನೆ; ಬುದ್ಧಿವಾದವನ್ನು ಅಂಗೀಕರಿಸುವವನು ಜ್ಞಾನ ಹೊಂದುತ್ತಾನೆ.

33 ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಿಗೆ ಜ್ಞಾನೋದಯ; ಘನತೆಗೌರವಕ್ಕೆ ಮುಂಚೆ ಸವಿನಯ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು