Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 14 - ಕನ್ನಡ ಸತ್ಯವೇದವು C.L. Bible (BSI)

1 ಬುದ್ಧಿವಂತೆ ತನ್ನ ಮನೆಯನ್ನು ಕಟ್ಟೆಬ್ಬಿಸುತ್ತಾಳೆ; ಬುದ್ಧಿಹೀನೆ ಅದನ್ನು ಕೈಯಿಂದ ಕೆಡವಿಹಾಕುತ್ತಾಳೆ.

2 ಸನ್ಮಾರ್ಗಿಯು ಸರ್ವೇಶ್ವರನಿಗೆ ಭಯಪಡುತ್ತಾನೆ; ದುರ್ಮಾರ್ಗಿಯು ಆತನನ್ನು ಅಸಡ್ಡೆಮಾಡುತ್ತಾನೆ.

3 ಮೂರ್ಖನ ಬಾಯಲ್ಲಿ ಗರ್ವವು ಅಂಕುರಿಸುವುದು; ಜ್ಞಾನಿಗಳ ವಚನಗಳು ಅವರನ್ನು ಕಾಪಾಡುವುವು.

4 ಎತ್ತುಗಳಿಲ್ಲದಿರುವಾಗ ಗೋದಲಿ ಶುದ್ಧ; ಆದರೆ ಎತ್ತಿನ ಶಕ್ತಿಯಿಂದಲೇ ಬೆಳೆಯ ಉತ್ಪನ್ನ.

5 ಸತ್ಯಸಾಕ್ಷಿ ಸುಳ್ಳಾಡದ ವ್ಯಕ್ತಿ; ಸುಳ್ಳು ಸಾಕ್ಷಿ ಅಬದ್ಧಪ್ರಿಯ ವ್ಯಕ್ತಿ.

6 ಕುಚೋದ್ಯನಿಗೆ ಜ್ಞಾನ ಹುಡುಕಿದರೂ ಸಿಕ್ಕದು; ವಿವೇಕಿಗೆ ತಿಳುವಳಿಕೆ ಸುಲಭವಾಗಿ ದಕ್ಕುವುದು.

7 ಮೂರ್ಖನಿಂದ ದೂರವಿರು; ಜ್ಞಾನವಚನ ಅವನಲ್ಲಿ ಕಾಣಸಿಗದು.

8 ವಿವೇಕಿಯ ಜ್ಞಾನ ಸನ್ಮಾರ್ಗದಲ್ಲಿ ನಡೆಸುತ್ತದೆ; ಮೂಢರ ಮೂರ್ಖತನ ಮೋಸಗೊಳಿಸುತ್ತದೆ.

9 ಪಾಪಪರಿಹಾರವನ್ನು ಪರಿಹಾಸ್ಯಮಾಡುತ್ತಾರೆ ಮೂರ್ಖರು; ಪಾಪಕ್ಷಮೆಯನ್ನು ಕೋರುತ್ತಾರೆ ಸತ್ಪುರುಷರು.

10 ಆಯಾಯ ಹೃದಯಕ್ಕೆ ಗೊತ್ತು ಅದರ ಗೋಳು; ಅದರ ಸಂತೋಷದಲ್ಲೂ ಪಾಲುಗೊಳ್ಳಲಾಗದು ಬೇರೆಯವರು.

11 ದುಷ್ಟರ ಮನೆಮಠ ನಿರ್ಮೂಲವಾಗುವುದು; ಸಜ್ಜನರ ಗುಡಾರ ಉದ್ಧಾರವಾಗುವುದು.

12 ಒಂದು ಮಾರ್ಗ ಒಬ್ಬನಿಗೆ ನೇರವೆಂದು ತೋರಬಹುದು; ಕೊನೆಗೆ ಅದು ಮರಣಕ್ಕೊಯ್ಯುವ ಹಾದಿಯಾಗಬಹುದು.

13 ನಗೆಯಲ್ಲೂ ಅಳು ಉಂಟು; ನಲಿವು ನೋವಾಗಿ ಕೊನೆಗೊಳ್ಳುವುದುಂಟು.

14 ಕೆಟ್ಟವನು ತನ್ನ ಕರ್ಮದ ಕಹಿಫಲದಿಂದ ತಿಂದು ತೇಗುವನು; ಒಳ್ಳೆಯವನು ತನ್ನ ಕಾರ್ಯದ ಸತ್ಫಲದಿಂದ ತೃಪ್ತನಾಗುವನು.

15 ಪೆದ್ದನು ಕಿವಿಗೆ ಬಿದ್ದುದೆಲ್ಲವನ್ನು ನಂಬಿಬಿಡುವನು; ಜಾಣನು ವಿವೇಚನೆ ಮಾಡಿ ಹೆಜ್ಜೆ ಇಡುವನು.

16 ಬುದ್ಧಿವಂತನು ಕೇಡಿಗೆ ಅಂಜಿ ಓರೆಯಾಗುವನು; ಬುದ್ಧಿಹೀನನು ಸೊಕ್ಕಿನಿಂದ ಅದರತ್ತ ಧಾವಿಸುವನು.

17 ಮುಂಗೋಪಿಗೆ ಬುದ್ಧಿಮಟ್ಟುಂಟು; ವಿವೇಕಿಗಾದರೊ ಸಹನೆಯುಂಟು.

