ಜೆಕರ್ಯ 7 - ಕನ್ನಡ ಸತ್ಯವೇದವು C.L. Bible (BSI)ಕಪಟ ಉಪವಾಸ ಸರಿಯಲ್ಲ 1 ಅರಸನಾದ ಡೇರಿಯಸನ ಆಳ್ವಿಕೆಯ ನಾಲ್ಕನೆಯ ವರ್ಷದ ಒಂಭತ್ತನೆಯ ತಿಂಗಳ (ಅಂದರೆ ಕಿಸ್ಲೇವ್ ತಿಂಗಳಿನ) ನಾಲ್ಕನೆಯ ದಿನದಲ್ಲಿ ಸರ್ವೇಶ್ವರ ಜೆಕರ್ಯನಿಗೆ ಒಂದು ಸಂದೇಶವನ್ನು ಅನುಗ್ರಹಿಸಿದರು. 2 ಅಷ್ಟರಲ್ಲಿ ಬೇತೇಲಿನ ಜನರು ಸರೆಚರನನ್ನು ರೆಗೆಮ್ ಮೆಲೆಕ್ನನ್ನು ಹಾಗೂ ಅವನ ಪರಿಜನರನ್ನು ಸರ್ವೇಶ್ವರಸ್ವಾಮಿಯ ಆಶೀರ್ವಾದವನ್ನು ಕೋರಲು ದೇವಾಲಯಕ್ಕೆ ಕಳುಹಿಸಿದ್ದರು. 3 ಅಲ್ಲದೆ, ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ದೇವಾಲಯದ ಯಾಜಕರನ್ನೂ ಪ್ರವಾದಿಗಳನ್ನೂ ಕಂಡು, “ನಾವು ಇಷ್ಟು ವರ್ಷಗಳಿಂದ ಅನುಸರಿಸಿಕೊಂಡು ಬಂದಂತೆ, 5ನೆಯ ತಿಂಗಳಲ್ಲಿ ಉಪವಾಸವಿದ್ದು ಪ್ರಲಾಪಿಸಬೇಕೋ?” ಎಂದು ವಿಚಾರಿಸಿಕೊಂಡು ಬರಬೇಕೆಂದು ಅವರಿಗೆ ಆಜ್ಞಾಪಿಸಿದರು. 4 ಇಂತಿರಲು, ಸೇನಾಧೀಶ್ವರ ಸರ್ವೇಶ್ವರ ನನಗೆ ಈ ಸಂದೇಶವನ್ನು ದಯಪಾಲಿಸಿದರು” 5 “ಯಾಜಕರಿಗೂ ನಾಡಿನ ಸಕಲ ಜನರಿಗೂ ಹೀಗೆಂದು ತಿಳಿಸಲು: ನೀವು ಕಳೆದ ಎಪ್ಪತ್ತು ವರ್ಷಗಳಿಂದ 5ನೇ ಮತ್ತು 7ನೇ ತಿಂಗಳುಗಳಲ್ಲಿ ಉಪವಾಸಮಾಡಿ ಗೋಳಾಡಿದ್ದು ನನಗೋಸ್ಕರವೋ? 6 ನೀವು ಭೋಜನ ಮಾಡಿದ್ದು, ಪಾನಮಾಡಿದ್ದು ನಿಮ್ಮ ತೃಪ್ತಿಗಾಗಿಯೇ ಅಲ್ಲವೆ?” 7 “ಜೆರುಸಲೇಮ್ ಮತ್ತು ಅದರ ಸುತ್ತಮುತ್ತಲಿನ ಪಟ್ಟಣಗಳು ಜನಭರಿತವಾಗಿ ನೆಮ್ಮದಿಯಿಂದಿದ್ದಾಗ ಹಾಗೂ ದಕ್ಷಿಣ ಪ್ರಾಂತ್ಯದಲ್ಲೂ ಬಯಲು ಪ್ರದೇಶದಲ್ಲೂ ಪ್ರಜೆಯು ತುಂಬಿದ್ದಾಗ ಪ್ರವಾದಿಗಳ ಮುಖಾಂತರ ಪ್ರಕಟಿಸಿದ ಸಂದೇಶ ಇದೇ ಅಲ್ಲವೆ?” ಅವಿಧೇಯತೆ - ಗಡೀಪಾರಿಗೆ ಕಾರಣ 8 ಅಲ್ಲದೆ ಸರ್ವೇಶ್ವರ ಜೆಕರ್ಯನಿಗೆ ಕೊಟ್ಟ ಸಂದೇಶ ಏನೆಂದರೆ: 9 :ಸತ್ಯಾನುಸಾರ ನ್ಯಾಯತೀರಿಸಿರಿ. 10 ಒಬ್ಬರಿಗೊಬ್ಬರು ಪ್ರೀತಿ ಕರುಣೆಯನ್ನು ತೋರಿಸಿರಿ. ವಿಧವೆಯರು, ಅನಾಥರು, ವಿದೇಶಿಯರು, ಬಡವರು, ಇವರಾರನ್ನೂ ಶೋಷಣೆಮಾಡಬೇಡಿ. ನಿಮ್ಮಲ್ಲಿ ಯಾವನೂ ತನ್ನ ಸಹೋದರನಿಗೆ ಕೇಡನ್ನು ಬಗೆಯದಿರಲಿ. 11 “ನಿಮ್ಮ ಪೂರ್ವಜರು ಕಿವಿಗೊಡದೆಹೋದರು: ಹಟಮಾರಿಗಳಾದರು; ಮಂದಮತಿಗಳಾದರು; ಅವರ ಹೃದಯ ಗೋರ್ಕಲ್ಲಿನಂತೆ ಆಯಿತು. 12 ಧರ್ಮಶಾಸ್ತ್ರವನ್ನಾಗಲೀ ಪೂರ್ವಕಾಲದ ಪ್ರವಾದಿಗಳ ಮುಖಾಂತರ, ಸೇನಾಧಿಶ್ವರ ಸರ್ವೇಶ್ವರ ಆದ ನಾನು ತಿಳಿಸಿದ ನನ್ನಾತ್ಮಪ್ರೇರಿತ ಮಾತುಗಳನ್ನಾಗಲೀ ಕೇಳದೆಹೋದರು. ಹೀಗೆ ನನ್ನ ಕಡುಕೋಪಕ್ಕೆ ಗುರಿಯಾದರು. 13 ಆಗ ಹೀಗೆಂದೆ: ‘ನಾನು ಕೂಗಿದಾಗ ಅವರು ಕೇಳದೆಹೋದರು; ಅವರು ಕೂಗಿದಾಗ ನಾನು ಕೇಳಲಿಲ್ಲ.’ 14 ಬಿರುಗಾಳಿಯಂತೆ ಅವರನ್ನು ಅಪರಿಚಿತ ಜನಾಂಗಗಳ ಮಧ್ಯೆ ತೂರಿ ಚದರಿಬಿಟ್ಟೆ; ಹಾಗೆ ಅವರು ಚದರಿಹೋದ ಮೇಲೆ ನಾಡು ಹಾಳಾಯಿತು. ಅಲ್ಲಿ ಯಾರೂ ಉಳಿಯದಂತಾಯಿತು. ಅವರ ನಿಮಿತ್ತ ಚೆಲುವ ನಾಡು ನಿರ್ಜನ ಪ್ರದೇಶವಾಯಿತು.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India