18 ದಡ್ಡರ ಸೊತ್ತು ಮೂಢತನ; ಜಾಣರಿಗೆ ಜ್ಞಾನವೆ ಭೂಷಣ.

19 ಕೆಟ್ಟವರು ಒಳ್ಳೆಯವರಿಗೆ ಬಾಗಬೇಕಾಗುವುದು; ದುಷ್ಟರು ಸಜ್ಜನರ ಬಾಗಿಲಿಗೆ ಅಡ್ಡಬೀಳಬೇಕಾಗುವುದು.

20 ಬಡವನನ್ನು ನೆರೆಯವರೂ ತುಚ್ಛವಾಗಿ ಕಾಣುವರು; ಹಣವಂತನಿಗಾದರೊ ಬಹುಜನ ಮಿತ್ರರು.

21 ಹಸಿದವನನ್ನು ತಿರಸ್ಕರಿಸುವವನು ಪಾಪಿಷ್ಠನು; ದಲಿತರಿಗೆ ದಯೆ ತೋರಿಸುವವನು ಭಾಗ್ಯವಂತನು.

22 ಕೆಟ್ಟದ್ದನ್ನು ಕಲ್ಪಿಸುವವರು ಮಾರ್ಗಭ್ರಷ್ಟರು; ಒಳ್ಳೆಯದನ್ನು ಕಲ್ಪಿಸುವವರು ಮರ್ಯಾದಸ್ಥರು.

23 ದುಡಿಮೆಯಿಂದ ಸದಾ ಲಾಭವುಂಟು; ಬರಿ ಮಾತಿನಿಂದ ಬಡತನ ಬರುವುದುಂಟು.

24 ಬುದ್ಧಿವಂತರ ಕಿರೀಟ ಅವರ ಜ್ಞಾನವೇ; ದಡ್ಡರ ಶಿರಮುಕುಟ ಅವರ ದಡ್ಡತನವೆ.

25 ಸತ್ಯವಾಡುವವನ ಸಾಕ್ಷಿ ಪ್ರಾಣಕ್ಕೆ ರಕ್ಷಣೆ; ಸುಳ್ಳಾಡುವವನ ಮಾತು ಬರೀ ವಂಚನೆ.

26 ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವನಿಗೆ ಇದೆ ದೃಢಭರವಸೆ; ಆತನ ಮಕ್ಕಳಿಗೆ ಆಶ್ರಯ ಇದ್ದೇ ಇರುತ್ತದೆ.

27 ಸರ್ವೇಶ್ವರನಲ್ಲಿ ಭಯಭಕ್ತಿಯು ಜೀವಜಲದ ಚಿಲುಮೆಯು; ಮರಣಪಾಶದಿಂದ ತಪ್ಪಿಸಿಕೊಳ್ಳಲು ಅದುವೆ ಸಾಧನವು.

28 ಪ್ರಜೆಗಳ ಬಹುಸಂಖ್ಯೆ ಅರಸನಿಗೆ ಅತಿ ಹಿರಿಮೆ; ಪ್ರಜೆಗಳ ಕೊರತೆ ರಾಜಕುವರನಿಗೂ ಅಂಜಿಕೆ.

29 ದೀರ್ಘಶಾಂತನು ಬಹು ಬುದ್ಧಿವಂತನು; ಉಗ್ರಕೋಪಿ ಎತ್ತಿಹಿಡಿವನು ಮೂರ್ಖತನವನ್ನು.

30 ಶಾಂತಗುಣವು ದೇಹಕ್ಕೆ ಆರೋಗ್ಯದಾಯಕವು; ಹೊಟ್ಟೆಕಿಚ್ಚು ಎಲುಬಿಗೆ ಕ್ಷಯ ರೋಗವು.

31 ಬಡವರನ್ನು ಹಿಂಸಿಸುವವನು ತನ್ನ ಸೃಷ್ಟಿಕರ್ತನನ್ನೇ ಹೀನೈಸುತ್ತಾನೆ; ನಿರ್ಗತಿಕನಿಗೆ ದಯೆತೋರಿಸುವವನು ಆತನನ್ನು ಘನಪಡಿಸುತ್ತಾನೆ.

32 ಆಪತ್ಕಾಲ ಬಂದಾಗ ದುಷ್ಟನು ಹಾಳಾಗುತ್ತಾನೆ; ಮರಣವೇಳೆಯಲ್ಲೂ ನೀತಿವಂತ ನಂಬಿಕೆಯಿಂದಿರುತ್ತಾನೆ.

33 ಬುದ್ಧಿವಂತರ ಹೃದಯ ಜ್ಞಾನದ ಆಶ್ರಯ; ಬುದ್ಧಿಹೀನರ ಹೃದಯ ಜ್ಞಾನದ ಶೂನ್ಯ.

34 ಸದಾಚಾರದಿಂದ ನಾಡಿನ ಉನ್ನತಿ; ಅನಾಚಾರದಿಂದ ಅದರ ಅವನತಿ.

35 ಜಾಣನಾದ ಸೇವಕನ ಮೇಲೆ ರಾಜನ ಕೃಪೆಯಿರುತ್ತದೆ; ಲಜ್ಜಾಸ್ಪದ ಸೇವಕನ ಮೇಲೆ ಅವನ ಕೋಪ ಎರಗುತ್ತದೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು